ಸತ್ಯವಾನನಿಗೆ ಸಾವಿತ್ರೀ.... ಸಾವಿತ್ರಿಗೂ ಅದು ಗೊತ್ತಿತ್ರೀ..
*ಜಾನಕಿ
ಈ ಎರಡೂ ಕತೆಗಳನ್ನು ಮುಂದಿಟ್ಟುಕೊಂಡು ಸುಮ್ಮನೆ ಯೋಚಿಸುತ್ತಾ ಕೂತರೆ ಕೆಲವು ಸಂಗತಿಗಳು ಶುಭ್ರವಾಗುತ್ತವೆ; ಶ್ರೀರಾಮನಿಗೆ ಸೀತೆಯನ್ನು ಹುಡುಕಿ ತರುವುದು ಅವನ ಶೌರ್ಯಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. ಅವನ ಮತ್ತು ಅವನ ಕಾಲದ ಗಂಡಸರ ಪ್ರಕಾರ ಅದು ಅವನ ಕರ್ತವ್ಯವೂ ಆಗಿತ್ತು. ಶ್ರೀರಾಮನ ವಿರಹವೇದನೆಯ ತೀವ್ರತೆಯಲ್ಲಿ ಕರ್ತವ್ಯದ ಕರೆಯೂ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ಶ್ರೀರಾಮ ಎಲ್ಲರಿಗೂ ರಮಣೀಯನಾಗಿರಲು ಯತ್ನಿಸಿದವನು. ತಾನು ಬಲ್ಲ ಸೀತೆಗಿಂತ ಒಬ್ಬ ಅಗಸನ ಮಾತೇ ಅವನಿಗೆ ಮುಖ್ಯವಾಗುತ್ತದೆ. ಎಲ್ಲ ಗಂಡಸರ ಹಾಗೆ ಅವನಿಗೂ ಸೀತೆ ಸುವರ್ಣಪುತ್ಥಳಿ. ಅಂದರೆ ಆಕೆ ಅಮೂಲ್ಯ, ಆದರೆ ಮೌನಿ. ಮತ್ತೊಬ್ಬ ಗಂಡಸಿಗೆ ಎಂದೂ ರಕ್ತಮಾಂಸಗಳಲ್ಲಿ ಒದಗಕೂಡದ ಸುಂದರಿ.
ಆದರೆ ಸಾವಿತ್ರಿಗೆ ಯಮನನ್ನು ಗೆದ್ದು ಸತ್ಯವಾನನನ್ನು ಹಿಂದಕ್ಕೆ ತರುವುದು ಕರ್ತವ್ಯವಾಗಿರಲಿಲ್ಲ. ಅವಳು ಹೆಚ್ಚೆಂದರೆ ಸತ್ಯವಾನನ ಜೊತೆ ಸಾಯಬಹುದಿತ್ತು. ಆಕೆಗೆ ತನ್ನ ಹೋರಾಟ ತನ್ನ ಶಕ್ತಿಯನ್ನೂ ಶೌರ್ಯವನ್ನೂ ಪ್ರದರ್ಶಿಸುವ ಒಂದು ಅವಕಾಶ ಆಗಿರಲಿಲ್ಲ. ಯಾಕೆಂದರೆ ಆಕೆ ಹೋರಾಟಕ್ಕೆ ನಿಂತದ್ದು ಯಮನ ಕೂಡೆ. ಯಮನಿಂದ ತನ್ನ ಗಂಡನನ್ನು ರಕ್ಷಿಸಿಕೊಳ್ಳುತ್ತೇನೆ ಎಂದು ಆಕೆ ಸಂಪೂರ್ಣವಾಗಿ ನಂಬಿರಲಿಕ್ಕೂ ಸಾಧ್ಯವಿಲ್ಲ. ಹೀಗಾಗಿ ಆಕೆಯದು ಒಂದು ಅರ್ಥದಲ್ಲಿ ಅಪನಂಬಿಕೆಯಿಂದ ಆರಂಭವಾದ ಪರಿಣಾಮದ ಸ್ಪಷ್ಟ ಕಲ್ಪನೆಯಿಲ್ಲದ ಹೋರಾಟ.
ಶ್ರೀರಾಮನ ಹೋರಾಟಕ್ಕೆ ಮತ್ತೊಂದು ರೀತಿಯ ಬೆಂಬಲವೂ ಇತ್ತು. ರಾವಣ ಸೀತೆಯನ್ನು ಕದ್ದುಕೊಂಡು ಹೋಗಿದ್ದು ಧರ್ಮಬಾಹಿರ. ಅದೊಂದು ಅನ್ಯಾಯದ ಕಾರ್ಯ. ಹೀಗಾಗಿ ರಾಮನ ಬೆಂಬಲಕ್ಕೆ ಇಡೀ ಜಗತ್ತೇ ನಿಲ್ಲುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಆತನಿಗೆ ತನ್ನದು ಧರ್ಮಯುದ್ಧ ಎಂಬ ನಂಬಿಕೆಯ ಬೆಂಬಲವೂ ಇತ್ತು. ಆದರೆ ಸಾವಿತ್ರಿಯದು ಹಾಗಲ್ಲ. ಯಮ ಆಕೆಯ ಗಂಡನ ಪ್ರಾಣವನ್ನು ಒಯ್ದದ್ದು ಅಪರಾಧವಲ್ಲ, ಅನ್ಯಾಯವಲ್ಲ. ಅದು ಅವನ ಕರ್ತವ್ಯಪಾಲನೆಯ ಒಂದು ಅಂಗ. ಹೀಗಾಗಿ ಸಾವಿತ್ರಿಗೆ ತನ್ನ ಗಂಡನನ್ನು ಮರಳಿ ಪಡೆಯುವಲ್ಲಿ ಯಾವ ಸಮರ್ಥನೆಯೂ ಲೋಕದ ಬೆಂಬಲವೂ ಇರುವುದಕ್ಕೆ ಸಾಧ್ಯವಿರಲಿಲ್ಲ.
ರಾಮನ ಅದೃಷ್ಟ ನೋಡಿ. ಅವನಿಗೆ ಎದುರಾಗಿದ್ದವನು ರಾವಣ. ಯಾವತ್ತಿದ್ದರೂ ಸಾಯುವವನು. ಆದರೆ ಸಾವಿತ್ರಿಯ ಶತ್ರುವೇ ಸಾವು. ಆತನಿಗೆ ಸಾವಿಲ್ಲ.
ಇವೆಲ್ಲಕ್ಕಿಂತ ಮುಖ್ಯವಾದ, ಸುಮ್ಮನೆ ನೋಡಿದಾಗ ತುಂಬ ಭಾವನಾತ್ಮಕ ಎನ್ನಿಸುವ ಒಂದು ಅಂಶವನ್ನು ಗಮನಿಸಿ;
ರಾಮನ ಹೋರಾಟ, ಗೆಲುವು ಎಲ್ಲವೂ ಸೀತೆಗೆ ತಿಳಿಯುತ್ತಿತ್ತು ಮತ್ತು ಸೀತೆಗೆ ಇದೆಲ್ಲ ತಿಳಿಯುತ್ತಿದೆ ಅನ್ನುವುದೇ ಆತನಲ್ಲಿ ಸ್ಫೂರ್ತಿಯನ್ನು ತುಂಬಬಹುದಾಗಿತ್ತು. ಆದರೆ ಸಾವಿತ್ರಿಯ ಹೋರಾಟವಾಗಲೀ, ಶ್ರಮವಾಗಲೀ ಸತ್ಯವಾನನಿಗೆ ತಿಳಿಯುವ ಸಾಧ್ಯತೆಯೇ ಇರಲಿಲ್ಲ. ನಿದ್ದೆಯಿಂದಲೋ ಒಂದು ಕ್ಷಣಿಕ ಮೂರ್ಛೆಯಿಂದಲೋ ಎದ್ದವನಂತೆ ಎದ್ದು ಕೂತ ಸತ್ಯವಾನನಿಗೆ ಸಾವಿತ್ರಿಯ ಗೆಲುವು ಒಂದು ಕತೆಯ ರೂಪದಲ್ಲಿ ವೇದ್ಯವಾಗಿರಬೇಕು.
ಹಾಗಿದ್ದರೂ ನಾವು ಸಾವಿತ್ರಿಯ ಕತೆಯನ್ನು ಒಂದೇ ಸಾಲಲ್ಲಿ ಕೇಳಿ ಮರೆಯುತ್ತೇವೆ. ಶ್ರೀರಾಮ ಫೊಟೋಸ್ಥಿತನಾಗುತ್ತಾನೆ.
***
ಜಗತ್ತಿನ ಎಲ್ಲ ಮಹಾಕೃತಿಗಳೂ ಹುಟ್ಟುವುದು ವಿರಹದಲ್ಲಿ ಅನ್ನುವುದನ್ನು ರಾಮಾಯಣ ತೋರಿಸಿದೆ. ಇರುವುದೆಲ್ಲವನ್ನು ಧರ್ಮರಕ್ಷಣೆಗಾಗಿ ತೊರೆಯುವುದು ಕೂಡ ಕಾವ್ಯಕ್ಕೆ ವಸ್ತುವಾಗಿದೆ. ಹಾಗೆ ನೋಡುತ್ತಾ ಹೋದರೆ ಪಾಂಡವರು ರಾಜ್ಯ ಕಳಕೊಂಡದ್ದರಿಂದ ಎದುರಿಸಬೇಕಾಗಿ ಬಂದ ಕಷ್ಟ ನಿಷ್ಠುರ ಕ್ಷೋಭೆಗಳೇ ಮಹಾಭಾರತಕ್ಕೆ ವಸ್ತು. ಹರಿಶ್ಚಂದ್ರ ರಾಜ್ಯ ಕಳಕೊಂಡು ಸ್ಮಶಾನವಾಸಿಯಾದದ್ದೇ ಹರಿಶ್ಚಂದ್ರ ಕಾವ್ಯದ ಜೀವಾಳ. ಸೀತೆ ರಾಮನನ್ನು ಕಳಕೊಂಡದ್ದೇ ರಾಮಾಯಣಕ್ಕೆ ಮೂಲ. ಯಾವತ್ತು ಕೂಡ ಗಳಿಸುವುದು ಮತ್ತು ಗೆಲ್ಲುವುದು ಯಾವ ಮಹಾಕಾವ್ಯದ ವಸ್ತುವೂ ಆಗಿಲ್ಲ. ಕೊನೆಯಲ್ಲಿ ಗೆಲುವು ಅವರದಾಗುತ್ತದೆ ನಿಜ. ಅದೇನಿದ್ದರೂ ಕೃತಿಗೊಂದು ಮಂಗಳ ಹಾಡುವುದಕ್ಕೆ ಒದಗಿಬರುವ ಸ್ಥಿತಿ. ಆ ಗೆಲುವಿನಿಂದಾಗಿ ಕೃತಿ ಗೆಲ್ಲುವುದಿಲ್ಲ. ಕೃತಿ ಆಪ್ತವಾಗುವುದು ಪಾತ್ರಗಳು ಅನುಭವಿಸಿದ ನೋವಿನಿಂದ. ರಾಮಾಯಣದ ಕೊನೆಯಲ್ಲಿ ರಾವಣ ಸತ್ತು ಸೀತೆ ಶ್ರೀರಾಮನನ್ನು ಸೇರುವ ದೃಶ್ಯ ಅಂತ ಖುಷಿಕೊಡುವುದಿಲ್ಲ. ಆದರೆ ಸೀತೆಯನ್ನು ರಾವಣ ಅಪಹರಿಸುವ ಸನ್ನಿವೇಶ ಕಣ್ಣೀರು ತರಿಸುತ್ತದೆ. ಗದಾಯುದ್ಧದಲ್ಲಿ ಭೀಮ ದುರ್ಯೋಧನನ ತೊಡೆ ಮುರಿಯುವ ಸನ್ನಿವೇಶಕ್ಕಿಂತ ದ್ರೌಪದಿಯ ವಸ್ತ್ರಾಪಹರಣವೇ ನೆನಪಲ್ಲಿ ಉಳಿಯುತ್ತದೆ. ವೀರರಸಕ್ಕಿಂತ ಕರುಣಾರಸಕ್ಕೇ ಮನಸ್ಸು ಮೊರೆಯಿಡುತ್ತದೆ.
ಇದು ಮಹಾಕಾವ್ಯಗಳ ಮಾತಾಯಿತು. ನಮ್ಮ ಕಾಲಕ್ಕೆ ಬಂದರೆ ಎಲ್ಲ ಒಳ್ಳೆಯ ಕೃತಿಗಳಿಗೆ ಮೂಲವಾಗಿರುವುದು ಅವಮಾನ. ಒಬ್ಬ ವ್ಯಕ್ತಿ ತಾನು ಎದುರಿಸಿದ ಅವಮಾನಕರ ಸ್ಥಿತಿಯನ್ನು ಮೀರುವುದಕ್ಕೆ ಯತ್ನಿಸುವುದೇ ನಮ್ಮ ಕಾಲದ ವಸ್ತು. ಆ ಅವಮಾನ ವೈಯಕ್ತಿಕ ನೆಲೆಯದ್ದಾಗಿರಬಹುದು, ರಾಷ್ಟ್ರೀಯ ನೆಲೆಯದ್ದಾಗಿರಬಹುದು, ಜಾತಿಯಿಂದಾಗಿ, ಧರ್ಮದಿಂದಾಗಿ, ಸಂಪತ್ತಿನಿಂದಾಗಿ ಅನುಭವಿಸಬೇಕಾಗಿ ಬಂದದ್ದಾಗಿರಬಹುದು. ಇದನ್ನು ಇನ್ನಷ್ಟು ಸರಳಗೊಳಿಸುವುದಾದರೆ ಬಹುತೇಕ ಕೃತಿಗಳ ವಸ್ತು ಸಮಾನತೆಯ ತುಡಿತ. ಮಹಾಕಾವ್ಯಗಳದ್ದು ರಾಜಮಹಾರಾಜರ ಕತೆ. ಅಲ್ಲಿ ಜನಜೀವನ ಹೇಗಿತ್ತು ಅನ್ನುವುದರ ಕುರಿತಾಗಲೀ ಒಬ್ಬ ಬಡ ರೈತನ ಕಷ್ಟಗಳೇನಿದ್ದವು ಎನ್ನುವ ಕುರಿತಾಗಲೀ ಪ್ರಸ್ತಾಪವೇ ಇರುವುದಿಲ್ಲ. ಶ್ರೀರಾಮನು ಪ್ರಜಾನುರಾಗಿಯಾಗಿದ್ದ ಎಂಬಲ್ಲಿಗೆ ಪ್ರಜೆಗಳ ಕತೆ ನಿಲ್ಲುತ್ತದೆ. ಲಾಲೂ ಪ್ರಸಾದನನ್ನು ಜನಪ್ರಿಯ ನಾಯಕ ಎಂದಷ್ಟೇ ಅದು ಸುಳ್ಳಾಗಿರಲಿಕ್ಕೂ ಸಾಧ್ಯ.
ಈ ಸಮಾನತೆಯ ತುಡಿತ ಒಂದು ಸಾಹಿತ್ಯ ಪ್ರಕಾರದ ಲಕ್ಷಣವಾಗಲೀ ಒಂದು ಚಳುವಳಿಯ ಗುಣವಾಗಲೀ ಅಲ್ಲ. ಇವತ್ತು ಸ್ತ್ರೀವಾದದ ಬಗ್ಗೆ ಘನವಾಗಿ ಚರ್ಚಿಸುವವರು ಕಾನೂರು ಹೆಗ್ಗಡಿತಿಯ ಸೀತೆಯ ಒಪ್ಪಿಗೆಯಲ್ಲೇ ಒಂದು ರೀತಿಯ ವಿರೋಧವೂ ವ್ಯಕ್ತವಾಗುವುದನ್ನು ಕಾಣಬಹುದು. ಸಂಸ್ಕಾರದ ಚಂದ್ರಿ ಕಂಡುಕೊಳ್ಳುವ ಸಮಾನತೆಯ ಸುಖವನ್ನು ಕುಸುಮಬಾಲೆಯ ಕುಸುಮ ಚನ್ನನೊಂದಿಗೆ ಕಂಡುಕೊಳ್ಳುವ ಸಮಾನತೆಗೆ ಹೋಲಿಸಬಹುದೆ?
ಸಾಹಿತ್ಯ ಅರ್ಥಪೂರ್ಣವಾಗುವುದು ಆಪ್ತವಾಗುವುದು ಹೋಲಿಕೆಗಳಿಂದಲೇ. ಅದನ್ನು ತುಲನಾತ್ಮಕ ಅಧ್ಯಯನ ಎಂದು ಕರೆದು ಕ್ಲಿಷ್ಟಗೊಳಿಸುವುದು ಬೇಡ. cooperative literature ಎಂಬ ಹೆಸರಿನಿಂದ ಕರೆದು ದೂರವಿಡುವುದೂ ಬೇಡ. ಹೋಲಿಕೆಗೆ ಪರಿಭಾಷೆಯೂ ಇರದಿರಲಿ. ಆದರೆ ಸುಮ್ಮನೆ ಎರಡು ಪಾತ್ರಗಳನ್ನು ಕಣ್ಣಮುಂದಿಟ್ಟುಕೊಂಡು ನೋಡಿ; ಶಿಕಾರಿಯ ನಾಗಪ್ಪನಿಗೂ ಅವಸ್ಥೆಯ ಕೃಷ್ಣಪ್ಪನಿಗೂ ಇರುವ ವ್ಯತ್ಯಾಸ ಮತ್ತು ಸಾಮ್ಯ ನಿಮಗೆ ತಿಳಿಯುತ್ತದೆ.
***
ಇಲ್ಲೆರಡು ಪದ್ಯಗಳಿವೆ. ಒಂದು ಅನಂತಮೂರ್ತಿಯವರ ರಾಜನ ಹೊಸವರುಷದ ಬೇಡಿಕೆಗಳು. ಇನ್ನೊಂದು ಗೋಪಾಲಕೃಷ್ಣ ಅಡಿಗರ ಪ್ರಾರ್ಥನೆ. ಅನಂತಮೂರ್ತಿಯವರು ಕವಿತೆ ಬರೆದದ್ದು ಜನವರಿ 1957ರಲ್ಲಿ. ಅಡಿಗರು ಅದೇ ವರುಷದ ಜೂನ್ನಲ್ಲಿ. ಎರಡರ ಒಂದಷ್ಟು ಸಾಲುಗಳನ್ನು ಓದಿ;
ಸ್ವಾಮಿ
ಕೆನೆಯುವುದಿಲ್ಲವೇಕಯ್ಯ ಅಗಸನ ಕತ್ತೆ ಕುದುರೆಯಂತೆಂದು ನಿನ್ನ ಸೃಷ್ಟಿಯ ಗುಟ್ಟ
ಕೆದಕಬಂದವನಲ್ಲ ; ಕೆಡಕು ಬಯಸಿದ್ದಿಲ್ಲ ;ಧೈರ್ಯವೂ ಇಲ್ಲ.
(ರಾಜನ ಹೊಸ ವರುಷದ ಬೇಡಿಕೆಗಳು)
ಪ್ರಭೂ,
ಪರಾಕುಪಂಪನ್ನೊತ್ತಿಯಾತ್ತಿ
ನಡಬಗ್ಗಿರುವ
ಬೊಗಳುಸನ್ನಿಯ
ಹೊಗಳುಭಟ
ಖಂಡಿತ
ಅಲ್ಲ
;
ಬಾಲವಾಡಿಸಿ
ಹೊಸೆದು
ಹೊಟ್ಟೆ
ಡೊಗ್ಗು
ಸಲಾಮು
ಬಗ್ಗಿ
ಮಿಡುಕುವ
ಸಂವಾತ
ಪೀಡಿತನಲ್ಲ.
(ಪ್ರಾರ್ಥನೆ)
ಉಂಡವರ ತೇಗು ಉಳಿದವರ ಕೊರಳ ಉರುಲಾಗದಿರಲಿ.
ಹೊಟ್ಟೆಯ ಮೇಲೆ ಹೊಡೆಯುವುದೆ ಕೆಲವರಿಗೆ ದೊಡ್ಡ ಗಮ್ಮತ್ತು ಆಗದಿದ್ದರಷ್ಟೇ ತೃಪ್ತಿ
ಸಂಪೂರ್ಣವಲ್ಲದಿದ್ದರೂ ಸರಿಯೆ ಡೊಂಕುಬಾಲವ ಸ್ವಲ್ಪವಾದರೂ ತಿದ್ದು ಅಥವಾ
ಯಾರೂ ತೆಗೆಯದ ಹಾಗೆ ನಳಿಕೆಯನು ಹಾಕು.
(ರಾಜನ ಹೊಸವರುಷದ ಬೇಡಿಕೆಗಳು)
ವಾಸಿಮಾಡಯ್ಯ
ಈ
ಜಲೋದರದ
ಭಾರದ
ಜಡ್ಡ
ಕಮರುತೇಗಿನ
ಕಪಿಲೆಹೊಡೆದು
ಹಗಲೂ
ಇರುಳು
ತೇಗಿಗೊಂದು
ಅಮೋಘ
ಸ್ಫೂರ್ತಿಗೀತವ
ಕರೆವ
ರೋಗದ
ಫಸಲನಾದಷ್ಟ
ಸವರೋ
ತಂದೆ.
(ಪ್ರಾರ್ಥನೆ)
ಜಡ್ಡು ಕಟ್ಟಿಸುವ ನಿರ್ವಿಕಾರದ ಮಂಕು ಬಡಿದಂಥ ಖೋಜರಾಜರು ನಾವು
ಬಯಕೆಯಾತುರವಿರದೆ
ತೊಡೆ ನಡುವೆ ಕೈಮುಗಿವ ದೈನ್ಯ ಭಂಗಿಗಳಲ್ಲಿ ಕೂತು ಕಾದಿಹೆವೆಂದು
ನೀನು ಕೇಳಿರಬಹುದು;
ದಯವಿಟ್ಟು ನಮ್ಮೆಡೆಗೆ ನಿರಿಯ ಚಿಮ್ಮಿಸಿ ನಡೆದು ಬರಲಷ್ಟು ಹುಡುಗಿಯರು.
(ರಾಜನ ಹೊಸ ವರುಷದ ಬೇಡಿಕೆಗಳು)
ಕಲಿಸು
ಬಾಗದೆ
ಸೆಟೆವುದನ್ನು,
ಬಾಗುವುದನ್ನು;
ಹೊತ್ತಿನ
ಮುಖಕ್ಕೆ
ಶಿಖೆ
ತಿವಿವುದನ್ನು.....
ಮೇಲು
ಮಾಳಿಗೆಯ
ಕಿರುಕೋಣೆ
ಮೈಮರೆವನ್ನು
ತಕ್ಕ
ತೊಡೆನಡುವೆ
ಧಾತುಸ್ಖಲನದೆಚ್ಚರವ..
ಕಳುಹಿಸಯ್ಯಾ
ಬಳಿಗೆ
ಕೃಪೆತಳೆದು
ಆಗಾಗ್ಗೆ
ವಾಸ್ತವದ
ಹೆಣ್ಣುಗಳ,
ನಿಜದ
ತೊಡೆಗಳ,
ಆತ್ಮ
ಹೊಕ್ಕು
ತಿಕ್ಕಲು
ತಕ್ಕ
ಸುಕ್ಕಿರದ
ಹೊಸ
ತೊಗಲುಗಳ.
(ಪ್ರಾರ್ಥನೆ)
ಇದರ ಹಿಂದೊಂದು ಪ್ರಸಂಗವಿದೆ. ರಾಜನ ಹೊಸ ವರ್ಷದ ಬೇಡಿಕೆಗಳು ಕವಿತೆಯನ್ನು ಬರೆದು ಅದನ್ನು ಓದಲೆಂದು ಅಡಿಗರಿಗೆ ಕೊಟ್ಟಿದ್ದರು. ಅದಾದ ಕೆಲವು ದಿನಗಳ ನಂತರ ಆ ಪದ್ಯಕ್ಕೆ ಪ್ರತಿಕ್ರಿಯೆಯಾಗಿ ಅಡಿಗರು ಪ್ರಾರ್ಥನೆ ಬರೆದು ಅನಂತಮೂರ್ತಿಯವರಿಗೆ ತೋರಿಸಿದರು. ಅನಂತಮೂರ್ತಿಯವರ ಕಾವ್ಯಭಾವವನ್ನೇ ಇಟ್ಟುಕೊಂಡು ಅದನ್ನು ಒಂದು ಪರಿಪೂರ್ಣ ಕವಿತೆಯನ್ನಾಗಿ ಮಾಡಿದ್ದರು ಅಡಿಗರು. ಅದನ್ನು ಓದಿದ ನಂತರ ಅನಂತಮೂರ್ತಿ ತಮ್ಮ ಕವಿತೆಯೇನೇನೂ ಅಲ್ಲ ಎಂದು ಅದನ್ನು ಹರಿದೆಸೆದರು ಎನ್ನುವ ಪ್ರಸಂಗವನ್ನು ಕತೆಗಾರ ಜಿ. ಎಸ್. ಸದಾಶಿವ ನೆನಪಿಸಿಕೊಳ್ಳುತ್ತಾರೆ.
ಅನಂತಮೂರ್ತಿಯವರ ಇಲ್ಲಿಯವರೆಗಿನ ಪದ್ಯಗಳು ಸಂಕಲನದಲ್ಲಿ ಮೇಲಿನ ಪದ್ಯ ಸಿಗುತ್ತದೆ. ಅಡಿಗರ ಪ್ರಾರ್ಥನೆಯಂತೂ ಲೋಕವಿಖ್ಯಾತ. ಎರಡನ್ನೂ ಹೋಲಿಸಿಕೊಂಡು ಒಂದೇ ಕಾಲಮಾನದಲ್ಲಿ ಬರೆದ ಎರಡು ಕವಿತೆಗಳು ಒಂದೇ ಭಾವಕ್ಕೆ ಕಟ್ಟುಬಿದ್ದಿದ್ದರೂ ಹೇಗೆ ವಿಸ್ತಾರಗೊಳ್ಳುತ್ತಾ ಹೋಗಬಹುದು ಅನ್ನುವುದನ್ನು ನೆನೆಯುವುದು ಎಂಥ ಖುಷಿಯ ಕೆಲಸ!
ಅಂದಹಾಗೆ ಇದರ ಜೊತೆಗೇ ಓದಿಕೊಳ್ಳಬಹುದಾದ ಮತ್ತೊಂದು ಪದ್ಯ ಥಾಮಸ್ ಗ್ರೇ ಬರೆದ Hymn to Adversity.
ಅಲ್ಲಿರುವ ನಾಲ್ಕೇ ನಾಲ್ಕು ಸಾಲುಗಳು ಹೀಗೆ;
Thy
philosophic
train
be
there
To
soften,
not
to
wound
my
heart.
The
generous
spark
extinct
receive,
Teach
me
to
love
and
to
forgive,
Exact
my
own
defects
to
scan,
What
others
are
to
feel,
and
know
myself
a
man.
(ಸ್ನೇಹಸೇತು : ಹಾಯ್ ಬೆಂಗಳೂರ್)