ಅಂಕ ಎಷ್ಟು ಬಂತೆಂದು ಬೀಗದೆ, ಬಾಗದೆ ಮುನ್ನಡೆಯಿರಿ
ಹೋದ ವಾರ ನಮ್ಮ ಜೀವನದ ಅತಿ ದೊಡ್ಡ ಘಟ್ಟ ಎಂದು ಕರೆಯಲ್ಪಡುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ರಿಸಲ್ಟ್ ಬಂತು. ನಾನು ಈ ಹಂತಗಳೆಲ್ಲ ದಾಟೋವಾಗ ನಮ್ಮ ಇಡೀ ಕುಟುಂಬದಲ್ಲಿ(ನಮ್ಮ ಕುಟುಂಬ, extended family) ನಾವು 19 ಜನ ಒಂದೇ ವಯಸ್ಸಿನರಿದ್ವಿ. ಅದರಷ್ಟು ಹಿಂಸೆ, ಕಿರಿಕಿರಿ ನನ್ನ ಪ್ರಕಾರ ಯಾವುದೂ ಇಲ್ಲ. ಮನೆಯಲ್ಲಿಯೆ ಸುಮ್ಮನೆ 19 ಜನರ ನಡುವೆ ಪೈಪೋಟಿ.
ನನ್ನ 10ನೇ ಕ್ಲಾಸ್ ರಿಸಲ್ಟ್ ಬಂದಾಗ ನಾನು ಗೋವಾದಲ್ಲಿ ದೊಡ್ಡಪ್ಪನ ಮನೆಯಲ್ಲಿ ಆರಾಮಾಗಿ ಇದ್ದೆ. ಆವಾಗ ತಾನೆ ಮೊಬೈಲ್ ಎಲ್ಲರ ಕೈಯಲ್ಲು ಇದ್ದದ್ದುರಿಂದೇನೋ ಸ್ನೇಹಿತರೆಲ್ಲಾ ಸಂದೇಶ ಕಳುಹಿಸಿದ್ದರು. ಇನ್ನು ನಮ್ಮನೆ ಆಂಟಿ, ಅಂಕಲ್ ಗಳು ಪಟ್ಟಿ ಶುರು ಮಾಡಿದ್ದರು. ಅಲ್ಲಿ ಗೋವಾದಲ್ಲಿ ನಮಗ್ಯಾವ ಇಂಟರ್ನೆಟ್ ಕೆಫೆ ಸಿಕ್ಕದಿದ್ದಾಗ, ಇದೇ thatskannada ಸಂಪಾದಕರು ಅಂಕಲ್ ಶಾಮ್ ನನ್ನ ಇಡೀ ಒಂದು ವರ್ಷದ ಜಾತಕ ಬಿಚ್ಚಿಟ್ಟಿದ್ದರು.[ನಾವು ಮೊದಲ ಬಾರಿಗೆ ಸ್ಯಾಂಟ್ರೋ ಕಾರು ಕೊಂಡ ಕಥೆ!]
ನಾನು ಗಣಿತದಲ್ಲಿ 99 ತೊಗೊಂಡಿದ್ದು ಗೊತ್ತಾದ ಮೇಲೆ, ನಮ್ಮ ಡಿವಿಎನ್ ಸಾರ್ ಗೆ 100 ತಗೋತೀನಿ ಅಂತ ಆಶ್ವಾಸನೆ ಕೊಟ್ಟಿದ್ದು ಎಲ್ಲಾ ನುಚ್ಚುನೂರಾಗಿತ್ತು. ನಮ್ಮ ಮನೆಯ 19 ಜನರ ಲಿಸ್ಟ್ನಲ್ಲಿ ಹೇಗೊ 5ನೇಯವಳಾಗಿದ್ದೆ. ಆದರೆ ಜನ ಸುಳ್ಳು ಎಷ್ಟರ ಮಟ್ಟಿಗೆ ಹೇಳುತ್ತಾರೆ ಎಂದರೆ, 94.7 ಬಂದಿದ್ದರೆ, ಅದು 97 ಆಗಿರ್ತಿತ್ತು. ವಿಪರೀತವಾಗಿ ಕೊಚ್ಚಿಕೊಳ್ಳೋದು, ಹೀಗೆ ಇಲ್ಲದು ಇರದ್ದದ್ದು ಎಲ್ಲವನ್ನೂ ಈ ರಿಸಲ್ಟ್ ಹೊರತರುತ್ತಿತ್ತು.
ನಮ್ಮ ಡಿವಿಎನ್ ಸಾರ್ ಪಾಠ ಮಾಡುವಾಗ ಹೇಳುತ್ತಿದ್ದದ್ದು ಒಂದೇ ಮಾತು, ಗಣಿತ ಅರ್ಥ ಮಾಡಿಕೊಂಡರೆ ಸುಲಭ, ಹಾಗಂತ ಕಡಿಮೆ ಅಂಕ ಬಂತೋ, ತಲೆ ಕೆಡಿಸಿಕೊಂಡು ಇರಬೇಡಿ. ಆರಾಮಾಗಿ ನನ್ನ ಬಳಿ ಬಂದು ಏನು ಮಾಡಬೇಕೆಂದು ಕೇಳಿ, ನನ್ನ ಹತ್ತಿರ ಕಲಿತವರೆಲ್ಲ ನನ್ನ ವಿದ್ಯಾರ್ಥಿಗಳು. ಆದರೆ ಸಲಿಗೆ ಕೊಟ್ರು ಅಂತ ನಾವು ಆರಾಮಾಗಿ ಇದ್ದಿದ್ರೆ ಚೆನ್ನಾಗಿ ಬಯ್ಯುತಿದ್ರು.[ಪ್ರತಿಯೊಬ್ಬ ವಿದ್ಯಾರ್ಥಿ ಓದಲೇಬೇಕಾದ ಲೇಖನವಿದು]
ಆದರೆ ಎಷ್ಟು ಅಂಕ ತಗೊಂಡ್ರೂ ಈವಾಗಿನ ಕಾಲಕ್ಕೆ ಕಡಿಮೆಯೆ. ಅಂಕಗಳು ಜೀವನದಲ್ಲಿ ಮುಖ್ಯವಲ್ಲ ಎಂದು ಹೇಳಿದಾಗೆಲ್ಲ ನನಗೆ ನೆನಪಾಗೋದು "marks is not important as long as you have enough marks" ಅನ್ನೋ ಮಾತು. ಉಳ್ಳವರಿಗೆ ಪ್ರಾಯಶಃ ಇಲ್ಲದವರ ನೋವು ಗೊತ್ತಾಗಲ್ಲ. ನಮ್ಮ ದೇಶದಲ್ಲಿನ ಅಪಾರ ಜನ ಸಂಖ್ಯೆಯಲ್ಲಿ "process of elimination" ನಡೆಯೋದೆ ಹೊರತು, process of selection ಅಲ್ಲ. ಇದಕ್ಕೆ ನಮಗೆ ಮಾರ್ಕ್ಸ್ ಗೆ ಅತಿ ಪ್ರಾಮುಖ್ಯತೆ ಕೊಡಲಾಗುತ್ತದೆ.
ಹೊಸ ಕನಸನ್ನು ಹೊತ್ತು ಕಾಲೇಜಿಗೆ ಹೋದಾಗಲೆಲ್ಲಾ, ಇಲ್ಲಿ ಹಾಡಬೇಕೋ, ನಾಟಕ ಮಾಡಬೇಕೋ, ಇಲ್ಲ ಓದಬೇಕೋ ಎಂಬ ಗೊಂದಲ ಉಂಟಾಗುತ್ತಿತ್ತು. ನಮ್ಮ ಜಯನಗರ ನ್ಯಾಷನಲ್ ಕಾಲೇಜು ಅಷ್ಟು ಚೆನ್ನಾಗಿತ್ತು. ದಿನಾಲೂ ಗೇಟ್ ನ ಮುಂದೆ ನಿಂತು, ಸೀದಾ ಕ್ಲಾಸ್ ರೂಮ್ ಗೆ ಹೋಗಬೇಕಾ ಅಥವಾ ಎಚ್ ಎನ್ ಕಲಾಕ್ಷೇತ್ರಕ್ಕೆ ಹೋಗಬೇಕಾ ಎಂಬ ಯೋಚನೆ ಬರುತ್ತಿತ್ತು.[ಜಯನಗರದಲ್ಲಿ ಅವಿಸ್ಮರಣೀಯ ಬೇಸಿಗೆಯ ರಜಾ ದಿನಗಳು]
ಹಂಗೂ ಹಿಂಗೂ ಪಿಯುಸಿ ಪಾಸ್ ಮಾಡಿದ್ದೆ. ನಿಜವಾಗಲೂ ಪಾಸ್ ಮಾಡಿದ್ದೆ ಅಷ್ಟೆ. ಫಸ್ಟ್ ಕ್ಲಾಸ್ ಅಲ್ಲಿ ಪಾಸ್ ಆಗೋದು ಈಗಿನ ಕಾಲಕ್ಕೆ ದೊಡ್ಡ ವಿಷಯವೇನಲ್ಲ. ಅಪ್ಪ ಒಂದೇ ಮಾತು ಅಂದಿದ್ದು, "ನೀನು ಕಡಿಮೆ ಅಂಕ ತಗೊಂಡರೂ ನನ್ನ ಮಗಳೆ, ನಿನಗೇನು ಇಷ್ಟವೋ ಅದು ಮಾಡು. ಆದರೆ ದುಡ್ಡು ಕೊಟ್ಟು, ಶಿಫಾರಸ್ಸು ಮಾಡಿ ಎಲ್ಲೂ ಸೇರಿಸಲ್ಲ" ಎಂಬುದನ್ನು. ಇದು ನನ್ನ ಜೀವನದ ಮೊದಲ ಪಾಠ. ಮಕ್ಕಳು ಕಲಿಯಬೇಕಾದ್ದದ್ದು ಅದನ್ನೆ. ಅವರ ಜೀವನಕ್ಕೆ ಅವರೆ ಹೊಣೆ ಎಂದು ಕಲಿತಾಗ, ಜೀವನವನ್ನ ನೆಟ್ಟಗೆ ನಡೆಸುತ್ತಾರೆ. ತೀರ ಕಾಳಜಿ ಮಾಡಿದರೆ ಅದಕ್ಕಿಂತ ಪೆದ್ದ ಕೆಲಸ ಇನ್ನೊಂದಿಲ್ಲ.
ಮಕ್ಕಳಿಗೆ ಕಡಿಮೆ ಅಂತ ಬಂದಾಗ ಬರೀ ಒಂದೇ ಕ್ಷೇತ್ರಕ್ಕೆ ಹೋಗಬೇಕು, ಅದನ್ನೇ ಓದಬೇಕು ಎಂಬ ತಾಕೀತು ಮಾಡದೆ, ಅವರ ಇಚ್ಛೆಗೆ, ಅವರ ಪ್ರತಿಭೆಗೆ ತಕ್ಕದಾದ ವಿಷಯ ಓದಿಸಿದರೆ ಅವರು ಮುಂದೆ ಬರುತ್ತಾರೆ. ಅದನ್ನ ಬಿಟ್ಟು ಕಾಲೇಜು, ಟ್ಯೂಶನ್ ಎಲ್ಲವೂ 'Adolescent day care centre' ಅಂತ ಬಿಟ್ರೆ ಖಂಡಿತಾ ಮಕ್ಕಳು ಉದ್ದಾರವಾಗೋದಿಲ್ಲ.
ಇನ್ನು ಹೆಚ್ಚು ಅಂಕ ಬಂದವ್ರು ಬೀಗೋ ಯಾವ ಅವಶ್ಯಕತೆಯು ಇಲ್ಲ. ಯಾಕಂದ್ರೆ ಜೀವನ ಖಂಡಿತ ಅದಕ್ಕಿಂತ ದೊಡ್ದದು. ಇಂಜಿನಿಯರಿಂಗ್ ಮಾಡೋವಾಗ ಕಡೇ ಸೆಮಿಸ್ಟರ್ ನ ಕೆಲಸದ ಬೇಟೆಯಲ್ಲಿ ತುಂಬಾ ಕಂಪನಿಗಳು ನಮ್ಮ ವಿದ್ಯಾಭ್ಯಾಸದ ಎಲ್ಲ ಅಂಕಪಟ್ಟಿಗಳನ್ನು ಪರಿಶೀಲಿಸುತ್ತದೆ. ಆ ಅನುಭವ ನನಗಾಗಿದೆ.
ನಿಮ್ಮ ಜೀವನವನ್ನು ನೀವು ಹೇಗೆ ರೂಪಿಸಿಕೊಳ್ಳುತ್ತೀರೋ ಹಾಗೆ ನಿಮ್ಮ ಅಂಕ ಪಟ್ಟಿ ನಿಮಗೆ ಸಹಾಯಕ್ಕೆ ಬರುತ್ತದೆ. ಒಂದು ಪರೀಕ್ಷೆ, ಅಥವಾ ಒಂದು ಅಂಕಪಟ್ಟಿ ನಿಮ್ಮ ಜೀವನವನ್ನು ಹೇಗೆ ನಿರ್ಧಾರ ಮಾಡುವುದಿಲ್ಲವೋ, ಹಾಗೆಯೇ ಅದಕ್ಕೆ ಮಹತ್ವವೇ ಇಲ್ಲ ಎಂದು ಯಾರೋ ದೊಡ್ಡ ಹೀರೋ ಹೇಳಿದ್ದನ್ನು ಕೇಳಬೇಡಿ. ಯಾಕೆಂದರೆ ಅವರ ಕೆಲಸಕ್ಕೂ ಅಂಕಿ ಅಂಶ ಅಷ್ಟೆ ಮುಖ್ಯ. ಆ ಕೆಲಸದಲ್ಲೂ ನಂಬರ್ ಒನ್ ಆದರೆ ಮಾತ್ರ ಆ ತರಹ ಡೈಲಾಗ್ ಹೊಡಿಯೋಕೆ ಆಗೋದು.
So, world is for the best people chose the field you want to be the best in because it is always survival of the fittest.