ನೃತ್ಯಗಾರ್ತಿಯರಿಗಿರುವ ರಂಗಪ್ರವೇಶ ಸಂಗೀತಗಾರರಿಗೇಕಿಲ್ಲ?
ನನಗಾಗ ಹತ್ತು ವರ್ಷವಿರಬೇಕು. ನಮ್ಮ ಮನೆಯ ಮುಂದೆ ಒಂದು ದೊಡ್ಡ ಕಾರು ಬಂದು ನಿಂತಿತ್ತು. ಬೆಳ್ಳಂಬೆಳಗ್ಗೆ ಇದ್ಯಾವುದು ಇಂತಹ ದೊಡ್ಡ ಕಾರು ಎಂದು ನೋಡಲು ಹೋಗುತ್ತಿದ್ದಾಗ ಪುಟಗಟ್ಟಲೆ ಇರುವ ಒಂದು ಆಹ್ವಾನ ಪತ್ರಿಕೆಯನ್ನ ನಮ್ಮ ಪರಿಚಯದವರು ಇತ್ತರು.
ನನಗೆ ಅಷ್ಟೆಲ್ಲಾ ನೃತ್ಯದ ಭಂಗಿಗಳ ಚಿತ್ರವನ್ನ ನೋಡಿದ್ದು ಯಾಕೆ ನೃತ್ಯ ಭಂಗಿಗಳ ಚಾರ್ಟ್ ಮಾಡಿದ್ದಾರೆ ಎಂದು ನನಗೆ ಗೊತ್ತೇ ಆಗಲ್ಲಿಲ್ಲ. ಹೊಳೆಯುವ ಆಹ್ವಾನ ಪತ್ರಿಕೆ ನನ್ನ ಶಾಲೆಯ ಭರತನಾಟ್ಯ ಪ್ರಾಜೆಕ್ಟ್ ಬಂದರೆ ಕತ್ತರಿಸೋದಕ್ಕೆ ಒಳ್ಳೆ ಚಾರ್ಟ್ ಆಯ್ತೆಂದು ನಾನು ಮನಸಲ್ಲಿ ಮಂಡಿಗೆ ತಿನ್ನುತ್ತಿರುವ ಸಮಯದಲ್ಲಿ "ಮಗಳ ಅರಂಗೇಟ್ರಂ ಎಂದು ಅವರು ಹೇಳಿದ್ದರು. ಇದೇನಿದು ರಂಗಪ್ರವೇಶ ಎಂದು ಅರ್ಥವೇ ಆಗದೇ ನಾನು ಯೋಚಿಸುತ್ತಿದ್ದೆ.
ಮಧ್ಯ ವಯಸ್ಕ ಮಹಿಳೆಯರಲ್ಲಿ ಮತ್ತೆ ಚೈತ್ರದ ಚಿಗುರು
ರಂಗವೆಂದರೆ ಬಣ್ಣ ಎಂದು ಅಂದುಕೊಂಡು ಏನು ಹೋಲಿ ಆಡುತ್ತಾರಾ ಅಂತಲೂ ಅಂದುಕೊಂಡಿದ್ದೆ. ಹಾಗಾಗಿಯೂ ರವೀಂದ್ರ ಕಲಾಕ್ಷೇತ್ರದಲ್ಲಿನ ಸ್ಟೇಜ್ ನೋಡೋದು ನನಗೆ ಎಲ್ಲಿಲ್ಲದ ಪ್ರೀತಿ. ಯಾಕೆಂದರೆ ಅದರಷ್ಟು ದೊಡ್ಡದಾದ ಜಾಗ ನಾ ಬೆಂಗಳೂರಿನಲ್ಲಿ ನೋಡಿರಲ್ಲಿಲ್ಲ. ಹಾಗೂ ಆಗ ಬಸ್ಸಿನಲ್ಲಿ ಓಡಾಡುತ್ತಿದ್ದ ಪ್ರಯುಕ್ತ ಬಸ್ಸುಗಳು ಅದರ ಮುಂದೆಯೇ ಹೋಗುತ್ತಿದ್ದುದ್ದರಿಂದ ಸದ್ಯ ಬಸ್ ಸ್ಟಾಪಿನಿಂದ ದೂರ ನಡೆಯುವ ಯೋಜನೆಯಿಲ್ಲ ಎಂದು ಅಂದುಕೊಂಡೆ.
ಅಂತೂ ರಂಗಪ್ರವೇಶಕ್ಕೆ ಹೋದೆ. ಅಲ್ಲಿ ನೆನಪಿದ್ದಂಗೆ ಪ್ರಣಯರಾಜ ಶ್ರೀನಾಥ್ ಅಲ್ಲಿನ ಅತಿಥಿ. ಖುಷಿಯಾಗಿ ಮಾತಾಡುತ್ತಿದ್ದರು. 2.5 ಘಂಟೆಯ ರಂಗಪ್ರವೇಶದಲ್ಲಿ ನಾನು ಬರಿ 1 ಘಂಟೆ ನೋಡಿದೆ. ಥರಥರದ ಬೆಳಕು, ಅಲ್ಲಿನ ಹಾಡುಗಾರರು ಆಹಾ ಎಂತ ಸುಂದರ ಆಹ್ಲಾದಕರವಾದ ಒಂದು ದೃಶ್ಯ ನೋಡಿ ಆನಂದಗೊಂಡೆ. ಸಿನೆಮಾದಲ್ಲಿ ಮಾತ್ರ ಒಂದೊಂದು ವಿಭಾಗಕ್ಕೆ ಒಂದೊಂದು ಬೇರೆ ಥರದ ಬಟ್ಟೆ ಎಂದು ಅಂದುಕೊಂಡಿದ್ದರೆ ಅಲ್ಲಿ ಸಹ ಅದೇ. ಆಮೇಲೆ ಅಲ್ಲಿನ ನಿರೂಪಕರು ಮಾತಾಡುತ್ತಾ ರಂಗ ಎಂದರೆ ಸ್ಟೇಝ್ ಅದರ ಮೇಲೆ ನೃತ್ಯ ಮಾಡುವವರ ಮೊದಲ ಪ್ರವೇಶ ಎಂದರು. ಅರೆ ಸಂಗೀತಗಾರರಿಗೆ ಇದ್ಯಾಕಿಲ್ಲ ಎಂದು ಅಂದುಕೊಂಡೇ ಮನೆಗೆ ಬಂದಿದ್ದೆ.
ಎಲ್ಲ ಹೆಣ್ಮಕ್ಕಳು ಕೆಲಸಕ್ಕೆ ಹೋಗುವವರೇ, ಕೆಲವರಿಗೆ ಮಾತ್ರ ಸಂಬಳ!
ಇದಾಗಿ ಒಂದು 5-10 ವರ್ಷಗಳಲ್ಲಿ ನನ್ನ ಗೆಳತಿಯರ, ಬಂಧುಗಳ ರಂಗಪ್ರವೇಶಕ್ಕೆ ಸುಮಾರು ಬಾರಿ ಹೋಗಿದ್ದೇನೆ. 2 ಅಥವಾ 3 ಘಂಟೆ ಒಂದೇ ಸಮ ತಾಳಕ್ಕೆ, ಭಾವಕ್ಕೆ ನರ್ತಿಸೋದು ಒಂದು ಸವಾಲೇ ಸರಿ. ಕಲಾಕ್ಷೇತ್ರದ ರುಕ್ಮಿಣಿ ದೇವಿ ಅರುಂಡೇಲ್ ಭರತನಾಟ್ಯವನ್ನ ಒಂದು ಮುಖ್ಯಭೂಮಿಕೆಗೆ ತಂದು ಈಗ ಅದೆಷ್ಟು ನವಿಲುಗಳು ರಂಗದ ಮೇಲೆ ನಲಿದಿದೆಯೋ ಲೆಕ್ಕವಿಲ್ಲ.
ರಂಗಪ್ರವೇಶ ನೃತ್ಯಗುರುಗಳು ತಮ್ಮ ವಿದ್ಯಾರ್ಥಿನಿಗೆ ಒಂದಷ್ಟು ಕಲಿಕೆಯಾದ ನಂತರ ಅವಳು ಎಲ್ಲಾ ಕಡೆ ನೃತ್ಯ ಮಾಡುವಷ್ಟು ಪರಿಣಿತಳು ಎಂದು ಎಲ್ಲರಿಗೂ ತಿಳಿಸುವ ರೀತಿ. ಇದೊಂಥರ ಅಕ್ಷರಾಭ್ಯಾಸದ ಹಾಗೆ. ವಿದ್ಯುಕ್ತ ಚಾಲನೆ.
ಹೆಣ್ಣುತನದ ಸಂಭ್ರಮವನ್ನು ಇಮ್ಮಡಿಗೊಳಿಸುವ ಮದರಂಗಿ!
ರಂಗಪ್ರವೇಶದಲ್ಲಿ ಅಲರಿಪುವಿನ ಸುಂದರ ಪ್ರಸ್ತುತಿ ಇರುತ್ತದೆ. ಪುಷ್ಪಾಂಜಲಿ ಎಂದು ಅನ್ನಬಹುದು. ಅಲರ್ ಎಂದರೆ ಹೂವು, ಇಪು ಎಂದರೆ ಅರಳುವುದು. ಒಂದು ಒಳ್ಳೆಯ ವಾರ್ಮ್ ಅಪ್ ನೃತ್ಯಗಾರ್ತಿಗೆ ಆಗುತ್ತದೆ. ಇಷ್ಟ ದೈವಕ್ಕೆ, ನಟರಾಜನಿಗೆ ಹೂವನ್ನು ಸಮರ್ಪಿಸುತ್ತಾರೆ. ಇನ್ನು ಸಂಗೀತದ ಕ್ಲಿಷ್ಟ ಪ್ರಕಾರಗಳಾದ ಜತಿಸ್ವರ, ವರ್ಣ, ಕೀರ್ತನೆ, ಶಬ್ದಂ, ಭಜನೆ, ಇವೆಲ್ಲವೂ ಬಂದು ಹೋಗುತ್ತದೆ. ಕೆಲವೊಮ್ಮೆ ವಚನಗಳು, ಡಿ ವಿ ಜಿಯವರ ಅಂತಃಪುರ ಗೀತೆಗಳು, ಕನ್ನಡ ಭಾವಗೀತೆಗಳ ನೃತ್ಯ ಪ್ರಸ್ತುತಿಯೂ ಬಂದಿರುತ್ತದೆ. ಕೆಲವೊಂದು ರಂಗಪ್ರವೇಶವನ್ನೂ ಕನ್ನಡೀಕರಿಸಿಕೊಳ್ಳುತ್ತಾರೆ ಸಹ. ಹೀಗೆ ತಮ್ಮ ಎಲ್ಲಾ ಕಲಿಕೆಯನ್ನ ರಂಗದ ಮೇಲೆ ಪ್ರಯೋಗಿಸಿ ಅವರು ಮತ್ತು ಗುರುಗಳ ವಿದ್ವತ್ತನ್ನ ಪ್ರದರ್ಶನ ಮಾಡುತ್ತಾರೆ. ಕೆಲವೊಂದು ಟೊಳ್ಳು ಮತ್ತೂ ಕೆಲವು ಗಟ್ಟಿ ಕಾಯಿಗಳೂ ಈ ಪ್ರಯೋಗದಿಂದ ಸಿಗುತ್ತದೆ.
ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕಬೇಕಾಯಿತು ಅಂದರೆ ವಿದೂಷಿ ಶುಭದಾ ಅವರ ಶಿಷ್ಯೆಯ ರಂಗಪ್ರವೇಶಕ್ಕೆ ನಾನು ನಿರೂಪಣೆ ಮಾಡುವ ಹೊಣೆ ಬಂದಿದೆ. ಒಂದು ನಾಲ್ಕೈದು ದಿವಸ ನೃತ್ಯ, ಪ್ರಕಾರಗಳು, ಅವರ ಅಭಿನಯಗಳ ಬಗ್ಗೆ ಆಳವಾದ ಅಧ್ಯಯನ ನಡೆದಿದೆ. ಈ ಶನಿವಾರ ಯಾರ ರಂಗಪ್ರವೇಶ ಆ ಶಿಷ್ಯೆಯದ್ದೋ ಅಥವಾ ನನ್ನ ನಿರೂಪಣೆಯದ್ದೋ ನೋಡಬೇಕಾಗಿದೆ.