ಹುಟ್ಟೂರು ನನ್ನ ಬಾ ಎಂದು ಕರೆಯುತ್ತಿದೆ, ವಾಪಸ್ ಬರುತ್ತಿದ್ದೇನೆ!
ಅಚಾನಕ್ಕಾಗಿ ಹೋದ ವಾರ ಬಾರ್ಸಿಲೋನಾದ ಗೆಳೆಯರಿಂದ ಕರೆ ಬಂದಿತ್ತು. "ಗುರುದ್ವಾರದಲ್ಲಿ ಊಟ ಮಾಡುತ್ತಿದ್ದೇವೆ, ನೀನು ತೋರಿಸಿಕೊಟ್ಟಿದ್ದು ಒಳ್ಳೆದಾಯ್ತು" ಎಂದು. ಒಂದು ವರ್ಷದ ಹಿಂದೆ ಒಂದಷ್ಟು ಜನ ಗುಂಪು ಕಟ್ಟಿಕೊಂಡು ಪರೀಕ್ಷೆಯ ಸಮಯದಲ್ಲಿ ಅಡುಗೆ ಮಾಡಿಕೊಳ್ಳಲು ಬಿಡುವಿಲ್ಲದೆ, ಹೋಟೆಲಿಗೆ ದುಡ್ಡಿಲ್ಲದೆ ನಾವು ಹೊಕ್ಕಿದ್ದು ಗುರುದ್ವಾರ.
ಬಾರ್ಸಿಲೋನಾದಲ್ಲಿ ಒಂದೇ ಇಸ್ಕಾನ್ ದೇವಾಲಯವಿರುವುದು. ಅಲ್ಲಿ ಫ್ರೀ ಊಟದ ವ್ಯವಸ್ಥೆ ಇಲ್ಲ. ಸೋ ನಾವೊಂದಷ್ಟು ಜನ ಭಾರತೀಯರು ಗುರುದ್ವಾರಕ್ಕೆ ಹೋದೆವು. ನಮ್ಮಂತೆ ಸುಮಾರು ಜನ ವಿದ್ಯಾರ್ಥಿಗಳು ಅಲ್ಲಿ ಬಂದಿದ್ದರು. ಎಲ್ಲರಿಗೂ ಖುಶಿಯಾಗಿ ಊಟ ಬಡಿಸಲಾಯಿತು. ನಮಗೆ ಪರೀಕ್ಷೆ ಎಂದು ಗೊತ್ತಾಗಿ ಮತ್ತೇನೋ ಮಂತ್ರ ಹೇಳಿ, ಆಶೀರ್ವಾದ ಮಾಡಿ ಕಳಿಸಿದರು.
ನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕು
ನಾವೈದು ಜನರೂ ಆ ಪರೀಕ್ಷೆಯಲ್ಲಿ ಪಾಸಾಗಿದ್ದು ಮಂತ್ರದಿಂದಲೇ ಎಂದು ಗಾಢವಾಗಿ ನಂಬುತ್ತೇವೆ. ತಲೆಬುಡವಿಲ್ಲದ ವಿಷಯವನ್ನ ಕಷ್ಟಪಟ್ಟು ಅರ್ಥ ಮಾಡಿಕೊಂಡು ಉತ್ತರ ಕೊಟ್ಟಿದ್ದೆವು. ಒಮ್ಮೆ ಹೋಗಿ ಬಂದ ನಂತರ ನಮಗೆ ಅಲ್ಲಿನ ಊಟ ಹಿಡಿಸಿ ಆಗಾಗ ಅಲ್ಲಿನ ಬಾಣಸಿಗರನ್ನ ಮಾತಾಡಿಸಲು ಹೊರಟೆವು. ಅವರು ಛೋಲೆಗೆ ಬಳಸುವ ಪುಡಿ, ಮಸಾಲೆಯನ್ನ ಹೇಗಾದರೂ ಮಾಡಿ ಲಪಟಾಯಿಸಲು ಯೋಜನೆ ಹಾಕಿಕೊಂಡೆವು.
ಮಾತಾಡುತ್ತಾ ಆಡುತ್ತಾ "ನೀವು ಪಂಜಾಬಿನವರಾ? ಯಾವ್ ಕಡೆ? ಅಮೃತಸರದ ಕಡೇನಾ ಹೇಗೆ?" ಹೀಗೆಲ್ಲಾ ಪ್ರಶ್ನೆ ಮಾಡುತ್ತಿದ್ದೆವು. ಅವರು "ಹೌದು ಪಂಜಾಬಿನವರೇ ಬಟ್ ಜಸ್ಟ್ ಆ ಲಿಟಿಲ್ ಅಹೆಡ್. ಕಸೂರ್ ಅಂದ್ರು". ಭೂಗೋಳ ತರಗತಿಯಲ್ಲಿ ನಿದ್ದೆ ಮಾಡಿದ್ದ ಕಾರಣ ಕಸೂರ್ ಪಾಕಿಸ್ತಾನದಲ್ಲಿದೆ ಎಂಬ ಅರಿವೇ ಇಲ್ಲ ನಮಗೆ. ಒಹ್ ಚೆನ್ನಾಗಿದೆ ಬಿಡಿ ಎಂದು ಚಾಚಾನನ್ನ ಮಾತಾಡಿಸುತ್ತಾ ಇದ್ದೆವು. ಆಮೇಲೆ ಗೂಗಲ್ ಮ್ಯಾಪಿನಲ್ಲಿ ಹುಡುಕಿದಾಗ ಸಿಕ್ಕಿದ್ದು ಅದು ಪಾಕಿಸ್ತಾನದಲ್ಲಿ. ನಮ್ಮ ಮುಖದಲ್ಲಿನ ನಗು ಮಾಸಿದ್ದನ್ನ ಕಂಡು ಅವರು "ನೀವು ಟಿಪಿಕಲ್ ಇಂಡಿಯನ್ಸ್ ಥರ" ಎಂದು ಕುಹಕ ನಗೆ ನಕ್ಕರು.
ಆಟದ ಜೊತೆ ಪಾಠವನ್ನೂ ಕಲಿಸಿದ ಮುಳ್ಳಯ್ಯನಗಿರಿ ಟ್ರೆಕ್ಕಿಂಗ್!
ಪಕ್ಕದಲ್ಲಿ ಕರೆದು ಕೂರಿಸಿಕೊಂಡು, ಸ್ವೀಟ್ ಕೊಟ್ಟು "ನಿಮಗೆಲ್ಲ ದೇಶ ವಿಭಜನೆಯಾಯ್ತು ಎಂಬ ಬೇಜಾರಿರಬಹುದು, ನಮಗೆ ನಮ್ಮ ಊರೇ ಎರಡು ಹೋಳಾಗಿದೆ ಎಂದರೆ ಎಷ್ಟು ದುಃಖವಾಗಿರಬೇಡ" ಎಂದರು. ನಾವು ನಿರ್ಭಾವುಕರಾಗಿ "ಅಯ್ಯೋ ಆಗಿದ್ ಆಯ್ತು, 71 ವರ್ಷದ ಹಿಂದೆ ನಡೆದ್ದದ್ದನ್ನ ಅದೇನ್ ದೊಡ್ಡ ದುರಂತ ಅಂತ ಅಂದುಕೊಳ್ಳಬೇಕು, ಮುಂದೆ ಹೋಗ್ಬೇಕಪ್ಪ" ಅಂದೆವು. "ರಾತ್ರೋ ರಾತ್ರಿ ನಿಮ್ಮನೆ ಖಾಲಿ ಮಾಡಿ, ಬೇರೆ ದೇಶಕ್ಕೆ ಸೇರ್ಸಿದ್ರೆ ಏನ್ ಮಾಡ್ತಿಯಾ?" ಅಂದಾಗ ನಾವು ಸಿಹಿ ತಿಂದುಕೊಂಡೆ "ತಲೆ ಕಡಿತೀವಿ" ಅಂದಾಗ "ಹಹಾ ಅದೇ ನಮಗೂ ಆಗಿದ್ದು" ಅಂದರು.
ಪರ್ಷಿಯಾದ ಅಮರ ಪ್ರೇಮಕವಿ ಜಲಾಲುದ್ದಿನ್ ಮೊಹಮ್ಮದ್ ರೂಮಿ
ದೇಶ ವಿಭಜನೆ ಎಂಬ ಹೃದಯವಿದ್ರಾವಕ ಘಟನೆ ನಮಗೆ ತಾಕಲೇ ಇಲ್ಲ ಎಂಬುದು ನಮಗೆ ನಾಚಿಕೆಯಾಯ್ತು. ಪ್ರತಿಬಾರಿ ಗುರುದ್ವಾರಕ್ಕೆ ಹೋದಾಗಲೂ ಚಾಚಾ ಅವರ ಬಾಲ್ಯದ ಕಥೆಗಳನ್ನ ರಸವತ್ತಾಗಿ ಹೇಳುತ್ತಿದ್ದರು. ಗಡಿಗಳಿಲ್ಲದೇ ಬದುಕುವ ಖುಷಿ ಎಂಬುದನ್ನೂ ಹೇಳುತ್ತಿದ್ದರು. ಬಾರ್ಸಿಲೋನಾದಲ್ಲಿ ಸ್ಪೇನ್ ದೇಶ ವಿಭಜನೆಯ ಮಾತು ಬಂದಾಗೆಲ್ಲ "ಮಾಡಿಕೊಂಡು ನಮ್ಮ ಥರಹ ಗೋಳಾಡಲಿ, ಕರ್ಮ" ಎಂದು ಬೈಯುತ್ತಿದ್ದರು. ಅಸಲಿಗೆ ನಮಗೆ ಚಾಚಾ ಹೆಸರೇ ಗೊತ್ತಿರಲ್ಲಿಲ್ಲ. ಯಾರು, ಏನು ಎಂಬುದರ ಪ್ರಶ್ನೆಯೂ ನಮಗೆ ಬೇಕಿರಲ್ಲಿಲ್ಲ. ಇದಾಗಿ ವರ್ಷವೇ ಕಳೆಯಿತು.
ನಾನಿಲ್ಲಿ ಬೆಂಗಳೂರಿಗೆ ಬಂದೆ, ಗುಲ್ಜಾರ್ ಅವರ ಪುಸ್ತಕ ಅಚಾನಕ್ಕಾಗಿ ಕೈಗೆ ಸಿಕ್ಕಿತ್ತು. ದರ್ಶನ್ ಆಸ್ಥೆಯಿಂದ ಓದು ಅಂದ. ಅಸಲಿಗೆ ಗುಲ್ಜಾರರ ಹಾಡುಗಳು ನನಗಿಷ್ಟ, ಆದರೆ ಅವರ ಮಗಳಿಗೆ ಮೇಘನಾ ಎಂದು ಹೆಸರು ಇಟ್ಟಿದ್ದಾರೆ ಎಂದು ಇನ್ನೂ ಜಾಸ್ತಿ ಇಷ್ಟ. "ಫುಟ್ ಪ್ರಿಂಟ್ಸ್ ಆನ್ ಝೀರೋ ಲೈನ್" ಅನ್ನೋದು ಅರ್ಧ ಪದ್ಯ, ಅರ್ಧ ಗದ್ಯದ ಪುಸ್ತಕ. ಪದ್ಯಗಳು ಚೇತೋಹಾರಿ ಗುಲ್ಜಾರರ ಎಂದಿನ ಶೈಲಿಯಲ್ಲಿದೆ ಆದರೆ ಗದ್ಯ ಹೃದಯವನ್ನ ಕರಗಿಸುತ್ತದೆ.
"ಕಣ್ಣಿನ ನೋಟಕ್ಕೆ ವೀಸಾ ಬೇಕಿಲ್ಲ, ಕನಸಿಗೆ ಬೇಲಿ/ಬೌಂಡರಿಯಿಲ್ಲ, ಆದ್ದರಿಂದ ನಾನು ನನ್ನ ಹುಟ್ಟೂರನ್ನೇ ನೋಡುತ್ತಿರುತ್ತೇನೆ" ಎಂದು ಅವರು ಬರೆದಾಗ ಅದು ಪಾಕಿಸ್ತಾನವಲ್ಲದೇ ಬೇರೆ ಯಾವ ದೇಶವಾಗಿದ್ದರೂ ಅಯ್ಯೋ ಪಾಪವೆನ್ನುತ್ತಿದ್ದೆವೇನೋ. ಆದರೆ ಅದು ಪಾಕಿಸ್ತಾನ ದಿನಾ ನಮ್ಮೊಟ್ಟಿಗೆ ಯುದ್ಧ ಮಾಡುವವರು, ನಮ್ಮ ಊರಿಗೆ ಬಂದು ಬಾಂಬ್ ಸಿಡಿಸಿದವರು ಎಂದು ಠಕ್ ಎಂದು ನೆನಪಾಗುತ್ತದೆ. ಆಗ ಈ ಮನುಷ್ಯನಿಗೇನಾಯ್ತು ಎಂದು ಅಂದುಕೊಂಡರೂ ಒಮ್ಮೆಲೇ ತಾನು ಆಡಿ ಬೆಳೆದ ಮರವೀಗ ವಿಷ ಕಾರುವ ಪಾಪಸ್ಕಳ್ಳಿ ಆಗಿದೆ ಎಂದು ಅವರು ಬರೆಯುವ ನೋವನ್ನು ನಾನು ಊಹಿಸಬಲ್ಲೆ.
ಕಾಡುವ ಕಾಪಾಡುವ ಮುದ್ದಿಸುವ ಮುದ್ದಿಸಿಕೊಳ್ಳುವ 'ಕಾಳ'! ಐ ಲವ್ ಯೂ!
ವಿಭಜನೆ ಕಾಲದಲ್ಲಿ ಬರೆದ ಕಥೆಗಳಿಗಿಂತ ಇವರದ್ದು ಭಿನ್ನ. ಮಾಂಟೋ ಅಥವಾ ಕೃಷ್ಣ ಚಂದರ್ಗಿಂತ ಅತ್ಯಂತ ಭಿನ್ನವಾಗಿ ಬರೆಯುತ್ತಾರೆ. ಇವರು ವಿಭಜನೆಗೆ ಇದು ಕಾರಣ, ಆದ್ದರಿಂದ ಇದು ಹೀಗಾಯ್ತು ಎಂಬ ವಿಶ್ಲೇಷಣೆ ಮಾಡುವುದಿಲ್ಲ. ಬದಲಿಗೆ ಅಲ್ಲೊಂದು ಮೌನವಿದೆ. 9 ವರ್ಷದ ಹುಡುಗ ಕಂಡ ಪರಮಸತ್ಯವಿದೆ. ಹೆಣ್ಣು ಮಕ್ಕಳಿಗೆ ಆದ ಅನ್ಯಾಯ, ಅವ್ರ ಬದುಕು, ಇಬ್ಬರು ಅಕ್ಕ ತಂಗಿಯರನ್ನ ಒಣಗಿದ ಎಲೆಗಳಿಗೆ ಹೋಲಿಸಿ ಬರೆದ ಕಥೆ ನಿಜವಾಗಲೂ ಮನ ಕಲುಕಿತು.
ಹೆಣ್ಣುಮಕ್ಕಳ ಮಾನಭಂಗ ಮಾಡಿ ಉಬ್ಬರಿಸಿದ ಹೊಟ್ಟೆಯನ್ನ ಕರುಣಿಸಿದ್ದು ಭಾರತವೋ ಪಾಕಿಸ್ತಾನವೋ? ಈ ಪಾಪ ಕೂಪಕ್ಕೆ ಬೆಲೆ ತೆರುವವರು ಭಾರತವೋ, ಪಾಕಿಸ್ತಾನವೋ ಅಥವಾ ಬ್ರಿಟೀಷರೋ ಎಂದು ಕೇಳಿದಾಗ ಉತ್ತರ ಕೊಡೋದಕ್ಕೆ ಯಾರಿಗೂ ಆಗೋದಿಲ್ಲ. ಇಂತಹ ಕಷ್ಟದ ಪ್ರಶ್ನೆಗಳಿಗೆ ಎರಡು ಕಾಲಂ ಖಾಲಿ ಬಿಟ್ಟು ಮೌನದಲ್ಲಿಯೇ ಉತ್ತರ ಕೊಡುತ್ತಾರೆ ಗುಲ್ಜಾರ್. ರಾವಿ ನದಿಯನ್ನ ದಾಟುವ ದುಃಖದ ಕಥೆ ಯಾರಿಗಾದರೂ ಕಣ್ಣಲ್ಲಿ ನೀರು ತರಿಸುತ್ತದೆ. ಹುಟ್ಟಿದೂರನ್ನ ಮತ್ತೆಂದೂ ನೋಡಲಾಗದ ಬೇಜಾರು ಯಾರಿಗಾದರೂ ಅದು ಬಹಳ ಆಳವಾದ ಗಾಯವೇ. ವಾರ ವಾರ ನಾನೇ ಜಯನಗರ ನೋಡದಿದ್ದರೆ ಮುಖ ಸಿಂಡರಿಸಿಕೊಂಡು ಕೂತಾಗ ಅಕ್ಷರ "ನೀ ಅಲ್ಲಿ ಹೋಗಮ್ಮ ಮೊದಲು ಎಲ್ಲಾ ಸರಿ ಆಗ್ತದೆ" ಎನ್ನುವ ಖಾಯಂ ಡೈಲಾಗ್ ನಮ್ಮ ಮನೆಯಲ್ಲಿ ನಡೆಯುತ್ತಿರುತ್ತದೆ.
ಬೆಂಕಿಯಿಂದ ಜನಿಸಿದವಳು, ಬೆಂಕಿಯಲ್ಲಿಯೇ ಬೆಂದವಳು ನಾನು!
ಅಲ್ಲಿದ್ದ ಬಾರ್ಸಿಲೋನಾದ ಗೆಳೆಯರು ಚಾಚಾಗೆ ಫೋನ್ ಮಾಡಿಕೊಟ್ಟಾಗ "ಬೇಟಿ ಹಮಾರ ಮುಲ್ಕ್ ಹಮ್ಕೋ ಬುಲಾ ರಹೇ ಹೇನ್, ವಾಪಾಸ್ ಜಾರಹಾ ಹೂ" ಅಂದಾಗ ಖುಷಿಯಾಗಿ "ಅಚ್ಚಾ" ಅಂದೆ. ಅದಕ್ಕಿಂತ ಮುಂಚೆ ಚಾಚಾ ಭಾರತಕ್ಕೂ ಬರುತ್ತಾರಂತೆ, ಮಾರ್ಚಿನಲ್ಲಿ ಹೋಗಿ ಮಾತಾಡಿಸಿಕೊಂಡು ಬರಬೇಕು. ಚಾಚಾರಿಗೆ ನಿಮ್ಮ ದುಃಖ ಅರ್ಥವಾಯಿತೆಂದೂ ಹೇಳಬೇಕು. ಹುಟ್ಟೂರಿನ ಸುಖವೇ ಬೇರೆ ಅಲ್ಲವೇ.