21ನೇ ಶತಮಾನದಲ್ಲಿ ನಾವು ಕಲಿಯಬೇಕಾದ ಇಪ್ಪತ್ತೊಂದು ಪಾಠಗಳು
ಈ ಅಂಕಣದಲ್ಲಿ ನಾನೊಮ್ಮೆ ಸೇಪಿಯನ್ಸ್ ಅನ್ನೋ ಪುಸ್ತಕದ ಬಗ್ಗೆ ಸವಿಸ್ತಾರವಾಗಿ ಬರೆದ್ದಿದ್ದೆ. ನಾವು ಮನುಷ್ಯರು ಹೇಗೆ ಹೀಗೆಲ್ಲಾ ಆದೆವು ಎಂಬ ವಿಷಯ ತಿಳಿದು ಅವಕ್ಕಾದೆ. ಇದೇ ಗುಂಗಿನಲ್ಲಿ ಡಾ ಯುವಲ್ ನೊವಾಹ್ ಹರಾರಿ ಬರೆದ ಮತ್ತೊಂದು ಪುಸ್ತಕ ಓದೋದಕ್ಕೆ ಶುರು ಮಾಡಿದೆ. 21ನೇ ಶತಮಾನಕ್ಕೆ ನಾವು ಕಲಿಯಬೇಕಾದ 21 ಪಾಠಗಳನ್ನ ಇಲ್ಲಿ ಸಮಯೋಚಿತವಾಗಿ ಕೊಡಲಾಗಿದೆ.
ನನಗೆ ಇಲ್ಲಿ ವಿಶೇಷ ಆಸಕ್ತಿ ಅನ್ನಿಸಿದ್ದು ಕೃತಕ ಬುದ್ಧಿಮತ್ತೆಯ ಬಗ್ಗೆ ಬರೆದಾಗ. ನಾನೂ ಸಹ ಒಂದು ಕೃತಕ ಬುದ್ಧಿಮತ್ತೆಯ ಇಂಜಿನಿಯರ್. ಆಫೀಸಿನಲ್ಲಿಯೇ ನಮ್ಮನ್ನ ಎಲ್ಲರೂ ಚಾರ್ಲಿ ಚಾಪ್ಲಿನ್ ಸಿನೆಮಾದಲ್ಲಿ ತೋರಿಸಿದಂತೆ ಒಂದು ರೋಬೋ, ಅದು ನಮ್ಮ ದಿನನಿತ್ಯ ಕೆಲಸಗಳಿಗೆ ಅನುವು ಮಾಡಿಕೊಡುವ ಯಂತ್ರ ಮಾನವರನ್ನ ಸೃಷ್ಠಿಸುವವರೆಂದು ನಮ್ಮನ್ನ ವಿಚಿತ್ರ ರೀತಿಯಲ್ಲಿ ನೋಡುತ್ತಿರುತ್ತಾರೆ. ಒಂದಷ್ಟು ಜನ ದುಗುಡದಿಂದ ನಮ್ಮ ಯಾವ ತಂತ್ರಾಂಶ ಅವರ ಕೆಲಸಕ್ಕೆ ಚ್ಯುತಿ ಮಾಡುತ್ತದೆ ಎಂದು ನೋಡುತ್ತಿರುತ್ತಾರೆ. ಇಂತಹ ಸುಮಾರು ವಿಹ್ವಲಗಳನ್ನ ಈ ಪುಸ್ತಕ ತೆರೆದಿಡುತ್ತದೆ. ನಮ್ಮ ಸೃಜನಶೀಲತೆಯನ್ನ ಕಡಿಮೆ ಮಾಡುವಂತಹ ಕೆಲಸ ಈ ಎಲ್ಲಾ ರೋಬೋ ಮಾನವರು ಮಾಡುತ್ತವೆ ಎಂದು ಬಲವಾಗಿ ಲೇಖಕ ಬರೆಯುತ್ತಾರೆ.
ಈ ಪುಸ್ತಕ ಯುದ್ಧದಿಂದ ಹಿಡಿದು ಧ್ಯಾನ, ದೇವರು, ನಕಲಿ ಸುದ್ದಿ, ಡೊನಾಲ್ಡ್ ಟ್ರಂಪ್, ಹವಾಮಾನ ವೈಪರೀತ್ಯ ಎಲ್ಲವೂ ಬಂದು ಹೋಗುತ್ತದೆ. ಇಸ್ರೇಲಿನವರಾದ್ದರಿಂದ ಅವರ ಧರ್ಮದ ಬಗ್ಗೆ ವಿಶೇಷ ನಿಲುವುಗಳು ಇಲ್ಲಿ ಕಾಣಬಹುದು. ಪ್ರಾಯಶಃ ಭಾರತದ ಬಗ್ಗೆ ಸವಿಸ್ತಾರವಾಗಿ ಇನ್ನೂ ಚರಿತ್ರೆ, ಪುರಾಣ ಓದಿದ್ದರೆ ಅವರ ನಿಲುವು ಬೇರೆಯದ್ದಾಗಿರುತ್ತಿತ್ತೇನೋ. ಧರ್ಮದಿಂದಾದ ಕೆಲವು ತಪ್ಪುಗಳು, ಉಗ್ರ ರಾಷ್ಟ್ರೀಯತೆಯಿಂದಾಗುವ ವಿಲಕ್ಷಣ ಸಂಗತಿಗಳು, ನಕಲಿ ಸುದ್ದಿಗಳು ಕೆಲವು ಸರ್ಕಾರಗಳನ್ನ ಉರುಳಿಸುತ್ತದೆ, ಕಟ್ಟುತ್ತದೆ ಎಂಬ ಊಹಾಪೋಹಗಳು, ಉದಾರವಾದಿಗಳಿಗೆ ಆಗುತ್ತಿರುವ ಭಯಗಳು ಇವೆಲ್ಲ ಒಂದೊಮ್ಮೆ ಕಣ್ಣುಹಾಯಿಸಿದರೆ ಯಾಕೋ ನಮ್ಮ 24 ಘಂಟೆ ನ್ಯೂಸ್ ಚಾನೆಲ್ ಗಳು ಸರಕು ತುಂಬಿಸಿಕೊಳ್ಳಲು ವಿಷಯಗಳನ್ನ ಹೆಕ್ಕಿ ತೆಗೆಯುವ ಹಾಗಿದೆ.
ಸಹಸ್ರಾರು 'ಲಿಪಿ'ಗಳಿಗೆ ಉತ್ತೇಜನ ತುಂಬಿದ ಗುರು ಮಹಾದೇವಯ್ಯ ಸರ್
ಮತ್ತೆ ನಾವೆಲ್ಲರೂ ಈ ರಜನಿಕಾಂತ್ ರೋಬೋ ಸಿನೆಮಾದ ಚಿಪ್ ಇರುವ ಚಿಟ್ಟಿ ರೊಬೋಟಿನ ಥರಹವೇ ಜೀವನ ಮಾಡುತ್ತಿದ್ದೇವೆ ಎಂದು ಘಂಟಾಘೋಷವಾಗಿ ಲೇಖಕ ಬರೆಯುತ್ತಾರೆ. ಒಮ್ಮೊಮ್ಮೆ ಅದು ಹಾಗೆಯೂ ಅನ್ನಿಸುತ್ತದೆ. ನಮ್ಮ ಪೀಳಿಗೆಯ ಜೀವನ ಸಮಯಕ್ಕೆ ಸರಿಯಾಗಿ ಹೊಂದಿಸಿಕೊಂಡು ಹೋಗುತ್ತಾ ಇರುತ್ತೇವೆ.
ನಮ್ಮ ಜೀವನವನ್ನ ನಮಗೆ ಬೇಕಾದ ರೀತಿಯಲ್ಲಿ ಬದುಕುತ್ತಿದ್ದೇವಾ ಅಥವಾ ಒಂದು ದೊಡ್ಡ ಯಂತ್ರಕ್ಕೆ ನಮ್ಮ ಅಂಕಿ ಸಂಖ್ಯೆ ಮಾಹಿತಿಯನ್ನ ತುಂಬಿಸುತ್ತಿದ್ದೇವಾ ಎಂಬ ದೊಡ್ಡ ಪ್ರಶ್ನೆಯನ್ನ ಎತ್ತುತ್ತಾರೆ. ನಮ್ಮ ಮುಂದಿನ ಪೀಳಿಗೆಯವರು ದೊಡ್ಡವರಾದ ಮೇಲೆ ಅವರಿಗೆ ಮಾಡಲು ಅಷ್ಟು ಕೆಲಸಗಳೇ ಇರುವುದಿಲ್ಲ ಎಲ್ಲವನ್ನೂ ಈ ಎ ಐ ಎಂಬ ರಾಕ್ಷಸ ತಿಂದುಹಾಕುತ್ತಾನೆ ಎಂಬ ದುಗುಡವನ್ನ ಪುಸ್ತಕ ಉಂಟು ಮಾಡುತ್ತದೆ. ಪ್ರಾಯಶಃ ಇದು ಸತ್ಯವೇನೋ.
ಮಂಕುತಿಮ್ಮನ ಕಗ್ಗ ಮತ್ತು ಪಕೋಡಪ್ರಿಯ ಗುಂಡಪ್ಪ
ಕೆಲವೊಂದು ಮುಖ್ಯವಾದ ಪ್ರಶ್ನೆಗಳನ್ನು ಈ ಪುಸ್ತಕ ಎತ್ತುತ್ತದೆ. ಕೆಲವರಿಗೆ ಇದು ಸಹ್ಯವಾಗಬಹುದು, ಕೆಲವರಿಗೆ ವಿಚಿತ್ರವೆನಿಸಬಹುದು, ಕೆಲವರಿಗೆ ಅದು ಹಾಸ್ಯಾಸ್ಪದ ಎನ್ನಿಸಬಹುದು. ಸಕ್ಕರೆ ಉದ್ಯಮಕ್ಕಿಂತ ಭಯೋತ್ಪಾದನೆಗೆ ಯಾಕೆ ಅಷ್ಟು ಭಯ ಪಡುತ್ತೇವೆ? ಆಸ್ತಿ ಮಾಡುವುದರಿಂದಾನೆ ಅಸಮಾನತೆ ಬೆಳೆಯುವುದು ಅಲ್ಲವೆ? ಮನುಷ್ಯರು ಸತ್ಯಕ್ಕಿಂತ ಮಿಥ್ಯವನ್ನ ಜಾಸ್ತಿ ನಂಬುತ್ತಾರೆ ಅಲ್ಲವೇ? ಇಂತಹ ಸುಮಾರು ಪ್ರಶ್ನೆಗಳನ್ನ ಎತ್ತಿ ಅದಕ್ಕೆ ಸಮಯೋಚಿತ ಉತ್ತರವನ್ನು ನೀಡಿಲ್ಲ. ಪ್ರಾಯಶಃ ಪ್ರಶ್ನೆ ಎತ್ತುವುದು ಮಾತ್ರ ನಮ್ಮ ಕೆಲಸ ಎನ್ನುವ ನಂಬಿಕೆಯಲ್ಲಿ ಇದ್ದರೇನೋ ಬರೆದವರು.
ಯುರೋಪಿನಲ್ಲಿ ಈಗ ಅತಿಯಾಗಿ ಕಾಣುತ್ತಿರುವ ವಲಸೆ ಸಮಸ್ಯೆಗಳಿಗೂ ಸುಮಾರು ಪ್ರಶ್ನೆಗಳನ್ನ ಎತ್ತಿದ್ದಾರೆ. ನಾನು ಬಾರ್ಸಿಲೋನಾದಲ್ಲಿದ್ದ ಅಪಾರ್ಟ್ಮೆಂಟಿನಲ್ಲಿ ಪಕ್ಕದ ಮನೆಯಲ್ಲಿದ್ದ ಪೆರು ದೇಶದವರು ಮಾತಾಡುತ್ತಾ ಇದ್ದಾಗ ಕೆಲವು ಪ್ರಶ್ನೆಗಳನ್ನ ಎತ್ತಿದ್ದರು. ಅವರ ದೇಶವನ್ನ ಯಕಃಶ್ಚಿತ್ ಒಂದು ವಸಾಹತು ಮಾಡಿ ಪೂರ್ತಿ ಅವರ ಸಂಸ್ಕೃತಿಯನ್ನ, ಭಾಷೆಯನ್ನ ಹಾಳು ಮಾಡಿದ ಯುರೋಪಿಯನ್ನರಿಗೆ ಅಕ್ರಮ ವಲಸೆ ಬಗ್ಗೆ ಮಾತಾಡುವ ಯಾವುದೇ ನೈತಿಕ ಹಕ್ಕಿಲ್ಲ, ಅವರು ಮಾಡಿದ್ದನ್ನ ಅವರು ಅನುಭವಿಸುತ್ತಿದ್ದಾರೆ ಎಂದು ಸೀದಾ ಸಾದಾ ಕರ್ಮ ಸಿದ್ಧಾಂತವನ್ನ ನನಗೆ ತಿಳಿಹೇಳಿದರು.
ಅಷ್ಟಾವಧಾನದಲ್ಲಿ ಇಷ್ಟವಾಗುವುದು ಅಪ್ರಸ್ತುತ ಪ್ರಸಂಗ
ಇಡೀ ಭೂಮಿಗೇ ರೇಖಾ ಪರಿಮಿತಿಗಳಿಲ್ಲದಾಗ ನಮ್ಮ ಗಡಿಗಳು ಲೇಖಕನಿಗೆ ಹಸ್ಯಾಸ್ಪದವೆನಿಸುತ್ತದೆ. ಆದರೆ ಯುರೋಪಿನ ಗಡಿಗಳಿಗೂ, ಏಷ್ಯಾದ ಗಡಿಗಳಿಗೂ ವಿಪರೀತ ವ್ಯತ್ಯಾಸವಿದೆ. ಅಲ್ಲಿನ ಗಡಿಗಳಲ್ಲಿ ಸೈಕಲ್ಲಿನಲ್ಲಿ ಹೋಗಬಹುದು ಇಲ್ಲಿ ಸಂಜೋತಾ, ಮೈತ್ರಿ ಎಂಬ ಟ್ರೈನ್ ಗಳ ಅವಶ್ಯಕತೆ ಇದೆ.
ತ್ಯಾಗ, ಬಲಿದಾನಗಳು ಎಂಬ ಪದಗಳನ್ನ ಕೇಳಿದಾಗ ಒಂದು "ಅಲಾರ್ಮ್" ನಿಮಗೆ ಹೊಡೆಯಬೇಕು ಎಂದು ಎಚ್ಚರಿಕೆ ನೀಡುತ್ತಾರೆ. ಭಾರತದಲ್ಲಿಯೇ ಹುಟ್ಟಿ ಬೆಳದವರಿಗೆ ಇದು ಅತೀ ಅಸಮಂಜಸವಾದ ವಾದ. ನಮ್ಮ ತಾತ, ಮುತ್ತಾತ ಅವರ ಜೀವನವಷ್ಟೆ ನೋಡಿಕೊಂಡು ತಮ್ಮ ಮುಂದಿನ ಪೀಳಿಗೆಗೆ ತ್ಯಾಗ ಮಾಡದಿದ್ದರೆ ಬಹುಶಃ ನಾವು ಹೀಗಿರುತ್ತಿದ್ದದ್ದು ಕಡಿಮೆ. ಅದ್ಯಾವುದೋ ದೇಶ ಅಥವಾ ಅಮೇರಿಕ ಯುರೋಪನ್ನೇ ಉದಾಹರಣೆ ತೆಗೆದುಕೊಂಡು ಎಲ್ಲಾ ದೇಶಗಳಿಗೂ ಅದೇ ಲೆಕ್ಕದ ಫಾರ್ಮ್ಯುಲಾ ಹಾಕುವುದು ಲೇಖಕನ ಸೋಲು.
ಈ ಪಾಠಗಳು ನೀವು ಯಾರನ್ನೋ ವಿಪರೀತ ಇಷ್ಟಪಟ್ಟಾಗ ಅವರ ಇಷ್ಟಗಳನ್ನ ವಿಪರೀತ ಹೇರುವ ಪ್ರಯತ್ನ ಮಾಡುತ್ತಾರಲ್ಲ ಒಮ್ಮೊಮ್ಮೆ ಹಾಗೆ ಅನ್ನಿಸುತ್ತದೆ. 21 ಪಾಠಗಳಲ್ಲಿ ಕೆಲವು ಪಾಠಗಳು ಜೀವನಕ್ಕೆ ಅವಶ್ಯಕ, ಕೆಲವು ಈ ಕ್ಷಣಕ್ಕೆ ಅವಶ್ಯಕ, ಕೆಲವು ಈಗಲೇ ಮರೆತುಬಿಡಬಹುದು.