ರಾಹುಲ್ ಟ್ವೀಟ್ : ಒಂದು ವೇಳೆ ಬಿಜೆಪಿ ಸಿನೆಮಾ ನಿರ್ಮಿಸಿದ್ದರೆ!
ಎರಡು ದಿನಗಳ ವಾರಾಂತ್ಯದ ಜೊತೆಗೆ ಸೋಮವಾರ ಕ್ರಿಸ್ಮಸ್ ರಜಾ ಬೇರೆ! ಇಡೀ ವರ್ಷ ದುಡಿದ ದೇಶದ ಹಲವಾರು ವರ್ಷಾಂತ್ಯದ ಮಜಾದಲ್ಲಿ ಮುಳುಗಿದ್ದರೆ, ಟ್ವಿಟ್ಟರ್ ನಲ್ಲಿ ಸುದ್ದಿಸ್ವಾರಸ್ಯದಲ್ಲಿ ಮುಳುಗಿರುವ ಜನರು ಮತ್ತೊಂದು ರೀತಿಯ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ರಾಹುಲ್ ವರ್ಚಸ್ಸು ವೃದ್ಧಿಯ ಹಿಂದಿನ ಗುಟ್ಟು ರಮ್ಯಾ!
ರಾಜಕೀಯವೆಂದರೇನೇ ಭರ್ತಿ ಮನರಂಜನೆ, ಅದರೊಂದಿಗೆ ಸಿನೆಮಾ ರಂಜನೆ ಸೇರಿಸಿದರಂತೂ, ಬಿಸಿಬಿಸಿ ಊಟದ ಜೊತೆಗೆ ಸಾಗರದ ಭಟ್ಟರು ತಯಾರಿಸಿದ ಅಪ್ಪೆಮಿಡಿ ಉಪ್ಪಿನಕಾಯಿ ಸವಿದಂತೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹಾಸ್ಯ ಪ್ರಜ್ಞೆ ಬೆಳೆಸಿಕೊಂಡಿರುವ ರಾಹುಲ್ ಗಾಂಧಿಯವರು ಮತ್ತೊಂದು ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿದ್ದಾರೆ. ಅದೂ ಯಾರ ವಿರುದ್ಧ? ಮತ್ಯಾರು, ನರೇಂದ್ರ ಮೋದಿ ವಿರುದ್ಧ!
"ಹಾಸ್ಯ: ರಾಹುಲ್ ಗಾಂಧಿ ಸನ್ಯಾಸಿಯಾದರೆ ಏನಾದೀತು?!"
ಗುಜರಾತಿನಲ್ಲಿ 77 ಸ್ಥಾನ ಗಳಿಸಿ ಸೋತ ನಂತರ ಮೊದಲ ಬಾರಿಗೆ ಗುಜರಾತಿನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿಯವರು, ಅದಕ್ಕೂ ಮೊದಲು ಟ್ವಿಟ್ಟರಿನಲ್ಲಿ ವ್ಯಂಗ್ಯ ಭರಿತ ನಗೆಯುಕ್ಕಿಸುವ ಟ್ವೀಟನ್ನು ಮಾಡಿದ್ದಾರೆ. ಅದಕ್ಕೆ ಮತ್ತಷ್ಟು ಟ್ವೀಟುಗಳ ಟ್ವೀಟುಗಳನ್ನು ಸೇರಿಸಿರುವುದು, ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಹೆಡ್ ರಮ್ಯಾ ಅವರು. ಒಟ್ಟಿನಲ್ಲಿ ನರೇಂದ್ರ ಮೋದಿಯವರ ಸುಳ್ಳಿನ ಸರಮಾಲೆಗಳ ಬಗ್ಗೆ ಭರ್ತಿ ಚರ್ಚೆ ನಡೆಯುತ್ತಿದೆ.
|
ಬಿಜೆಪಿ ಒಂದು ವೇಳೆ ಸಿನೆಮಾ ನಿರ್ಮಿಸಿದರೆ
ಒಂದು ವೇಳೆ ಬಿಜೆಪಿ ಸಿನೆಮಾ ನಿರ್ಮಾಣ ಮಾಡಿದರೆ, ಆ ಚಿತ್ರದ ಹೆಸರು 'ಬಿಜೆಪಿ ಲೈ ಹಾರ್ಡ್' ಎಂದು ಹೆಸರಿಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 1988ರಲ್ಲಿ ವಿಶ್ವದಾದ್ಯಂತ ಧೂಳೆಬ್ಬಿಸಿದ್ದ ಹಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರ, ಬ್ರೂಸ್ ವಿಲ್ಲಿಸ್ ನಟಿಸಿದ್ದ 'ಡೈಹಾರ್ಡ್' (ಇದು ಕನ್ನಡದಲ್ಲಿ ನಿಷ್ಕರ್ಷವಾಗಿ ರಿಮೇಕ್ ಆಗಿತ್ತು) ಚಿತ್ರಕ್ಕೆ ಹೋಲಿಸಿ ತಮಾಷೆ ಮಾಡಿದ್ದಾರೆ ರಾಹುಲ್. ಇನ್ನೆಷ್ಟು ಸುಳ್ಳು ಹೇಳುತ್ತೀರಿ ಬಿಜೆಪಿಯವರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್ ಅವರು ಸಿನೆಮಾ ತೆಗೆದರೆ ಅದಕ್ಕೆ ಲಾಫ್ ಹಾರ್ಡ್ ಎಂದು ತಿರುಗುಬಾಣ ಒಬ್ಬರು ಬಿಟ್ಟಿದ್ದಾರೆ.
ರಮ್ಯಾ ಅವರು ಕಟ್ಟಿದ ಟ್ವೀಟುಗಳ ಸರಮಾಲೆ
ನಾನ್ಯಾಕೆ ಸುಮ್ಮನಿರಲಿ ಎಂದು ಮಂಡ್ಯದ ಮಾಜಿ ಸಂಸದೆ, ಕನ್ನಡ ನಟಿ ರಮ್ಯಾ ಅವರು, ಭಾರತೀಯ ಜನತಾ ಪಕ್ಷದವರು ಮಾಡಿರುವ ವಾಗ್ದಾನಗಳು ಮತ್ತು ಇಂದಿನ ವಸ್ತುಸ್ಥಿತಿಯೇನಿದೆ ಎಂದು ಟ್ವೀಟುಗಳ ಸರಮಾಲೆಯನ್ನೇ ಟ್ವಿಟ್ಟರಿನಲ್ಲಿ ಕಟ್ಟಿದ್ದಾರೆ. ಅವುಗಳ ಸತ್ಯಾಸತ್ಯತೆಯ ಪರಾಮರ್ಶೆ ಬಿಜೆಪಿಗೆ ಮತ್ತು ದೇಶದ ಮಹಾಜನತೆಗೆ ಬಿಟ್ಟಿದ್ದು.
ಲೋಕಪಾಲ್ ಬಿಲ್ ತರುವುದಾಗಿ ಹೇಳಿದ್ದ ಬಿಜೆಪಿ
ಬಿಜೆಪಿಯ ಮೊದಲ ವಾಗ್ದಾನ : ಭ್ರಷ್ಟಾಚಾರದ ವಿರುದ್ಧ ಹೋರಾಡಲು ಅತ್ಯಂತ ಪರಿಣಾಮಕಾರಿಯಾದ ಲೋಕಪಾಲ್ ಬಿಲ್ ತರುವುದಾಗಿ ಬಿಜೆಪಿ ಹೇಳಿತ್ತು. ಆದರೆ, ಆಗಿದ್ದು : ಮೂರು ವರ್ಷಗಳು ಕಳೆದಿದ್ದರೂ ಇನ್ನೂ ಏನೂ ಆಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ರಮ್ಯಾ. ಇದಕ್ಕೆ ಪ್ರತಿಯಾಗಿ ಹಲವಾರು ಟ್ರೋಲ್ ಗಳು ಸುಳಿದಾಡುತ್ತಿವೆ, ವಸ್ತುಸ್ಥಿತಿಗೆ ಕನ್ನಡಿ ಹಿಡಿದಿವೆ, ಮನರಂಜನೆಯನ್ನೂ ನೀಡುತ್ತಿವೆ.
ಹಳ್ಳಿಗಳಲ್ಲಿ ಕರೆಂಟ್ ಇಲ್ಲದಂತೆ ಮಾಡಿದ್ದು ಯಾರು?
ಬಿಜೆಪಿಯ ಎರಡನೇ ವಾಗ್ದಾನ : ದೇಶದ ಹಳ್ಳಿಗಳಲ್ಲಿ ಶೇ.100ರಷ್ಟು ವಿದ್ಯುತ್ ಬಲ್ಬ್ ಉರಿಯುವಂತೆ ಮಾಡುತ್ತೇವೆ. ಆಗಿದ್ದು : 2015ರಲ್ಲಿ ಗುರುತಿಸಲಾಗಿದ್ದ 18,452 ಹಳ್ಳಿಗಳಲ್ಲಿ ಶೇ.8ರಷ್ಟು ಹಳ್ಳಿಗಳಲ್ಲಿ ಮಾತ್ರ ಬಲ್ಬ್ ಉರಿಯುತ್ತಿದೆ. ಜನರು ಬಿಡ್ತಾರಾ? ಆ ಹದಿನೆಂಟು ಸಾವಿರ ಹಳ್ಳಿಗಳಲ್ಲಿ ಕರೆಂಟ್ ಇಲ್ಲದಂತೆ ಬಿಟ್ಟ ಸರಕಾರ ಯಾವುದು ಎಂದು ರಮ್ಯಾ ಅವರಿಗೇ ಮರುಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರ ಕೊಡುವ ಗೋಜಿಗೆ ರಮ್ಯಾ ಹೋಗಿಲ್ಲ.