ಅಪ'ಶಕುನಿ'ಗಳು!
ಸರಿಯಾಗಿ ಐದು ನಿಮಿಷವಾದ ಮೇಲೆ, ಹೊಸ ಹುರುಪಿನಿಂದ ಸರಿಯಾಗಿ ಬಲದ ಕಡೆಯಿಂದ ಹಾಸಿಗೆ ಬಿಟ್ಟೆದ್ದೆ. ಏಳುತ್ತಾ ಇನ್ನೊಂದು ಎಡವಟ್ಟೂ ಮಾಡಿದ್ದೆ. ಕೆಳಗೆ ಹಾಸಿಗೆ ಮೇಲೆ ಮಲಗಿದ್ದ ನನ್ನ ಮಗನ ಕೈ ತುಳಿದಿದ್ದೆ. ಸಿಹಿ ನಿದ್ದೆಯಲ್ಲಿದ್ದ ಅವನು "ಹೋ" ಎಂದು ಅಳಲು ಶುರು ಮಾಡಿದ. ಇನ್ನೊಂದು ಅಪಶಕುನವಾಯ್ತಲ್ಲಪ್ಪ! ಬೆಳಗ್ಗೆ ಏಳ್ತಾ ಮಗು ಅಳ್ತಿರೋ ಸದ್ದು ಕೇಳಿ ಎದ್ದರೆ, ದಿನದಲ್ಲಿ ಯಾವ ಕೆಲಸವೂ ನೆಟ್ಟಗೆ ಆಗೋಲ್ಲ ಅಂತ ಅಜ್ಜಿ ಹೇಳಿದ್ದು ನೆನಪಾಯ್ತು. ಮಗನನ್ನು ಸಮಾಧಾನ ಮಾಡುವಷ್ಟರಲ್ಲಿ, ಅಡಿಗೆ ಮನೆಯಿಂದಲೇ "ಏನಾಯ್ತ್ರಿ ಮಗೂಗೆ" ಅಂತ ಧಾವಿಸಿ ಬಂದೇ ಬಿಟ್ಟಳು ಮಡದಿ, ಕೈಯಲ್ಲಿ ವಿಷ್ಣು ಸಹಸ್ರನಾಮದ ಪುಸ್ತಕ ಹಿಡಿದು. ಕೆಕ್ಕರಿಸಿ ನನ್ನತ್ತಲೇ ನೊಡಿದಳು, ನಾನೇ ಅಪರಾಧಿ ಎನ್ನುವಂತೆ. "ನಿದ್ದೆ ಮಾಡುತ್ತಿದ್ದ ಮಗು ಯಾಕೆ ಅಳ್ತಿದೆ? ನಿಮ್ದೇ ಏನಾದ್ರು ಕಿತಾಪತಿ ಅನ್ಸುತ್ತೆ". ನನ್ನನ್ನೂ, ನನ್ನ ಗುಣಗಳನ್ನೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಳು. ಇನ್ನು ಹೇಳದಿದ್ದರೆ ಭೂಮಿ ಆಕಾಶ ಒಂದು ಮಾಡಿಬಿಡುತ್ತಿದ್ದಳು. ಸರಿ, ಮನಸ್ಸು ಗಟ್ಟಿ ಮಾಡಿಕೊಂಡು ಆಗಿದ್ದೆಲ್ಲ ಒಂದೇ ಉಸಿರಿನಲ್ಲಿ ಒಪ್ಪಿಸಿಬಿಟ್ಟೆ. ವಿಷ್ಣುಸಹಸ್ರನಾಮದ ಪುಸ್ತಕ ಮುಚ್ಚಿಟ್ಟು, ಹತ್ತು ನಿಮಿಷ ನನ್ನ ಸಹಸ್ರನಾಮ ಮಾಡಿದಳು. ದಿನದ ಆರಂಭ ಎರಡು ಅಪಶಕುನದಿಂದ ಶುರುವಾದ ಮೇಲೆ ಇನ್ನು ಮುಂದೇನು ಕಾದಿದೆಯೊ ಅಂತ ಗಾಬರಿಯಾಯ್ತು.
ತಾಲ್ಲೂಕು ಆಫೀಸಿನಲ್ಲಿ ನನಗೆ ಬಹಳ ಮುಖ್ಯ ಕೆಲಸವಾಗಬೇಕಿತ್ತು. ಎಷ್ಟೋ ದಿನದಿಂದ ಪ್ರಯತ್ನಪಟ್ಟರೂ ಒಂದಿಲ್ಲೊಂದು ಅಪಶಕುನ ಎದುರುಬಂದು ನನ್ನ ಕೆಲಸವಾಗುತ್ತಲೇ ಇರಲಿಲ್ಲ. ಇವತ್ತು ಏನಾದರೂ ಮಾಡಿ ಆ ಕೆಲಸ ಮುಗಿಸಲೇಬೇಕೆಂದು ನಿರ್ಧಾರ ಮಾಡಿದ್ದೆ. ಆದರೆ, ಅಪಶಕುನಗಳ ಮೇಲೆ ಅಪಶಕುನಗಳು. ಸ್ನಾನ ಮಾಡಿ ದೇವರ ವಿಗ್ರಹದ ಮೇಲೆ ಹೂವಿಟ್ಟು ಕಣ್ಣು ಮುಚ್ಚಿ ನಿಂತೆ "ಹೋಗ್ತಾ ಇರೋ ಕೆಲಸ ನಿರ್ವಿಜ್ಞವಾಗಿ ಆಗಲಪ್ಪ" ಎಂದು ಮನದಲ್ಲೇ ಬೇಡಿಕೊಂಡೆ. ಕಣ್ಣು ಬಿಟ್ಟಾಗ ನಾ ಇಟ್ಟಿದ್ದ ಹೂವು ಕೆಳ ಬಿದ್ದಿತ್ತು. ಯಾವ ಕಡೆಯಿಂದ ಬಿತ್ತೋ.. ಬಲಗಡೆಯಿಂದಲೋ, ಇಲ್ಲ ಎಡಗಡೆಯಿಂದಲೋ...ಛೆ...ಇಂದಿನ ಶಕುನವೇ ಸರಿ ಇಲ್ಲ. ಹೂವನ್ನು, ನನ್ನ ಕಿವಿಯ ಮೇಲಿಟ್ಟುಕೊಂಡು ಹೊರಬಂದೆ.
"ಲೇ, ಶರ್ಟ್ ಎಲ್ಲಿಟ್ಟಿದಿಯಾ" ಕೂಗಿದೆ. "ಇನ್ನೆಲ್ಲಿ, ದಿನ ಇಡೋ ಜಾಗದಲ್ಲಿ" ಒಳಗಿನಿಂದ ಬಂದಿತ್ತು ಟೆಲಿಗ್ರಾಂನಂತೆ ಕ್ಲಿಷ್ಟ ಸಂದೇಶ. ಹೌದಲ್ವಾ? ನಾ ಯಾಕೆ ದಿನಾ ಇದೆ ಪ್ರಶ್ನೆ ಕೇಳಿ ಮಂಗಳಾರತಿ ಮಾಡಿಸ್ಕೊತೀನಿ? ಅದು ದಿನ ಅಲ್ಲೆ ಇರುತ್ತೆ ಅನ್ನೋದು ಮರೆತೇ ಹೊಗುತ್ತೆ. ವೃತ್ತಿಯಲ್ಲಿ ಲಾಯರ್. ಹಾಳಾದ್ದು ಪ್ರಶ್ನೆ ಕೇಳೋ ಅಭ್ಯಾಸ ಆಗಿಹೋಗಿದೆ. ಶರ್ಟ್ನ ಗುಂಡಿ ಹಾಕುತ್ತ, ಇವತ್ತು ಆಫೀಸರ್ನ ಭೇಟಿಯಾದಾಗ ಹೇಗೆ, ಏನು ಮಾತನಾಡಬೇಕು ಅಂತ ಮನದಲ್ಲೇ ಅಭ್ಯಾಸಮಾಡಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಬಾಂಬಿನ ಸದ್ದಿನಂತೆ ನನ್ನ ಕಿವಿಗೆ ಅಪ್ಪಳಿಸಿದ್ದು ಕಸ ಗುಡಿಸುತ್ತಿದ್ದ ಕೆಲಸದವಳು ಸೀನಿದ ಸದ್ದು. ಒಂಟಿ ಸೀನು! ಮತ್ತೊಂದು ಅಪಶಕುನ. ಇನ್ನು ಮುಗಿದೇ ಹೋಯಿತು. ಜೋಡಿಯಾಗಲೆಂದು ನಾನೇ ಇನ್ನೊಂದು ಸೀನಿದೆ. ಆದರೂ ಮನಸ್ಸಿಗೆ ಸಮಾಧಾನವಾಗಲಿಲ್ಲ.
ಇಷ್ಟೆಲ್ಲಾ ಅಪಶಕುನವಾದ ಮೇಲೂ ಹೋಗಲೇಬೇಕಾ ಎನ್ನುವಂತೆ ನನ್ನವಳ ಕಡೆ ನೊಡಿದೆ. "ಸಾಧ್ಯವೇ ಇಲ್ಲ. ಹೋಗಲೇಬೇಕು" ಎನ್ನುವಂತೆ ಕಣ್ಣಿಂದಲೇ ಬಂದಿತ್ತು ಉಗ್ರ ಸಂದೇಶ. ಸರಿ, ನನ್ನ ಕರ್ಮ ಎಂದು ಚಪ್ಪಲಿ ಮೆಟ್ಟಿ ಮೆಟ್ಟಿಲಿಳಿದೆ. ನಡೆದು ಹೋದರೆ ಇನ್ನು ಬೆಕ್ಕೋ, ಒಂಟಿ ಬ್ರಾಹ್ಮಣನೋ ಎದುರು ಬಂದು ಇನ್ನಷ್ಟು ಅಪಶಕುನಗಳಾಗುತ್ತೆ ಎಂದು, ಮನೆ ಬಾಗಿಲಲ್ಲೇ ನಿಂತೆ, ಆಟೋಗಾಗಿ ಕಾಯುತ್ತ. ಹತ್ತು ನಿಮಿಷವಾದರೂ ಆಟೋದವರು ಖಾಲಿಯಿದ್ದರೂ ನಿಲ್ಲಿಸಲೇ ಇಲ್ಲ. ಕೊನೆಗೂ ಅಂತೂ ಒಬ್ಬ ನಿಲ್ಲಿಸಿದ. ಸದ್ಯ ಎಂದು ಅವನು ನಿಲ್ಲಿಸಿದಲ್ಲಿಗೇ ಓಡಿದೆ. ಕೇಳೇಬಿಟ್ಟ ಅವನು "ಎಲ್ಲಿಗೇ ಸಾರ್?" ನನಗೆ ಬಂದ ಕೋಪದಲ್ಲಿ, "ಸುಡುಗಾಡಿಗೆ" ಎಂದು ಬಾಯಿಗೆ ಬಂದಿತ್ತು. ಎಲ್ಲಿಗೆ ಅಂತ ಕೇಳಿಸಿಕೊಂಡ ಮೇಲೆ ಇನ್ನು ಹೋದ ಕೆಲಸ ಆಗುತ್ಯೆ? ಕೆಟ್ಟ ಅಪಶಕುನವಲ್ಲವೇ?
ಮುಂದುವರಿದ
ಭಾಗ
:
ನಾನು
ಮನೆ
ರಾಹುಕಾಲದಲ್ಲಿ
ಬಿಟ್ಟಿದ್ದೆ,
ಛೆ!
»