ಫಳಫಳ ಹೊಳೆಯುವ ಮುತ್ತಿಗೂ ಹೈದರಾಬಾದಿಗೂ ಎಲ್ಲಿಯ ಸಂಬಂಧ?
ಹೈದರಾಬಾದಿಗೆ ಹೋಗಿದ್ದ ಅತ್ತೆ ಮಾವ ಮುತ್ತಿನ ಮಾಲೆಯನ್ನ ತಂದುಕೊಟ್ಟರು. ಮಧ್ಯಮ ವರ್ಗದ ಯಾವ ಕುಟುಂಬ ಹೈದರಾಬಾದಿಗೆ ಹೋದಾಗ ತರುವುದು ಅದನ್ನೆ. ಕೊಡುವಾಗ ಅತ್ತೆ ಎಚ್ಚರಿಕೆಯ ಘಂಟೆಯನ್ನೂ ಒತ್ತಿದ್ದರು. "ಒರಿಜಿನಲ್ ಎಂದು ಸುಟ್ಟು ತೋರಿಸಿದನಮ್ಮ, ನನಗಷ್ಟೆ ಗೊತ್ತಿರೋದು" ಎಂದು ಹೇಳಿದರು.
ಹೈದರಾಬಾದಿಗೆ ಹೋಗುವ ಪ್ರತಿಯೊಬ್ಬರು ಇವೆರಡು ವಾಕ್ಯಗಳನ್ನ ತಿಳಿಸಿಯೇ ಯಾರಿಗಾದರೂ ಮುತ್ತಿನ ಮಾಲೆಯನ್ನ ಕೊಡುವುದು. ಹೈದರಾಬಾದಿಗೂ ಈ ಮುತ್ತಿಗೂ ಎಲ್ಲಿಯ ಸಂಬಂಧ ಎಂದು ನಾನು ಹುಡುಕ ಹೊರಟೆ. ಈ ರತ್ನ, ಚಿನ್ನ, ಮುತ್ತುಗಳ ಸಂಪತ್ತು ಜಾಸ್ತಿ ಭಾರತದ ಹತ್ತಿರವೇ ಇದ್ದದ್ದು ಎಂದು ಎಲ್ಲೋ ಓದಿದ ನೆನಪು. ಗಣೇಶಯ್ಯನವರ ಹೊಸ ಕಾದಂಬರಿ ರಕ್ತ ಸಿಕ್ತ ರತ್ನದಲ್ಲಿಯೂ ಸುಮಾರಷ್ಟು ಉಲ್ಲೇಖಗಳಿದೆ. ಇದನ್ನ ಕಂಡುಕೊಂಡೇ ಯುರೋಪಿಯನ್ನರು ಭಾರತಕ್ಕೆ ಬಂದಿದ್ದು ಎಂದು ನನ್ನ ಬಲವಾದ ನಂಬಿಕೆ.
ಚೆನ್ನಾಗಿರೋದೆಲ್ಲಾ ಆಚೆ ಕಡೆಯಿಂದಾನೆ ಬಂದಿರೋದು!
ತೀರ ಊಟ ತಿಂಡಿ, ಮಸಾಲೆಗೆ ಎಂದು ನಾವು ನಂಬಿಕೊಂಡರೆ ಅದು ನಮಗೆ ನಾವೇ ಕಂಡುಕೊಂಡ ಸುಳ್ಳು. ಅವರ ವಸಾಹತುಶಾಹಿಗಳು ಅಷ್ಟು ವರ್ಷ ಆಳಿದರೂ ಅವರ ಊಟ ತಿಂಡಿಯಲ್ಲಿ ಏನೂ ಬದಲಾವಣೆಯಾಗಿಲ್ಲ ಎಂದು ನಾನು ಎದೆ ತಟ್ಟಿ ಹೇಳಬಲ್ಲೆ. ಮೆಣಸಿನಕಾಯಿಯಿಂದ ಮೆಣಸಿಗೆ ಶಿಫ್ಟ್ ಆಗಿದ್ದಾರೆ ಅನ್ನೋದು ಬಿಟ್ಟರೆ ಮತ್ತಿನ್ನ್ಯಾವ ಮಹತ್ತರ ಬದಲಾವಣೆಯೂ ಅವರಲ್ಲಿ ಇಲ್ಲ. ಹಾಗಾಗಿದ್ದಲ್ಲಿ 150-200 ವರ್ಷ ಏಷ್ಯಾ ಆಫ್ರಿಕಾವನ್ನ ತಮ್ಮ ಕೈ ಕೆಳಗೆ ಇಟ್ಟುಕೊಂಡು ಮಾಡಿದ್ದೇನು ಎಂಬ ಪ್ರಶ್ನೆಗೆ ನನಗೆ ಸಿಗುವ ಉತ್ತರ ಒಂದೇ, ಅವರು ನಮ್ಮ ಸಂಪತ್ತನ್ನ ಲೂಟಿ ಮಾಡಲು ಬಂದಿದ್ದು ಎಂದು.
ಎನಿವೇ, ಈ ಮುತ್ತಿಗೂ ಹೈದರಾಬಾದಿಗೂ ಏನು ಸಂಬಂಧ ಎಂದು ಹುಡುಕ ಹೊರಟರೆ ಅದಕ್ಕಿರುವ ಇತಿಹಾಸ ಸಿಕ್ಕಾಪಟ್ಟೆ ಆಸಕ್ತಿದಾಯಕವಾಗಿದೆ. ನಮ್ಮ ಆಯುರ್ವೇದದಲ್ಲಿ ಮೋತಿ ಪಿಸ್ತಿ ಎನ್ನುವ ಔಷಧವನ್ನ ಚೂರಾದ ಮುತ್ತಿಗೆ ಜೇನುತುಪ್ಪ ಬೆರೆಸಿ ಇಮ್ಮ್ಯೂನಿಟಿ ಇಂಪ್ರೂವ್ ಮಾಡುವುದಕ್ಕೆ ಉಪಯೋಗಿಸುತ್ತಾರೆ. ಮುತ್ತಿನಲ್ಲಿರುವ ಕಾಲ್ಶಿಯಮ್ ದೇಹಕ್ಕೆ ಸೇರುವ ರೀತಿ ಬಹು ಮುಖ್ಯವಾದುದು ಎಂದು ನಂಬುತ್ತಾರೆ.
ಗೊರು ಗೊರು ಗೊರುಕನ ಎಂಬ ಸೋಲಿಗರ ಹಳ್ಳಿಯ ಹಾಡು
ಮುತ್ತು ಸೃಷ್ಟಿಯಾಗುವ ಬಗೆ : ಮುಲ್ಲಸ್ಕ್ ಎಂಬ ಇನ್ವರ್ಟಿಬ್ರೇಯ ಕಾಲ್ಶಿಯಂ ಡೆಪಾಸಿಟ್ ಮುತ್ತು ಎಂಬುದು ನಮಗೆ ಗೊತ್ತಿರುವ ಪ್ರಕ್ರಿಯೆ. ಇದನ್ನ ನೀರಿನಲ್ಲಿ ಹಾಕಿ ಕುದಿಸಿ ಬ್ಲೀಚ್ ಮಾಡಿ, ಅದನ್ನ ಹೈಡ್ರೋಜನ್ ಪೆರಾಕ್ಸೈಡ್, ನೀರು ಮತ್ತಿತರಿನ ಮಿಶ್ರಣದಲ್ಲಿ ಇಟ್ಟಿರುತ್ತಾರೆ. ನಂತರ ಬಿಸಿಲಿಗೆ ಕನ್ನಡಿ ಇರುವ ಬಾಕ್ಸಿನಲ್ಲಿ ಹಾಕಿ ಒಣಗಿಸುತ್ತಾರೆ. ಹೀಗೆ ಲಕಲಕ ಹೊಳೆಯುವ ಮುತ್ತುಗಳು ನಮ್ಮ ಕೈ ಸೇರುತ್ತವೆ. ಈಗ ಕೃತಕವಾಗಿಯೇ ಮುತ್ತನ್ನ ಬೆಳೆಸುತ್ತಾರೆ. ಸಮುದ್ರಕ್ಕೆ ಹೊಕ್ಕಿ. ಮುತ್ತನ್ನು ಹೆಕ್ಕಿ ತೆಗೆಯುವ ಒಂದು ಮುತ್ತಿನ ಕಥೆಯ ಐತುವಿನ ಥರಹದ ಕಥಾನಾಯಕರು ಕಡಿಮೆಯಾಗಿದ್ದಾರೆ. ನನ್ನ ಗೆಳತಿಯೊಬ್ಬಳು ಸಸ್ಟೈನೆಬಲ್ ಲಿವಿಂಗ್ ವಿಷಯದಲ್ಲಿ ಪಿ ಎಚ್ ಡಿ ಮಾಡುತ್ತಿದ್ದಾಳೆ. ಅವಳು ಹೇಳುವ ಪ್ರಕಾರ, ಮುತ್ತು ಪ್ರಾಣಿಯ ಎಂಜಲು, ವಜ್ರ ಇದ್ದಲಿನ ಒಂದು ರೂಪ ಇವೆಲ್ಲವನ್ನ ಆಭರಣ ಮಾಡಿ ಹಾಕಿಕೊಳ್ಳುವ ಕರ್ಮ ನಮ್ಮ ಜನಕ್ಕೆ ಯಾಕೆ ಬಂತೋ ಎಂದು ಬಯ್ಯುತ್ತಾ ಇರುತ್ತಾಳೆ. ಮುತ್ತನ್ನ ಮಾಡುವ ರೀತಿ ನೋಡಿದಾಗ ನಮಗೆ ಹಾಗೆ ಅನ್ನಿಸುತ್ತದೆ.
ಸಿಟಿಗಿಂತ ಕಾಡನ್ನೇ ಇಷ್ಟಪಡುವ ಜಡೆಯಪ್ಪ ಎಂಬ ಮಾಂತ್ರಿಕ!
ನಿಝಾಮರ ಕೈಸೇರಿದ ಮುತ್ತು : ಮುತ್ತು ಹೈದರಾಬಾದಿಗೆ ಬಂದಿದ್ದು ನಿಝಾಮರ ಕಾಲದಲ್ಲಿ. ಕುತುಬ್ ಶಾಹಿ, ಅಸಾಫ್ ಜಾಹಿ ರಾಜರು ತಮ್ಮ ಸಿರಿತನವನ್ನ ತೋರಿಸಿಕೊಳ್ಳುತ್ತಿದ್ದದ್ದು ಹೀಗೆಯೇ. ನಿಝಾಮ ಮೀರ್ ಒಸ್ಮಾನ್ ಅಲಿ ಖಾನ್ ಕಾಲದಲ್ಲಿ ರಾಜಕುಮಾರಿಯರ ತೂಕವನ್ನ ಮುತ್ತುಗಳಿಂದ ಅಳೆಯುತ್ತಿದ್ದರಂತೆ, ಅವನ ನೆಲಮಾಳಿಗೆಯನ್ನು ಬರಿ ಮುತ್ತುಗಳಿಂದ ತುಂಬಿಸಿಕೊಂಡಿದ್ದನಂತೆ. ಮುಂಚೆ ಇರಾಕಿನ ಬಸ್ರಾದಿಂದ ತರಿಸಿಕೊಳ್ಳುತ್ತಿದ್ದರಂತೆ. ಪರ್ಷಿಯಾದ ಕೊಲ್ಲಿಯಲ್ಲಿನ ಮುತ್ತುಗಳು ಬಹಳ ಗಟ್ಟಿಯಾಗಿದ್ದವಂತೆ. ಬಂಗಾಳ ಕೊಲ್ಲಿಯಲ್ಲಿ ಸಿಗುತ್ತಿದ್ದವು ಬಹಳ ಮೆತ್ತಗೆ, ಬೇಗ ಹೊಳಪು ಕಳೆದುಕೊಳ್ಳುತ್ತಿದ್ದವಂತೆ. ಆದರೆ ಪರ್ಷಿಯಾದ ಕೊಲ್ಲಿಯಲ್ಲಿ ತೈಲ ಸಿಕ್ಕಿ ಅದನ್ನ ಬರಡು ಮಾಡಿ ಮುತ್ತುಗಳಿಗೆ ಸಂಚಕಾರ ತಂದ ಮೇಲೆ ಹೈದರಾಬಾದಿನ ಮುತ್ತುಗಳು ಉನ್ನತ ಮಟ್ಟಕ್ಕೆ ಏರಿದವು ಎಂಬ ಮಾತಿದೆ.
ಮುತ್ತುಗಳಲ್ಲಿ ಬಹಳ ಚೆಂದದ್ದು ಗುಲಾಬಿ ಮತ್ತು ಕಪ್ಪು ಬಣ್ಣದ್ದು. ಅದು ಪ್ಯೂರ್ ಎಂದು ಕರೆಯುತ್ತಾರೆ. ಬಿಳಿಯದ್ದನ್ನ ಹೇಗೆ ಬೇಕಾದರೂ ಪಾಲಿಷ್ ಮಾಡಿ ಕೊಡಬಹುದಾದರಿಂದ ಅದಕ್ಕೆ ಅಷ್ಟು ಬೆಲೆ ಇಲ್ಲ. ಇನ್ನು ಅತಿನೇರಳೆ ಕಿರಣದಲ್ಲಿ ಮುತ್ತನ್ನು ಹಿಡಿದರೆ ನೀಲಿ ಬಣ್ಣ ಪ್ರತಿಫಲಿಸಿದರೆ ಅದು ಶುದ್ಧವಾದ್ದದ್ದು ಎಂದು ಅರ್ಥ. ಇನ್ನು ಕಪ್ಪು ಮುತ್ತು ಅತಿನೇರಳೆ ಕಿರಣದಲ್ಲಿ ಕಾಮನಬಿಲ್ಲಿನ ಬಣ್ಣಗಳನ್ನೇ ಪ್ರತಿಫಲಿಸುತ್ತದೆ. ಇಂತಹ ಹೊಸ ಹೊಸ ವಿಚಾರಗಳು ಮುತ್ತಿನ ಸುತ್ತ ಅಡಗಿದೆ. ಇದೇ ನೆವದಲ್ಲಿ ಒಂದು ಮುತ್ತಿನ ಕಥೆ ಸಿನೆಮಾ ನೋಡಿದಾಗ ಬೆಲೆಬಾಳುವ ವಸ್ತುವನ್ನ ಹೆಕ್ಕಿ ತೆಗೆಯೋರ ಜೀವನ ಎಷ್ಟು ಕಷ್ಟವಾಗಿರುತ್ತದೆ ಎಂದು ತಿಳಿದು ಬೇಜಾರಾಗುತ್ತದೆ. ಕೆ ಜಿ ಎಫ್ ನ ಹಾಗೆ ಇಲ್ಲೂ ಗುಲಾಮಗಿರಿಯಿತ್ತಾ? ಜೀವ ತೇಯ್ದಾರ ಅಥವಾ ಸಮುದ್ರದಾಳದಲ್ಲಿ ಇನ್ನು ಯಾವ ದೇಹಗಳು, ಮುತ್ತುಗಳು ತಣ್ಣಗೆ ಮಲಗಿದೆಯೋ ಗೊತ್ತಿಲ್ಲ..