ರಾಮನವಮಿ ಕಛೇರಿ ಪಾನಕ ಕೋಸಂಬರಿಗಿಂತ ಸೂಪರ್!
ಅಮ್ಮ ಕರೆ ಮಾಡಿದಾಗೆಲ್ಲ ಹೇಳೋದು ಒಂದೆ. ಬೆಂಗಳೂರಿನಲ್ಲಿ ತುಂಬಾ ಬಿಸಿಲು, ಈ ಸರ್ತಿ ರಾಮ ನವಮಿಗೆ ಮೊದಲೇ ಪಾನಕ ಕುಡಿಯೋಹಂಗೆ ಆಗ್ತಿದೆ ಅಂತ. ಬೆಂಗಳೂರಿಗೆ ರಾಮ ನವಮಿ ದೊಡ್ಡ ಹಬ್ಬವೆ. ಇಲ್ಲ ಇಲ್ಲಿ ಖಂಡಿತಾ ರಾಮನ ಅವತಾರವಾಗಿಲ್ಲ ಅಥವಾ ರಾಮ ವನವಾಸ ಮಾಡುವಾಗ ಇಲೆಲ್ಲಾ ಕಾಲು ಸಹ ಇಟ್ಟಿಲ್ಲ. ಆದರೆ ಬೆಂಗಳೂರಲ್ಲಿ ರಾಮನವಮಿ ತುಂಬಾ ಪ್ರಸಿದ್ಧ. ಕಾರಣ ಕೋಟೆ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ರಾಮ ನವಮಿ ಸಂಗೀತ ಉತ್ಸವ.
ಇದು ಇಡೀ ಬೆಂಗಳೂರಿಗೆ ದೊಡ್ಡ ಹಬ್ಬ. ದೇಶದ ಸುಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಿಗೆ ಇದು ದೊಡ್ಡ ವೇದಿಕೆ. ಇಡೀ ಚಾಮರಾಜಪೇಟೆ ಮದುಮಕ್ಕಳಂತೆ ಸಿಂಗರಿಸಿಕೊಂಡಿರತ್ತೆ. ಯುಗಾದಿಯ ಹಬ್ಬಕ್ಕೆ ವೇದಿಕೆ ನಿರ್ಮಾಣವಾದರೆ ರಾಮನವಮಿಗೆ ಮೊದಲ ಕಛೇರಿ. ಅಷ್ಟು ಶಿಸ್ತುಬದ್ಧವಾಗಿ 77 ವರ್ಷದಿಂದ ನಡೆದುಕೊಂಡು ಬಂದಿದೆ. ನಾನು 12 ವರ್ಷದವಳಿದ್ದಾಗ ಮೊದಲ ಕಛೇರಿ ನೊಡಿದ್ದು. ಶಾಸ್ತ್ರೀಯ ಸಂಗೀತಕ್ಕೂ ಜನ ಇರ್ತಾರಾ ಅಂತ ಬಾಯಿ ಬಿಟ್ಟುಕೊಂಡು ನೊಡುತ್ತಿದ್ದೆ. ಅಮ್ಮ ಚಾಮರಾಜಪೇಟೆಯವಳಾದ ಕಾರಣ, ಅಲ್ಲಿಯೇ ಅವಳು ಎಲ್ಲ ಸಂಗೀತ ಪಂಡಿತರನ್ನು ನೋಡಿದ್ದು.[ಜಯನಗರದ ಹುಡ್ಗಿ ಜತೆ ತಿಂಡಿಪೋತರ ಸ್ವರ್ಗ ಬೆಂಗ್ಳೂರಲ್ಲಿ ಸುತ್ತಾಟ]
ನನಗಿನ್ನೂ ನೆನಪಿದೆ ನಾನು ಕದ್ರಿ ಗೋಪಾಲನಾಥರನ್ನು ಮೊದಲ ಬಾರಿ ಕಂಡಿದ್ದು ಅಲ್ಲಿಯೇ. ಬಿಳಿ ಪಂಚೆ, ಷರ್ಟ್, ಶಲ್ಯ, ಬೆರಳತುಂಬ ಫಳಫಳ ಹೊಳೆಯುವ ಉಂಗುರಗಳು. ಜಗದೋದ್ಧಾರನ ಅಂತ ನುಡಿಸುತ್ತಿದ್ದರೆ ನನಗೆ ಆನಂದವೋಆನಂದ. ಚಿಕ್ಕವಳಿದ್ದಾಗ ಸ್ಯಾಕ್ಸೋಫೋನ್, ಪಿಟೀಲು ಎಲ್ಲ ಭಾರತದದ್ದೆ ಅಂದುಕೊಂಡಿದ್ದೆ. ಆಮೇಲೆ ಸಂಗೀತ ಪರೀಕ್ಷೆ ಬರೆಯುವಾಗ ತಿಳಿಯಿತು ಇದೆಲ್ಲ ಪಶ್ಚಿಮದಿಂದ ಬಂದಿದ್ದು ಅಂತ. ಶಾಸ್ತ್ರೀಯ ಸಂಗೀತ ಕಲಿಯುವರರಿಗೆ ಇದು ಸ್ವರ್ಗ. ನನ್ನ ಗುರುಗಳು ಕಡ್ಡಾಯವಾಗಿ ಕಛೇರಿ ಕೇಳಲೇಬೇಕು ಅಂತ ಹೇಳುತ್ತಿದ್ದರು. ಕಛೇರಿ ಕೇಳಿ ಅದರ ವಿವರ ಮುಂದಿನ ಸಂಗೀತ ಕ್ಲಾಸ್ ನಲ್ಲಿ ವಿವರಿಸಬೇಕಿತ್ತು.
ಚಾಮರಾಜಪೇಟೆಯಲ್ಲಿಯೇ ಇರುವ ಶ್ರೀರಾಮ ಸೇವಾ ಮಂಡಲಿ ನಡೆಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮ. ನಾರಾಯಣಸ್ವಾಮಿ ರಾವ್ ಅನ್ನುವವರ ಕನಸಿನ ಕೂಸು ಇದು. 1939ರಲ್ಲಿ ಶುರುವಾದ ಈ ಯಾತ್ರೆ ಇದುವರೆಗೂ ನಿಂತಿಲ್ಲ. ನನ್ನ ಅಜ್ಜ, ಅಪ್ಪ ಅಮ್ಮ ನನ್ನ ಕಾಲಕ್ಕೂ ಅಷ್ಟೇ ಪ್ರಸ್ತುತ. ಸುಮ್ಮನೆ ಪಾನಕ ಮಜ್ಜಿಗೆ ಕೋಸಂಬರಿ ಅನ್ನದೇ ಸಂಗೀತಕ್ಕೂ, ನಮ್ಮ ಸಂಸ್ಕೃತಿಗೂ ಒತ್ತು ಕೊಟ್ಟು ನಡೆಯುತ್ತಿರುವ ಸಂಭ್ರಮ.[ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲ!]
ಮುಂಚೆ ಅವರಿವರಿಗೆ ಹೇಳಿ ಪಾಸ್ ತರಿಸಿಕೊಂಡು, ಇಲ್ಲ ದೊಡ್ಡ ಕ್ಯೂನಲ್ಲಿ ನಿಂತು ಗಲಾಟೆ ಮಾಡಿಕೊಂಡು ಹೋಗಬೇಕಿತ್ತು. ಇವಾಗ ಆರಾಮಾಗಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಇದೆ. ಈ ವರ್ಷದಿಂದ ಫೇಸ್ಬುಕ್ ಲೈವ್ ಸಹ ಇದೆ. ನೆನಪಿರಲಿ ಇದು ಪೂರ್ತಿ ಜನರೇ ನಡೆಸಿಕೊಂಡು ಬರುವ ಕಾರ್ಯಕ್ರಮ. ಚಂದಾ ಹಣದಿಂದ ನಡೆಯುತ್ತೆ. ಇತ್ತೀಚೆಗೆ ಅಷ್ಟೇ ದೊಡ್ಡ ದೊಡ್ಡ ಸಂಸ್ಥೆಗಳು ನೆರವು ನೀಡುತ್ತಿರುವುದು ಸಂತೋಷದ ಸಂಗತಿ.
ಇಲ್ಲಿ ಚಂಬೈ , ಎಂಎಸ್ ಸುಬ್ಬಲಕ್ಷ್ಮಿ , ಅಮ್ಜದ್ ಅಲಿ ಖಾನ್, ಯೇಸುದಾಸ್, ಉನ್ನಿಕ್ರಿಷ್ಣನ್ , ಚೌಡಯ್ಯ, ಸೆಮ್ಮಂಗುಡಿ, ಟಿ ಎಂ ಕ್ರಿಶ್ಣ, ಎಲ್ ಸುಬ್ರಮಣ್ಯಂ, ಮೈಸೂರು ಬ್ರದರ್ಸ್ ಮುಂತಾದ ಎಲ್ಲ ದೊಡ್ಡ ಕಲಾವಿದರು ಹಾಡಿದ್ದಾರೆ. ಒಂದು ತಿಂಗಳು ನಡೆಯುವ ಕಾರ್ಯಕ್ರಮ ನಿಜವಾಗಲೂ ಕಣ್ಣಿಗೆ ಕಟ್ಟುವಂಥದ್ದೆ.[ಹಾರುತ ದೂರ ದೂರ... ಏರೋ ಇಂಡಿಯಾದ ನೆನಪುಗಳು!]
ಹೋದ ವರ್ಷ ಹೋದಾಗ ಯೇಸುದಾಸ್ ಅವರು "ನಾನು ಇಲ್ಲಿ 50 ವರ್ಷಗಳಿಂದ ಬರುತ್ತಿದ್ದೇನೆ, ರಾಮನ ಸೇವೆ ಮಾಡುವ ನನ್ನ ಭಾಗ್ಯ ಇಲ್ಲಿ ನನಗೆ ಒದಗಿ ಬಂದಿದೆ. ಬಹಳ ಸುಂದರ ಬೆಂಗಳೂರು" ಎಂದು ಇಲ್ಲಿನ ಹವಾಗುಣ ಬಗ್ಗೆ ಹೊಗಳಿದ್ದರು. ಮೊದಲ ಬಾರಿ ಬಂದಾಗ ಇಲ್ಲಿ ಫ್ಯಾನ್ ನ ಅವಶ್ಯಕತೆಯೆ ಇರುತ್ತಿರಲಿಲ್ಲ, ಈವಾಗ ಎಸಿ ಹಾಕಿಕೊಂಡು ಹಾಡುವ ಕರ್ಮ ಎಂದು ತಮಾಷೆ ಮಾಡಿ ನಕ್ಕಿದ್ದರು.
ಕಾಕತಾಳೀಯವೋ ಏನೋ ಅವರು ಪ್ರತಿ ಸರ್ತಿ ಬಂದು ಹಾಡುವಾಗಲೂ ಬಿರುಬಿರು ಬೇಸಿಗೆಯ ಬೆಂಗಳೂರಲ್ಲಿ ಮಳೆ! ಈ ಚಮತ್ಕಾರವನ್ನೆಲ್ಲ ನಂಬುವುದಿಲ್ಲವಾದರೂ 10 ವರ್ಷ ಮಳೆ ಹೇಗೆ ಬರಲು ಸಾಧ್ಯ? ಅಂತ ನಾನು ಇನ್ನೂ ಯೋಚನೆ ಮಾಡಿಕೊಂಡು ಕೂತ್ತಿದ್ದೇನೆ.
ಏನೇ ಆಗಲಿ, ರಾಮನವಮಿ ಬೆಂಗಳೂರಿಗೆ ಸಂಗೀತದ ಮಳೆಯನ್ನೆ ಕರೆದುಕೊಂಡು ಬರುತ್ತದೆ. ಬಿಸಿಲು ಜಾಸ್ತಿ ಎನ್ನುವವರು ಸಂಗೀತದ ಹೊಳೆಗೆ ತೊಯ್ದು ತೊಪ್ಪೆಯಾಗುತ್ತಿದ್ದಾರೆ. ನಮ್ಮ ಹಳೆ ಬೆಂಗಳೂರಿನ ವಾತಾವರಣ ಮತ್ತೆ ಸಿಗುತ್ತದೆ. ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳ್ಳನ್ನು ಕರೆದುಕೊಂಡು ಬರುವ ಪರಿ, ಅಪ್ಪ ಅಮ್ಮ ಅವರ ಮಕ್ಕಳನ್ನು, ಹುಡುಗ ತನ್ನ ಹುಡುಗಿಯನ್ನು ಹೀಗೆ ಅನೇಕ ಚೆನ್ನಾಗಿರುವ ಸಂಬಂಧಗಳು ನೋಡೊದಕ್ಕೆ ಸಿಗ್ಗುತ್ತದೆ.
ಬೆಂಗಳೂರು ಮತ್ತೆ ನಿಧಾನಗತಿಯಲ್ಲಿ ಚಲಿಸುತ್ತಿದೆ. ಆ ಒಂದು ತಿಂಗಳು 3 ಘಂಟೆಗಳ ಕಾಲ ಎಲ್ಲವೂ ಸುಂದರ ಸುಲಲಿತವಾಗುತ್ತದೆ. ಸಂಗೀತ ಕೇಳಿ ಕಲಿಯುವುದಕ್ಕೆ ತುಂಬಾ ಇದೆ. 75 ವರ್ಷದ ಹರೆಯದಲ್ಲೂ ಯೇಸುದಾಸ್ ರವರು 3 ಘಂಟೆ ಕೆಳಗೆ ಕುಳಿತುಕೊಂಡು ಒಬ್ಬರ ಸಹಾಯವೂ ಇಲ್ಲದೆ ನಮ್ಮನ್ನು ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ.
ಈ ಬಾರಿ ಹೋಗಿ ಬನ್ನಿ ರಾಮನವಮಿ ಕಛೇರಿಗೆ ಪಾನಕ ಕೋಸಂಬರಿಗಿಂತ ಚೆನ್ನಾಗಿರುತ್ತದೆ. ರಾಮನವಮಿಯ ಶುಭಾಶಯಗಳು, ರಾಮ ರಾಜ್ಯವೋ ಏನೋ ಗೊತ್ತಿಲ್ಲ ಆದರೆ ಸಂಗೀತ ರಾಜ್ಯ ನಮ್ಮ ನಗರ ಒಂದು ತಿಂಗಳಿಗೆ ಆಗುತ್ತದೆ. ಆನಂದಿಸಿ.