ಭಯವೆಂದರೇನೇ ಗೊತ್ತಿರದ ಕನ್ನಡ ನಾಡಿನ ವೀರೆ ಅಬ್ಬಕ್ಕ
ಸ್ವಾತಂತ್ರ್ಯ ನಮಗೆ ಪೂರ್ವಜರು ಕೊಟ್ಟ ಉಡುಗೊರೆ. ಈಗಿನ ಪ್ರತಿ ಮನೆಯಲ್ಲಿಯೂ ನಮ್ಮ ಮುತ್ತಜ್ಜನೋ/ಅಜ್ಜಿಯೋ ದೇಶಕ್ಕಾಗಿ ಏನಾದರೂ ತ್ಯಾಗ ಬಲಿದಾನಗಳನ್ನ ಮಾಡಿರುತ್ತಾರೆ. ಇದೇ ಜಾಡಿನಲ್ಲಿ ಹೊರಗಿನವರ ಮೊದಲ ದಾಳಿಯನ್ನ ತಡೆದ್ದದ್ದು ರಾಣಿ ಅಬ್ಬಕ್ಕ ಎಂಬ ಧೀರ ಮಹಿಳೆ. ತುಳುವರ ಕುಲ ತಿಲಕ ಎಂದರೆ ತಪ್ಪಿಲ್ಲ.
ತುಳುವರ ಚೌಟ ಮನೆತನದಲ್ಲಿ ಹೆಣ್ಣುಮಕ್ಕಳದ್ದೇ ಅಧಿಪತ್ಯ. ಅಬ್ಬಕ್ಕನ ವಂಶದವನಾದ ತಿರುಮಲ ರಾಯನು ಅಬ್ಬಕ್ಕನಿಗೆ ಪಟ್ಟ ಕಟ್ಟಿದ. ಉಲ್ಲಾಳದ ಮಹಾರಾಣಿ ಅಬ್ಬಕ್ಕನ ರಾಜಧಾನಿ ಪುತ್ತಿಗೆ. ವಂಗ ಮನೆತನದ ಲಕ್ಷ್ಮಪ್ಪ ಅರಸನಿಗೆ ಮಾಡಿಕೊಟ್ಟ ಮದುವೆ ತುಂಬಾ ದಿವಸಗಳು ಉಳಿಯದೆ ಆಕೆ ಮತ್ತೆ ಉಲ್ಲಾಳಕ್ಕೆ ವಾಪಸ್ಸು ಬಂದಳು. ಅಲ್ಲಿ ಇಡೀ ಸಾಮ್ರಾಜ್ಯದವರನ್ನ ತನ್ನ ಮಕ್ಕಳೆಂದುಕೊಂಡು ತಾಯಿಯಾಗಿ ಪೊರೆಯಲು ಪ್ರಾರಂಭಿಸಿದಳು. ವೀರ ವನಿತೆ ಅಬ್ಬಕ್ಕ ಕಾಲಾಳಿನ ಕೆಲಸದಿಂದ ಬಿಲ್ಲುಗಾರಿಕೆ ಎಲ್ಲವನ್ನೂ ಕಲಿತಿದ್ದಳು.
ಅಷ್ಟೊಂದು ದೊಡ್ಡವರು ಇಷ್ಟೆಲ್ಲ ಸಿಂಪಲ್ ಆಗಿರೋಕೆ ಹೇಗೆ ಸಾಧ್ಯ?
ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಪೋರ್ಚುಗೀಸರು 1525ರಲ್ಲಿ ಗೋವೆಯನ್ನ ತಮ್ಮ ವಶಕ್ಕೆ ತೆಗೆದುಕೊಂಡರು. ನಂತರ ಕೆನರಾ ಕಿನಾರೆಯನ್ನ ವಶಪಡಿಸಿಕೊಳ್ಳಲು ಯತ್ನಿಸಿದರು. ಇಂಡಿಯನ್ ಓಶನ್ ನಲ್ಲಿ ತಮ್ಮದೇ ಏಕಾಧಿಪತ್ಯ ಸಾಧಿಸಲು ಇವರಿಗೆ ಉಲ್ಲಾಳದ ಅವಶ್ಯಕತೆಯಿತ್ತು. ತಮ್ಮದಲ್ಲದ ನಾಡಿನಲ್ಲಿ ತೆರಿಗೆಯನ್ನೂ ಸಹ ಸಂಗ್ರಹಿಸಲು ಶುರು ಮಾಡಿದ್ದರು. ಇವೆಲ್ಲವೂ ಅಬ್ಬಕ್ಕ ಚೌಟಳಿಗೆ ಸಹ್ಯವಾಗಿರಲ್ಲಿಲ್ಲ. ಜೈನ ಮಹಾರಾಣಿ ಸೌಹಾರ್ದಯುತವಾಗಿ ಹಿಂದೂ ಮತ್ತು ಮುಸ್ಲಿಮರನ್ನ ಆಳುತಿದ್ದಳು. ಮೊಗವೀರ ಮೀನುಗಾರರು ಅವಳ ಶಕ್ತಿಯಾಗಿದ್ದರು. ಪೋರ್ಚುಗೀಸರ ನೌಕಾಪಡೆಯನ್ನ ಎದುರಿಸಲು ಮೊಗವೀರರು ಸಮರ್ಥರಾಗಿದ್ದರು.
ಇದಕ್ಕಿಂತ ಮಿಗಿಲಾಗಿ ರಾಣಿ ಅಬ್ಬಕ್ಕಳೇ ಕತ್ತಿ ಹಿಡಿದು, ಕುದುರೆಯನ್ನೇರಿ ರಣಾಂಗಣದಲ್ಲಿ ಹೊಡೆದಾಡುತ್ತಿದ್ದಳು. 1556ರಲ್ಲಿ ಅಡ್ಮಿರಲ್ ಸೆವ್ವೆರಾ ಮುಂದಾಳತ್ವದಲ್ಲಿ ದೊಡ್ಡ ನೌಕಾಪಡೆಯನ್ನ ಕಳಿಸಿದ್ದರು ಪೋರ್ಚುಗೀಸರು. ಅಲ್ಲೂ ಅವರಿಗೆ ಮುಖಭಂಗವಾಗಿ ಹಿಂದಿರುಗಿದರು. ಅಬ್ಬಕ್ಕನ ಸೇನೆ, ನೌಕಾಪಡೆಯಲ್ಲಿ ಎಲ್ಲಾ ಜಾತಿ, ಧರ್ಮದವರೂ ಇದ್ದರು. ಅರಬ್ಬರ ಜೊತೆ ಇದ್ದ ವ್ಯಾಪಾರ ಸಂಬಂಧ ದುಡ್ಡು ಕಾಸಿಗೆ ಯಾವ ಕೊರತೆಯೂ ಆಗಿರಲ್ಲಿಲ್ಲ. ಅರಬ್ಬರ ಜೊತೆ ವ್ಯಾಪಾರಕ್ಕೆ ತೊಡಗಿದ್ದರೆಂದಲೇ ಈ ಸೆವ್ವೆರಾಗೆ ಕೋಪ ಬಂದಿದ್ದು. 20 ವರ್ಷದಲ್ಲಿ ಸುಮಾರು ದಾಳಿಗಳಾದವು. ಕಾಲಿಕೆಟ್ ನ ಝಾಮೋರಿನ್, ತುಳುನಾಡಿನ ಸುಮಾರು ರಾಜ್ಯದವರ ಹತ್ತಿರ ಮೈತ್ರಿ ಮಾಡಿಕೊಂಡು ಈಕೆ ಹೊಡೆದಾಡುತ್ತಿದ್ದಳು. ಒಂದು ಪ್ರಾಂತ್ಯದ ಜನರು ಈ ಪರಂಗಿಯವರ ದಬ್ಬಾಳಿಕೆಯಲ್ಲಿ ನಲುಗಿ ಹೋಗಿದ್ದರು ಎಂಬುದು ಇಲ್ಲಿ ಬಹು ಸತ್ಯವಾಗಿ ಗೋಚರಿಸುತ್ತಿತ್ತು.
ಸ್ವಾತಂತ್ರ್ಯ ದಿನದ ಸ್ಮರಣೆಯಲ್ಲಿ ಕತಲೂನ್ಯಾ ಸ್ವಾತಂತ್ರ್ಯ ಹೋರಾಟದ ಕಥೆ...
ಮತ್ತೆ ಜೆನರಲ್ ಪೆಕ್ಸಿಟೋ ಎಂಬ ದುರುಳ ಬಂದು ಉಲ್ಲಾಳವನ್ನ ಸುಮಾರು ವಶಪಡಿಸಿಕೊಂಡ. ಅಬ್ಬಕ್ಕ ಒಂದು ಮಸೀದಿಯಲ್ಲಿ ಅವಿತು ತನ್ನ ಪ್ರಾಣವನ್ನ ಉಳಿಸಿಕೊಂಡಳು. ಆಗ ಆದ ಅವಮಾನವನ್ನ ಸಹಿಸದೆ ಅಬ್ಬಕ್ಕ ತನ್ನ ಸೇನೆಯಲ್ಲಿದ್ದ ಇನ್ನೂರು ವೀರಾಧಿವೀರರನ್ನ ಉಲ್ಲಾಳದ ಕೋಟೆಯಲ್ಲಿ ನುಗ್ಗಿಸಿ ಜೆನರಲ್ ಪೆಕ್ಸಿಟೋನ್ನನ್ನ ಕೊಂದಳು.
ಮತ್ತೆ ಬಿಜಾಪುರದ ಸುಲ್ತಾನರು, ಝಾಮೋರಿನ್ ಸಹಾಯ ತೆಗೆದುಕೊಂಡು ಇಡೀ ಮಂಗಳೂರನ್ನ ತನ್ನ ವಶ ಪಡೆಸಿಕೊಂಡಳು. ಅದಕ್ಕೆ ಅಡ್ಮಿರಲ್ ಮಸ್ಕಾರೆನಸ್ ಹತ್ಯೆಯೂ ಆಯ್ತು. ಇವೆಲ್ಲ ಆಗಿ ನಿಟ್ಟುಸಿರು ಬಿಡುತ್ತಿರುವಾಗ ತನ್ನ ಗಂಡನೇ ವೈರಿಗಳ ಜೊತೆ ಸೇರಿ ಅಬ್ಬಕ್ಕನ್ನನ್ನ ಹಿಡಿದುಕೊಟ್ಟ. ಅಲ್ಲೂ ಜೈಲಿನಲ್ಲಿ ಉಪವಾಸ ಇದ್ದು, ಹೋರಾಡಿ ತದ ನಂತರ ಅವಳನ್ನ ಹತ್ಯೆ ಮಾಡಿದರು.
ಅಲ್ಲಿಗೆ ಕರಾವಳಿ ಕೇಸರಿಯ ಕಥೆ ಮುಗಿಯಿತು. ಆದರೆ ಜನಮಾನಸದಲ್ಲಿ ಅವಳಿನ್ನೂ ಇದ್ದೇ ಇದ್ದಾಳೆ. ದೈವ ಕೋಲದಲ್ಲಿಯೂ ಸಹ ಅಬ್ಬಕ್ಕ ಬರುತ್ತಾಳೆ. ಹೆಣ್ಣಿನ ಅಗಾಧ ಶಕ್ತಿ, ಪ್ರೌಢಿಮೆ ತಿಳಿಯೋದು ಇಂತಹವರ ಉದಾಹರಣೆಯಿಂದಲೇ. ಈಗ ಚೆನೈನಲ್ಲಿರುವ ಐಸಿಜಿಎಸ್ ಅಬ್ಬಕ್ಕ ನಮ್ಮ ನೌಕಾಪಡೆ ಗಸ್ತುದಳದ ಹೊಸ ನೌಕೆ. ನಮ್ಮ ಕರಾವಳಿಯನ್ನ ಪರಂಗಿಯವರಿಗೆ ಬಿಟ್ಟು ಕೊಡದೆ ಧೀರೆಯಾಗಿ ವೀರೆಯಾಗಿ ಹೋರಾಡಿದ್ದು ನಮ್ಮ ಅಬ್ಬಕ್ಕ. ಇವಳಿಗೆ ಭಯವೆನ್ನುವುದೇ ಗೊತ್ತಿರಲ್ಲಿಲ್ಲ. ಇವಳನ್ನ ಅಭಯ ದೇವಿಯೆಂದೂ ಕರೆಯುತ್ತಿದ್ದರು.
ಹೆಣ್ಣು ಶಕ್ತಿ ದೇವತೆ. ಅಕೆಯಲ್ಲಿ ಪ್ರತಿಯೊಂದೂ ಇದೆ ಎನ್ನುವುದು ನಮ್ಮಲ್ಲಿರುವ ನಂಬಿಕೆ. ಆಕೆ ಶಾಂತ ಸ್ವರೂಪ, ಕ್ಷಮಯಾ ಧರಿತ್ರಿ ಎಂಬುವ ಗುಣಲಕ್ಷಣಗಳನ್ನ ಅವಳ ಮುಡಿಗೆ ಇರಿಸಿದ್ದೇವೆ. ಅದು ಆಕೆ ಈಗಿನವರೆಗೂ ಪಾಲಿಸಿಕೊಂಡು ಬಂದ ನಿಯಮ. ಆದರೆ ಆಕೆ ಒಮ್ಮೆ ರೊಚ್ಚಿಗೆದ್ದರೆ ಅವಳ ಮುಂದೆ ನಿಲ್ಲುವ ತಾಕತ್ತು ನಮಗಿರುವುದಿಲ್ಲ. ಅವಳ ರೌದ್ರಾವತಾರಕ್ಕೆ ಒಂದು ಸೀಮೆಯಿಲ್ಲ. ರಾಣಿ ಅಬ್ಬಕ್ಕ ಒಂದು ಶಕ್ತಿ ದೇವತೆಯಾಗಿದ್ದಳೆಂದರೆ ಅತಿಶಯೋಕ್ತಿಯಲ್ಲ. ಆಗಿನಕಾಲದ ಪೋರ್ಚುಗೀಸರ ಬಲಿಷ್ಠ ನೌಕಾಪಡೆಯನ್ನ ಧೂಳಿಪಟಮಾಡಿದ್ದು ಆಕೆ. ತನ್ನ ರಾಜ್ಯ, ದೇಶಕ್ಕಾಗಿ ಅವಳ ಗಂಡ, ಮನೆಯವರು ಮಾಡಿದ ಅವಮಾನಗಳನ್ನ ಬಿಟ್ಟು ಬಂದು ತನ್ನ ಜನ್ಮಸಿದ್ಧವಾಗಿ ಬಂದದ್ದನ್ನ ಸಾಧಿಸಿ ತನ್ನ ಜೀವನವನ್ನ ದೇಶಕ್ಕಾಗಿ ಮುಡಿಪಾಗಿಟ್ಟಿದ್ದು ಒಂದು ದಂತಕಥೆಯೇ ಸರಿ.
ಹೆಣ್ಣು ಧೀರೆಯಾಗಬೇಕು, ವೀರೆಯಾಗಬೇಕು, ಅವಳತನ ಅವಳಿಗಿರಬೇಕು, ಗಟ್ಟಿಯಾಗಿ ಅವಳಿಗನ್ನಿಸಿದ್ದನ್ನು ಮಾತಾಡಬೇಕು, ನಡೆದುಕೊಳ್ಳಬೇಕು. ಇದು 15ನೇ ಶತಮಾನದಲ್ಲಿ ನಡೆದ ಕಥೆ. ಭಾರತ ಈಗ ಸ್ವತಂತ್ರವಾಗಿದೆ. ಈಗಲೂ ಹೆಣ್ಣು ಇನ್ನೂ ಮನೆಯಲ್ಲಿ ಮನಸಲ್ಲಿ ಭಯ ತುಂಬಿಕೊಂಡರೆ ಅಬ್ಬಕ್ಕನಂತಹ ವೀರೆಯರು ತಮ್ಮ ಮನೆ, ಸಂಸಾರ ಎಲ್ಲವನ್ನು ಬಿಟ್ಟು ಪ್ರಾಣವನ್ನೇ ಕೊಟ್ಟು ದೇಶ ಉಳಿಸಿದವರಿಗೆ ನಾವು ಮಾಡುವ ಅವಮಾನ. ಅಬ್ಬಕ್ಕ ನಮ್ಮ ಜೀವನದ ದಾರಿ ದೀಪವಾಗಲಿ, ಅವಳಂತೆ ನಾವೂ ಧೀರರಾಗೋಣ, ಮುನ್ನುಗ್ಗೋಣ. ಅವಳೇ ನಮಗೆ ಆದರ್ಶ.