ಮಕ್ಕಳ ಕಥೆಗಳು ಹಾಗೂ ಶತಮಾನದ ಲಲಿತ ಪ್ರಬಂಧ
- ಜಾನಕಿ
***
ಒಂದು ದಿನ ಅತೃಪ್ತನೊಬ್ಬ ನೇರಳೆ ಹಣ್ಣಿನ ಮರದ ಕೆಳಗೆ ಕುಳಿತಿದ್ದ. ಅಲ್ಲೇ ಸಮೀಪದಲ್ಲಿ ಹಬ್ಬಿದ ಕುಂಬಳಕಾಯಿಯ ಮೇಲೆ ಅವನ ದೃಷ್ಟಿ ಬಿದ್ದಿತು. ಆ ಅತೃಪ್ತನು ‘ಓ ದೇವರೇ, ನೀನೆಂಥ ಮೂರ್ಖ. ಇಷ್ಟು ದೊಡ್ಡ ಮರದಲ್ಲಿ ಇಷ್ಟು ಚಿಕ್ಕ ಹಣ್ಣು. ಅಷ್ಟು ಸಣ್ಣ ಬಳ್ಳಿಯಲ್ಲಿ ಅಷ್ಟು ದೊಡ್ಡ ಕಾಯಿ. ಬಳ್ಳಿಯಲ್ಲಿ ನೇರಳೆ, ಮರದಲ್ಲಿ ಕುಂಬಳಕಾಯಿ ಇಟ್ಟಿದ್ದರೆ ನಿನ್ನ ವಿವೇಕವನ್ನು ಮೆಚ್ಚಿಕೊಳ್ಳಬಹುದಾಗಿತ್ತು’ ಎಂದು ಹೇಳಿಕೊಂಡ.
ಹೀಗೆ ಹೇಳಿ ಮುಗಿಸುವ ಹೊತ್ತಿಗೆ ಅವನ ನೆತ್ತಿಗೊಂದು ನೇರಳೆ ಹಣ್ಣುಬಿತ್ತು. ಅವನು ಗಲಿಬಿಲಿಗೊಂಡು ಹೇಳಿದ;‘ಓ ದೇವರೇ, ನಿನ್ನ ಕ್ರಮ ಸರಿಯಾಗಿದೆ. ಮರದಲ್ಲಿ ಕುಂಬಳಕಾಯಿ ಇಟ್ಟಿದ್ದರೆ, ಅದು ನನ್ನ ತಲೆಗೆ ಬಿದ್ದಿದ್ದರೆ ನಾನು ಸಾಯುತ್ತಿದೆ. ನಿನ್ನ ವಿವೇಕ ಮತ್ತು ಒಳ್ಳೆಯತನ ದೊಡ್ಡದು’.
***
ಒಬ್ಬ ಖಾಜಿ ಮುಸ್ಸಂಜೆಯಲ್ಲಿ ಎಣ್ಣೆದೀಪದ ಬೆಳಕಲ್ಲಿ ಹಳೆಯ ಪುಸ್ತಕ ಓದುತ್ತಿದ್ದ. ಅದರಲ್ಲಿ ಒಂದು ವಾಕ್ಯ ಹೀಗಿತ್ತು; ಉದ್ದನೆಯ ಗಡ್ಡ ಇರುವವರು ಸಾಮಾನ್ಯವಾಗಿ ಮೂರ್ಖರು.
ಖಾಜಿಗೆ ಉದ್ದನೆಯ ಗಡ್ಡವಿತ್ತು. ಈ ಪುಸ್ತಕ ಓದಿದವರೆಲ್ಲ ತನ್ನನ್ನು ಮೂರ್ಖನೆಂದು ತಿಳಿಯುತ್ತಾರೆಂದು ಖಾಜಿಗೆ ಗಾಬರಿಯಾಯಿತು. ಆತ ತನ್ನ ಗಡ್ಡವನ್ನೆಲ್ಲ ಒಟ್ಟುಮಾಡಿ ಕೈಯಲ್ಲಿ ಹಿಡಿದು ಅದರ ತುದಿಯನ್ನು ದೀಪಕ್ಕೆ ಒಡ್ಡಿದ. ಅವನ ಉದ್ದದ ಗಡ್ಡ ಹತ್ತಿ ಉರಿಯಿತು. ಬೆಂಕಿ ಕೈಗೆ ಸೋಕುತ್ತಿದ್ದಂತೆ ಗಡ್ಡವನ್ನು ಕೊಂಚ ಮೇಲಕ್ಕೆ ಹಾರಿಸಿ ಬೆಂಕಿ ಆರಿಸಲು ಯತ್ನಿಸಿದ. ಆಗ ಬೆಂಕಿಯ ಜ್ವಾಲೆ ಹರಡಿ ಮೀಸೆ ಹುಬ್ಬು, ತಲೆಕೂದಲೂ ಸುಟ್ಟುಹೋಯಿತು.
ಉದ್ದಗಡ್ಡದವರು ನಿಜಕ್ಕೂ ಮೂರ್ಖರಾಗಿರುತ್ತಾರೆ ಅಂತ ಆಗ ಅವನಿಗೆ ಖಾತ್ರಿಯಾಯಿತು.
***
ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿದ ನೂರಾರು ಕತೆಗಳ ಸಂಕಲನ ಇದು. ಇರುವುದೆಲ್ಲ ಇಂಥ ಪುಟ್ಟ ಮಕ್ಕಳ ಕತೆಗಳೇ. ತೊಂಬತ್ತು ರುಪಾಯಿಗಳ ಈ ರುಚಿಕಟ್ಟಾದ ಪುಸ್ತಕ ಇಂಗ್ಲಿಷಿನಲ್ಲೂ ಸಿಗುತ್ತದೆ. ಅಂದಹಾಗೆ ಇದನ್ನೆಲ್ಲ ಕನ್ನಡಕ್ಕೆ ತಂದವರು ಎಕೆ ರಾಮಾನುಜನ್.
***
‘ನಾನು ಸತ್ತರೆ ಮೂವರು ಸತ್ತಂತೆ’ ಅಂದರಂತೆ ಶ್ರೀರಂಗರು. ಅದು ಹೇಗೆ ಎಂದು ಕೇಳಿದಾಗ ಅವರು ಹೇಳಿದ್ದಿಷ್ಟು; ನನಗೆ ಶ್ರೀರಂಗ, ಆರ್.ವಿ. ಜಾಗಿರದಾರ ಮತ್ತು ಆದ್ಯ ರಂಗಾಚಾರ್ಯ ಎಂಬ ಮೂರು ಹೆಸರುಗಳು. ನಾನು ಸತ್ತರೆ ಈ ಮೂವರೂ ಸತ್ತಂತಾಗಲಿಲ್ಲವೇ?
ಈ
ಮಾತು
ಶ್ರೀರಂಗರೇ
ಬರೆದ
‘ಸ್ವಂತ
ಶ್ರಾದ್ಧ’
ಪ್ರಬಂಧದಲ್ಲಿ
ಬರುತ್ತದೆ.
ಅದು
ಶ್ರೀರಂಗರು
ತಮ್ಮ
ಬಗ್ಗೆಯೇ
ಬರೆದುಕೊಂಡ
obituary.
ತುಂಬ
ತಮಾಷೆಯಾಗಿ
ಸಾಗುವ
ಈ
ಬರಹ
ಇತ್ತೀಚೆಗೆ
ಕರ್ನಾಟಕ
ಸಾಹಿತ್ಯ
ಅಕಾಡೆಮಿ
ಪ್ರಕಟಿಸಿದ
ಶತಮಾನದ
ಲಲಿತ
ಪ್ರಬಂಧ
ಪುಸ್ತಕದಲ್ಲಿ
ಓದಲು
ಸಿಕ್ಕಿತು.
ನೋಡುತ್ತಾ ಹೋದರೆ ಈ ಶತಮಾನದ ಲಲಿತ ಪ್ರಬಂಧ ಸಂಕಲನದಲ್ಲಿ ಅನೇಕ ಕುತೂಹಲಕಾರಿ ಪ್ರಬಂಧಗಳಿವೆ. ನಾ. ಕಸ್ತೂರಿಯವರ ‘ಮನೆಯಾಕೆ’, ಕುವೆಂಪು ಬರೆದ ‘ತೋಟದಾಚೆಯ ಭೂತ’, ಬೇಂದ್ರೆಯ ‘ಉಗುಳುವುದು’, ಕಾರಂತರ ‘ನಮ್ಮೂರ ಕೆರೆ’, ಮಧುರ ಚೆನ್ನರ ‘ಮರ್ಕಟ ವಿಚಾರ’, ಗೋವಿಂದ ಪೈಗಳ ‘ಬರಹಗಾರನ ಹಣೆಬರಹ’.. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇಪ್ಪತ್ತಕ್ಕಿಂತಲೂ ಹೆಚ್ಚು ಸೊಗಸಾದ ಪ್ರಬಂಧಗಳು ಸಿಗುತ್ತವೆ. ತೇಜಸ್ವಿಯವರ ‘ಮೇಕೆ ಶಿಕಾರಿ’, ಸತ್ಯನಾರಾಯಣ ಬರೆದ ‘ಮಧ್ಯಾಹ್ನದ ಸೊಗಸು’, ಬೀಚಿ ಬರೆದ ಉದ್ಯೋಗ ಪರ್ವವೂ ಸೇರಿದಂತೆ ಅರುವತ್ತಮೂರು ಪ್ರಬಂಧಗಳು ಇಲ್ಲಿವೆ.
ಪ್ರಬಂಧಗಳು ಹೇಗಿರಬೇಕು ಎನ್ನುವುದನ್ನೂ ಹೇಗಿರಬಾರದು ಅನ್ನುವುದನ್ನೂ ಒಂದೇ ಸಂಕಲನದಲ್ಲಿ ಗ್ರಹಿಸುವುದಕ್ಕೆ ಸಾಧ್ಯವಾಗುವಂತೆ ಗುರುಲಿಂಗ ಕಾಪಸೆಯವರು ಇದನ್ನು ಸಂಪಾದಿಸಿದ್ದಾರೆ. ಶತಮಾನದ ಲಲಿತ ಪ್ರಬಂಧಗಳು ಎನ್ನುವ ಶೀರ್ಷಿಕೆಗೆ ನ್ಯಾಯ ಸಲ್ಲಿಸುವುದಕ್ಕೆ ಅವರು ಎಷ್ಟರ ಮಟ್ಟಿಗೆ ಶ್ರಮಿಸಿದ್ದಾರೆ ಅಂದರೆ ಶತಮಾನದಲ್ಲಿ ಬಂದ ಅತ್ಯಂತ ಒಳ್ಳೆಯ ಮತ್ತು ಅತ್ಯಂತ ಕೆಟ್ಟ ಪ್ರಬಂಧಗಳೂ ಇಲ್ಲಿ ಸೇರಿಕೊಂಡಿವೆ. ಹೀಗಾಗಿ ಇದು ಒಂದು ಶತಮಾನದ ಪ್ರಾತಿನಿಧಿಕ ಸಂಕಲನ!
ಆದರೆ ನಮ್ಮ ಪ್ರಬಂಧಕಾರರು ಎಷ್ಟು ಪ್ರತಿಭಾವಂತರೆಂದರೆ ಕಾಪಸೆಯವರು ಎಷ್ಟೇ ಪ್ರಯತ್ನಪಟ್ಟರೂ ಹತ್ತಾರು ಒಳ್ಳೆಯ ಪ್ರಬಂಧಗಳು ಇಲ್ಲಿ ಸೇರಿಕೊಂಡಿವೆ. ಅವರಿಗೆ ಬೇರೆ ಆಯ್ಕೆಯೇ ಇರಲಿಲ್ಲವೆಂದು ತೋರುತ್ತದೆ.