ಬೆಂಗಳೂರು ಟ್ರಾಫಿಕ್ ಸಂತೆಯ ಗದ್ದಲದಲ್ಲಿ ಸದ್ದಿಲ್ಲ!
ಬೆಂಗಳೂರು ಹಾಗೂ ಟ್ರಾಫಿಕ್ ಮದುವೆಯಾಗಿ ಸುಮಾರು 20 ವರ್ಷವಾಗಿವೆ. ಈ ಅಸಾಧ್ಯವಾದ ಟ್ರಾಫಿಕ್ಕಿನಲ್ಲಿ ಒಮ್ಮೊಮ್ಮೆ ಬೆಂಗಳೂರಿನಲ್ಲಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಓಡಾಡುವುದೇ ಒಂದು ದೊಡ್ಡ ಸಾಹಸವಾಗಿ ಕಾಣಿಸುತ್ತದೆ. ಎಲ್ಲೇ ಹೋಗುವುದಕ್ಕೂ ಆಲಸ್ಯ, ಗಾಡಿ ಓಡಿಸುವಾಗ ಬೆನ್ನು ನೋವು, ಯಾಕಾದ್ರೂ ಕರೀತಾರಪ್ಪ ಎಂದು ಗೊಣಗುತ್ತಲೇ ಹೋಗುವ ಸಮಾರಂಭಗಳಿಗೆ ಕೊನೆಯಿಲ್ಲ.
ಈ ಟ್ರಾಫಿಕ್ ನಲ್ಲಿ ಸಿಗುವ ತರಹೇವಾರಿ ಮನುಷ್ಯರಿಗೆ ಕೊನೆಯೆ ಇಲ್ಲ. ಚಿತ್ರ ವಿಚಿತ್ರವಾದ ಮನುಷ್ಯರು, ಅವರ ಹವ್ಯಾಸ, ಅಭ್ಯಾಸಗಳನ್ನೆಲ್ಲಾ ಕಂಡಿದ್ದೇನೆ. ಸಿಲ್ಕ್ ಬೋರ್ಡ್ ಎಂಬ ಮಹಾ ಹುಚ್ಚರ ಸಂತೆಯಲ್ಲಿ ದಿನಾ ಸಿಕ್ಕಿ ಹಾಕಿಕೊಳ್ಳುವ ಅನುಭವ ನಮ್ಮ ಮನೆಯವರೆಲ್ಲರದ್ದು. ಅಮ್ಮ ಕಟ್ಟಪ್ಪಣೆ ಮಾಡಿ ಟ್ರಾಫಿಕ್ಕಿನ ಕಥೆಯನ್ನ ಮನೆಯಲ್ಲಿ ಹೇಳಬಾರದು ಎಂದು ಮಾಡಿದ್ದಾರೆ. ಇನ್ನು ಗೊಣಗಾಟವನ್ನೆಲ್ಲಾ ಇಲ್ಲೇ ತೀರಿಸಿಕೊಳ್ಳಬೇಕು.
ಜಯನಗರದಂಥ ಸ್ವರ್ಗದಲ್ಲಿದ್ದವರಿಗೆ ಅಲ್ಲಿಂದ 2 ಕಿಲೋಮೀಟರ್ ದೂರ ಇರುವ ಬಿ ಟಿ ಎಂ ಲೇಔಟ್ ಪರಊರಿನಂತಾಗಿದೆ. ಅಲ್ಲಿ ಭಾಷೆ, ಜೀವನ ನಡೆಯುವ ಕ್ರಮವೇ ವಿಚಿತ್ರ. ಬೆಳಗ್ಗೆ ಜಯನಗರದಿಂದ ಹೊರಟವರಿಗೆ ಮೊದಲು ಅಡ್ಡಗಾಲು ಹಾಕುವುದೇ ಜಯದೇವ ಸಿಗ್ನಲ್. ಅಲ್ಲಿ ವಿಶ್ವವಿಖ್ಯಾತ ಹೃದಯ ರೋಗ ಆಸ್ಪತ್ರೆ ಇದೆ. ಒಮ್ಮೊಮ್ಮೆ ಅಲ್ಲಿನ ಆಂಬುಲೆನ್ಸ್ ಸದ್ದು ಕೇಳಿ ಬೆಚ್ಚುಬೀಳೋದೊಂದೆ ಬಾಕಿ. ಆ ಸದ್ದಿಗೂ ಕರಗದ ಜನರು ಅಂತಹ ಜಡತ್ವವನ್ನು ಬೆಳೆಸಿಕೊಳ್ಳುತ್ತಾರೆ. ಮುಂದೂ ಇಲ್ಲ ಹಿಂದೂ ಇಲ್ಲಾ ಎಲ್ಲೂ ಇಲ್ಲದ ಅಂತರ ಪಿಶಾಚಿಗಳ ಹಾಗೆ ನಿಂತಿರ್ತೀವಿ.
ನಾನು ಬಸ್ ನಲ್ಲಿಯೇ ಪ್ರಯಾಣ ಮಾಡೋದು
ನಾನು ಬಸ್ ನಲ್ಲಿಯೇ ಪ್ರಯಾಣ ಮಾಡೋದು, ಆದ್ದರಿಂದ ನೀವು ರಸ್ತೆಗೆ ಟ್ರಾಫಿಕ್ ಅಂತ ಸಂಭಾಷಣೆಗಳನ್ನ ಕೇಳೋದೊಂದು ತಪ್ಪತ್ತೆ. ನಮ್ಮ ರಸ್ತೆಯಲ್ಲಿ ನಮ್ಮ ಆಫೀಸಿಗೆ ಬರುವ ಜನ ಕಾರ್ ತೆಗೊಂಡು ಒಬ್ಬರೇ ಬಂದರೂ, ಟ್ರಾಫಿಕ್ ಅಂತ ಗೊಣಗಾಡೋದು ನೋಡಿದೀನಿ. ಇನ್ನು ಬಸ್ನಲ್ಲಿಯೇ ಕೂತು ಅವತ್ತಿನ ಮೀಟಿಂಗ್, ಮಗಳ ಮನೆಪಾಠ, ಅಮ್ಮನಿಗೆ ದೂರವಾಣಿ ಇವೆಲ್ಲಾ ಮಾಡುವ ಜನರೂ ಸಹ ಇದ್ದಾರೆ.
ಬೆಂಗಳೂರು ಟ್ರಾಫಿಕ್ ಅಸಹನೀಯ ಅಂತೀರಾ?
ಒಮ್ಮೆ ನಾನು ಒಬ್ಬರನ್ನು ಮಾತಿಗೆಳೆದು "ಅಸಹನೀಯ ರೀ ಈ ಟ್ರಾಫಿಕ್ " ಎಂದಾಗ ಅವರು "ಇಲ್ಲಾ ಮೇಡಮ್, ಇಷ್ಟೊತ್ತಿಗೆ ಊರಲ್ಲಿರುವ ಅಮ್ಮ ಮನೆ ಕೆಲಸ, ಪೂಜೆ ಎಲ್ಲವನ್ನು ಮಾಡಿ ಅರಾಮಾಗಿ ಕೂತಿರ್ತಾಳೆ, ಅವಳಿಗೆ ನಾನು ದಿನಾ ಕರೆ ಮಾಡುವುದಕ್ಕೆ ಇದು ಅನುಕೂಲ, ಅದಕ್ಕೆ 1 ಘಂಟೆಯಾದರೆ ಅಷ್ಟೊತ್ತೂ ಮಾತಾಡೋ ಅವಕಾಶ, ಯಾಕೆ ಬಿಡಬೇಕು ಕೇಳಿ. ನಮ್ಮ ಊರು, ಹವಾಮಾನ, ಮನೆಯಲ್ಲಿನ ಹಸು, ಪಕ್ಕದ ಹೊಳೆಯಲ್ಲಿನ ನೀರು ಇವೆಲ್ಲದರ ವರದಿ ಅಮ್ಮ ಕೊಡುತ್ತಾಳೆ. ಅವಳಿಗೆ ಈ ಊರು ಬೇಡ, ಮಲೆನಾಡಿನ ಸೌಂದರ್ಯ ಕಂಡೋರ್ ಯಾರ್ ಬರ್ತಾರೆ ಹೇಳಿ, ಕಛೇರಿಗೆ ಹತ್ತು ನಿಮಿಷದಲ್ಲಿ ಹೋದರೆ ಅಮ್ಮನ ಹತ್ತಿರ ಮಾತೂ ಸಹ ಹತ್ತು ನಿಮಿಷದಲ್ಲಿಯೇ ಆಗತ್ತೆ" ಎಂದು ಹೇಳಿದ್ದರು.
ಫೇಸ್ ಬುಕ್ ಎಂಬ ಮಾಯಾಜಾಲ
ನನಗೆ ಅವರ ಮಾತು ನಿಜವಾಗಲೂ ಗೊಣಗಾಡುವುದನ್ನ ಬಿಡೋದು ಕಲಿಸಿಕೊಡ್ತು. ನಾನೂ ಸಹ ವಾಟ್ಸ್ಯಾಪ್ ತೆಗೆದು ಮಾತಾಡದೇ ಇರದ ಗೆಳತಿಯ ಹತ್ತಿರ ಸಂದೇಶ ಕಳಿಸಿ ಮಾತಾಡೋದಕ್ಕೆ ಶುರು ಮಾಡಿದ್ದೆ. ಅದ್ಯಾಗಿಯೂ ತೀರ ಬಿ ಟಿ ಎಂ ನನ್ನು ದಾಟದ ಬಸ್ ನಲ್ಲಿ ಕೂರಲು ಇನ್ನೇನು ಮಾಡಬೇಕು ಅಂದಾಗ ಸಿಕ್ಕಿದ್ದೆ ಫೇಸ್ ಬುಕ್ ಎಂಬ ಮಾಯಾಜಾಲ, ಮನೆಯಲ್ಲಿ ಶಿಸ್ತುಬದ್ಧವಾಗಿ ಪತ್ರಿಕೆ ಓದುತ್ತಿದ್ದರಿಂದ ಅದರ ಉಪಯೋಗ ಅಷ್ಟಾಗುತ್ತಿರಲ್ಲಿಲ್ಲ. ಈ ಮಾಯಾಜಾಲದಲ್ಲಿ ಜಗತ್ತಿನ ಎಲ್ಲಾ ತೊಂದರೆಗಳಿಗೆ ಕ್ಷಣಾರ್ಧದಲ್ಲಿ ಪರಿಹಾರ ಸಿಗುವುದರಿಂದ ಅದನ್ನೂ ಸಹ ಮಾಡಿದ್ದಾಯಿತು.
ಸಾರ್ವಜನಿಕ ಸಾರಿಗೆ ಬಳಸಿ, ಸಮಯ ಉಳಿಸಿ
ವಾರಕ್ಕೆ ಕನ್ನಡದ್ದು, ಇಂಗ್ಲಿಷಿನದ್ದು ಎರಡೆರಡು ಪುಸ್ತಕಗಳನ್ನ ಓದೋದಕ್ಕೆ ಶುರು ಮಾಡಿದ್ದೆ. ಹಾಗೆನೂ ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್ ಹಾಕಿ ಸಾರ್ವಜನಿಕ ಸಾರಿಗೆ ಬಳಸಿ, ನಮ್ಮೆಲ್ಲರ ಸಮಯವನ್ನ ಉಳಿಸಿ ಅಂತೆಲ್ಲಾ ಬರೆದರೂ ಕಾರಿನಲ್ಲಿ ಒಬ್ಬರೇ ಏ ಸಿ ಹಾಕಿಕೊಂಡು ಓಡಿಸುವ ಜನ ಕಡಿಮೆನೇ ಆಗಲ್ಲಿಲ್ಲ. ಕಛೇರಿಯ ಕೆಫೆಟೇರಿಯಾದಲ್ಲಿ ಇದರಿಂದ ಹೆಂಡತಿಯ ಜೊತೆ ಜಗಳ, ಮಿಟಿಂಗ್ ತಡ ಆಯ್ತು ಇವೆಲ್ಲದರ ಕಥೆ ಕೇಳಿ ಕೇಳಿ ಸುಸ್ತಾದೆ. ಬಸ್ ನ ಚಾಲಕ, ನಿರ್ವಾಹಕರೆಲ್ಲ ಅವರಿಗೆ ನಿಗದಿ ಪಡಿಸಿದ್ದಷ್ಟು ಟ್ರಿಪ್ ಗಳನ್ನ ಮಾಡಲಾಗದ ಗೋಳನ್ನ ಹೇಳಿಕೊಳ್ಳುತ್ತಿದ್ದರು.
ನಮ್ಮನ್ನ ಆಳುವಾ ನೇತಾರರು ಸರಿ ಇಲ್ಲ
ಮೊನ್ನೆ ಬಿದ್ದ ಮಹಾ ಮಳೆಯಲ್ಲಂತೂ ವೈಟ್ ಫೀಲ್ಡ್ ಇಂದ ಅಪ್ಪ, ಬೆಳ್ಳಂದೂರಿಂದ ತಂಗಿ ಬಂದಿದ್ದು 4 ಘಂಟೆಗಳ ಸುದೀರ್ಘ ಪ್ರಯಾಣದ ನಂತರ. 2 ಮೀಟರ್ ನಷ್ಟು ನೀರು ನಿಂತಿದ್ದನ್ನ ನಾನು ಕಣ್ಣಾರೆ ನೋಡಿದ್ದೇನೆ. ದೋಣಿಗಳನ್ನ ಸಹ. ಯಾಕೆ ಹೀಗಾಯ್ತು, ಏನು ಎತ್ತ ಎಂದು ಯೋಚನೆ ಮಾಡುವಾಗ ನಮ್ಮ ಊರಿನ ರಸ್ತೆ ಸರಿಯಿಲ್ಲ, ಜನಸಂಖ್ಯೆ ಜಾಸ್ತಿ, ನಮ್ಮನ್ನ ಆಳುವಾ ನೇತಾರರು ಸರಿ ಇಲ್ಲ ಇವೆಲ್ಲದರ ಮಧ್ಯೆ ನಮ್ಮ ಜನರ ಮನಸ್ಥಿತಿಯೆ ಅಷ್ಟು ವಿಚಿತ್ರವಾಗಿದೆ ಎಂದರ್ಥ.
ನಮ್ಮನ್ನ ಅಳೆಯುವ ಸಾಧನಗಳು
ನಮ್ಮ ಜನ ನಮ್ಮನ್ನ ಅಳೆಯಲು ಬಳಸುವ ಸಾಧನ - ಸಂಬಳ, ಮನೆ, ಕಾರು, ಗಾಡಿ ಇವೆಲ್ಲದರಿಂದ. ಕೆಲಸಕ್ಕೆ ಸೇರಿ ಇಂತಿಷ್ಟು ದಿವಸದಲ್ಲಿ ಗಾಡಿ, ನಂತರ ಕಾರು ತದ ನಂತರ ಮನೆ. ಇವೆಲ್ಲವೂ ನಮ್ಮನ್ನ ಅಳೆಯುವ ಸಾಧನಗಳು. ಒಬ್ಬೊಬ್ಬರಿಗೂ ಈ ಆಸೆಯನ್ನ ಪೂರೈಸಿಕೊಳ್ಳುವುದಕ್ಕೆ ಬಿಟ್ಟರೆ ರಸ್ತೆಯಲ್ಲಿ ಎಷ್ಟು ಗಾಡಿಗಳು ಇಳಿಯತ್ತೆ ನೀವೆ ಹೇಳಿ? ನಮ್ಮ ಸಾರ್ವಜನಿಕ ಸಾರಿಗೆಯ ಗುಣಮಟ್ಟವನ್ನ ಏರಿಸಿ ಯಾಕೆ ಜನ ಅದರಲ್ಲಿ ಹೋಗುವ ಪ್ರಯತ್ನ ಮಾಡಬಾರದು?
ನಿಮ್ಮ ಗೋಳು ಹೇಳಿಕೊಳ್ಳಿ!
ಕಟ್ಟಕಡೆಯ ಜಾಗಕ್ಕೂ ಅದನ್ನ ತಲುಪಿಸುವ ಪ್ರಯತ್ನ ಮಾಡಿದರೆ ಇಷ್ಟೆಲ್ಲಾ ಗೊಣಗಾಟ, ರಸ್ತೆ ಗುಂಡಿಯಿಂದ ಸಾವು ತಪ್ಪಿಸುವ ಕಾರ್ಯ ಮಾಡ್ಬೋದು. ಆದ್ರೂ ಈ ಟ್ರಾಫಿಕ್ ನಿಂದ ಆದ ಎರಡೆ ಲಾಭ ನನಗೆ - ಒಂಡು ಕನ್ನಡ ಹೇಳಿಕೊಡುವುದು ಮತ್ತೊಂದು ಜಯನಗರದ ಹುಡುಗಿ. ಇದರ ಹುಟ್ಟು, ಪರಿಕಲ್ಪನೆ ಹಾಗೂ ತುಂಬಾ ಲೇಖನಗಳು ಬಸ್, ಆಟೋ, ಗಾಡಿಗಳ ಹಾರ್ನ್ ಶಬ್ಧದ ತಾಳಮೇಳದಲ್ಲಿಯೇ ರೂಪು ಗೊಳ್ಳೋದು. ನಿಮ್ಮ ಗೋಳು ಹೇಳಿಕೊಳ್ಳಿ!