ಶತಮಾನಗಳ ಇತಿಹಾಸವಿರುವ ಪಾಟರಿ ಟೌನ್ ಗೆ ಸಂಚಕಾರ
ದಕ್ಷಿಣ ಬೆಂಗಳೂರಿನ ಜಯನಗರದವಳಾದ ನನಗೆ ಉತ್ತರ ಬೆಂಗಳೂರಿನ ಬಗ್ಗೆ ಅಷ್ಟೇನು ಗೊತ್ತಿರಲ್ಲಿಲ್ಲ. ಇನ್ನು ಮಧ್ಯ ಬೆಂಗಳೂರಂತೂ ದೇವರಿಗೇ ಪ್ರೀತಿ. ನನ್ನ ಮಾವನ ಮನೆಯವರು ಫ್ರೇಝರ್ ಟೌನ್ ಕಡೆಯ ಹಳೆ ಬೆಂಗಳೂರಿನವರು. ನಮ್ಮ ಜಯನಗರದಷ್ಟೆ ಇತಿಹಾಸವಿದೆ ಎಂದು ಹಳೆ ಜಗಲಿಯ ಕಥೆ ಹೇಳುತ್ತಾ, ಅಲ್ಲಿ ಅದರ ಗತ ವೈಭವವನ್ನ ತೋರಿಸಲು ಕರೆದುಕೊಂಡು ಹೋದಾಗ ಮಧ್ಯೆ ಸಿಕ್ಕಿದ್ದೇ ಈ ಪಾಟರಿ ಟೌನ್.
ಒಂದು 150-200 ವರ್ಷದಿಂದ ಮಣ್ಣಿನ ಕಾಯಕ ಮಾಡುತ್ತಿರುವ 45-50 ಮನೆಗಳನ್ನ ಹುಡುಕಿಕೊಂಡು ನಾವು ಹೊರಟೆವು. ಒಂದು ಸಣ್ಣ ಗಲ್ಲಿಯಲ್ಲಿ ನಾಲ್ಕು ಮನೆಗಳಲ್ಲಿ ಮಾತ್ರ ಮಡಕೆಗಳು, ಲೋಟಗಳು, ಬೊಂಬೆಗಳನ್ನ ಮಾರುತ್ತಿದ್ದರು. ದೊಡ್ಡ ದೊಡ್ಡ ತಂದೂರಿ ಒಲೆಯನ್ನ ಸಹ ಒಣಗೋಕೆ ಇಟ್ಟಿದ್ದರು. ನಾಲ್ಕು ಮನೆಗಳು ಮಾತ್ರ ಈಗಿನ ಕಾಲದ ಯುವಕ ಯುವತಿಯರಿಗೆ ಮಣ್ಣಿನ ಪಾತ್ರೆಗಳ ಮಹತ್ವವನ್ನ ತಿಳಿಸುತ್ತಿದ್ದರು.
ಶತಮಾನದ ಹಿಂದಿನ ಬೆಂಗಳೂರು ನೆನಪಿಸುವ ಸಿದ್ದಾಪುರದ ಸಸ್ಯಕಾಶಿ
ರಾಜಶೇಖರರ ಮನೆಗೆ ಹೋಗಿ ನಾವು ಕೂತೆವು. ಈಗಿನ ಹೊಸ ಸೆನ್ಸೇಷನ್ ತಂದೂರಿ ಚಾಯ್ ಲೋಟಗಳನ್ನ ಮಾಡುತ್ತಿದ್ದರು. ಒಂದು ಅರ್ಧ ಘಂಟೆಯಲ್ಲಿ ನನ್ನ ಹತ್ತಿರ ಮಾತಾಡುತ್ತ ಆಡುತ್ತಾ 50 ಲೋಟಗಳನ್ನ ಮಾಡುತ್ತಿದ್ದರು. ಅವರ ಪೂರ್ವಜರನ್ನ ಆಂಧ್ರ ಮತ್ತು ತಮಿಳುನಾಡಿನವರು ಬ್ರಿಟೀಷರು ಮತ್ತು ಮೈಸೂರು ಅರಸರ ಕಾಲದಲ್ಲಿ ಕುಂಬಾರರಿಲ್ಲದಿರುವ ಅವರ ಸಂಸ್ಥಾನಕ್ಕೆ ಕರೆದುಕೊಂಡು ಬಂದಿದ್ದರು. ಇದು ಬೆಂಗಳೂರಿಗೆ ಬಂದ ದೊಡ್ಡ ವಲಸೆಯ ಸಂಸಾರಗಳು. 400 ಕುಟುಂಬಗಳು ಇಲ್ಲಿಗೆ ಬಂದವು.
ಮೊದಲು ಶೂಲೆ ಸರ್ಕಲ್ (ಆಗ ಅದನ್ನ ಚೂಲೆ ಸರ್ಕಲ್ ಅನ್ನುತ್ತಿದ್ದರು, ಚೂಲಾ ಅಂದರೆ ತಂದೂರಿ ಒಲೆ ಎಂದರ್ಥ) ಅಲ್ಲಿ 50 ವರ್ಷಗಳ ನಂತರ ಕುಂಬಾರ ಪೇಟೆಗೆ ಸಹ ಬಂದು ಈಗ ಪಾಟರಿ ಟೌನಿನಲ್ಲಿ 100 ವರ್ಷಗಳಿಂದ ನೆಲಸಿದ್ದಾರೆ. ಈಗ ನಾಲ್ಕನೇ ತಲೆಮಾರು ಈ ಕುಂಬಾರಿಕೆಯಲ್ಲಿ ತೊಡಗಿಕೊಂಡಿದೆ. ಐದನೇ ತಲೆಮಾರನ್ನೂ ಸಹ ತಯಾರು ಮಾಡುತ್ತಿದ್ದಾರೆ ರಾಜಶೇಖರ್. ಪಾತ್ರೆಗಳು. ಒಳ್ಳೆ ಬೊಂಬೆಗಳನ್ನು ಮಾಡುವ ಸಾಮರ್ಥ್ಯ ಇರುವ ಅವರು, ಕಡಿಮೆ ಬೇಡಿಕೆಯ ಕಾರಣ ಇವೆಲ್ಲವನ್ನ ಬಿಟ್ಟು ಬರೀ ಲೋಟಗಳನ್ನ ಮಾತ್ರ ಮಾಡುತ್ತಿದ್ದಾರೆ. ಸ್ಟೀಲ್, ಅಲ್ಯುಮಿನಿಯಮ್ ಮತ್ತು ಪಿಂಗಾಣಿ ಪಾತ್ರೆಗಳು ಇವರ ವ್ಯವಹಾರವನ್ನು ಕಿತ್ತುಕೊಂಡಿದೆ. ಹಾಗಾಗಿಯೂ ಟೆರಾಕೋಟಾದ ಡಿಸೈನ್ಗಳನ್ನ ಮಾಡಿಕೊಟ್ಟು ಅವರ ಕಲಾತ್ಮಕತೆಯನ್ನು ಇನ್ನೂ ಕಾಪಿಟ್ಟುಕೊಂಡಿದ್ದಾರೆ.
ನೃತ್ಯಗಾರ್ತಿಯರಿಗಿರುವ ರಂಗಪ್ರವೇಶ ಸಂಗೀತಗಾರರಿಗೇಕಿಲ್ಲ?
ರಾಜಶೇಖರರ ಒಬ್ಬಳು ಮಗಳು ಹೋಟೆಲ್ ಮ್ಯಾನೇಜ್ಮೆಂಟ್ ಪದವೀಧರೆ, ಮದುವೆಯಾಗಿದೆ. ತದ ನಂತರವೂ ಅವರು ಅಪ್ಪನ ಕಾಯಕವನ್ನೇ ಮುಂದುವರಿಸಿದ್ದಾರೆ. ಮತ್ತೊಬ್ಬ ಮಗಳೂ ಸಹ ಚಿತ್ರಕಲಾ ಪರಿಷತ್ತಿನಲ್ಲಿ ಲಲಿತ ಕಲೆಯಲ್ಲಿ ಪದವಿ ಕಲಿಯುತ್ತಾ ಅಪ್ಪನ ಕಾರ್ಯದಲ್ಲಿ ನೆರವಾಗಿದ್ದಾರೆ. ಅವರ ಹೆಂಡತಿ ಸಹ ಕೆಲಸ ಮಾಡುತ್ತಾ ಕೂತಿದ್ದರು. "ಮನೆಯ ಅಡುಗೆ ಅದು ಇದು ಕೆಲಸವನ್ನೆಲ್ಲ ತನ್ನ ಮಕ್ಕಳು ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಹೋಗುತ್ತಾರಾದ್ದರಿಂದ ಗಂಡನಿಗೆ ಸಹಕಾರಿಯಾಗಿರಬಹುದು ನೋಡಿ" ಎಂದು ಅಷ್ಟೆ ವೇಗವಾಗಿ ಲೋಟಗಳನ್ನ ಮಾಡುತ್ತಾ ಕೂತರು. ಬೆಳಗ್ಗೆ 5 ಘಂಟೆಯಿಂದ ರಾತ್ರಿ 11 ಘಂಟೆವರೆಗೆ ಗಾಣದೆತ್ತಿಗಿಂತ ಜಾಸ್ತಿ ಕುಂಬಾರನ ಚಕ್ರ ತಿರುಗುತ್ತಲೇ ಇರುತ್ತದೆ.
ಆಟೋಗಾಗಿ ಗಂಟೆಗಟ್ಟಲೆ ಕಾದುಕೂತ ನನ್ನ ಕಥೆ ವ್ಯಥೆ
ಇವರ ಮಣ್ಣಿನ ವಸ್ತುಗಳಿಗೆ ಜೇಡಿ ಮಣ್ಣೇ ಆಧಾರ. ಬೆಂಗಳೂರಿನಲ್ಲಿ ವಿಪರೀತ ಕೆರೆಯಿದ್ದ ಕಾರಣ, ಕರೆ ದಂಡೆಯಲ್ಲಿ ಸಿಕ್ಕಾಪಟ್ಟೆ ಜೇಡಿಮಣ್ಣು ಸಿಗುತ್ತಿತ್ತು. ಈಗ ಕೆರೆಗಳು ಮಾಯವಾಗಿವೆ, ಇಲ್ಲ ಅದರ ಮೇಲೆ ಬಹುಮಹಡಿ ಕಟ್ಟಡಗಳು ತಲೆ ಎತ್ತಿವೆ. ಕೋಲಾರ ಮತ್ತು ಹೊಸಕೋಟೆಯಿಂದ ಲೋಡುಗಟ್ಟಲೆ ಜೇಡಿಮಣ್ಣನ್ನ ತರಿಸಿಕೊಂಡು ಇವರೆಲ್ಲಾ ವಸ್ತುಗಳನ್ನ ಮಾಡಬೇಕಾಗಿದೆ. ಮಣ್ಣಿಗೂ ದುಡ್ಡು ಕೊಡಬೇಕಾದ ಪರಿಸ್ಥಿತಿ ಎಂದು ನೊಂದುಕೊಂಡು ನುಡಿಯುತ್ತಾರೆ ಅಲ್ಲಿನ ಕುಂಬಾರರು.
ರಾಜಶೇಖರರಂತೂ ತಮ್ಮ ಟೆರಾಕೋಟಾ ಸ್ಕಲ್ಪ್ಟಿಂಗ್ ಕಲೆಯನ್ನ ಪ್ರದರ್ಶನ ಮಾಡೋದಕ್ಕೆ ಅಷ್ಟೊಂದು ಮಣ್ಣು ಸಿಗುತ್ತಿಲ್ಲ ಎಂದು ಬೇಜಾರು ಮಾಡಿಕೊಳ್ಳುತ್ತಾರೆ. ಅವರಿಗೆ ರಾಷ್ಟ್ರೀಯ ಮಟ್ಟದ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಬಂದಿದೆ. ಹೋದ ವರ್ಷ ಬ್ಯಾಂಕಾಕಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಬೇಕಿತ್ತಂತೆ. ಸರ್ಕಾರ ಸಹಾಯ ಮಾಡದೇ ಇಲ್ಲೇ ಇರಬೇಕಾಯಿತು ಎಂದು ಅಲವತ್ತು ಕೊಳ್ಳುತ್ತಾರೆ.
ಇನ್ನು ವ್ಯಾಪಾರವೇ ವೃದ್ಧಿಸುತ್ತಿಲ್ಲ ಎಂದಾಗ ಮೆಟ್ರೋದವರು ಹೊಸ ಅಂಡರ್ಗ್ರೌಂಡ್ ಸ್ಟೇಷನ್ ಮಾಡುವ ಸಲುವಾಗಿ ಅವರ ವಾಸಸ್ಥಾನಗಳನ್ನ ಮತ್ತೆ ಬದಲಿಸುವ ಯೋಚನೆ ಮಾಡಿದ್ದಾರೆ. ನೋಟೀಸ್ ಏನೂ ಬಂದಿರದಿದ್ದರೂ ಈ ಭಯ ಅವರಿಗೆ ಕಾಡುತ್ತಿದೆ. ಅವರ ಜಾಗಗಳನ್ನ ಗುರುತು ಮಾಡಿಕೊಂಡು ಹೋಗಿದ್ದಾರೆ. ದುಡ್ಡಿಗಿಂತ ಅವರ ಕೆಲಸವನ್ನ ಮಾಡೋದಕ್ಕೆ ಅವರಿಗೆ ಜಾಗ ಬೇಕು. 400 ವರ್ಷದಲ್ಲಿ 6 ಜಾಗಗಳನ್ನ ಬದಲಿಸಿದ್ದರಿಂದ ಜಾಗ ಚಿಕ್ಕದಾಗುತ್ತಲೇ ಇದೆ. ಇನ್ನೂ ಊರಾಚೆ ಹಾಕಿದರೆ ನಮ್ಮನ್ನ ಕೇಳೋರು ಯಾರಿಲ್ಲ ಅಂತಾರೆ ಇವರೆಲ್ಲ. ನೂರಾರು ವರ್ಷಗಳ ಇತಿಹಾಸವಿರುವ ಜಾಗಕ್ಕೆ ಈ ಸ್ಥಿತಿ ಬರುವುದು ಒಳಿತಾ ಅಥವಾ ಬದಲಾವಣೆಗ ನಮ್ಮನ್ನ ನಾವು ತೆರೆದುಕೊಳ್ಳಬೇಕಾ? ಗೊತ್ತಿಲ್ಲಾ....