ದೇಶಭಕ್ತಿ ಎಲ್ಲಾ ಬದ್ನೆಕಾಯಿ ಅನ್ನೋರು ಅಂಡಮಾನ್ ನೋಡಬೇಕು
ಶಾಲೆಯ ಭೂಗೋಳ ಪಾಠ ನೆನಪಿಸಿಕೊಳ್ಳಿ. ಭಾರತದ್ದಲ್ಲಿ 7 ಒಕ್ಕೂಟ ಪ್ರದೇಶಗಳಿವೆ. ಭಾರತದ ಒಂದು ಒಕ್ಕೂಟ ಪ್ರದೇಶ ಹೇಗಿರಬಹುದು, ಅಲ್ಲಿಗೂ ನಮ್ಮ ರಾಜ್ಯಕ್ಕೂ ಏನು ವ್ಯತ್ಯಾಸ ಇರಬಹುದು, ಅವುಗಳಿಗ್ಯಾಕೆ ಅಷ್ಟೊಂದು ಪ್ರಾಮುಖ್ಯತೆ ಎಂಬ ಹುಳು ತಲೆಯಲ್ಲಿ ಕೊರೆಯುತ್ತಲೇ ಇರುತ್ತಿತ್ತು.
ಅಂಡಮಾನಿನಲ್ಲಿ ಅಂಡಮಾನಿ ಭಾಷೆ ಮಾತಾಡುತ್ತಾರೆ ಎಂದು ಅಂದುಕೊಂಡಿದ್ದೆ. ಕನ್ನಡದಲ್ಲಿ ಅಂಡಮಾನ್ ಸಿನೆಮಾ ಬಂದಾಗಲೇ ಅಲ್ಲಿ ಹಿಂದಿ ಮಾತಾಡುತ್ತಾರೆ ಎಂದು ತಿಳಿದಿದ್ದು. ಅಲ್ಲಿ ಕಾಡಿನ ಮನುಷ್ಯರು ಇರುತ್ತಾರೆ ಸಮುದ್ರದ ಮಧ್ಯದ ದ್ವೀಪ, ಅಲ್ಲೊಂದು ದೊಡ್ಡ ಜೈಲಿದೆ ಇಂಥವೆಲ್ಲ ವಿಷಯಗಳು ತಿಳಿದ ನಂತರ ಈ ಭಾಗವನ್ನ ನೋಡಲೇಬೇಕೆಂಬ ಆಸೆಯಾಯಿತು. ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಪುಸ್ತಕ ಓದಿದಾಗ ಅಂಡಮಾನಿನಲ್ಲಿ ತುಂಬಾ ಬೆಂಗಾಲಿ ಮಾತಾಡುವ ಜನರಿದ್ದಾರೆ, ಮೀನಿಗೆ ಕೊರತೆಯಿಲ್ಲ ಎಂಬುದನ್ನು ಓದಿ ಇನ್ನೂ ತಲೆ ಕೊರೆಸಿಕೊಂಡು ಕೂತಿದ್ದೆ.
ಅಂಡಮಾನ್: ಆ ಅಪಾಯಕಾರಿ ದ್ವೀಪಕ್ಕೆ ಹೋಗಿಯೂ ಬದುಕಿ ಬಂದಿದ್ದ ಏಕೈಕ ಮಹಿಳೆ
ಭಾರತದ ಭೂಪಟ ನೋಡಿದರೆ ಎರಡು ಮುತ್ತುಗಳಾಗಿ ಅಂಡಮಾನ್ ಮತ್ತು ಲಕ್ಷದ್ವೀಪ ಕಾಣಿಸುತ್ತವೆ. ಈಗ ಅಲ್ಲಿ ಪ್ರವಾಸ ಹೋಗುವ ಜನರಿರುವ ಕಾರಣ, ಕಾಡು ಮನುಷ್ಯರ ಬಗ್ಗೆ ಸುಮಾರಷ್ಟು ವಿಷಯಗಳು ಪತ್ರಿಕೆಯಲ್ಲಿ ಬರುವ ಕಾರಣ ಅಂಡಮಾನಿಗೆ ಹೋಗುವ ಮನಸ್ಸಾಯಿತು. ಕಾಡು ಮನುಷ್ಯರು ಬ್ರಿಟಿಷರೊಡನೆ ಹೋರಾಡಿದ ಸ್ವಾತಂತ್ರ್ಯ ಸೇನಾನಿಗಳು ಎಂದು ಅರಿತಾಗ ನನಗೆ, ಈ ಜಾಗಕ್ಕೆ ಇರುವ ಅಗಾಧ ವಿಸ್ಮಯತೆಯನ್ನ ಅರಿಯುವ ಮನಸ್ಸಾಯಿತು.
ಅಕ್ಷರ ಊರು ಕೇರಿ ಸುತ್ತುವುದರಲ್ಲಿ ಪ್ರವೀಣ. ಜೀವನ ಸಂಗಾತಿ ಹೀಗೆಲ್ಲ ಊರು ತಿರುಗುವುದಕ್ಕೆ ಸಂಗಾತಿಯೂ ಆದರೆ ಆನಂದಕ್ಕೆ ಪಾರವೇ ಇರುವುದಿಲ್ಲ. ಬಾಲಿಯಲ್ಲಿ ಸ್ಕೂಬಾ ಡೈವಿಂಗ್ ಮಾಡದಿರುವ ಬೇಜಾರನ್ನ ಅಂಡಮಾನಿನಲ್ಲಿ ತೀರಿಸಿಕೊಳ್ಳೋಣ ಎಂಬ ಪಣತೊಟ್ಟು ಇಬ್ಬರು ಹೊರಟೆವು.
'ಉರಿ' ಸಿನೆಮಾ ನೋಡಿದ ನಂತರ ಹಳೆಯ ನೆನಪುಗಳ ಮೆರವಣಿಗೆ
ಅಂಡಮಾನಿಗೆ ಬೆಂಗಳೂರಿನಿಂದ ನೇರ ವಿಮಾನವಿದೆ. 3 ಘಂಟೆಗಳ ಪಯಣ. ಪೋರ್ಟ್ ಬ್ಲೇರಿಗೆ ಹೋಗಿ ಅಲ್ಲಿನ ದ್ವೀಪ ಸಮುಚ್ಚಯಗಳಿಗೆ ಫೆರ್ರಿಯಲ್ಲಿ ಹೋಗಬಹುದು. ನಿಮಗೆ ಮೂರು ಅಥವಾ ನಾಲ್ಕು ಘಂಟೆಗಳ ಕಾಲ ಸಮುದ್ರದ ಮೇಲೆ ಫೆರ್ರಿಯಲ್ಲಿ ಹೋದಾಗ ಸೀ ಸಿಕ್ನೆಸ್ ಇದ್ದರೆ ಹುಷಾರು ಅಷ್ಟೆ.
ಪೋರ್ಟ್ ಬ್ಲೇರಿನಲ್ಲಿ ನೋಡುವುದಕ್ಕೆ ಇರುವುದು ಸೆಲ್ಯುಲರ್ ಜೈಲು, ಅಲ್ಲೇ ನಡೆಯುವ ಶಬ್ದ ಮತ್ತು ಬೆಳಕಿನ ಕಾರ್ಯಕ್ರಮ, ನೇವಲ್ ಮ್ಯೂಸಿಯಮ್ ಮುಂತಾದವು. ಭಾರತೀಯ ನೌಕಾಪಡೆಯ ಒಂದು ಪ್ರಮುಖ ಪೋರ್ಟ್ ಅಲ್ಲಿರುವುದರಿಂದ ಎಲ್ಲವೂ ಅಲ್ಲಿ ಅವರ ಕಣ್ಣ ಕೆಳಗೆ ನಡೆಯುವಂಥದ್ದು. ಒಂದು 15 ನಿಮಿಷ ಗಾಡಿ ತೆಗೆದುಕೊಂಡು ಹೋದರೆ ಊರಿನ ನೆಲದ ದಾರಿ ಮುಗಿಯುವುದರಿಂದ ಊರಿನಲ್ಲಿ ಎಲ್ಲರಿಗೂ ಎಲ್ಲರೂ ಗೊತ್ತು. ನಮ್ಮ ಹಾಗೆ ಬರುವ ಹೊಸಬರ ಮುಖಗಳನ್ನ ಬೇಗ ಕಂಡುಹಿಡಿದು ಅಂಗಡಿಯಲ್ಲಿ ಒಂದಕ್ಕೆ ಎರಡು ದರ ಹೇಳಿ ಯಾಮಾರಿಸುವುದಕ್ಕೆ ಕಾಯುತ್ತಿರುತ್ತಾರೆ.
ಸಿಟಿಗಿಂತ ಕಾಡನ್ನೇ ಇಷ್ಟಪಡುವ ಜಡೆಯಪ್ಪ ಎಂಬ ಮಾಂತ್ರಿಕ!
ಅಂಡಮಾನಿಗೆ ಹನುಮಾನ್ ಇಂದ ಹೆಸರು ಬಂದಿತೆಂದು ಅಲ್ಲಿನ ಜನರು ಹೇಳುತ್ತಾರೆ. ರಾಮ ಲಂಕೆಗೆ ದಾಳಿ ಮಾಡುವಾಗ ಧನುಷ್ಕೋಟಿಯ ದಾರಿ ಬದಲಾಗಿ ಇಲ್ಲಿಗೆ ಸೇತುವೆ ಕಟ್ಟಿ ನಂತರ ಲಂಕೆಗೆ ಹೋಗುವ ಯೋಜನೆ ಇತ್ತಂತೆ.
ಆದರೆ ನನಗೆ ಪೋರ್ಟ್ ಬ್ಲೇರಿನಲ್ಲಿ ಕಣ್ಣೀರು ತರಿಸಿದ್ದು ಸೆಲ್ಯುಲರ್ ಜೈಲ್ ಎಂಬ ನರಕವನ್ನ ನೋಡಿ. ಸಾವರ್ಕರ್ ಅಂತಹ ಮಹಾನ್ ನಾಯಕನನ್ನ 10 ವರ್ಷಗಳ ಕಾಲ ಸೆರೆಮನೆಯಲ್ಲಿಟ್ಟು ಕೊಡಬಾರದ ಹಿಂಸೆ ಕೊಟ್ಟು ಬಿಡುಗಡೆಗೊಳಿಸಿದ್ದು, ಅವರ ಹಾಗೆ ಚಿಕ್ಕ ಚಿಕ್ಕ ಹುಡುಗರನ್ನ ಗಾಣದೆತ್ತಿನ ಹಾಗೆ ನಿಜವಾಗಿಯೂ ದುಡಿಸಿ ಕೆಲವರನ್ನ ಚಿತ್ರಹಿಂಸೆಗೊಳಿಸಿ ಸಾಯಿಸಿದ್ದ ಬ್ರಿಟಿಷರು ಬಿಟ್ಟು ಹೋದ ಕುರುಹು, ಚರಿತ್ರೆಯನ್ನ ಹೇಳಲಿಕ್ಕೆ ಅಂತ ಮಾಡಿಟ್ಟ ಧ್ವನಿ ಮತ್ತು ಬೆಳಕಿನ ಆಟದ ಟಿಕೆಟಿಗೆ ನಡೆಯುತ್ತಿದ್ದ ಭ್ರಷ್ಟಾಚಾರ ನೋಡಿ.
ಫಳಫಳ ಹೊಳೆಯುವ ಮುತ್ತಿಗೂ ಹೈದರಾಬಾದಿಗೂ ಎಲ್ಲಿಯ ಸಂಬಂಧ?
ನಮ್ಮ ದೇಶದ ಹೆಮ್ಮೆಯ ಹೀರೋಗಳ ಕಥೆಯನ್ನ ಹೇಳುವ, ಸಾರುವ ವಿಷಯದಲ್ಲಿಯೂ ಅವರ ಕೆಟ್ಟ ಬುದ್ಧಿಯನ್ನ ತೋರಿಸುವ ಅಧಿಕಾರಿಗಳನ್ನ ನನ್ನ ಜೀವನದಲ್ಲಿ ನೋಡಿರಲ್ಲಿಲ್ಲ. ಯಾವುದೇ ಏಜೆನ್ಸಿಯ ಮೊರೆ ಹೋಗದೆ ಹೊಡೆದಾಡಿ ಒಬ್ಬ ಒಳ್ಳೆ ಅಧಿಕಾರಿಯ ಸಹಾಯದಿಂದ ಟಿಕೆಟ್ ಪಡೆದುಕೊಂಡು ಒಳ ಹೋದೆವು.
ಒಬ್ಬ ಮನುಷ್ಯ ಕೂತರೆ ನಿಲ್ಲಲಾಗದ, ನಿಂತರೆ ಕೂರಲಾಗದ, ಬಚ್ಚಲುಮನೆಯನ್ನು ಸೇರಿಸಿ ಕಟ್ಟಿದ ಒಂದು ಚಿಕ್ಕ ಕೋಣೆಯಲ್ಲಿ ಖೈದಿಗಳನ್ನ ಚಿತ್ರಹಿಂಸೆ ಪಡಿಸಲಾಗಿತ್ತು. ವೀರ ಸಾವರ್ಕರರಿಗೆ ಅವರ ಸ್ವಂತ ತಮ್ಮನ್ನ ಅದೇ ಜೈಲಿಗೆ ಹಾಕಿದ್ದರು ಎಂಬ ಪರಿಕಲ್ಪನೆಯೂ ಇರಲ್ಲಿಲ್ಲ. ಅಷ್ಟು ಕುರೂಪಗೊಳಿಸಿದ್ದರು ತಮ್ಮನನ್ನ, ಖೈದಿಗಳಿಗೆ ವಿದ್ಯುತ್ ಶಾಕ್ಗಳನ್ನ ಕೊಟ್ಟು ಅರೆಹುಚ್ಚರನ್ನಾಗಿ ಮಾಡಿ ಗೇಟುಗಳನ್ನ ತೆಗೆದು ಸಮುದ್ರದಲ್ಲಿಯೇ ಕೊಲೆ ಮಾಡುವ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಎಷ್ಟು ಅಮಾನುಷವಾಗಿ ನಡೆದುಕೊಳ್ಳಬಹುದೋ ಅಷ್ಟು ಅಮಾನುಷವಾಗಿ ನಡೆದುಕೊಂಡು ಸಾವಿರಾರು ಜನರು ಹತ್ಯೆಯಾದ ಜಾಗವಿದು. ತೀರ 13ರಿಂದ 26ರ ಅಸುಪಾಸಿನಲ್ಲೇ ಖೈದಿಗಳಿದ್ದರಂತೆ.
ಕಾಲಾಪಾನಿಯ ಕಾಲಾ ಕಥೆಯನ್ನ ಕೇಳಿದ ಮೇಲೆ ಕಣ್ಣಲ್ಲಿ ನೀರು ಒಂದೇ ಸಮನೆ ಸುರಿಯುತ್ತದೆ. ಮುಗಿದ ನಂತರ ಹೇಳುವ ರಾಷ್ಟ್ರಗೀತೆಯನ್ನ ಇನ್ನೂ ಗಟ್ಟಿಯಾಗಿ ಹಾಡಬೇಕೆನಿಸುತ್ತದೆ. ದೇಶ, ಭಕ್ತಿ ಎಲ್ಲಾ ಬದನೆಕಾಯಿ ಅನ್ನುವವರು ಒಮ್ಮೆ ಅಲ್ಲಿ ನೋಡಿ ಬರಬೇಕು. ನಾವು ಸ್ವಚ್ಛಂದವಾಗಿ ಇರುವ ಇವತ್ತಿಗೆ ಚಿಕ್ಕ ವಯಸ್ಸಿನ ಹುಡುಗರು ಅವರ ನಿನ್ನೆ, ಇವತ್ತು ನಾಳೆಗಳನ್ನ ಬಲಿ ಕೊಟ್ಟು ಹೋರಾಡಿದ್ದರ ಪರಿಣಾಮ ನಮ್ಮ ಸುಗಮ ಜೀವನ. ಅದನ್ನ ನೆನಪಿಟ್ಟುಕೊಳ್ಳಲೇಬೇಕು. ಪೋರ್ಟ್ ಬ್ಲೇರಿನ ಈ ಕಲಿಕೆಯಿಂದ ಮುಂದೆ ಹೋಗಿದ್ದು ಸ್ವರಾಜ ದ್ವೀಪವಾದ ಹಾವ್ ಲಾಕಿಗೆ... ಆ ಕಥೆ ಮುಂದಿನ ವಾರ ಓದಿ...