ಪರ್ಷಿಯಾದ ಅಮರ ಪ್ರೇಮಕವಿ ಜಲಾಲುದ್ದಿನ್ ಮೊಹಮ್ಮದ್ ರೂಮಿ
'ಜಯನಗರದ ಹುಡುಗಿ' ಪುಸ್ತಕ ಬಿಡುಗಡೆಯಾಗಿ ಅದು ಕನಸೋ ನನಸೋ ಎಂದು ಅಂದುಕೊಳ್ಳುತ್ತಿರುವ ಹಾಗೆಯೇ 3 ತಿಂಗಳಿಂದ ಇದರ ಜಪವೇ ಮಾಡುತ್ತಿದ್ದ ನನಗೆ ಯಾವ ಹೊಸ ಪುಸ್ತಕಗಳನ್ನ ಓದದೇ ಬಿಟ್ಟಿದ್ದೆ ಎಂಬ ಲಿಸ್ಟ್ ನೋಡುತ್ತಿದ್ದೆ.
ಶ್ರವಣ ಒಂದು 6 ತಿಂಗಳಿಂದ 'ರೂಮಿ'ಯನ್ನ ಓದು ಎಂದು ಹೇಳುತ್ತಲೇ ಇದ್ದ. 'ರೂಮಿ'ಯ ಬಗ್ಗೆ ನನಗೆ ಬಹಳ ತಿಳಿದಿದ್ದು, ನನ್ನ ಬಾರ್ಸಿಲೋನಾದ ಸ್ನಾತಕೋತ್ತರ ಪದವಿಯ ಸಹಪಾಠಿಯಾದ ಲೆಬನೀಸ್ ಹುಡುಗ ಜಿಮ್ಮಿಯಿಂದ. ಸಾಕಷ್ಟು ಪರ್ಷಿಯನ್ ಸಾಹಿತ್ಯ ಅವನಿಗೆ ಗೊತ್ತಿತ್ತು, ಜೊತೆಗೆ ಅವನ ಮನೆಯವರು ಸಾಹಿತ್ಯಾಸಕ್ತರು. 'ರೂಮಿ' ಅಂದಾಕ್ಷಣ ಅರ್ಧ ಕೊರಿಯನ್ ಅರ್ಧ ಅಮೇರಿಕನ್ನನಾದ ಸಹಪಾಠಿ ಮಿಂಝ್ ಸಹ ಅದರ ಇಂಗ್ಲಿಷ್ ತರ್ಜುಮೆಯನ್ನ ಓದಿದ್ದಾನೆಂದು ತಿಳಿಸಿ, ಅವನ ತಂದೆಯ 'ರೂಮಿ'ಯ ಹುಚ್ಚಿನ ಬಗ್ಗೆ ತಿಳಿಸುತ್ತಿದ್ದ.
ನಿಗೂಢ ಸುಂದರಿ ಶಗುಫ್ತಾಳ ಚಕ್ರವ್ಯೂಹದಲ್ಲಿ ಸಿಲುಕಿದ ವಿಕರ್ಣ!
ಭರ್ತಿ ಒಂದು ವರ್ಷದ ನಂತರ ಇದೇ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ಪದ್ಯಗಳು ನನಗೆ ಅಷ್ಟು ಅರ್ಥವಾಗದ್ದಿದ್ದ ಕಾರಣವೋ ಏನೋ ಪದ್ಯಗಳ ಜಗತ್ತಿಂದ ಸ್ವಲ್ಪ ದೂರವೇ ಇದ್ದೆ. ಕಹಳೆಯ ವಿನಯ, 'ರೂಮಿ'ಯ ಕೆಲವು ಪದ್ಯಗಳನ್ನ ಕನ್ನಡಕ್ಕೆ ಅನುವಾದ ಮಾಡಿದ್ದರೂ ಅದನ್ನ ಓದಿ ಮರೆತಿದ್ದೆ. ಆಗಾಗ ಶ್ರವಣ ನಿನ್ನ ಮುಂದಿನ ಓದು 'ರೂಮಿ' ಎಂದು ನೆನಪಿಸುತ್ತಲೇ ಇದ್ದ. ಈಗಿನ ಪೀಳಿಗೆಯ ತುಂಬಾ ಇಷ್ಟವಾದ ಕವಿ ಆಕರ್ಷ 'ರೂಮಿ'ಯನ್ನ ತುಂಬಾ ಓದಿಕೊಂಡಿದ್ದಾರೆ ಎಂಬುದನ್ನು ಹೇಳುತ್ತಿದ್ದ.
ಇದೆಲ್ಲಾ ಮಾತು ಆಡುತ್ತಿದ್ದಾಗಲೇ ದೂರದ ದಿಲ್ಲಿಯಿಂದ ಪ್ರಸಾದ್ ಇಂದ ಒಂದು ದೊಡ್ಡ ಪಾರ್ಸಲ್ ಬಂತು. ನೀನು ಓದಲೇಬೇಕಾದ ಪುಸ್ತಕ ಎಂದು ಗುಲ್ಝಾರ್, ಸಾರಾ ಶಗುಫ್ತಾ ಮತ್ತು ರೂಮಿಯ ಪದ್ಯಗಳ ಆಂಗ್ಲ ಅನುವಾದಗಳನ್ನ ಕಳಿಸಿದ್ದ. ಇನ್ನು ನನ್ನ ಕಥೆ ಗೋವಿಂದ ಎಂದು ಕೂತಿದ್ದೆ. ಪುಸ್ತಕ ಬಿಡುಗಡೆಯ ಬಿಸಿ ಎಂದು ಅವೆಲ್ಲವನ್ನೂ ಮುಂದೂಡುತ್ತಾ ಬಂದೆ. ನನ್ನ ಬಾಯಲ್ಲಿಯೂ ಮುಂದಿನ ಪುಸ್ತಕ 'ರೂಮಿ'ಯದ್ದೇ ಎಂದು ಹೇಳುತ್ತಿದ್ದೆ. ಮತ್ತ್ಯಾವುದೋ ಸಮ್ಮಿಶ್ರ ಕಥೆಯನ್ನ ಬರೆಯುವಾಗ ಕಥೆಯ ನಾಯಕಿ 'ರೂಮಿ'ಯ ಸಾಲುಗಳನ್ನ ಹೇಳುತ್ತಾಳೆಂದು ಒಂದಷ್ಟು ಕಣ್ಣಾಡಿಸಿದ್ದು ಬಿಟ್ಟರೆ 'ರೂಮಿ'ಯನ್ನ ಮತ್ತೆ ಓದಲೇ ಇಲ್ಲ.
ಕಡೆಗೆ ರುತುಪರ್ಣ ಪದ್ಯಗಳು ಚೆನ್ನಾಗಿದೆ ಎಂದು ನೆನಪಿಸಿದ್ದಾಗಲೇ ಮತ್ತೆ ಆ ಪುಸ್ತಕ ಎತ್ತಿಕೊಂಡಿದ್ದು. ಇಷ್ಟು ಪೀಠಿಕೆ ಯಾಕೆ ಬೇಕಾಯಿತೆಂದರೆ, ಇವರೆಲ್ಲ ಒಬ್ಬರಿಗೊಬ್ಬರು ಗೊತ್ತಿಲ್ಲದೇ ನನ್ನ ತಲೆಯಲ್ಲಿ ರೂಮಿಯನ್ನ ತುಂಬಿದ್ದರು. ಪ್ರಾಯಶಃ ಇದೊಂದೇ ಕಾರಣಕ್ಕೆ ನಾ ಮತ್ತೆ ಪುಸ್ತಕ ಓದಬೇಕಿತ್ತು. ಒಬ್ಬ ಲೆಬನೀಸ್, ಕೊರಿಯನ್, ಯೂಟ್ಯೂಬ್ ಸ್ಟಾರ್, ಕವಿ/ಇಂಜಿನಿಯರ್, ಕಥೆಗಾರನ್ನನ್ನ ಒಂದೇ ಕವಿ ಕಾಡಬೇಕೆಂದಿದ್ದರೆ ಆ ಕವಿಯ ವಿಷಯ ಆಳ ವಿಸ್ತಾರ ಏನಿರಬಹುದೆಂಬ ಕ್ಯೂರಿಯಾಸಿಟಿ ಉಂಟಾಯಿತು. ಓದುತ್ತಾ ಹೋದೆ.
ಭಯವೆಂದರೇನೇ ಗೊತ್ತಿರದ ಕನ್ನಡ ನಾಡಿನ ವೀರೆ ಅಬ್ಬಕ್ಕ
ಮೊದಲ ಪುಟದಿಂದಲೇ ಓದಬಾರದೆಂಬ ಅಲಿಖಿತ ನಿಯಮ ಹಾಕಿಕೊಂಡಿದ್ದರಿಂದ ಮಧ್ಯದಲ್ಲಿ ಸಿಕ್ಕ ಒಂದು ಪದ್ಯ ಓದಿ ದಂಗಾಗಿ ಅರ್ಧ ರಾತ್ರಿ ಕೂತೆ. "ನಿನ್ನ ಬೆಳಕಿನಲ್ಲಿ ಪ್ರೀತಿಸುವದನ್ನ ಕಲಿತೆ, ನಿನ್ನ ಸೌಂದರ್ಯದಲ್ಲಿ ಪದ್ಯಗಳನ್ನ ಬರೆಯಲು ಕಲಿತೆ, ನನ್ನ ಎದೆಯಲ್ಲಿ ನೀನು ಕುಣಿಯುವುದನ್ನು ಯಾರು ನೋಡಲಿಕ್ಕೆ ಸಾಧ್ಯವಿಲ್ಲದಿದ್ದರೂ ನಾನು ನೋಡಬಲ್ಲೆ, ಅದು ಒಂದು ದೊಡ್ಡ ಕಲೆಯೆಂದು ಹೇಳಬಲ್ಲೆ. ಇದು ನಮ್ಮಿಬ್ಬರನ್ನ ಸುಸ್ತಾಗಿಸಿದರೂ ಇದೇ ಪ್ರೀತಿಯ ರೀತಿ" ಎಂದು ಹೇಳುವಾಗ ಪ್ರೀತಿಯ ಪರಕಾಷ್ಠೆಯಲ್ಲಿದ್ದಾಗ ನಾವೆಲ್ಲರೂ ಮಾಡಿದ್ದ ಪೂರ್ತಿ ರಾತ್ರಿಯ ಸಂಭಾಷಣೆಗಳು ನೆನಪಾದವು. ನಾಳೆ ಕಛೇರಿ ಇದೆ, ಅಥವಾ ಕಾಲೇಜಿದ್ದರೂ ಸಹ ಪ್ರೀತಿಯಲ್ಲಿ ಕಡೆಗುಳಿಯುವುದು ಸಂಭಾಷಣೆಗಳು ಮಾತ್ರ ಎಂದು ನೆನಸಿಕೊಂಡು ಮಾಡಿದಷ್ಟು ಸಂಭಾಷಣೆಗಳು ಮತ್ತೆ ನೆನಪಾಗುತ್ತಾ ಹೋಗುತ್ತದೆ.
ಮತ್ತದೇ ಸಮಯದಲ್ಲಿ ಓದಿದ ಮತ್ತೊಂದು ಪದ್ಯದಲ್ಲಿ "60 ವರ್ಷ ನಾ ಮರೆಯಲು ಪ್ರಯತ್ನಿಸಿದ್ದ ಘಳಿಗೆಗಳು ಮರೆತಿದ್ದೆನೆಂದು ಅಂದುಕೊಂಡರೂ ಅದು ಪ್ರೀತಿ ಎದುರುಗಡೆ ಬಂದಾಗ ಪ್ರವಾಹ ಬಂದಾಗ ಗೋಡೆಗಳು ಒಡೆದುಹೋಗುವ ಹಾಗೆ ಆ ಎಲ್ಲಾ ಗೋಡೆಗಳು ಒಡೆದು ಪ್ರೀತಿ ತನ್ನಂತಾನೆ ಹರಿಯುತ್ತದೆ" ಎಂದಾಗ ಫಲಿಸದ ಕೆಲವರ ಪ್ರೀತಿಯ ಕಥೆಗಳು ಸ್ಮೃತಿಯಲ್ಲಿ ಬರುತ್ತದೆ. ಇಷ್ಟೊಂದು ಪ್ರೀತಿಯ ಪರಕಾಷ್ಠೆಯನ್ನ ನಮಗೆ ತಿಳಿಸಿದ ಕವಿಯ ಬಗ್ಗೆ ತಿಳಿಯಬೇಕೆನಿಸಿತು.
ಜರ್ಮನ್ ಅಜ್ಜ ಕತಲಾನ್ ಅಜ್ಜಿಯ ಅಮರ ಪ್ರೇಮ!
12ನೇ ಶತಮಾನದಲ್ಲಿ ಪರ್ಷಿಯಾದಲ್ಲಿದ್ದವನು ನಮ್ಮ 21ನೇ ಶತಮಾನದಲ್ಲಿಯೂ ಅಷ್ಟು ಲವಲವಿಕೆಯಿಂದ ನಮ್ಮ ಮನಸ್ಸನ್ನು ಮುದಗೊಳಿಸಬೇಕೆಂದರೆ, ಅವನ ಬರಹಗಳು ಎಂಥದ್ದು, ಅವ ಎಂಥವನು ಎಂಬ ಯೋಚನೆ ಬಂದೇ ಬರುತ್ತದೆ. ರೂಮಿಯ ಪೂರ್ತಿ ಹೆಸರು ಜಲಾಲುದ್ದೀನ್ ಮಹಮ್ಮದ್ ರೂಮಿ. ಪರ್ಷಿಯಾದ ಸುನ್ನಿ ಕವಿ ಹಾಗೂ ಸೂಫಿ ಹಾಡುಗಾರ. ಈತ ಟರ್ಕಿಶ್, ಪರ್ಷಿಯನ್, ಅರೇಬಿಕ್ ಮತ್ತು ಗ್ರೀಕ್ ಭಾಷೆಯನ್ನ ಸಹ ಉಪಯೋಗಿಸಿ ಪದ್ಯಗಳನ್ನ ಬರೆಯುತ್ತಿದ್ದ.
ಇಂದಿನ ಅಫ್ಘನ್ ಅಲ್ಲಿ ಅವನ ಜನನವಾಗಿದ್ದು. ಮಂಗೋಲರು ಮಧ್ಯ ಏಷ್ಯಾವನ್ನ ಆಕ್ರಮಣ ಮಾಡಿದಾಗ, ರೂಮಿಯ ಮನೆಯವರು ಈಗಿನ ಇರಾನಿಗೆ ಸ್ಥಳಾಂತರಗೊಂಡರಂತೆ. ಈತ ರುಬಯತ್ ಮತ್ತು ಘಝಲ್ ಗಳನ್ನ ಬರೆಯುವದರಲ್ಲಿ ನಿಸ್ಸೀಮನಾಗಿದ್ದ. 'ಮತನ್ವಾಯೆ ಮಸ್ನವಿ' ಈತ ಬರೆದ ಆರು ಸಂಪುಟದ ಮಹಾಕಾವ್ಯ. ಇದನ್ನ ಪರ್ಷಿಯಾದ ಕುರಾನ್ ಎಂದೂ ಅನ್ನುತ್ತಾರೆ. 27,000 ಸಾಲುಗಳಿರುವ ಕಾವ್ಯವಿದು. ಇರಾನಿ ಮತ್ತು ಅಪ್ಘನ್ ರ ಸಂಗೀತದಲ್ಲಿ ಸುಮಾರು ಬರೀ ಇವರ ಸಾಲುಗಳೇ ಇರುವುದು. ತಾಲಿಬಾನಿಗಳ ಆಡಳಿತದಲ್ಲಿ ಈ ಕವಿಯ ರಚನೆಗಳು ಸತ್ತುಹೋದವು. ಹಂಗಾಗಿಯೂ ಯುನೆಸ್ಕೋ ಈತನ ರಚನೆಗಳನ್ನ ರಿವೈವ್ ಮಾಡಿ 30ನೇ ಸೆಪ್ಟೆಂಬರ್ ರಂದು ರೂಮಿ ದಿವಸವನ್ನಾಗಿ ಆಚರಿಸುತ್ತಾರೆ. 26ನೇ ಸೆಪ್ಟೆಂಬರಿನಿಂದ ಅಕ್ಟೋಬರ್ 2ರವರೆಗೆ ರೂಮಿ ಸಪ್ತಾಹವೂ ನಡೆಯುತ್ತದೆ. ಇದು ರೂಮಿಯ ಮಹಿಮೆ. ನಮ್ಮ ವಚನಕಾರರ, ದಾಸರ ಸಮಕಾಲೀನ ವ್ಯಕ್ತಿತ್ವ ರೂಮಿಯದು. ಮುಗಿಸುವ ರೂಮಿಯ ಮತ್ತೊಂದು ಪದ್ಯ :
ಪ್ರೀತಿ ಖಿನ್ನತೆ ತರುವುದಿಲ್ಲ , ಪುಸ್ತಕದಲ್ಲಿ ವರ್ಣಿಸುವಂತೆ ಇರುವುದಿಲ್ಲ, ಅಥವಾ ಹಾಳೆಯ ಮೇಲೆ ಬರೆಯುವಂಥದ್ದಲ್ಲ. ಪ್ರೀತಿ ಮರದ ಹಾಗೆ. ಕೊಂಬೆಗಳು ದಿಗಂತದವರೆಗೆ ಚಾಚಿರುತ್ತದೆ, ಬೇರು ಅಮರತ್ವಕ್ಕೆ ಒಡ್ಡಿಕೊಂಡಿರುತ್ತದೆ, ಅದಕ್ಕೆ ಟೊಂಗೆ ಇರುವುದಿಲ್ಲ ಅಥವಾ ಕಾಣಿಸುವುದಿಲ್ಲ ಹಾಗೆಯೇ ಪ್ರೀತಿಯನ್ನ ನೋಡೋದಕ್ಕಾಗುವುದಿಲ್ಲ. ಎರಡು ಜೀವಗಳ ನಡುವೆ ಎಂದು ಹೇಳುತ್ತಾ ನೀವು ರೂಮಿಯ ಮೋಡಿಗೆ ಒಳಗಾಗಿ, ಮರುಳಾಗಿ.