ನಾನೇಕೆ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ? : ಪ್ರಶಸ್ತಿ ಹಿಂದಿರುಗಿಸುತ್ತಿರುವವರ ಸ್ವಗತ
ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ, 'ನಿರ್ಭಿಡೆ'ಯ ಬರಹಗಾರರಿಗೆ ರಕ್ಷಣೆಯಿಲ್ಲ... ಅಂತೆಲ್ಲ ಹೇಳಿ ಹೆಸರು ಗಳಿಸಿರುವ, ಹೆಸರೇ ಕೇಳದಿರುವ ಅನೇಕ ಖ್ಯಾತಾನುಖ್ಯಾತ ಲೇಖಕರೆಲ್ಲ ಎಂದೋ ಪಡೆದಿದ್ದ 'ಸಾಹಿತ್ಯ ಅಕಾಡೆಮಿ ಪ್ರಶಸ್ತಿ'ಯನ್ನು 'ಸಮೂಹಸನ್ನಿ'ಗೆ ಒಳಗಾದವರಂತೆ ವಾಪಸ್ ಮಾಡುತ್ತಿದ್ದಾರೆ. ಒಬ್ಬರಿಗೆ ಈ ಪ್ರಕ್ರಿಯೆ ಪ್ರತಿಭಟನೆಯ ಅಸ್ತ್ರ ಅಂತ ಕಂಡುಬಂದರೆ, ಮತ್ತೊಬ್ಬರಿಗೆ ಸಖತ್ ತಮಾಷೆಯಾಗಿ, ಮಗದೊಬ್ಬರಿಗೆ ಸಿಕ್ಕಾಪಟ್ಟೆ ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ.
ಒಟ್ಟಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮಾನ ಮೂರು ಕಾಸಿಗೆ ಹರಾಜಾಗಿದೆ. ಈ ಕಾರಣದಿಂದಲಾದರೂ ಇಂಥವರಿಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತಾ ಅಂತ ಮೂಗಿನ ಮೇಲೆ ಬೆರಳಿಡುವಂತಾಗಿದೆ. ಇದೆಲ್ಲಾ. ಒತ್ತಟ್ಟಿಗಿರಲಿ. ಈಗ ಒಂದು ವೇಳೆ ಪ್ರಶಸ್ತಿ ನೀಡುತ್ತಿರುವವರೆಲ್ಲ ತಾವೇಕೆ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇವೆ ಎಂದು ಬಹಿರಂಗವಾಗಿ ಹೇಳಿಕೆ ನೀಡದೆ, ಸ್ವಗತದಲ್ಲಿ ಹೇಳಿಕೊಂಡರೆ ಹೇಗಿರುತ್ತದೆ.... ಎಂಬ ಕಾಲ್ಪನಿಕ, ಹಾಸ್ಯಭರಿತ ಡೈಲಾಗುಗಳು ಇಲ್ಲಿವೆ. ಸುಮ್ಕೆ ಓದಿ ಎಂಜಾಯ್ ಮಾಡಿ.
1. ನನಗೂ ಪ್ರಶಸ್ತಿ ಬಂದಿತ್ತು ಎಂದು ಈಗಲಾದರೂ ಒಂದಿಷ್ಟು ಜನರಿಗೆ ಗೊತ್ತಾಗಲಿ.
2. "ಘಟಂ ಭಿಂದ್ಯಾತ್ ಪಟಂ ಛಿಂದ್ಯಾತ್..." ಇದ್ದಂತೆ ನನ್ನದು "ಪ್ರಶಸ್ತೀಂ ರಿಟರ್ನ್ಯಾತ್". ಅಂತೂ ಯೇನಕೇನ ಪ್ರಕಾರೇಣ ನಾನೂ ಪ್ರಸಿದ್ಧನಾಗಬೇಕು.
3. ಈ ಪ್ರಶಸ್ತಿ ಸ್ವಲ್ಪ ಚೀಪ್ ಅನಿಸತೊಡಗಿದೆ. ಇದಕ್ಕಿಂತ ಹೆಚ್ಚಿನದು ನನ್ನದೀಗ ಗುರಿ.
4. ಗ್ಯಾಸ್ ಸಬ್ಸಿಡಿ ಹಿಂದಿರುಗಿಸಲಿಕ್ಕೆ ಹೇಳಿದ್ದು. ನಾನು ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ. ನನ್ನ ಪ್ರಶಸ್ತಿಯೂ 'ಗ್ಯಾಸ್' ಅಲ್ಲದೆ ಬೇರೇನಲ್ಲ ಎಂದು ಜ್ಞಾನೋದಯ ಆಗಿದೆ.
5. ಮುಂದಿನ ತಿಂಗಳು ಮನೆ ಶಿಫ್ಟ್ ಮಾಡುತ್ತಿದ್ದೇನೆ. ಸಾಮಾನು ಸರಂಜಾಮುಗಳನ್ನು ಸಾಧ್ಯವಾದಷ್ಟೂ ಡಿಸ್ಪೋಸ್ ಮಾಡಬೇಕೆಂದಿದ್ದೇನೆ.
6. ನನ್ನ ಮನೆಗೆ ಕನ್ನ ಹಾಕುವ ಕಳ್ಳ ಒಂದುವೇಳೆ ಪ್ರಶಸ್ತಿಯನ್ನು ನೋಡಿದರೆ ಸಿಟ್ಟಿನಿಂದ ಕೊಂದೇಬಿಟ್ಟಾನು (ತನ್ನನ್ನು ತಾನೇ) ಆಮೇಲೆ, ಕೊಲೆ ಆರೋಪ ಇವೆಲ್ಲ ಯಾಕೆ?
7. ಪ್ರಶಸ್ತಿ ಫಲಕದ ಆಕಾರ ಮತ್ತು ನಮ್ಮನೆಯ ಶೋಕೇಸ್ನ ವಾಸ್ತು - ಇವೆರಡೂ ಪರಸ್ಪರ ಹೊಂದುತ್ತಿಲ್ಲ. ಫಲಕದೊಳಗೆ ಮಾಟಮಂತ್ರವೂ ಇದೆಯೆಂದು ಟಿವಿ ಜ್ಯೋತಿಷಿ ಹೇಳಿದಂದಿನಿಂದ ನನಗೆ ನಿದ್ದೆ ಬರುತ್ತಿಲ್ಲ.
8. ಮಾಟಮಂತ್ರ ಇದೆಯೋ ಇಲ್ಲವೋ ಗೊತ್ತಿಲ್ಲ. ಮೊನ್ನೆ ನನ್ನ ಹೆಂಡತಿ ಪ್ರಶಸ್ತಿಫಲಕದಿಂದಲೇ ನನ್ನ ತಲೆಗೆ ಮೊಟಕಿದ್ದರಿಂದ ಮೂಡಿದ ಗುಳ್ಳೆ ಇನ್ನೂ ನೋಯುತ್ತಿದೆ.
9. ಪ್ರಶಸ್ತಿ ಹೊಡ್ಕೊಂಡದ್ದೊಂದೇ (ಈಗ ಪ್ರಶಸ್ತಿಯಿಂದ ಹೊಡೆಸ್ಕೊಂಡದ್ದೇ) ನನ್ನ ಜೀವಮಾನದ ಸಾಧನೆ. ನನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ್ದೇನೆ ಎಂದು ಈಗ ತೋರಿಸಲಿಕ್ಕೆ ನನ್ನಲ್ಲಿ ಬೇರೇನೂ ಇಲ್ಲ.
10. ಮೋದಿಯನ್ನು ದೂಷಿಸದೇ ನಾನಿನ್ನು ಚಲಾವಣೆಯಲ್ಲಿರುವುದು ಸಾಧ್ಯವೇ ಇಲ್ಲ. ಇದೊಂದೇ ನನಗುಳಿದಿರುವ ದಾರಿ.
***
"ಬೇರೆಯವರು
ಹಿಂದಿರುಗಿಸಿದ
ಪ್ರಶಸ್ತಿಗಳನ್ನೂ
ನನಗೇ
ಕೊಟ್ಟುಬಿಡಿ."
-
ಭಗವಾನ್
ಉವಾಚ.
[ಕೃಪೆ
:
ಶ್ರೀವತ್ಸ
ಜೋಶಿ
ಫೇಸ್
ಬುಕ್
ಪುಟ]