ಸಿಟಿಗಿಂತ ಕಾಡನ್ನೇ ಇಷ್ಟಪಡುವ ಜಡೆಯಪ್ಪ ಎಂಬ ಮಾಂತ್ರಿಕ!
"ಜಡೆಯಪ್ಪ ಏನ್ರೀ ಸೈಟಿಂಗ್ ಆಯ್ತ?" ಎಂದು ಗೊರುಕನದಲ್ಲಿ ಕೇಳುತ್ತಾ ಇದ್ದೆ. ಜಡೆಯಪ್ಪ "ಹೂ ಸ್ಲಾತ್ ಬೇರ್ ಕಾಣಿಸಿತ್ತು" ಅಂದರು. ಹದಿನೈದು ವರ್ಷಗಳ ಇಂಗ್ಲೀಷ್ ಮೀಡಿಯಮ್ ಓದಿನಲ್ಲಿ ನನಗೆ ಬೇರ್ ಗೊತ್ತಿತ್ತೇ ಹೊರತು ಇದ್ಯಾವ ಥರದ ಪ್ರಾಣಿಯೆಂಬ ಅರಿವೂ ಇರಲ್ಲಿಲ್ಲ. ಕರಡಿ ಕಾಣಿಸಿದ್ದು ಜಡೆಯಪ್ಪನವರಿಗೆ ಬಹಳ ಖುಶಿಯಾದ ಸಂಗತಿ. ಕಾಡಿನಲ್ಲಿ ಎಲ್ಲಾ ಸರೀಗಿದೆ ಎಂದು ನಮಗೆ ಆಗಾಗ ಅರಿವಾಗೋದೇ ಈ ಕರಡಿಗಳಿಂದ ಎಂದು ಹೇಳುತ್ತಾ ಹೋದರು.
ಗೊರು ಗೊರು ಗೊರುಕನ ಎಂಬ ಸೋಲಿಗರ ಹಳ್ಳಿಯ ಹಾಡು
ಜಡೆಯಪ್ಪ ಯೆಳಂದೂರಿನಲ್ಲು ಡಿಗ್ರಿಯ ತನಕ ಅಭ್ಯಾಸ ಮಾಡಿದವರು. ಇಂಗ್ಲೀಷ್ ಮತ್ತು ಕನ್ನಡ ಚೆನ್ನಾಗಿ ಬಲ್ಲವರು. ಆದರೆ ಯಾವುದೇ ಕಾರಣಕ್ಕೂ ಸಿಟಿಗೆ ಉದ್ಯೋಗ ಅರಸಿ ಬಂದಿಲ್ಲ. ಅವರಿಗೆ ಕಾಡೇ ಇಷ್ಟ. ಜೀವನಕ್ಕೆ ಎಷ್ಟು ಬೇಕೋ ಅಷ್ಟು ದುಡಿಮೆ ಮತ್ತು ಬದುಕು ಅವರಿಗೆ ಕಾಡು ಕಟ್ಟಿ ಕೊಡುತ್ತದೆ. ಮತ್ತೆ ಐಷಾರಾಮಿ ಮನೆ ಬಂಗಲೆಯ ಅಗತ್ಯತೆ ಅವರಿಗಿಲ್ಲ. ಈ ಥರಹದ ಸುಮಾರು ಜೀವನ ಪಾಠಗಳು ಅವರಲ್ಲಿ ಇದೆ.
ಗೊರುಕನದಲ್ಲಿ ನೃತ್ಯ ನೋಡುತ್ತಿದ್ದಾಗ ಸಿಕ್ಕವರು ಸಿದ್ದಪ್ಪ ಶೆಟ್ಟಿ. ಅವರಂತೂ ಕಾಡಿಗೆ ಹಾನಿ ಮಾಡದೇ ಮನುಷ್ಯ ಹೇಗೆ ಬದುಕಬಹುದು ಎಂಬ ವಿಷಯದಲ್ಲಿ ಪಿಎಚ್ಡಿನೇ ಮಾಡುತ್ತಿದ್ದಾರೆ. ಸೋಲಿಗರ ಒಬ್ಬರು ಸಹ ಅದರಲ್ಲಿ ಬಹಳ ದುಡಿಮೆ ಮಾಡಿದ್ದಾರೆ. ಆವರಿಗೆ ಪಿ ಎಚ್ ಡಿ ಸಹ ಬಂದಿದೆ. ಈ ತರಹ ಅರೆ ಉದ್ಯೋಗ ಮಾಡಿಕೊಂಡು ಅಕ್ಷರಾಭ್ಯಾಸ ಮಾಡುತ್ತಿರುವ, ಅಥವಾ ಮಕ್ಕಳ್ಯಾರೂ ಭಿಕ್ಷಾಟಣೆಗೆ ಇಳಿಯದೆ, ಬರುವ ಪ್ರವಾಸಿಗರನ್ನ ದುಡ್ಡೂ ಕೇಳದೆ ಅದೆಷ್ಟು ಸ್ವಾಭಿಮಾನಿಯಾಗಿ ಬದುಕುತಿರುವ ಒಂದು ಗುಂಪನ್ನ ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ. ಸ್ವಸಹಾಯ ಗುಂಪಿನಿಂದ ಇಷ್ಟೊಂದು ಏಳ್ಗೆಯಾಯ್ತಾ ಎಂಬುದೇ ಖುಷಿಯಾದ ಸಂಗತಿ.
ಹುಟ್ಟೂರು ನನ್ನ ಬಾ ಎಂದು ಕರೆಯುತ್ತಿದೆ, ವಾಪಸ್ ಬರುತ್ತಿದ್ದೇನೆ!
ರಾಮಕೃಷ್ಣ ಆಶ್ರಮಕ್ಕೆ ನೀವು ಹೋಗುವವರಾದರೆ ಮಾತಾಜಿ ನಿಮಗೆ ಸಿಗುತ್ತಾರೆ. ನೀವು ಹೋಗಿಯೇ ಅವರನ್ನ ಕಾಣಬೇಕು. ಆಶ್ರಮಕ್ಕೆ ಬರುವ ಯುವಕರನ್ನ ವಿಪರೀತವಾಗಿ ಸಮಾಜ ಸೇವೆಗೆ ಮನವೊಲಿಸುವ ತಾಯಿ ಈಕೆ. ಕೆಲವೊಮ್ಮೆ ಮಾತಿನಲ್ಲಿ ಸುದರ್ಶನ್ ಡಾಕ್ಟರ್ ಬಗ್ಗೆ ಸಹ ಆಗಾಗ ತಿಳಿಸುತ್ತಾರೆ. ಒಂದು 12,000 ಜನರನ್ನ ಅವರ ಜಾಗದಿಂದ ಕದಲಿಸದೆ ಅಭಿವೃದ್ಧಿ ಮಾಡಿದ ದೊಡ್ಡ ಹೀರೋ ಎಂದೂ ಬಣ್ಣಿಸುತ್ತಾರೆ. ನಮ್ಮ ಜಯನಗರದಲ್ಲೇ ಇರುವ ಅವರ ಕರುಣಾ ಟ್ರಸ್ಟ್ ಸಹ ನನ್ನಲ್ಲಿ ಆಸಕ್ತಿ ಮೂಡಿಸಿತ್ತು.
ತನ್ನ ತಂದೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗಲ್ಲಿಲ್ಲ ಎಂದು ವೈದ್ಯರಾದ ಸುದರ್ಶನ್, ಓದು ಮುಗಿದ ನಂತರ ಸೇರಿಕೊಂಡಿದ್ದು ಆಶ್ರಮದಲ್ಲಿ ಸ್ವಯಂಸೇವಕ ವೈದ್ಯರಾಗಿ. ರಾಮಕೃಷ್ಣ ಮಿಶನ್ ನ ಆಸ್ಪತ್ರೆಗಳಿಂದ ಅವರು ಹೋದ್ದದ್ದು ಉತ್ತರ ಪ್ರದೇಶದ ಬೇಲೂರು ಮಠ ಮತ್ತು ಕೊಡಗಿನ ಪೊನ್ನಂಪೇಟೆಗೆ. ನಾವು ಖರ್ಚು ಮಾಡಿದ್ದಷ್ಟು ನಮಗೆ ಸಿಗಬೇಕೆಂಬ ವಿಪರೀತ ಹುಚ್ಚಿಗೆ ಬಿದ್ದ ಯುವ ಜನತೆಗೆ ಹಾಗಲ್ಲ ಎಂದು ಮಾದರಿಯಾಗಿ ತೋರಿಸಿದ್ದವರು ಅವರು.
ನಕ್ಕು ನಕ್ಕು ಹಗುರಾಗೋದಕ್ಕೆ ಒಂದೇ ಭಾಷೆ, ಅದೇ ಕಾರ್ಟೂನು!
ಯಾವ ಕಾರಣಕ್ಕೂ ಸಿಟಿಗಳಲ್ಲಿ ದುಡ್ಡಿಗಾಗಿ ವೃತ್ತಿಯನ್ನ ಮಾಡುವುದಿಲ್ಲ ಎಂಬ ಪಣತೊಟ್ಟು ಬಂದಿದ್ದು ಬಿಳಿಗಿರಿರಂಗನ ಬೆಟ್ಟಕ್ಕೆ. ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವನ್ನ ಕಾಡಿನಲ್ಲಿ ಸ್ಥಾಪನೆ ಮಾಡುತ್ತಾರೆ. ವಿವೇಕಾನಂದರಿಂದ ವಿಪರೀತ ಸ್ಪೂರ್ತಿಯಾಗಿ ಒಂದು ಗುಂಪಿನ ಸಹಾಯಕ್ಕೆ ನಿಲ್ಲುವ ಮನಸ್ಸು ಬಂದಿದ್ದು ಬಹಳ ಖುಷಿಯ ವಿಚಾರ. ವಿವೇಕಾನಂದರು ತಿಳಿಸಿದ್ದೇ ಅದು. ತನ್ನೊಬ್ಬನಿಗೆ ಬದುಕುವವನು ಬದುಕಿದ್ದೂ ಸತ್ತಂತೆ, ಪರರಿಗೆ ಬದುಕುವ ಬದುಕಿದ್ದಂತೆ ಎಂದು. ಅದನ್ನ ಅಕ್ಷರಶಃ ಪಾಲಿಸುತ್ತಿರುವುದು ಅವರೇ.
1981ರ ದಟ್ಟ ಕಾಡು, ಆ ಕಡೆ ಪೋಚರ್ಸ್, ಈ ಕಡೆ ವೀರಪ್ಪನ್ ಆಗ ತಾನೆ ಬಲಶಾಲಿಯಾಗುತ್ತಿದ್ದ, ಮತ್ತೊಂದು ಕಡೆ ಸರ್ಕಾರ ಕಾಡನ್ನ ಪೂರ್ತಿಯಾಗಿ ಮನುಷ್ಯರು ಇರಲೇ ಬಾರದೆಂಬ ಫರ್ಮಾನು ಹೊಡೆಸಿದ ಸಮಯ. ಸೋಲಿಗರ ಬದುಕು ಮೂರಾಬಟ್ಟೆಯಾಗುತ್ತಿರುವಾಗ ನಾವಿದ್ದೇವೆ ಎಂದು ವಿಕೆಜಿಕೆ ನಿಂತಿತು. ವರ್ಷಕ್ಕೆ 300 ದಿವಸ ಅವರಿಗೆ ಉದ್ಯೋಗ, ಶಾಲೆ, ಆಸ್ಪತ್ರೆ ಎಲ್ಲವೂ ವಿಕೆಜಿಕೆಯಲ್ಲಿ ಲಭ್ಯ. ಒಂದು ಸುಸಜ್ಜಿತ ಮನೆ, ಕೊಠಡಿ ಮತ್ತು ಇತರೆ ಹಕ್ಕುಗಳು ಸೋಲಿಗರಿಗೆ ಲಭ್ಯವಿದೆ. ಕಾಡಿನಲ್ಲಿರುವ ಮನುಷ್ಯರು ಎಂದು ಯಾರೂ ಅವರನ್ನ ಪರಿಗಣಿಸುವುದಿಲ್ಲ. ಅಥವಾ ಅವರನ್ನ ತಂದು ಸಿಟಿಗೆ ಹಾಕಿ ಮನೆಕೆಲಸದವರನ್ನಾಗಿಯೂ ಮಾಡಲ್ಲಿಲ್ಲ. ಅವರಿಗೆ ಬರುವ ಕಸುಬನ್ನೇ ದೊಡ್ಡ ಇಂಡಸ್ಟ್ರೀ ಮಾಡಿದ್ದ ಹೆಮ್ಮೆ. ಜೇನು, ಸೀಗೆಕಾಯಿ, ಸೋಪು ಮತ್ತು ಮರಗಳ ಬಗ್ಗೆ ಅತೀವವಾಗಿ ತಿಳಿದುಕೊಂಡಿರುವ ಅವರೆಲ್ಲ ಆ ಕಸುಬನ್ನ ಬಿಟ್ಟು ಬಂದ್ದದ್ದೇ ಇಲ್ಲ. ಅಲ್ಲಿಯೇ ಅವರು 300 ದಿವಸ ಉದ್ಯೋಗ ಮಾಡುವ ಯೋಜನೆಯಿಂದ ಆರಾಮಾಗಿ ಜೀವನ ನಡೆಸುತ್ತಿದ್ದಾರೆ. ಇದು ಪ್ರಾಯಶಃ ಬೆನ್ನು ತಟ್ಟುವಂತಹ ಕೆಲಸ.
ಕಾಡುವ ಕಾಪಾಡುವ ಮುದ್ದಿಸುವ ಮುದ್ದಿಸಿಕೊಳ್ಳುವ 'ಕಾಳ'! ಐ ಲವ್ ಯೂ!
ಜಡೆಯಪ್ಪ ಹೇಳಿದ ಹಾಗೆ ಅವರೆಲ್ಲರಿಗೂ ವಿದ್ಯೆ ಇದೆ, ಲೋಕ ಜ್ಞಾನವಿದೆ, ಆದರೆ ಕಾಡು ಮಾತ್ರ ಬಿಟ್ಟು ಬರುವುದಿಲ್ಲ ಎಂದು. ಅದು ನನ್ನ ಪ್ರಕಾರ ಸರಿ. ನಮ್ಮ ಊರನ್ನೋ ಅಥವಾ ಕಾಡನ್ನೋ ಸರಿ ಮಾಡಿಕೊಂಡು ಅಲ್ಲಿ ಬದುಕು ಕಟ್ಟುವ ಪ್ರಯತ್ನ ಮಾಡಬೇಕೇ ಹೊರತು, ಉದ್ಯೋಗ ಅರಸಿ ಬಂದ ಊರನ್ನ ಕಂಡಾಪುಂಡವಾಗಿ ಬಯ್ಯೋದ್ದಲ್ಲ. ಉದ್ಯೋಗ ಕೊಡುತ್ತದೆ ಎಂಬ ಕೊಂಚ ಗೌರವವಿರಬೇಕು. ಹಾಗಂತ ಅವರು ಬಾವಿಯಲ್ಲಿರುವ ಕಪ್ಪೆಗಳಾ? ಇಲ್ಲ ಅವರ ಸಾಂಸ್ಕೃತಿಕ ಸಂಘದಿಂದ, ಅವರ ಓದಿನಿಂದ ದೇಶ ದೇಶ ಸುತ್ತಿದ್ದಾರೆ. ಹಂಗಾಗಿಯೂ ಅವರಿಗೆ ಅವರ ಊರು ಬಿಟ್ಟು ಬರುವ ಜಾಡ್ಯ ಅಂಟಿಕೊಂಡಿಲ್ಲ. ಹೂ ಮಾರುವ ಹುಡುಗಿ ಪಕ್ಕದಲ್ಲೇ ಲೆಕ್ಕದ ಪುಸ್ತಕ ಇಟ್ಟುಕೊಂಡು ಓದುವ, ಮೊಬೈಲ್ ಇಟ್ಟುಕೊಂಡು ಎಲ್ಲಿ ಜೇನು ತೆಗೆಯೋದಕ್ಕೆ ಉತ್ತಮ ಎಂದು ಹೇಳುವ ಕುಸುಮಬಾಲೆ ಮತ್ತು ಜಡೆಯಪ್ಪನಂತವರು ಸಿಕ್ಕಾಪಟ್ಟೆ ಜನ ಇದ್ದಾರೆ.
ಕ್ಯಾತದೇವರಗುಡಿಯ ಆನೆ ಕ್ಯಾಂಪಿನಲ್ಲಿಯೂ ಇವರ ವೀರಾವೇಷದ ಕಥೆಗಳನ್ನ ಕೇಳಬಹುದು. ಅಲ್ಲಿ ಸಫಾರಿ ಇದೆ, ನಾವು ಹೋಗಿದ್ದ ಗುಂಪಿನಲ್ಲಿ ಅತಿ ಕೆಟ್ಟದಾಗಿ ಕಾಡಿನ ಮೌನವನ್ನ ಗೌರವಿಸದ ಆಂಟಿ ಅಂಕಲ್ ಗಳು ಬಂದಿದ್ದರು. ಹುಲಿರಾಯನ ದರ್ಶನವನ್ನ ಮಾಡೋದಕ್ಕೆ ಸಾಧ್ಯವೇ ಆಗಲ್ಲಿಲ್ಲ. ಕಾಡು ನಮ್ಮನ್ನ ಮೂಕವಿಸ್ಮಿತರನ್ನಾಗಿ ಮಾಡಬೇಕು, ಅದರ ಬದಲು ಬಡಬಡಿಸುವ ಹೆಡ್ಡರನ್ನಾಗಿ, ಮೊಬೈಲಿನ ಸಿಗ್ನಲ್ ಸಿಗುತ್ತಿಲ್ಲ ಎಂಬ ಸ್ಟುಪಿಡ್ ಮಾತುಗಳನ್ನ ಆಡಿಸುತ್ತಿದೆ. ಪ್ರಾಯಶಃ ನಾವೆಲ್ಲರೂ ವಿಕೆಜಿಕೆಗೆ ಸೇರ್ಕೊಂಡು ಸ್ವಲ್ಪ ಮ್ಯಾನರ್ಸ್ ಕಲಿಯಬೇಕೇನೋ...