ಸಹಸ್ರಾರು 'ಲಿಪಿ'ಗಳಿಗೆ ಉತ್ತೇಜನ ತುಂಬಿದ ಗುರು ಮಹಾದೇವಯ್ಯ ಸರ್
ಒಮ್ಮೆ ಒಂದು ಹುಡುಗಿ ದೊಡ್ಡ ನಗರದಲ್ಲಿ ಓದುತ್ತಿದ್ದಳು. ಆ ಹುಡುಗಿಯ ಹೆಸರು ಲಿಪಿ ಎಂದಿಟ್ಟುಕೊಳ್ಳಿ. ಲಿಪಿ ಎಲ್ಲರಂತೆ ಎಸ್ ಎಸ್ ಎಲ್ ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಮಾರ್ಕ್ಸ್ ತೆಗೆದುಕೊಂಡು ಪಿಯುಸಿಗೆ ಒಳ್ಳೆ ಕಾಲೇಜು ಸೇರಿದ್ದಳು. ಆ ಟ್ಯೂಷನ್, ಈ ಟ್ಯೂಷನ್, ಸಂಗೀತ ಅದು ಇದು ಎಲ್ಲವೂ ಬೆರೆತು ಯಾವುದೂ ಕರೆಕ್ಟಾಗಿ ಬರದೇ ಪಿಯುಸಿಯ ಅಂಕಗಳು ಫಸ್ಟ್ ಕ್ಲಾಸ್ ಮಾತ್ರ ಬಂತು.
ಇಂದಿನ ಸ್ಪರ್ಧಾ ಯುಗದಲ್ಲಿ ಅದು ಯಾವ ಲೆಕ್ಕವೂ ಅಲ್ಲ. ಲಕ್ಷ ಮಂದಿಯ ರಿಸೆಲ್ಟ್ ನಲ್ಲಿ 60% ಜನ ಫಸ್ಟ್ ಕ್ಲಾಸ್ ತೆಗೆದುಕೊಂಡಿರುತ್ತಾರೆ. ಅದರಲ್ಲಿ ಏನು ಮಹಾ ಸಾಧನೆಯಲ್ಲ. ತದನಂತರ ಕುರಿ ಮಂದೆಯ ಹಾಗೆ ಎಲ್ಲರೂ ಸೇರಿಕೊಳ್ಳುವ ಇಂಜಿನಿಯರಿಂಗ್ ಪ್ರವೇಶಕ್ಕೆ ಒದ್ದಾಡುತ್ತಿದ್ದಳು.
ಕಲಿಕೆಯ ಹಸಿವನ್ನು ನೀಗಿಸಲು ಅರಿವೆಂಬ ತುತ್ತು ತಿನ್ನಿಸುವ ಶಿಕ್ಷಕ
ಊರಾಚೆ ಕಾಲೇಜು, ಮನೆಯಲ್ಲಿ ಅಪ್ಪ ಅಮ್ಮ ಯಾವುದಕ್ಕೂ ಬಯ್ಯುತ್ತಿರಲ್ಲಿಲ್ಲ, ಆದರೂ ತುಂಬಾ ಬ್ರೈಟ್ ಆಗಿದ್ದ ಅವಳು ಇದ್ದಕಿದ್ದಂತೆ ಒಂದು ಥರಹದ ಖಿನ್ನತೆಗೆ ಒಳಗಾಗಿದ್ದಳು. ಯಾವುದು ಬರುತ್ತದೋ ಅದು ಬರುತ್ತಿರಲ್ಲಿಲ್ಲ, ಏನು ಮಾಡೋದು ಗೊತ್ತಾಗುತ್ತಿರಲ್ಲಿಲ್ಲ. ಇಂತಹ ಸಂದರ್ಭದಲ್ಲಿ ಗುರುಗಳು ಇರೋದು ಬಹಳ ಮುಖ್ಯ. ಗುರು ಅಂದರೆ ಕತ್ತಲಿಂದ ಬೆಳಗಿಗೆ ಕರೆದುಕೊಂಡು ಹೋಗುವವರು ಎಂದರ್ಥ. ಆ ಕೆಲಸವನ್ನ ಬಹಳ ಚೆಂದವಾಗಿ ಸುಮಾರು ವರ್ಷದಿಂದ ಮಾಡುತ್ತಾ ಬಂದಿರುವ ಮಹಾದೇವಯ್ಯ ಸರ್ ಲಿಪಿಗೆ ಸಿಕ್ಕಿದ್ದು.
ಮಹಾದೇವಯ್ಯ ಸರ್ ನಿಮಗೆ ಬೆಂಗಳೂರಿನ ಮಧ್ಯ ಭಾಗದಲ್ಲಿರುವ ಸರ್ಕಾರಿ ಎಸ್ ಕೆ ಎಸ್ ಜೆ ಟಿ ಐ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೊಬೋಟಿಕ್ಸ್, ಕ್ಯಾಡ್, ಇಂಜಿನಿಯರಿಂಗ್ ಡ್ರಾಯಿಂಗ್ ಹೇಳಿಕೊಡುತ್ತಾರೆ. ಅದೊಂದೇ ಅಲ್ಲ ಅವರ ಆಸಕ್ತಿಯ ವಿಷಯ, ಸಿ ಭಾಷೆಯಲ್ಲಿ ಒಳ್ಳೆ ಕೋಡ್ ಹೇಗೆ ಬರೆಯೋದು, ಹೊಸ ಅವಿಷ್ಕಾರ ಎಲ್ಲಿ ಆಗುತ್ತಿದೆ, ಅದಕ್ಕೆ ಏನು ಮಾಡಬೇಕು ಇವೆಲ್ಲವನ್ನ ಸರಿಯಾಗಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡುತ್ತಾ ಇರುತ್ತಾರೆ. ಬರಿ ಇದನ್ನ ಸರ್ಕಾರಿ ಕಾಲೇಜಿನಲ್ಲಿ ಓದುವ ಮಕ್ಕಳಿಗೇ ಅಂತಲ್ಲ, ಲಿಪಿಯಂತಹ ಸುಮಾರು ಹುಡುಗ ಹುಡುಗಿಯರಿಗೆ ಹೊಸ ಚೈತನ್ಯವನ್ನ ತುಂಬುವ ಕೆಲಸ ಮಾಡುವುದರಲ್ಲಿ ಸಂದೇಹವಿಲ್ಲ.
ಪುರಸ್ಕರಿಸಬೇಕಾದ ಗುರುವಿನ ಗೌರವ ಕುಸಿಯಲು ಕಾರಣವೇನು?
ಅವತ್ತು ಲಿಪಿಯ ರಿಸೆಲ್ಟ್ ಬಂದಾದ ಮೇಲೆ, ಅವಳಿಗಾದ ಸುಮಾರು ಕಷ್ಟಗಳನ್ನ ನುಂಗಿಕೊಂಡು ಜಯನಗರದಿಂದ ಹೊರಟಿದ್ದು ಆ ಸರ್ಕಾರಿ ಕಾಲೇಜಿನಲ್ಲಿ ಕೂತ ಮಹದೇವಯ್ಯ ಸರ್ ನ ಭೇಟಿಯಾಗೋಕೆ. ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಅಲ್ಲಿ ವಿದ್ಯಾರ್ಥಿಗಳ ನಡುವೆ ಮುಳುಗಿದ್ದವರು ಅವರು. ಯಾವುದೇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾವುದೇ ಭಯವಿಲ್ಲದೇ ಇಂಟರ್ನಲ್ಸ್ ಬ್ಲೂ ಬುಕ್ ಬಿಟ್ಟು ಮತ್ತೆ ರಜೆಯ ಸಮಯದಲ್ಲಿ ವಿದ್ಯಾರ್ಥಿಗಳು ತುಂಬಿರುತ್ತಾರೆ ಎಂದರೆ ಅವರು ಅತ್ಯಂತ ವಿಶ್ವಾಸಾರ್ಹ ಗುರುಗಳೆಂದೇ ಅರ್ಥ. ಅಂತಹ ಸಂದರ್ಭದಲ್ಲಿ ಅವರದೆಲ್ಲಾ ಮುಗಿಸಿ ಲಿಪಿಗೆ ಏನು ಮಾಡಬೇಕೆಂದು ಸಮಯೋಚಿತ ಸಲಹೆಗಳನ್ನು ನೀಡುತ್ತಿದ್ದದ್ದು ಅವರೇ. ಈಗಲೂ ಲಿಪಿ ಒಂದು ಲೈನ್ ಕೋಡ್ ಬರೀತಾಳೆ ಅಂದರೆ ಅವರೇ ಕಾರಣ. ಲಿಪಿಯಂತಹ ಸುಮಾರು ಹುಡುಗ ಹುಡುಗಿಯರು ಅವರ ಜೀವನ ಮುಂದು ಹೋಗುವುದಕ್ಕೆ ಕಾರಣಕರ್ತರು ಮಹದೇವಯ್ಯ ಸರ್.
ಗೆದ್ದೆತ್ತಿನ ಬಾಲವನ್ನ ಹಿಡಿಯುವ ಕೆಲಸ ಎಲ್ಲರೂ ಮಾಡುತ್ತಾರೆ. ಪ್ರಾಯಶಃ ಅದು ಬಹಳ ಸುಲಭವೂ ಹೌದು. ತುಂಬಾ ಬುದ್ಧಿವಂತ ಹುಡುಗರನ್ನ ಮಾತ್ರ ತಮ್ಮ ಹತ್ತಿರ ಸೇರಿಸಿಕೊಂಡು ಅವರೊಡನೆ ಪ್ರಾಜೆಕ್ಟ್ ಮಾಡಿ ಒಂದಷ್ಟು ಪೇಪರ್ಗಳನ್ನ ಪಬ್ಲಿಷ್ ಮಾಡಿಸಿಕೊಂಡು ತಮ್ಮ ಬೆನ್ನನ್ನ ತಾವೇ ತಟ್ಟುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಒಂದು ದಾರಿಯಲ್ಲಿ ನಡೆಯುತ್ತಿರುವ ಮಕ್ಕಳು ಒಮ್ಮೊಮ್ಮೆ ದಾರಿ ತಪ್ಪಿದಾಗ ಆಗುವ ಅವಘಡಗಳನ್ನ ತಡೆದು ಅವರನ್ನ ಮತ್ತೆ ದಾರಿಯಲ್ಲಿ ಮತ್ತೆ ನಡೆಸುವ ಪಡಿಪಾಟಲು ಪಡುತ್ತಾರಲ್ಲ ಅವರು ನಿಜವಾದ ಅಂಧಕಾರದಿಂದ ಬೆಳಕಿಗೆ ತರುವ ಗುರುಗಳು.
ಸುಂದರ ಸಮಾಜವೆಂಬ ತೋಟದ ಮಾಲಿಕರೇ ಶಿಕ್ಷಕರು
ಸರ್ಕಾರಿ ಕಾಲೇಜಿನಲ್ಲಿ ಸಿಗುವ ಮುಗ್ಧ ಮಕ್ಕಳು, ಅತೀ ತಲೆಹರಟೆಗಳನ್ನ ಸಂಭಾಳಿಸುವವರು ಅವರೆ. ವಿದ್ಯಾರ್ಥಿಗಳಲ್ಲಿ ಅತೀ ಮೆಚ್ಚುಗೆ ಪಡೆದವರೆಂದರೆ ಅವರೇನೂ ಸ್ಟ್ರಿಕ್ಟ್ ಅಲ್ಲ, ಸುಮ್ಮನೆ ಮಾರ್ಕ್ಸ್ ಕೊಟ್ಟುಬಿಡುತ್ತಾರೆ ಎಂದು ಭಾವಿಸುವವರ ಮಧ್ಯೆ ಅಪ್ಯಾಯಮಾನವಾಗಿ ನಿಲ್ಲುವವರು ಅವರು. ಎಲ್ಲಿ ಕೆಲಸ ಮಾಡಿಸಬೇಕೋ ಅಲ್ಲಿ ಮಾಡಿಸಿ, ಎಲ್ಲಿ ಆರಾಮಾಗಿರಿಸಬೇಕೋ ಅಲ್ಲಿ ಇರಿಸಿ, ಓದೋದು ಅಂಕಗಳಿಗೇ ಮಾತ್ರವಲ್ಲ, ಜೀವನಕ್ಕೂ ಎಂಬ ಪಾಠಗಳನ್ನ ಕಲಿಸುವ ಗುರುಗಳು ಕಾಣುವುದು ತುಂಬಾ ಅಪರೂಪ.
ಇಂತಹ ಗುರುಗಳು ಜೀವನ ನಡೆಸುವ ಬಗೆಯನ್ನ ತಿಳಿಸುತ್ತಾರೆ, ಬರೀ ಪ್ರೋಗ್ರಾಮ್ ಬರೆಯೋದು ಹೇಳಿಕೊಡೋದಿಲ್ಲ ಎಂಬುದಂತೂ ಸತ್ಯ. ನಮ್ಮ ಸಮಾಜದಲ್ಲಿ ಗುರುಗಳಿಗೆ ಅತ್ಯಂತ ದೊಡ್ಡ ಸ್ಥಾನಮಾನವಿದೆ. ಅವುಗಳನ್ನ ತುಂಬುವ ಜನ ಬಹಳ ಕಡಿಮೆ, ಅದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ಮಹಾದೇವಯ್ಯ ಸರ್. ಲಿಪಿಯ ಹಾಗಿನ ಹುಡುಗ ಹುಡುಗಿಯರು ನೀವೂ ಆಗಿರಬಹುದು, ಹಾಗಾದಾಗ ಮಹಾದೇವಯ್ಯನವರ ಹತ್ತಿರ ಹೋಗುವ ಮನಸ್ಸು ನೀವು ಮಾಡಿ.
ಅಂದ ಹಾಗೆ ಲಿಪಿಯ ಕಥೆ ನಿಮ್ಮ ಜೀವನಕ್ಕೆ ಹತ್ತಿರವಾಗಿದೆಯೇ, ಹಾಗಿದ್ದಲ್ಲಿ ಅದು ಜಯನಗರದಹುಡುಗಿಯ ಕಥೆಯೇ!