ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟ್ಗೋಸಿ ವೀರ ವರ್ಸಸ್ ಗುಲ್ಡುಫಾದರ್ ಪ್ರಸಂಗ

By * ಪಕ್ಷಿರಾಜ ಟೊಂಕಬಾಜ, ಬೆಂಗಳೂರು
|
Google Oneindia Kannada News

Humor in journalism
ನಮ್ಮ ಸಂಪಾದಕ್ರು ಶಾಮಣ್ಣ ಎಲ್ಲರನ್ನು ತಮ್ಮ ಚೇಂಬರ್‌ಗೆ ಕರ್ದ್ರು. ನಾವು ಖುಷಿಲೇ ಕುರಿಗಳ ತರ ಹೋಗಿ ಅವರ ಮುಂದೆ ನಿಂತ್ಕೊಂಡ್ವಿ. ಒಳೊಳಗೆ ನಮಗೆಲ್ಲ ಏನೇನೋ ಆಸೆ... ಏಪ್ರಿಲ್ ತಿಂಗಳು ಬೇರೆ... ಏನಾರ ಸಂಬಳ ಜಾಸ್ತಿ ಮಾಡ್ತಾರ ಅಂತ ಸಣ್ಣ ಅಸೆ. ಆದ್ರೆ ಶಾಮಣ್ಣ ಮಾತ್ರ ಶಿಬು ಮಾಮನ ಸ್ಟೈಲಲ್ಲೆ ಮುಖ ಮಾಡಿಕೊಂಡಿದ್ರು. ಅವರ ಮುಖ ನೋಡಿ ಬಳ್ಳಾರಿಯಲ್ಲಿ ಬಿದ್ದ ಸಣ್ಣ ಮಳೆ ತರ ನನ್ನ ಆಸೆನೂ ಅಂಗೆ ಒಣಗೋಯ್ತು.

ಶಾಮಣ್ಣ ಗಂಟಲು ಕೆಕ್ಕರಿಸಿ... 'ನೋಡ್ರಪ್ಪ... ನಮ್ ಕರುನಾಡಿಗೆ ಶ್ಯಾನೆ ಕಷ್ಟ ಬಂದೈತೆ. ಅದೇನೂ ಪುಟಗೋಸಿ ವೀರ ಸೋರ್ಗೊಗಿರೋ ಅಂಗಿ, ಗುಲ್ಡು ಫಾದರ್ ಮತ್ತೆ ಬ್ಲಡ್ ಬಾಂಡ್ ಅಂತ ಏನೇನೂ ಸಿನಿಮಾ ತೆರೆಗೆ ಒಟ್ಟಿಗೆ ಬರ್ತೈತಂತೆ. ಇಂಗಾದ್ರೆ ನಮ್ಮ ಮಹಾ ಜನತೆಗೆ ಶ್ಯಾನೆ ಕಷ್ಟ ಆಯ್ತದೆ. ಯಾವುದು ಅಂತ ನೋಡೋದು, ಯಾವುದು ಅಂತ ಬಿಡೋದು. ಅದಕ್ಕೆ ನೀವೆಲ್ಲ ಹೋಗಿ ಸುವರ್ಣ ಕರ್ನಾಟಕದ ಮಹಾಜನರ ಅಭಿಪ್ರಾಯ ಕೇಳ್ಕೊಂಡ್ ಬರ್ರಿ" ಅಂದ್ರು ಮಿಲ್ಟ್ರಿ ಕಮ್ಯಾಂಡರ್ ತರ.

ನಾನು ಕಿಸ್ಸಕ್ ಅಂತ ನಕ್ಕು 'ಸಾ... ಅದು ಅಂಗಲ್ಲ. ಸಿನೆಮಾ ಹೆಸರು... ' ಅಂತ ರಾಗ ಎಳ್ದೆ. ಅವ್ರು ಮೂಗಿನ ಮೇಲಿಂದ ಕನ್ನಡಕ ಮೇಲೆ ಏರಿಸಿದರು. ನಾನು ಪ್ರಸಾದ್ ಕಡೆ ನೋಡ್ದೆ. ಅವ್ನು ಕಿಲಾಡಿ... ಗಂಭೀರವಾಗಿದ್ದ.... ನಮ್ಮ ಶಾಮಣ್ಣ ಮೂಗಿನ ಮೇಲಿಂದ ಕನ್ನಡಕ ಮೇಲೆ ಏರ್ಸಿದ್ರು ಅಂದ್ರೆ ಶ್ಯಾನೆ ಕ್ವಾಪ ಬಂದದೆ ಅಂತನೆ ಅರ್ಥ.

ನಾನು ಮತ್ತು ಪ್ರಸಾದ ಮಧ್ಯರಾತ್ರಿವರಿಗೂ ಎಣ್ಣೆ ಹೊಡ್ಕೊಂಡು (ನಮ್ಮ ಪ್ರಕಾರ ಇದೇ 'Burning the midnight oil')ಸಂಶೋಧನೆ ಮಾಡಿ ಕಂಡು ಹಿಡಿದಿರದು ಏನಂದ್ರೆ... ನಮ್ಮ ಶಾಮಣ್ಣಂಗೆ ಕ್ವಾಪ ಬಂದ್ರೆ ಮೂಗಿನ ಮೇಲಿಂದ ಕನ್ನಡಕ ಮೇಲೆ ಏರ್ಸ್ತಾರೆ. ಶ್ಯಾನೆ ಖುಷಿಯಾದ್ರೆ ಗಡ್ಡ ನೀವ್ಕೋತಾರೆ.... ಅದೇನೋ ಹೋಗ್ಲಿ ಬಿಡಿ...

ನಾನು ಕೂಡ್ಲೇ ಹುಷಾರಾಗಿ 'ಸಾ... ನಿಮ್ಮ ಕಾಮಿಡಿ ಸೆನ್ಸು ಸೂಪರ್ ಸಾ' ಅಂತ ಹೊಗಳಿದೆ. ನಾ ಅಂದ್ಕೊಂಡಂಗೆ ಶಾಮಣ್ಣ ಗಡ್ಡ ನೀವ್ಕೊಂಡ್ರು... ಸದ್ಯ ನಾ ಬದುಕಿದೆ... ಮತ್ತೆ ಪ್ರಸಾದ್ ಕಡೆ ನೋಡ್ದೆ... ಕಚಗುಳಿ ಕೊಟ್ರು ನಗಕಿಲ್ಲ ಅಂಬಂಗೆ ನಿಂತಿದ್ದ... ನಾನೇ ಎಬ್ಬಂಕ ಸುಮ್ನೆ ಕಿಸಕ್ ಅಂದು ಎಡವಟ್ಟು ಮಾಡ್ಕೊತೀನಿ.

ಶಾಮಣ್ಣ ಮತ್ತೆ 'ಹೋಗಿ... ಹೋಗಿ... ಮಹಾಜನತೆ ಅಭಿಪ್ರಾಯ ತಿಳ್ಕೊಂಡು ಬನ್ನಿ' ಅಂತ ಅಪ್ಪಣೆ ಕೊಟ್ರು. ಜೀವನದಲ್ಲಿ ಯಾವುದು ಶಾಶ್ವತ ಅಲ್ಲ. ಏಪ್ರಿಲ್ ಬರ್ತದೆ, ಹೋಯ್ತದೆ ಆದ್ರೆ ನಮ್ಮ ಸಂಬಳ ಮಾತ್ರ ಶಾಶ್ವತ ಅಂತ. ನಾಣಿ ಕಂಪನಿ ಎಂಪ್ಲೋಯೀ ತರ ಗೊಣಗಿಕೊಳ್ಳುತಾ ಅಭಿಪ್ರಾಯ ಸಂಗ್ರಹಕ್ಕೆ ಹೊರಟೆ.

***
ಹೋಗ್ತಾ ಹೋಗ್ತಾ ನಮ್ ಲಾಲಬಾಗ್ ಹತ್ರ ಒಬ್ರು ಲೇಡಿ ಸಿಕ್ರು. ಅಭಿಪ್ರಾಯ ಸಂಗ್ರಹಕ್ಕೆ ಒಳ್ಳೆ ಬೋಣಿ ಆಯ್ತದೆ ಎಂದು, 'ಅಕ್ಕ ನಮಸ್ಕಾರ' ಅಂದೆ. ಯಾಕೋ ಲೇಡಿ ಗುರ್ರ್ ಅಂತು. 'ಏನ್ರಿ ನಾನು ನಿಮಗೆ ಅಕ್ಕನ ತರ ಕಾಣಸ್ತಿನಾ? ನನಗಿನ್ನು ನಿಮ್ಮ ತಂಗಿ ವಯಸ್ಸು' ಅಂತು ಸ್ವಲ್ಪ ವೈಯ್ಯಾರದಲ್ಲಿ. ಮೊನ್ನೆ ಹಳೆ ಯಾಕ್ಟ್ರು ಸೃತಿಗೆ ಎಳೆ ಮುದುಕಿ ಅಂತ ಕರೆದು ಸಂಪಾದಕನೊಬ್ಬ ಮಾಡಿಕೊಂಡ ಫಜೀತಿ ನೆನಪಾಯಿತು. ಯಾಕೋ ಟೇಮೇ ಸರಿ ಇಲ್ಲ ಅನಿಸಿದ್ರು, ಸುಧಾರಿಸಿಕೊಂಡು.. ಕಿಲಾಡಿ ತರ 'ಕ್ಷಮ್ಸವ್ವ.. ಸ್ವಲ್ಪ ಕಣ್ಣು ಮಂದ... ಕನ್ನಡಕ ಮರ್ತು ಬಿಟ್ಟೆ...ತಪ್ಪಾಯಿತು' ಅಂದೆ.

ಅಯ್ಯೋ ಅನಿಸ್ತೆನೂ 'ಏನ್ ಬೇಕು?' ಅಂತು, ಲೇಡಿ ಸ್ವಲ್ಪ ಕೂಲ್ ಆಯ್ತು. ನಾನು ಶಿವಣ್ಣ ಸ್ಟೈಲಲ್ಲಿ 'ತಂಗ್ಯವ್ವ, ಉಪೇಂದ್ರಂದು ಎಲ್ಡು ಸಿನಿಮಾ ಒಟ್ಟಿಗೆ ಬರ್ತದೆ 'ಪುಟಗೋಸಿ ವೀರ ಸೋರ್ಗೊಗಿರೋ ಅಂಗಿ ಮತ್ತೆ ಗುಲ್ಡು ಫಾದರ್' ಅಂತ. ಸಿನಿಮಾ ರಿಲೀಜು ಮಾಡಕ್ಕೆ ನಾ ಮುಂದು... ತಾ ಮುಂದು... ಅಂತ ನಿರ್ಮಾಪಕರು ಮುಗಿ ಬಿದ್ದವರೇ.... ಎಲ್ಡು ಒಟ್ಟಿಗೆ ಬಂದ್ರೆ ಏನ್ ಮಾಡ್ತಿರಾ? ಯಾವ್ದು ನೋಡ್ತೀರಾ? ಅದಕ್ಕೆ ನಿಮ್ಮ ಅಭಿಪ್ರಾಯ ಏನು' ಅಂತ ಟಿ.ವಿ.ಯೋರ್ತರ ಹಲ್ಲು ಬಿಟ್ಟೆ.

ಅದಕ್ಕೆ ಆಯಮ್ಮ 'ಅಯ್ಯೋ ಉಪೇಂದ್ರ-ನ ಸಿನಿಮಾ ನೋಡಿದ್ರೆ ಹೆಣ್ ಮಕ್ಕಳು ಆರು ತಿಂಗಳು ಸುಧಾರ್ಸಿಕೋ ಬೇಕು... ಏನ್ನು ಎರಡು ಒಟ್ಟಿಗೆ ಬಂದ್ರೆ ದೇವ್ರೇ ಗತಿ... ಕನಿಷ್ಠ ಆರು ತಿಂಗಳು ಗ್ಯಾಪು ಬೇಕು' ಅಂತು.

'ಅಲ್ರವ್ವ ಅದೇನೂ ಬಸಿರು ಬಾಣಂತನನೇ... ಆರು ತಿಂಗಳು ಸುಧಾರ್ಸಿಕೊಳ್ಳಕ್ಕೆ... ಮೀಟರ್ ಬಡ್ಡಿ ಕೊಟ್ಟು ಸಿನಿಮಾ ಮಾಡಿರೋರಿಗೆ, ನಿರ್ಮಾಪಕರಿಗೆ ಅಂದ್ರೆ ಅನ್ನದಾತರಿಗೆ ಲಾಸ್ ಆಗಕಿಲ್ವ' ಅಂದೆ. ಈಗಿನ ಕಾಲದಲ್ಲಿ ಅನ್ನದಾತರು ಅಂದ್ರೆ ಸಿನಿಮಾ ನಿರ್ಮಾಪಕರು ಅಷ್ಟೆಯಾ. ರೈತರು ಅಲ್ಲ.

'ಅಂಗಂದ್ರೆ ನಾವ್ ಎಲ್ಡು ನೋಡಕಿಲ್ಲ' ಅಂತ ಹೇಳಿ ಬುರ್ರ್ ಅಂತ ಹೊಂಟೋಯ್ತು. ಯಾಕೋ ಈ 'ಗೌರಮ್ಮ' ಉಪೇಂದ್ರ ಸಿನೆಮಾ ನೋಡಿದ್ದು ಇನ್ನೂ ಮರ್ತಿಲ್ಲ ಅನ್ಸತು. ಅಂಗೆ ನಮ್ ಹೆಣ್ ಮಕ್ಳೆ ಸ್ಟ್ರಾಂಗು ಗುರು... ಅಂತ ಭಟ್ರು ಹೇಳಿದ್ದು ಸರಿ ಅನ್ಸತು.

English summary
Three Kannada movies were fighting with each other for early release when whole Karnataka was reeling under drought. Our editor asked to get opinion of movie buffs on film releases. What happened next? Humor by Pakshiraja Tonkabaja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X