ಅಣ್ಣಾಮಲೈ ಸರ್, ನಿಮ್ಮ ಪ್ರಾಮಾಣಿಕತೆಗೆ ನಮ್ಮ ಸಲಾಂ
ಪ್ರೀತಿಯ ಅಣ್ಣಾಮಲೈ ಸರ್,
ನಿಮಗಿರುವ ನಮ್ಮ ಪೀಳಿಗೆಯ ಕೋಟ್ಯಂತರ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ನಿಮ್ಮನ್ನ ಭೇಟಿ ಮಾಡಿಲ್ಲ ಅಥವಾ ನಿಮ್ಮ ಪರಿಚಯ ವೈಯಕ್ತಿಕವಾಗಿ ಇಲ್ಲ. ಆದರೂ ನೀವು ನನ್ನಂತಹ ಸುಮಾರು ಜನರಿಗೆ ದೊಡ್ಡ ಸ್ಪೂರ್ತಿ ಎಂದರೆ ತಪ್ಪಿಲ್ಲ.
ನಮ್ಮ ಹಾಗೆ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಸಾಮಾನ್ಯ ಕೆಲಸಗಳಿಗೆ ಸೇರಿಕೊಳ್ಳದೇ ಕ್ಯಾಟ್ ಬರೆದು ಐಐಎಂನಲ್ಲಿ ಓದಿ ಪದವಿ ಪಡೆದಿರಿ. ಅಲ್ಲಿದ್ದಾಗ ದೇಶದ ವ್ಯವಸ್ಥೆ ಬದಲಾಯಿಸುವ ಪಣ ತೊಟ್ಟು ಯುಪಿಎಸ್ಸಿ ಬರೆದು ಐಪಿಎಸ್ ಆಫೀಸರ್ ಆದಿರಿ. ಎಲ್ಲಿ ಇಂಜಿನಿಯರಿಂಗ್ ಪದವಿಯ ವಿಷಯಗಳು, ಎಲ್ಲಿ ಎಂಬಿಎ ಪದವಿಯ ವಿಷಯಗಳು, ಎಲ್ಲಿ ಯುಪಿಎಸ್ಸಿಯ ಅತಿ ಕಷ್ಟದ ವಿಷಯಗಳು? ಇವೆಲ್ಲವನ್ನೂ ನೀರು ಕುಡಿದ ಹಾಗೆ ಸರಾಗವಾಗಿ ಒದಿ ಮುಗಿಸಿ ದೊಡ್ಡ ಅಧಿಕಾರಿಯಾದಿರಿ.
ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ
ನಾನೂ ನನ್ನ ಕೆಲವು ಸ್ನೇಹಿತರು ಇಂಜಿನಿಯರಿಂಗ್ ನಂತರ ಯು ಪಿ ಎಸ್ ಸಿ ಯ ಭೂತ ಹಿಡಿಸಿಕೊಂಡು ಅದನ್ನ ಓದೋಕೆ ಯಾವ ಎಲೆಕ್ಟೀವ್ ಎಂದು ಯೋಚಿಸುತ್ತಾ ಕೂತು ಪ್ರಶ್ನೆ ಪತ್ರಿಕೆಗಳನ್ನ ನೋಡಿ ಕಡೇ ಪಕ್ಷ ನಮ್ಮ ಇಂಜಿನಿಯರಿಂಗ್ ವಿಷಯಗಳಿಗೂ ಉತ್ತರ ಗೊತ್ತಾಗದೇ 2 ತಿಂಗಳ ನಂತರ ಆ ಕಥೆಗೇ ನಮಸ್ಕಾರ ಹೊಡೆದಿದ್ದೆವು. ಹಂಗಾಗಿಯೂ ಒಬ್ಬಳು ಗೆಳತಿ ಮಾತ್ರ ಐ ಆರ್ ಎಸ್ ಅಧಿಕಾರಿಯಾದಳು.
ಈ ತರಹ ಗಾಢವಾದ ವಿಷಯಗಳನ್ನ ಆಳವಾಗಿ ಅಧ್ಯಯನ ಮಾಡಿ ಯು ಪಿ ಎಸ್ ಸಿ ಬರೆದ ನೀವು ನಮಗೆ ಯಾವಾಗಲೂ ಸ್ಪೂರ್ತಿ. ಒಬ್ಬ ಮನುಷ್ಯ ಯಾವಾಗ ಏನು ಬೇಕಾದರೂ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟರೆ ಆಗಬಹುದು ಎಂಬ ಒಂದು ದೊಡ್ಡ ಪಾಠವನ್ನ ಕಲಿಸಿಕೊಟ್ಟಿರಿ ಸರ್. ನಿಜವಾಗಿಯೂ ಈ ಗಟ್ಟಿತನ ನಮ್ಮ ಪೀಳಿಗೆಗೆ ಬಂದರೆ ಅದೇ ನಮ್ಮನ್ನ ಎಲ್ಲೋ ಕರೆದುಕೊಂಡು ಹೋಗತ್ತೆ.
ಮೊದಲ ಬಾರಿ ನಿಮ್ಮನ್ನ ನಾವು ಕರ್ನಾಟಕದ ಸಿಂಗಂ ಎಂದು ಟೀವಿಯಲ್ಲಿ ಹಾಡಿ ಹೊಗಳಿದಾಗಲೇ ನಿಮ್ಮ ಖಡಕ್ ರೂಪ ಕಂಡಿದ್ದು. ಹಾಗೆ ನಿಮ್ಮ ಸುಮಾರು ಸಂದರ್ಶನಗಳಲ್ಲೂ ಉತ್ತರ ಪ್ರದೇಶದಲ್ಲಿ ನೀವು ಕಂಡ ಬಡತನ, ಅಲ್ಲಿನ ವ್ಯವಸ್ಥೆ ಕಂಡು ಬೇಜಾರಾಗಿ ನಾ ಮಾಡುವ ಎಂಬಿಎ ಇಂದ ಏನು ಬದಲಾವಣೆ ಸಾಧ್ಯವಿಲ್ಲವೆಂದು ಯು ಪಿ ಎಸ್ ಸಿ ಬರೆದೆ ಅಂದಾಗ, ನೀವು ಹೇಗೆ ಸಮಸ್ಯೆಗಿಂತ ಅದರ ಪರಿಹಾರಕ್ಕೆ ಒತ್ತು ಕೊಡುತ್ತೀರಿ ಎಂದು ಕೇಳಿದಾಗ ಸಮಸ್ಯೆಯನ್ನ ನೋಡುವ ಹೊಸ ಆಯಾಮ ನಮಗೆ ಸಿಕ್ಕಿತ್ತೆಂದರೆ ಸುಳ್ಳಲ್ಲ.
ಐಪಿಎಸ್ ಅಧಿಕಾರಿ ಅಣ್ಣಾಮಲೈ ಜನರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ?
ಎಂತಹ ಒತ್ತಡದ ಕೆಲಸ ಪೊಲೀಸ್ನವರು ಮಾಡುವಾಗಲೂ ಅವರಿಗೆ ಸಮಯ ಸಿಕ್ಕಾಗ ಒಂದು ಪುಸ್ತಕ ಓದಿ, ಇಲ್ಲ ಶಟಲ್ ಗೇಮ್ ಆಡಿ, ಇಲ್ಲ ನಿಮ್ಮ ಸ್ನೇಹಿತರೊಂದಿಗೆ ಮಾತಾಡಿ ಎಂದಾಗ ನಮ್ಮ ಐಟಿಯವರು 2 ದಿವಸ ಮಾಡುವ ವರ್ಕ್ ಲೈಫ್ ಬ್ಯಾಲೆನ್ಸ್ ಸೆಮಿನಾರಿಗೆ ಮಂಗಳಾರತಿ ಎತ್ತಿದಂತೆ ಆಯ್ತು. ಎಷ್ಟೋ ಬಾರಿ ನಿಮ್ಮ ಈ ಮಾತಿನ ವಿಡಿಯೋ ನಮ್ಮ ಹೈಯರ್ ಮ್ಯಾನೇಜ್ಮೆಂಟಿಗೆ ಪಾಠವಾಗಿದೆ ಎಂದರೆ ಸುಳ್ಳಲ್ಲ.
ನೀವು ಮಾಡುವ ಕೆಲಸದ ಹೊರತಾಗಿ ನಿಮಗೆ ಬೇರೆ ಹವ್ಯಾಸವಿರಬೇಕು ಆಗಲೇ ನೀವು ಸಮಚಿತ್ತದಿಂದಿರಲು ಸಾಧ್ಯ ಎಂದಾಗ ಎಷ್ಟೋ ಹುಡುಗ ಹುಡುಗಿಯರು ಅವರು ಮರೆತಿರುವ ಸಂಗೀತ, ನೃತ್ಯ, ಸಾಹಿತ್ಯ, ಓದು, ಓಡು ಎಲ್ಲವನ್ನ ನಿಮ್ಮ ಮಾತು ಕೇಳಿ ಮೈಗೂಡಿಸಿಕೊಂಡಿದ್ದಾರೆ ಎಂದರೆ ಸುಳ್ಳಲ್ಲ. ನಮ್ಮ ಕೆಲಸವೇ ಜೀವನವಾಗಬಾರದು, ಕೆಲಸ ಜೀವನದ ಭಾಗವಾಗಬೇಕು ಎಂದು ನೀವು ಹೇಳುವ ಪಾಠ ನಾವು ಅಳವಡಿಸಿಕೊಳ್ಳಲೇಬೇಕು.
'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ
ಕೋಪ ನಿಯಂತ್ರಣ ಹೇಗೆ ಮಾಡಬೇಕೆಂಬುದನ್ನ ಸಹ ಎಷ್ಟೋ ಬಾರಿ ಹೇಳಿದ್ದೀರಿ. ಹೀಗೆ ನೀವು ನಮ್ಮ ಪೀಳಿಗೆಯ ಹೀರೋ ಎಂದು ಕೊಳ್ಳುತ್ತಿರುವಾಗಲೇ ದೊಡ್ಡ ಹುದ್ದೆಗೆ ರಾಜಿನಾಮೆ ಕೊಟ್ಟಿದ್ದೀರಿ. ಸಾರ್ವಜನಿಕ ಸೇವೆಯಲ್ಲಿ ನಿಮ್ಮ ಥರಹದವರು ಬೇಕಿತ್ತು. ಆದರೂ ಇದನ್ನ ಬಿಟ್ಟಾಗ ಯಾರ ಬಗ್ಗೆಯೂ ಬೇಜಾರು ಮಾಡಿಕೊಳ್ಳದೇ ಯಾರನ್ನೂ ದೂರದೇ ಮರಳಿ ಮತ್ತೆ ಮಣ್ಣಿಗೆ ಕೃಷಿ ಮಾಡುವುದಕ್ಕೆ, ನಿರುದ್ಯೋಗಿಗಳ ಸ್ಕಿಲ್ ಡೆವಲಪ್ಮೆಂಟಿಗೆ ಮತ್ತೆ ಕೊನೆಯಲ್ಲಿ ದೇವರು ಎಲ್ಲಿ ಕರೆದುಕೊಂಡು ಹೋಗುತ್ತಾನೋ ಅಲ್ಲಿಗೆ ನನ್ನ ಜೀವನ ನಡೆಯುತ್ತದೆ ಎಂದಾಗ ನಿಮ್ಮ ಪ್ರಬುದ್ಧತೆಯ ವಿಸ್ತಾರ ಅರ್ಥವಾಯಿತು. ಮೈಸೂರು, ಚಿಕ್ಕಮಗಳೂರು, ಬೆಂಗಳೂರು ದಕ್ಷಿಣ ನಿಮ್ಮನ್ನ ಸದಾ ನೆನೆಸಿಕೊಳ್ಳುತ್ತದೆ ಸರ್. ನೀವು ಒಬ್ಬ ಮನುಷ್ಯ ಪ್ರಾಮಾಣಿಕವಾಗಿ ಛಲದಿಂದ ನಡೆದರೆ ಏನು ಬೇಕಾದರೂ ಆಗಬಹುದೆಂಬ ದಾರಿ ತೋರಿಸಿಕೊಟ್ಟಿದ್ದೀರಿ ಆ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತೇವೆ...
ಇತಿ ನಿಮ್ಮ ಅಸಂಖ್ಯಾತ ಅಭಿಮಾನಿಗಳಲ್ಲಿ ಒಬ್ಬಳು..