ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮ್ಮೊಮ್ಮೆ ಪತ್ರಕರ್ತರೂ ಜ್ಯೋತಿಷಿಗಳಾಗಬೇಕಾಗತ್ತೆ!

By Super
|
Google Oneindia Kannada News

Balasubramanya Shastry, Journalist, Bengaluru
ಜ್ಯೋತಿಷ್ಯ ವಿಜ್ಞಾನವೇ ಆಗಿದ್ದರೂ ಮೂಢನ೦ಬಿಕೆಯನ್ನು ಅದರೊ೦ದಿಗೆ ತಳಕು ಹಾಕುವ ಮ೦ದಿಯಿ೦ದ ಅದರ ವೈಜ್ಞಾನಿಕ ತಳಹದಿ ಹದಗೆಟ್ಟಿದೆ ಎನ್ನಬಹುದು. ಹಾಗಂತ ಹಾದಿ ಬೀದಿಯಲ್ಲಿ ಕುಳಿತು ಮುಂದಾಗಲಿರುವ ವಿದ್ಯಮಾನಗಳ ಬಗ್ಗೆ ತಮಗೆ ತೋಚಿದ೦ತೆ ಬೊಗಳುವ ಮತ್ತು ಅದರಿ೦ದ ಜನರನ್ನು ತಪ್ಪುದಾರಿಗೆಳಸುವ ಕ್ರಮ ನೋಡಿದಾಗ ಬೇಸರವೆನಿಸುತ್ತದೆ ಮತ್ತು ಜ್ಯೋತಿಷಿಗಳನ್ನು ಕ೦ಡಾಗ ಸಿಟ್ಟು ಬರುತ್ತದೆ.

* ಬಾಲಸುಬ್ರಮಣ್ಯ ಶಾಸ್ತ್ರೀ, ಬೆಂಗಳೂರು

ಅದ್ಯಾವುದೋ ಕಾಲದವರು ಬರೆದಿರೋ ಅದೇನೋ ಕ್ಯಾಲೆಂಡರ್ ಪ್ರಕಾರ ಸದ್ಯದಲ್ಲೇ ಜಗತ್ತು ನಾಶ ಆಗುತ್ತಂತೆ. ಅದಕ್ಕೆ ಪೂರಕವಾಗಿ ವಿಶ್ವಮಟ್ಟದ ಪ್ರಸಿದ್ದಿ ಜ್ಯೋತಿಷಿಯೊಬ್ಬರು 'ಗಾಳಿಯಿಂದ ರೋಗ ಹರಡಿ ಮನುಷ್ಯನ ಮುಖ ಮಂಗನ ತರ ಆಗುತ್ತೆ' ಅಂತ ಕನ್ನಡ ಸಂಡೆ ಟೈಮ್ಸ್ ನ ಭಾನುವಾರದ ಸಂಚಿಕೆಗೆ ಅರುಹಿದ್ದಾರೆ. ಅದು ಹೇಗೂ ಇರಲಿ, ಇದರ ಜೊತೆಗೆ ನಮ್ಮ ಕೋಡಿಹಳ್ಳಿ ಸ್ವಾಮಿಗಳಿಂದ ಮನುಕುಲದ ಭವಿಷ್ಯ ಇನ್ನೂ ಪ್ರಕಟವಾಗಬೇಕಿದೆ.

ಅದೂ ಇರಲಿ. ಇದೂ ಬರಲಿ. ತಪ್ಪಿಲ್ಲ. ಆದರೆ, ನನಗಂತೂ ಈ ಭವಿಷ್ಯದಲ್ಲಿ ನಂಬಿಕೇನೇ ಇಲ್ಲ, ಆಸಕ್ತಿನೂ ಇಲ್ಲ ಆದ್ರೆ ನಂಬಿಕೆ ಇಲ್ಲದ ಹೆದರಿಕೆ ಮಾತ್ರ ಸ್ವಲ್ಪ ಇದೆ! ಕೆಲವು ವರುಷಗಳ ಹಿಂದೆ ನಾನು ಒಂದು ಸಂಜೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ದಿನವಿಡೀ ಆವತ್ತಿನ ಘಟನಾವಳಿಗಳನ್ನು ನೋಡಿ, ಗುಡ್ಡೆ ಹಾಕಿಕೊಂಡು, ಅದಕ್ಕೆ ಅಕ್ಷರದ ರೂಪ ಕೊಡೋದು ಮುಖ್ಯ ಕೆಲಸ. ಈ ಕೆಲ್ಸಕ್ಕೆ ಇದ್ದವರು 3 ಜನ. ನಾನು, ಒಬ್ಬ ಹುಡುಗಿ (ಸುನೀತಾ ಅನ್ಸುತ್ತೆ ಅವಳ ಹೆಸರು) ಮತ್ತೆ ನಮ್ಮ ಎಡಿಟರಮ್ಮ.

ರಾಜಕೀಯ ಬೆಳವಣಿಗೆಗಳು ಮತ್ತು ನಗರದಲ್ಲಿ ನಡೆಯುವ ಸಭೆ ಸಮಾರಂಭಗಳ ವರದಿ ಮಾಡುವುದು ನನ್ನ ಕೆಲಸ. ಅದರ ಜೊತೆಗೆ ವಾರದಲೊಮ್ಮೆ ಸಿನಿಮಾ, ರಾಜಕೀಯದ ಬಗ್ಗೆ ಹಾಸ್ಯ ಲೇಖನ, ಪದ ಬಂಧ ಜೋಡಣೆ ಅಡಿಷನಲ್ ಕೆಲಸ. ಮತ್ತೆ ಹಿಂದಿನ ದಿನ ಸಂಜೆ ಮತ್ತೆ ರಾತ್ರಿಯ ಎಲ್ಲಾ ಸುದ್ದಿಗಳು ಎಲ್ಲಾ ಬೆಳಗಿನ ದಿನಪತ್ರಿಕೆಗಳಲ್ಲಿ ಬಂದೇ ಇರುತ್ತದೆ. ಅದನ್ನು ಓದಿ ಶೀರ್ಷಿಕೆ ಬದಲಿಸಿ, ಸ್ವಲ್ಪ ಇಂಗು ಅಥವಾ ಬೆಳ್ಳುಳ್ಳಿ ಕಲಸಿ, ಹಿಂದೆ ಮುಂದೆ ಮಾಡಿ ಬರೆಯೋದೂ ನನ್ನ ಡ್ಯೂಟಿ.

ನಮ್ಮ ಕೆಲಸ ಚೆನ್ನಾಗೇ ನಡೀತಾ ಇತ್ತು. ಆ ಊರಲ್ಲಿ ರಾಜಕೀಯ ಚಟುವಟಿಕೆಗಳಿಗೆ ಏನೂ ಕೊರತೆ ಇರಲಿಲ್ಲ. ದಿನಾಲೂ ಕನಿಷ್ಠ ಒಂದಾದರು ಪ್ರೆಸ್ ಕಾನ್ಫರೆನ್ಸ್ , ಅವಾಗ ಅವಾಗ ಹೊಳೆಯಲ್ಲಿ ಗುರುತು ಸಿಗದ ಹೆಣಗಳೂ ಸಿಗುತ್ತಾ ಇದ್ದವು. ನಾವುಗಳು ಕೂಡ ತಪ್ಪದೆ ವಿಷಯ ಸಿಕ್ಕಿದ ಖುಷಿಯಲ್ಲಿ ಬರೀತಾ ಇದ್ದೆವು. ಅಕಸ್ಮಾತ್ ಬರೀಲಿಕ್ಕೆ ಏನೂ ಸಿಗಲಿಲ್ಲ ಅಂದ್ರೆ "ನಗರದಲ್ಲಿ ಹದಗೆಟ್ಟ ರಸ್ತೆ", "ಹಂದಿ ಕಾಟ ಜಾಸ್ತಿ" ಅಂತೆಲ್ಲ ಸಂಪಾದಕೀಯ ಬರೆದು ಹಾಕ್ತಾ ಇದ್ದೆವು.

ಇಂತಿಪ್ಪ ನಮ್ಮ ಪತ್ರಿಕೆಯಲ್ಲಿ ವಾರ ಭವಿಷ್ಯವು ಪ್ರಕಟವಾಗ್ತಾ ಇತ್ತು. ನಮ್ಮ ಎಡಿಟರ್ ಅದ್ಯಾರೋ ಜ್ಯೋತಿಷಿ ಹತ್ತಿರ ಬರೆಸ್ತಾ ಇದ್ರು. ಹೀಗಿರುವಾಗ ಒಮ್ಮೆ ನಮ್ಮ ಎಡಿಟರ್ 2 ದಿನಗಳ ಮಟ್ಟಿಗೆ ಕಚೇರಿ ಕೆಲಸ ನಮ್ಮ ಹೆಗಲಿಗೆ ಹಾಕಿ ಬೆಂಗಳೂರಿಗೆ ಒಂದು ಮದುವೆಗೆ ಹೊರಟರು. ಗುರುವಾರ ಮತ್ತೆ ಶುಕ್ರವಾರದ ಜವಾಬ್ದಾರಿ ನಮ್ಮದಾಗಿತ್ತು. ನಾವು ಕೂಡ ಪೇಜ್ ತುಂಬಿಸೋ ಕೆಲಸ ನಿಷ್ಠೆಯಿಂದ ಮಾಡುವ ಅಲೋಚನೆಯಲ್ಲಿ ಇದ್ದೆವು.

ಮೊದಲ ದಿನ ಒಬ್ಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಳು. 'ಅದು ವರದಕ್ಷಿಣೆ ಕೊಲೆ' ಎಂದು ಅವಳ ತಂದೆ ತಾಯಿ ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಾ ಇದ್ದರು. ಆದರೆ, ಗಂಡನ ಮನೆಯವರು 'ಅವಳು ಬಂಜೆ, ಆದ್ದರಿಂದ ಬೇಸತ್ತು ಸತ್ತಿದ್ದಾಳೆ' ಎಂದು ದೂರುತ್ತಿದ್ದರು. ನಾವು ಮಾತ್ರ ನಮ್ಮಪಾಡಿಗೆ ನಾವು ಸುದ್ದಿಯನ್ನು ಸುಂದರವಾಗಿ, ರಕ್ತ ಸಿಕ್ತವಾಗಿ ಬರೆದುದೂ ಆಯಿತು.

ಆದರೆ ಮಾರನೆ ದಿನ ಶುಕ್ರವಾರ, ಡಿಟಿಪಿ ಶ್ರೀನಿವಾಸ್ ಬಂದು "ಸಾರ್ ಇನ್ನು ಭವಿಷ್ಯ ಬಂದಿಲ್ಲ, ಅ ಭಟ್ಟರ ಮನೆ ಫೋನ್ ನ ಯಾರು ಅಟೆಂಡ್ ಮಾಡ್ತಾ ಇಲ್ಲ" ಅಂದಾಗ ಯಾಕೋ ನನಗೆ ಸಮಸ್ಯೆಯ ಅರಿವು ಆಗಿದ್ದು. ವಾರ ಭವಿಷ್ಯ ಇಲ್ಲದೆ ಪತ್ರಿಕೆ ಹೊರ ತರುವುದು ಹೇಗೆ? ಏನು ಮಾಡುವುದು ಅಂತ ತಲೆಕೆಡಿಸಿಕೊಂಡು ಕುಳಿತೆ. ಬೆಳ್ಳಬೆಳಗ್ಗೆ ಯಾವ ಜ್ಯೋತಿಷಿಗಳನ್ನ ಹುಡುಕುತ್ತಾ ಕೂರುವುದು? ಅದು ಅರ್ಜೆಂಟ್ ಅಂದ್ರೆ ಯಾರು ಬರೆದು ಕೊಟ್ಟಾರು ಎಂಬ ಚಿಂತೆ. ಅಷ್ಟರಲ್ಲಿ ಶ್ರೀನಿವಾಸ್ ಅದೆಲ್ಲಿಂದನೋ ಒಂದು "ಒಂಟಿ ಕೊಪ್ಪಲ್" ಪಂಚಾಗ ತಂದು ಕೊಟ್ಟು "ಸಾರ್ ನೀವೇ ಬರೆದು ಬಿಡಿ ಅಂದ್ರು". ಹೆಸರಲ್ಲಿ ಶಾಸ್ತ್ರಿ ಅಂತ ಇರೋದ್ರಿಂದ ಆತ ಏನೇನೋ ಕಲ್ಪಿಸಿ ಕೊಂಡಿದ್ದ ಅನ್ಸುತ್ತೆ. ಏನು ಅರ್ಜೆಂಟ್ ಇಲ್ಲ, ಅರ್ಧ ಘಂಟೆ ಟೈಮ್ ತಗೊಂಡು ಬರೀರಿ, ನಾನು ಕಾಲಂ ಖಾಲಿ ಬಿಟ್ಟಿರ್ತೀನಿ ಅಂತ ಹೇಳಿ ನಾಪತ್ತೆ ಆದ!

ಈ ವಿಷಯವನ್ನ ಕಲೀಗ್ ಸುನೀತಾಗೆ ಹೇಳಿದರೂ ಏನು ಪ್ರಯೋಜನ ಆಗಲಿಲ್ಲ. ನೀವೇ ಬರೀರಿ ಅಂದ್ಲು. ಇದೊಳ್ಳೆ ಕಥೆ ಆಯಿತಲ್ಲ, ನನಗೆ ಎಷ್ಟು ರಾಶಿ, ನಕ್ಷತ್ರ ಇದೆ ಅಂತಾನೆ ಗೊತ್ತಿಲ್ಲ. ಪಂಚಾಂಗ ನೋಡಿ ಅಂತೂ ಇಂತೂ ಬರೆದು ಮುಗಿಸಿದೆ. ಕನ್ಯಾ ರಾಶಿಯವರಿಗೆ ತೀವ್ರ ಆರೋಗ್ಯ ಹಾನಿ, ಮಕರದವರಿಗೆ ಪ್ರವಾಸ ಅಂತ ಏನೇನೋ ಬರೆದಿದ್ದೆ. ಅಂದಿನ ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರಿ ಆಗ್ತಾ ಇತ್ತು. ನಾನು ಆವಾಗ ಚಿಕ್ಕಪ್ಪನ ಮನೇಲಿ ಇದ್ದೆ. ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲಿ ಚಿಕ್ಕಪ್ಪ ಬಂದ್ರು.

ಅಂದು ಅವರಿಗೆ ತೀವ್ರವಾದ ಕ್ಯಾನ್ಸರ್ ಇರುವುದು ಪತ್ತೆ ಆಗಿತ್ತು ಹಾಗು ಅವರು ಕನ್ಯಾ ರಾಶಿಯವರು ಆಗಿದ್ದರು. ಈ ಘಟನೆ ನಂತರ ನಾನು ಮತ್ತೆ ಭವಿಷ್ಯ ಬರೆಯುವ ಸಾಹಸ ಮಾಡಲಿಲ್ಲ. ಸ್ವಲ್ಪ ದಿನಗಳ ನಂತ ಆ ಕೆಲ್ಸನೂ ಬಿಟ್ಟೆ. ಇದಾಗಿ ಹಲವು ವರುಷಗಳೇ ಕಳೆದಿದ್ದರೂ ನನಗೆ ಆ ಕಾಕತಾಳೀಯ ಘಟನೆಯ ನೆನಪು ಮಾತ್ರ ಮಾಸಿಲ್ಲ.

ನಾನು ಜ್ಯೋತಿಷ್ಯ ಸುಳ್ಳು ಅಥವ ಸತ್ಯ ಅ೦ತ ಪ್ರಚಾರ ಮಾಡಲು ಹೊರಟಿಲ್ಲ. ಜ್ಯೋತಿಷ್ಯ ವಿಜ್ಞಾನವೂ ಆಗಿರಬಹುದು. ಅದು ವಿಜ್ಞಾನವೇ ಆಗಿದ್ದರೂ ಮೂಢನ೦ಬಿಕೆಯನ್ನು ಅದರೊ೦ದಿಗೆ ತಳಕು ಹಾಕುವ ಮ೦ದಿಯಿ೦ದ ಅದರ ವೈಜ್ಞಾನಿಕ ತಳಹದಿ ಹದಗೆಟ್ಟಿದೆ ಎನ್ನಬಹುದು. ಹಾಗಂತ ಹಾದಿ ಬೀದಿಯಲ್ಲಿ ಕುಳಿತು ಮುಂದಾಗಲಿರುವ ವಿದ್ಯಮಾನಗಳ ಬಗ್ಗೆ ತಮಗೆ ತೋಚಿದ೦ತೆ ಬೊಗಳುವ ಮತ್ತು ಅದರಿ೦ದ ಜನರನ್ನು ತಪ್ಪುದಾರಿಗೆಳಸುವ ಕ್ರಮ ನೋಡಿದಾಗ ಬೇಸರವೆನಿಸುತ್ತದೆ ಮತ್ತು ಜ್ಯೋತಿಷಿಗಳನ್ನು ಕ೦ಡಾಗ ಸಿಟ್ಟು ಬರುತ್ತದೆ.

Superstition is to religion what astrology is to astronomy; the mad daughter of a wise mother.(ಯಾವುದೇ ಒ೦ದು ಧರ್ಮಕ್ಕೆ ಅ೦ಟಿಕೊ೦ಡಿರುವ ಕುರುಡುನ೦ಬಿಕೆಗಳ೦ತೆ, ಖಗೋಳವಿಜ್ನಾನಕ್ಕೆ ಅ೦ಟಿಕೊ೦ಡಿರುವ ಈ ಜ್ಯೋತಿಷ್ಯವೆ೦ಬುದು ಕೂಡ ಹಾಗೆ ; ಜಾಣ ತಾಯಿಯ ಹುಚ್ಚು ಮಗಳು) ಹೀಗ೦ತ ಒಬ್ಬ ತತ್ವಜ್ಞಾನಿ ಹೇಳಿದ್ದಾರೆ. ಇದು ಕೂಡ ಸರಿಯೋ, ತಪ್ಪೋ ವಾದಿಸುವ ಇಚ್ಛೆ ನನಗಿಲ್ಲ. ಇಲ್ಲಿ ನನ್ನ ಮುಂದಿರುವ ಪ್ರಶ್ನೆ ಜ್ಯೋತಿಷ್ಯ ಶಾಸ್ತ್ರವೆ೦ಬ ಅಸ್ತ್ರವನ್ನು ಇಟ್ಟುಕೊ೦ಡು ತಮ್ಮ ಮನಸ್ಸಿಗೆ ತೋಚಿದ೦ತೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು ಜನರನ್ನು ತಪ್ಪುದಾರಿಗೆಳೆಯುವ ಜನರನ್ನು ಕ೦ಡಾಗ ಮನಸ್ಸಿಗೆ ಪಿಚ್ ಎನಿಸುತ್ತದೆ.

Nature may be as selfishly studied as trade. Astronomy to the selfish becomes astrology; and anatomy and physiology become phrenology and palmistry - ಹೀಗ೦ತ ರಾಲ್ಪ್ ಎಮರ್ಸನ್ ಹೇಳಿದ ಮಾತುಗಳು ಇ೦ದು ಸಕಾಲಿಕವೆನಿಸುತ್ತಿವೆ. ಮೊನ್ನೆ ಸಂಡೆ ಟೈಮ್ಸ್ ಕನ್ನಡ ಸಂಚಿಕೆ ಓದುತ್ತಾ ಇದ್ದಾಗ ಇದೆಲ್ಲ ನೆನಪಿಗೆ ಬಂತು, ಹಾಗೂ ನಿಮಗೆ ಒಂದು ಮಾತು ಹೇಳಬೇಕೆನಿಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X