ಜ್ವಾಲಾಮುಖಿ ಉಗುಳಿದಾಗ, ನಮ್ಮದಲ್ಲದ್ದನ್ನು ಅಪ್ಪಿದಾಗ!
ನನಗಿನ್ನೂ ನೆನಪಿದೆ ನಾ ಬಾಲಿ ತಲುಪಿದಾಗ ಕಂಡ ಸುದ್ದಿ. ಜ್ವಾಲಾಮುಖಿ ತನ್ನವರನ್ನೆಲ್ಲಾ ಆಹುತಿ ತೆಗೆದುಕೊಳ್ಳುತ್ತಿದೆ ಎಂದು. ಅಷ್ಟು ವರುಷದ ಕೋಪ, ಸಹನೆ ಕಟ್ಟೆಯೊಡೆದಾಗ ಕಂಡು ಬರುವ ದೃಶ್ಯ ಅದು. ಅಲ್ಲಿನ ಜನಕ್ಕೆ ಇದು ಹೊಸದಲ್ಲ.
ಸದ್ದಿಲ್ಲದೆ 'ಕನ್ನಡ ಗೊತ್ತಿಲ್ಲ' ಮಾಡುತಿದೆ ಕನ್ನಡ ಕ್ರಾಂತಿ!
ಇಡೀ ಜಗತ್ತಿನಲ್ಲಿ ಅತಿಹೆಚ್ಚು ಜ್ವಾಲಾಮುಖಿ ಪರ್ವತಗಳಿರುವ ದೇಶ ಇಂಡೋನೇಷ್ಯಾ. ಆಗಾಗ ಪರ್ವತಗಳು ಬೆಂಕಿ, ಲಾವಾರಸ ಉಗುಳುತ್ತಿರುತ್ತವೆ. ಅಲ್ಲಿನ ಜನ ಅದಕೆ ತಕ್ಕ ತಯಾರಿಗಳು ಮಾಡಿಕೊಂಡಿರುತ್ತಾರೆ. ಬೆಂಗಳೂರಿನಂಥ ಊರಿನಲ್ಲಿ ಬೆಳೆದ ಜನರಿಗೆ, ತೀರ ನನ್ನ ಥರಹ ಜಯನಗರಕ್ಕೆ ಸೀಮಿತಳಾದವಳಿಗೆ ಇದೆಲ್ಲಾ ಹೊಸದು.
ಜ್ವಾಲಾಮುಖಿ ಹೊಗೆ ಉಗುಳುತ್ತದೆಯಂತೆ, ಬೆಂಕಿ ಉಂಡೆಗಳಾಗಿ ಬರುತ್ತದೆಯಂತೆ ಅಂತೆಲ್ಲಾ ಚಂದಮಾಮದಲ್ಲಿ ಓದಿ, ಶಾಲೆಯ ಭೂಗೋಳ ತರಗತಿಯಲ್ಲಿ ನಿದ್ದೆ ಮಾಡಿ, ಈಗ ಮಿಸ್ ನ ಶಾಪದಂತೆ ಜ್ವಾಲಾಮುಖಿಯ ಮಡಿಲಲ್ಲಿಯೇ ಬಂದು ಬಿದ್ದಿದ್ದೆ. ಆ ದಿನ ನಮ್ಮ ಮಿಸ್ ಭೂಗೋಳ ತರಗತಿಯಲ್ಲಿ ಹೇಳಿದ ಮಾತು ನೆನಪಾಯಿತು. ಯಾವುದನ್ನು ನೀನು ದೂರ ತಳ್ಳಿ ಓಡಿ ಹೋಗ್ತಿಯೋ ಅದೇ ನಿನ್ನನ್ನು ಎದಿರುಗಾಣುತ್ತದೆ ಎಂಬ ಭವಿಷ್ಯ ನುಡಿದ್ದದ್ದು ನೆನಪಾಯಿತು.
ಒಂದು ಊರು, ಆ ಊರಿಗೊಂದು ದೇವ್ರು, ಆ ದೇವರಿಗೊಂದು ಉತ್ಸವ, ಅದಕ್ಕೊಂದು ಜಾತ್ರೆ
ಮೌಂಟ್ ಆಗುಂಗ್ ತನ್ನ ರೌದ್ರಾವತಾರ ತಾಳಿತ್ತು. ಆಕಾಶದ ತುಂಬಾ ಧೂಳು, ಆ ಧೂಳೆಲ್ಲಾ ಸೇರಿ ಮೋಡವಾಗಿ ಮಳೆಯಾಗಿ ರಸ್ತೆಯಲ್ಲಿ ನೀರು ನಿಂತು, ರಸ್ತೆಯೇ ಕಾಣಿಸದ ಹಾಗೆ ಮಂಜುಮಂಜಾಗಿತ್ತು. ನಮ್ಮ ಗೈಡ್ ಧೈರ್ಯ ತುಂಬುತ್ತಿದ್ದರೂ ಮನಸಲ್ಲಿ ಆ ಭಯ ಕಾಡುತ್ತಲೇ ಇತ್ತು, ಜೀವಂತವಾಗಿ ಮನೆಗೆ ಹೋಗ್ತೀವಾ ಅನ್ನುವಷ್ಟು.
ಬೆಂಗಳೂರಿನ ಮನೆಯಿಂದ 25 ಕರೆ ಬಂದು ನಮ್ಮನ್ನ ಗಾಬರಿಗೊಳಿಸಿದ್ದರಿಂದ ವಿಷಯ ತಿಳಿಯಲು ಬಿಬಿಸಿ ಚಾನೆಲ್ ಹಾಕಿದಾಗ ಅದರಲ್ಲಿ ಭರ್ತಿ ಒಂದೂವರೆ ಘಂಟೆ ರಾಜಕುಮಾರ ಹ್ಯಾರಿ ಮತ್ತು ಮೇಘನ್ ಮೋರ್ಕೆಲ್ ನ ಲಗ್ನಪತ್ರಿಕೆಯ ಸುದ್ದಿಯನ್ನೇ ಬಿತ್ತರಿಸುತ್ತಿದ್ದರು. ಇನ್ನು ಅಲ್ಲಿ ಬರುತ್ತಿದ್ದ ಒಂದೇ ಒಂದು ಭಾರತದ ಚಾನೆಲ್ ನಲ್ಲಿ ಮೋದಿ ಜಪ ನಡೆಯುತ್ತಿತ್ತು.
ಸಮಸ್ಯೆಗಳ ಬೆಟ್ಟ ಹತ್ತಿ ಕನ್ನಡ ಧ್ವಜ ಹಾರಿಸೋಣ ಬನ್ನಿ!
ಏನಾಗ್ತಿದೆ, ಯಾಕಾಗ್ತಿದೆ ಅನ್ನೋ ಯಾವ ಸೂಚನೆಯೂ ಗೊತ್ತಾಗುತ್ತಿರಲ್ಲಿಲ್ಲ. ಧಡಾರ್ ಎಂದು ಏರ್ಪೋಟ್ ಸಹ ಮುಚ್ಚಿತು. ಜನರ ಹಾಹಾಕಾರ ಮುಗಿಲು ಮುಟ್ಟಿತು. ಊರು ಖಾಲಿ ಮಾಡಿ ಎಂಬ ಸೂಚನೆ ಜೊತೆಜೊತೆಗೆ ವಿಮಾನಗಳು ಹಾರುವ ಸೂಚನೆಯೂ ಇರಲ್ಲಿಲ್ಲ. ಹೊರದೇಶದಿಂದ ಬಂದಂಥ ನಮ್ಮಂಥವರಿಗೆ ಎಷ್ಟು ದಿವಸ ವೀಸಾ ಇದ್ದು, ಹೇಗೆ ಇರಬಹುದು ಎಂಬ ಯೋಚನೆ ಸಹ ಕಾಡಲಾರಂಭಿಸಿತ್ತು.
ಭಾರತೀಯ ರಾಯಭಾರ ಕಛೇರಿಯವರು ಬಂದು ಸಮಾಧಾನ ಮಾಡಿ, ಬಾಲಿಯಿಂದ 18 ಘಂಟೆ ಪ್ರಯಾಣ ಮಾಡಿದರೆ ಸುರಭ್ಯ ಎಂಬ ಊರಿನಿಂದ ವಿಮಾನಗಳು ಹೊರಡತ್ತೆ ಎಂದು ತಿಳಿಸಿದ್ದರು. ಅದಕ್ಕೆ ಒಬ್ಬಬ್ಬರಿಗೆ 3 ಲಕ್ಷ ಇಂಡೋನೇಷ್ಯಾ ರುಪಾಯಾಗಳನ್ನ ನೀಡಬೇಕೆಂದು ತಿಳಿಸಿದ್ದರು. ಅಲ್ಲಿನ ದುಡ್ಡಿಲ್ಲ, ಭಾರತದ ಕಾರ್ಡ್ಗಳು ಒಮ್ಮೊಮ್ಮೆ ಅಲ್ಲಿ ಕೆಲಸವೂ ಮಾಡುತ್ತಿಲ್ಲ. ತೀರ ಊಟ ತಿಂಡಿ ನೀರಿಗೂ ಪರದಾಡುವ ಸ್ಥಿತಿ ನಮ್ಮದಾಗುವ ಸೂಚನೆಯಲ್ಲಿತ್ತು.
ಅಲ್ಲಿ ಸಿಕ್ಕ ಸುಮಾರು ಭಾರತೀಯರು ಆ ಪಯಣ ಮಾಡಲು ಅಣಿಯಾಗಿದ್ದರು. ಬಸ್ ನಲ್ಲಿ, ದೋಣಿಯಲ್ಲಿ ಪ್ರಯಾಣ ಮಾಡಿ ಸೇರಬೇಕಾಗಿತ್ತು. ಇದೇನಪ್ಪಾ ನಮ್ಮ ಕಥೆ ಎಂದು ಕುಳಿತುಕೊಂಡೆವು. ನಮ್ಮ ಗೈಡ್ ಬಾಲಿ ಜನ ಕರ್ಮವನ್ನ ಅತ್ತಿಯಾಗಿ ನಂಬುತ್ತಾರೆ. ಇಡೀ ಇಂಡೋನೇಷ್ಯಾದ ಜನ ಒಂದು ಕಡೆಯಾದರೆ, ನಾವೇ ಬೇರೆ ಎಂದು ಹಿಂದೂ ಧರ್ಮದ ದೊಡ್ದ ಸಾರವನ್ನ ತಿಳಿಸೋದಕ್ಕೆ ಶುರು ಮಾಡಿದ್ದ. ಮಹಾಭಾರತದ ಗೀತೋಪದೇಶದ ಹಾಗೆ ಅವನು ಕೃಷ್ಣ ನಾನು ಅರ್ಜುನನ ಹಾಗೆ ನನಗೆ ಬದುಕುವ ಯಾವ ಸೂಚನೆಯೂ ಕಾಣಿಸುತ್ತಿಲ್ಲ ಎಂದು ಕೂತಾಗ ಏನೂ ಆಗಲ್ಲ ಎಂದು ಹಿತೋಪದೇಶ ಮಾಡಿದ್ದರು.
ಅಂತೂ ವಿಮಾನ ಹೊರಡಿತು. ಆದರೆ ಸಿಂಗಪೂರಿನಲ್ಲಿ ಮಧ್ಯೆ ವಿಮಾನ ಬದಲಾಯಿಸಿ ಭಾರತಕ್ಕೆ ಬರಬೇಕಿತ್ತು. ಅಲ್ಲಿ ಭಾರತೀಯರಿಗೆ ವೀಸಾ ಬೇಕು ಎಂದು ಗೊತ್ತಾಗಿದ್ದೆ ಅವತ್ತು. ಇಮ್ಮಿಗ್ರೇಷನ್ ನಲ್ಲಿ "ಓಹೋ ಭಾರತೀಯರು ಎಂದು ಪಕ್ಕದಲ್ಲಿ ನಿಲ್ಲಿಸಿ, ಪಾಸ್ ಪೋರ್ಟ್ ನ ಕಿತ್ತುಕೊಂಡು, ಅರ್ಧ ಘಂಟೆ ನಮ್ಮನ್ನ ಕಳ್ಳ ಕಾಕರು, ಡ್ರಗ್ ದಂಧೆ ಮಾಡುವವರ ಸಾಲಿನಲ್ಲಿ ಕೂಡಿಸಿ, ಆಚೆಕಡೆಯಿಂದ ಕ್ಯಾಮೆರಾ ಹಾಕಿ ನನ್ನ ನಡುವಳಿಕೆಯನ್ನ ನೋಡುತ್ತಿದ್ದರು. ನಂತರ ನನ್ನ ಇಡೀ ಜಾತಕವನ್ನ ತೆಗೆದುಕೊಂಡು "ನಿಮ್ಮ ಲಗೇಜಿಗೂ ನನಗೂ ಸಂಬಂಧವಿಲ್ಲ, ಇಲ್ಲೀಗಲ್ಲಾಗಿ ದೇಶದ ಒಳಗೆ ಬರೋಹಾಗಿಲ್ಲ" ಎಂದು ಝಾಡಿಸಿ ಕಳಿಸಿದ್ದರು.
ಇನ್ನು ಮುಂದೆ ಬೇರೆ ದೇಶಕ್ಕೆ ಹೋಗುವ ಯಾವ ಯೋಚನೆಯೂ ಮಾಡದ ಹಾಗೆ ಆಯಿತು. ಹಸಿವು, ನಿದ್ದೆ, ನೀರು ಇವೆಲ್ಲವನ್ನೂ ಮರೆತು ನಮ್ಮ ಮನೆಗೆ ವಾಪಸ್ಸು ಹೋಗುವ ಕಥೆ ಎಷ್ಟು ಕಠಿಣವಾಗಿತ್ತು. ಜಯನಗರದ ಹುಡುಗಿ ಅಲ್ಲೆ ಇದ್ದಿದ್ದರೆ ಚೆಂದ ಅಂತ ಸುಮಾರು ಬಾರಿ ಅನ್ನಿಸಿದ್ದಂತೂ ನಿಜ. ಕೆಲವೊಮ್ಮೆ ನಮ್ಮ ಜಾಗ ನಾವು ಕಂಡುಕೊಂಡರೆ ಸರಿ ಹಾಗೂ ನಮ್ಮ ಕರ್ಮವನ್ನ ನಾವು ಅನುಭವಿಸಬೇಕು ಎಂದು ಯಾವತ್ತು ನಂಬದೇ ಇದ್ದ ಸಂಗತಿಯನ್ನ ಅರಿತು ನಕ್ಕೆ.