ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಗ್ರಂಥ ಓದಿ ಕನ್ನಡೇತರರೂ ಕನ್ನಡ ಕಲಿಯಬೇಕು

By * ಡಾ. 'ಜೀವಿ' ಕುಲಕರ್ಣಿ, ಮುಂಬಯಿ
|
Google Oneindia Kannada News

Krishna Haranahalli from Dharwad
ಕನ್ನಡೇತರರು ಕನ್ನಡ ಕಲಿಯಬೇಕು. ಕನ್ನಡ ಬಾರದ ಕನ್ನಡಿಗರ ಮಕ್ಕಳು ಕನ್ನಡ ಕಲಿಯಬೇಕು, ಇಲ್ಲವೆ ಅನುವಾದಿತ ಕನ್ನಡ ಗ್ರಂಥಗಳನ್ನು ಓದಬೇಕು ಎಂಬ ಸದುದ್ದೇಶದಿಂದ ಶ್ರೀಮದ್ಭಗವದ್ಗೀತಾ ಸಾರಸಂಗ್ರಹ ಹಿಂದಿಯಲ್ಲಿ ಅನುವಾದ ಮಾಡಿದವರು ಧಾರವಾಡದ ಕನ್ನಡಿಗ, ಮುಂಬೈವಾಸಿಯಾಗಿರುವ ಕೃಷ್ಣ ಹಾರನಹಳ್ಳಿಯವರು.

ಯಾವುದಾದರೂ ಮಹತ್ವದ ಕೃತಿಯನ್ನು, ದೊಡ್ಡ ಗ್ರಂಥವನ್ನು, ಹಿಂದಿಗೆ ಅನುವಾದಿಸಿರಿ ಎಂದು ಪೂರ್ಣಪ್ರಜ್ಞ ಸಂಶೋಧನಮಂದಿರದ ನಿರ್ದೇಶಕರಾದ ಡಾ| ಎ.ವಿ.ನಾಗಸಂಪಿಗೆಯವರು ಬಹಳ ಹಿಂದೆ ಕೃಷ್ಣ ಹಾರನಹಳ್ಳಿಯವರಿಗೆ ಸೂಚಿಸಿದ್ದರು. ಶ್ರೀ ರಾಘವೇಂದ್ರ ಸ್ವಾಮಿಗಳು ಗೀತೆಯ ಬಗ್ಗೆ ಬರೆದ ಅತ್ಯಂತ ಮಹತ್ವದ ಗ್ರಂಥ ಗೀತಾವಿವೃತಿ ಕನ್ನಡದಲ್ಲಿ ಅನುವಾದಿತವಾಗಿತ್ತು. ಇದನ್ನೇ ತಾವು ಹಿಂದಿಯಲ್ಲಿ ಅನುವಾದಿಸಲು ಪ್ರಾರಂಭಿಸಿದರು. ಭಗವದ್ಗೀತೆಯ ಬಗ್ಗೆ ಇರುವ ಇನ್ನೊಂದು ಮಹತ್ವದ ಗ್ರಂಥ ಗೀತಾಪ್ರತಿಪದಾರ್ಥಚಂದ್ರಿಕಾ. ಇದನ್ನು ರಚಿಸಿದವರು ಶ್ರೀಸತ್ಯಧ್ಯಾನತೀರ್ಥರು. ಇವೆರಡು ಗ್ರಂಥಗಳನ್ನು ಏಕಕಾಲಕ್ಕೆ ಸಮ್ಮಿಳಿಸಿ ಶ್ರೀಮದ್‌ಭಗವದ್ಗೀತಾ ಸಾರಸಂಗ್ರಹ ಎಂಬ ಗ್ರಂಥವನ್ನು ಹಿಂದಿಯಲ್ಲಿ ರಚಿಸಿದ್ದು ಒಂದು ಅಪೂರ್ವ ಸಾಧನೆ ಎಂದೇ ಹೇಳಬೇಕು.

ಆಚಾರ್ಯ ಮಧ್ವರು ಭಗವದ್ಗೀತೆಯ ಬಗ್ಗೆ ಎರಡು ಮಹತ್ವದ ಗ್ರಂಥಗಳನ್ನು ರಚಿಸಿದ್ದಾರೆ. ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯ. ಇವುಗಳಿಂದ ಪ್ರಭಾವಿತರಾದ ಶ್ರೀ ರಾಘವೇಂದ್ರ ಸ್ವಾಮಿಗಳು ಗೀತಾವಿವೃತ್ತಿ ಎಂಬ ಉದ್ಗ್ರಂಥವನ್ನು ರಚಿಸಿದ್ದಾರೆ. ಜನಸಾಮನ್ಯರು ತಿಳಿದಂತೆ ಶ್ರೀ ರಾಘವೇದ್ರ ಯತಿಗಳು ಬರಿ ಪವಾಡ ಪುರುಷರಾಗಿರಲಿಲ್ಲ. ಭಕ್ತರ ಕಲ್ಪವೃಕ್ಷ-ಕಾಮಧೇನು ಆಗುವುದರ ಜೊತೆಗೆ ಅವರು ಮಧ್ವಸಿದ್ಧಾಂತದ ಬಗ್ಗೆ 42 ಗ್ರಂಥಗಳನ್ನು ರಚಿಸಿದ್ದಾರೆ. ಯತಿವರೇಣ್ಯರ, ಮಹಾಮಹಿಮರ ಗುಣಗಾನ ಮಾಡುತ್ತೇವೆ, ಸೇವೆ ಮಾಡುತ್ತೇವೆ, ಅವರನ್ನು ಪೂಜಿಸುತ್ತೇವೆ. ನಾವು ಮಹಾಮಹಿಮರ ನಿಜವಾದ ಆರಾಧನೆ ಮಾಡಬೇಕಾದರೆ ನಾವು ಅವರ ಗ್ರಂಥಗಳ ಅಭ್ಯಾಸ ಮಾಡಬೇಕು. ಜ್ಞಾನಕಾರ್ಯಕ್ಕಿಂತ ಪವಿತ್ರವಾದ ಕಾರ್ಯ ಇನ್ನೊಂದಿಲ್ಲ.

ಹಾರನಹಳ್ಳಿಯವರು ನಿವೃತ್ತಿಯ ನಂತರ ಜ್ಞಾನಪ್ರಸಾರ ಕಾರ್ಯವನ್ನು ತಮ್ಮ ಜೀವನದ ಧ್ಯೇಯವನ್ನಾಗಿಸಿ, ಶ್ರೀಮಧ್ವಸಿದ್ಧಾಂತದ ಪರಿಚಯವನ್ನು ಉತ್ತರ ಭಾರತೀಯರಿಗೆ ಮಾಡಿಕೊಡುವ ಆಣತಿಯನ್ನು ಹೊತ್ತದ್ದು ಕೇವಲ ಶ್ಲಾಘನೀಯವಲ್ಲ, ಅನುಕರಣೀಯವೂ ಆಗಿದೆ. ಶ್ರೀರಾಘವೇಂದ್ರ ಯತಿಗಳ ಗ್ರಂಥದೊಡನೆ ಶ್ರೀ ಸತ್ಯಧ್ಯಾನರ ಪ್ರತಿದಾರ್ಥವನ್ನೂ ಸೂಕ್ತವಾಗಿ ಸೇರಿಸಿದ್ದು ಎಷ್ಟು ಮಹತ್ವಪೂರ್ಣವಾಗಿದೆ ಎಂಬುದು ಇವರ ಗ್ರಂಥವನ್ನು ಓದಿದಾಗ ಮನದಟ್ಟಾಗುತ್ತದೆ. ಈ ಗ್ರಂಥಕ್ಕೆ ಆಶಿರ್ವಚನ ಬರೆದ ಶ್ರೀ ಪೇಜಾವರ ಮಾಠಾಧೀಶರಾದ ವಿಶ್ವೇಶತೀರ್ಥರು ಹೀಗೆ ಬರೆಯುತ್ತಾರೆ:

ಭಗವದ್ಗೀತೆ ಮಾನವ ಜಾತಿಗೆ ಭಾರತ ದೇಶ ಉಡುಗೊರೆಯಾಗಿ ಕೊಟ್ಟ ಮಹಾನ್ ಕೃತಿ. ಗೀತೆಯಲ್ಲಿ ಅಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಹಾಗೂ ವ್ಯಕ್ತಿಗತ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿ ಪರಿಹಾರ ದೊರೆಯುತ್ತದೆ. ಗೀತೆಯ ಸಂದೇಶವನ್ನು ಶ್ರೀಮಧ್ವಾಚಾರ್ಯರು ತಮ್ಮ ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯ ಗ್ರಂಥಗಳಲ್ಲಿ ಪ್ರಭಾವಪೂರ್ಣವಾಗಿ ಸ್ಪಷ್ಟೀಕರಿಸಿದ್ದಾರೆ. ಇದರ ಶೈಲಿ ಹಾಗೂ ವಿಷಯ ವಿಸ್ತಾರವನ್ನು ಅನುಲಕ್ಷಿಸಿ ರಾಘವೇಂದ್ರ ಸ್ವಾಮಿಗಳು ಗೀತಾವಿವೃತಿ ಗ್ರಂಥವನ್ನು ರಚಿಸಿದ್ದಾರೆ. ಇದರ ಮಹತ್ವವನ್ನು ಶಬ್ದಗಳಲ್ಲಿ ಬಣ್ಣಿಸುವುದು ಕಠಿಣವಾಗಿದೆ. ನಾವು ದಿನದಲ್ಲಿ ಸೂರ್ಯನ ತೇಜವನ್ನು ರಾತ್ರಿಯಲ್ಲಿ ಚಂದ್ರನ ಬೆಳದಿಂಗಳನ್ನು ಅನುಭವಿಸುತ್ತೇವೆ. ಏಕಕಾಲಕ್ಕೆ ಎರಡನ್ನು ಅನುಭವಿಸುವದು ಅಶಕ್ಯವಾಗಿದೆ. ರಾಘವೇಂದ್ರ ಸ್ವಾಮಿಗಳು ತಮ್ಮ ಗೀತಾವಿವೃತಿಯಲ್ಲಿ ಗೀತಾಭಾಷ್ಯದ ಸೂರ್ಯಪ್ರಕಾಶವನ್ನೂ ಗೀತಾತಾತ್ಪರ್ಯದ ಬೆಳದಿಂಗಳನ್ನೂ ಒಂದೆಡೆ ಅನುಭವಿಸುವಂತೆ ಮಾಡಿದ್ದಾರೆ ಎಂದು ನನಗೆನಿಸುತ್ತದೆ. ಇಲ್ಲಿ ರಾಘವೇಂದ್ರರ ಗೀತಾವಿವೃತಿಯ ಅನುವಾದದೊಂದಿಗೆ ಪ್ರತಿಪದಗಳ ಅರ್ಥವನ್ನು ಶ್ರೀಸತ್ಯಧ್ಯಾನತೀರ್ಥರ ಪ್ರತಿಪದಾರ್ಥಚಂದ್ರಿಕೆಯ ಆಧಾರದಿಂದ ಒದಗಿಸಲಾಗಿದೆ. ನಿವೃತ್ತಿಯ ನಂತರ ಅಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡು ಅನುವಾದ ಕಾರ್ಯದಲ್ಲಿ ತೊಡಗಿದ್ದಕ್ಕಾಗಿ ಕೃಷ್ಣ ಹಾರನಹಳ್ಳಿಯವರನ್ನು ಹೃತ್‌ಪೂರ್ವಕವಾಗಿ ಅಭಿನಂದಿಸುತ್ತೇನೆ.

ಮುಂಬೈಯಲ್ಲಿ ಅಭಿನವ ಮಂತ್ರಾಲಯವೆಂದು ರೂಪಗೊಳ್ಳುತ್ತಿರುವ ಜೋಗೇಶ್ವರಿಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಅಷ್ಟೋತ್ತರ ಸೇವಾಮಂಡಲದ ಮುಖ್ಯಸ್ಥರಾದ ಶ್ರೀವತ್ಸ ಜೋಶಿಯವರು ಈ ಗ್ರಂಥದ ಮುಂಬೈ ಬಿಡುಗಡೆಯನ್ನು ಗುರುಸಾರ್ವಭೌಮರ ಸನ್ನಿಧಾನದಲ್ಲಿ, ಸೇವಾಮಂಡಲದ ಹನ್ನೆರಡನೆಯ ವರ್ಷದ ಶುಭ ಸಂದರ್ಭದಲ್ಲಿ ನೆರೆವೇರಿಸಿದರು. ಇದರ ಲಾಭ ಪ್ರತಿ ಸುಸಂಸ್ಕೃತ ವಿದ್ಯಾಪ್ರೇಮಿಗಳು ಪಡೆಯಬೇಕು.

ಪರಿಚಯ : ಕೃಷ್ಣ ಹಾರನಹಳ್ಳಿಯವರು ಜನಿಸಿದ್ದು ಧಾರವಾಡದಲ್ಲಿ (1943). ತಂದೆ ಅನಂತರಾವ್, ತಾಯಿ ರುಕ್ಮಿಣಿಬಾಯಿ. ಮೂರು ವರ್ಷದ ಬಾಲಕನಾಗಿದ್ದಾಗ ತಂದೆಯ ವಿಯೋಗ. ಹುಬ್ಬಳ್ಳಿಯಲ್ಲಿ ಸೋದರಮಾವನ (ಶ್ರೀನಿವಾಸರಾವ್ ತೊರವಿ) ಮನೆಯಲ್ಲಿ ಬೆಳೆದರು. ಹಿರಿಯ ಅಣ್ಣ ಶೇಷಗಿರಿಯವರಿಂದ ಸಹಾಯ ಪಡೆದರು. ಎರಡು ವರ್ಷ ಕಾಲೇಜು ಕಲಿಯುವಾಗ ರಿಸರ್ವ್ ಬ್ಯಾಂಕಿನಲ್ಲಿ ಕ್ಲರ್ಕ್ ಕೆಲಸ ದೊರೆತದ್ದರಿಂದ ಮುಂಬೈಗೆ ಆಗಮಿಸಿದರು. ಮುಂಜಾನೆಯ ಕಾಲೇಜು ಸೇರಿ ಪದವೀಧರರಾದರು. ರಿಸರ್ವ್ ಬ್ಯಾಂಕಿನಿಂದ 1973ಯಲ್ಲಿ ಐಡಿಬಿಐ ಬ್ಯಾಂಕಿಗೆ ವರ್ಗಾವಣೆಯಾಗಿತ್ತು. ಅಲ್ಲಿಯೇ 2002ರಲ್ಲಿ ಚೀಫ್ ಜನರಲ್ ಮೆನೆಜರ್ ಹುದ್ದೆ ಪಡೆದು ನಿವೃತ್ತರಾದರು. ಸಹಧರ್ಮಿಣಿ ರಾಧಾ. ಇಬ್ಬರು ಗಂಡು ಮಕ್ಕಳು, ಫಣಿರಾಜ, ನಾಗರಾಜ. ಇಬ್ಬರೂ ಕಾಮರ್ಸ್ ಪದವೀಧರರು. ಇಬ್ಬರಿಗೂ ಬ್ಯಾಂಕಿನಲ್ಲಿ ಕೆಲಸ. ಆಡಂಬರ ರಹಿತ ಜೀವನ ಸಾಗಿಸಿದ, ಪ್ರಸಿದ್ಧಿಯಿಂದ ದೂರ ಇದ್ದ, ಸದಾ ಹಸನ್ಮುಖಿಯಾದ ಕೃಷ್ಣ ಹಾರನಹಳ್ಳಿಯವರ ಸಾಧನೆ ಮಾತ್ರ ಕಲ್ಪನಾತೀತ, ಅನುಕರಣೀಯ.

ಬಾಲ್ಯದಿಂದಲೂ ಅಧ್ಯಾತ್ಮದಲ್ಲಿ ಒಲವು. ಸಾಂಪ್ರದಾಯಿಕ ಮಾಧ್ವ ಕುಟುಂಬದಲ್ಲಿ ಜನಿಸಿದ್ದರಿಂದ ವಾಯುಸ್ತುತಿ, ನೃಸಿಂಹಸ್ತುತಿ, ವಿಷ್ಣುಸಹಸ್ರನಾಮ ಕಂಠಸ್ಥವಾಗಿದ್ದವು. ಭಾರತೀಯ ತತ್ವಜ್ಞಾನದಲ್ಲಿ ಆಸಕ್ತಿಯಿದ್ದುದರಿಂದ ವ್ಯಾಪಕ ವಾಚನ. ಶ್ರೀಮಧ್ವರ ತತ್ವವಾದದಿಂದ ಪ್ರಭಾವಿತರಾಗಿ ಅವರ ಕೃತಿಗಳ ಪರಿಚಯವನ್ನು ಉತ್ತರ ಭಾರತೀಯರಿಗೆ ಮಾಡಿಕೊಡಬೇಕೆಂಬ ಒತ್ತಾಸೆಯಿಂದ ಹಿಂದಿ ಭಾಷೆಯಲ್ಲಿ ಪ್ರಾವೀಣ್ಯ ಪಡೆಯಲು ಯತ್ನಿಸಿದರು. ಮಹಾಮಹೋಪಾಧ್ಯಾಯ ಡಾ| ಬಿ.ಎನ್.ಕೆ. ಶರ್ಮಾ ಅವರು ಇಂಗ್ಲೀಷಿನಲ್ಲಿ ಬರೆದ ಪುಸ್ತಕಗಳಿಂದ ಪ್ರಭಾವಿತರಾಗಿ ಅವರ ಪ್ರಸಿದ್ಧ ಪುಸ್ತಕ Madhva"s Teachings in his own words ಹಿಂದಿ ಭಾಷೆಗೆ ಅನುವಾದಿಸಿದರು. ಇದನ್ನು ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನ ಮಂದಿರಂ, ಪೂರ್ಣಪ್ರಜ್ಞ ವಿದ್ಯಾಪೀಠದವರು 2007ರಲ್ಲಿ ಪ್ರಕಟಿಸಿದರು. ನಂತರ ಡಾ| ವ್ಯಾಸನಕೆರೆ ಪ್ರಭಂಜನಾಚಾರ್ಯರ ಭಾಗವತದ ಬೆಳಕು ಎಂಬ ಕಿರುಹೊತ್ತಿಗೆಯನ್ನು ಭಾಗವತ ಪ್ರಕಾಶ ಎಂಬ ಹೆಸರಿನಲ್ಲಿ ಹಿಂದಿಗೆ ಅನುವಾದಿಸಿದರು. ಅದನ್ನು ಐತರೇಯ ಪ್ರಕಾಶನದವರು 2010ರಲ್ಲಿ ಪ್ರಕಟಿಸಿದರು.

(ಶ್ರೀಮದ್‌ಭಗವದ್ಗೀತಾ ಸಾರಸಂಗ್ರಹ (ಹಿಂದಿ) ಉತ್ತಮ ಹಾರ್ಡ್ ಬೌಂಡ್ ಪ್ರತಿ, ಪುಟಗಳು 64+620, ಬೆಲೆ: ರೂ.200, ಪ್ರಕಾಶಕರು: ಪೂರ್ಣಪ್ರಜ್ಞ ಸಂಶೋಧನ ಮಂದಿರಂ, ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು-560 028. ಪ್ರತಿಗಳಿಗಾಗಿ ಸಪರ್ಕಿಸಬಹುದು: 022-28491778/ 9920991778 ಇ-ಮೇಲ್: [email protected])

English summary
Krishna Haranahalli, originally from Dharwad but resident of Mumbai, has translated Srimad Bhagavad Gita to hindi. The book was released in Mumbai recently. This is available at Poornaprajna Vidyapeetha, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X