ಸ್ವಾಮಿ ರಾಮದೇವ ಮತ್ತು ಪತಂಜಲಿ ಯೋಗಪೀಠ
ಯೋಗ ಕ್ಷೇತ್ರದಲ್ಲಿ ಸ್ವಾಮಿ ರಾಮದೇವರ ಹೆಸರು ಹೆಚ್ಚು ಪ್ರಚಲಿತ. ಅವರ ಬಗ್ಗೆ, ಹರಿದ್ವಾರದಲ್ಲಿರುವ ಅವರ ಪತಂಜಲಿ ಯೋಗಪೀಠದ ಬಗ್ಗೆ ಒಂದಷ್ಟು ವಿಚಾರ. ನಾನು ದೆಹಲಿ ಪ್ರವಾಸ ಕೈಕೊಂಡದ್ದರ ಹಿಂದೆ ಒಂದು ಗುಪ್ತ ಉದ್ದೇಶವೂ(ಹಿಡನ್ ಅಜೆಂಡಾ) ಇತ್ತು. ಅದೆಂದರೆ ಹರಿದ್ವಾರಕ್ಕೆ ಹೋಗಿ ಸ್ವಾಮಿ ರಾಮದೇವ ಅವರ ‘ಪತಂಜಲಿ ಯೋಗಪೀಠ'ವನ್ನು ಸಂದರ್ಶಿಸುವುದು. ಆ ಹೆಬ್ಬಯಕೆಯೂ ಈಡೇರಿತು.
ನನಗೆ ನಿವೃತ್ತಿಯ ನಂತರ ಕಾವ್ಯಾಸಕ್ತಿಯಷ್ಟೇ ಪ್ರಬಲವಾದ ಇನ್ನೊಂದು ಆಸಕ್ತಿ ನನ್ನೊಳಗೇ ಬೆಳೆಯಿತು. ಅದುವೆ ಯೋಗಾಸಕ್ತಿ. ಅಂದು ಕಾವ್ಯ ಎಂದೊಡನೆ ‘ಪಂಚಕರಣ । ಗಳೀಗಡಣ । ಕಟ್ಟಿತು ಗುಡಿ ತೋರಣ' ಎಂಬ ಬೇಂದ್ರೆಯವರ ನುಡಿ ಮೈಯನ್ನು ಪುಲಕಿತಗೊಳಿಸುತ್ತಿತ್ತು. ಇಂದು ಯೋಗ ಎಂದೊಡನೆ ‘ಯೋಗಃಕರ್ಮಸು ಕೌಶಲಂ' ನೆನಪಾಗುತ್ತದೆ, ‘ತತ್ರ ಯೋಗೀಭವಾರ್ಜುನ' ಎಂಬ ಗೀತೆಯ ಮಾತು ಮೈಮನ ಸೆಳೆಯುತ್ತದೆ.
ಇಂದು ಜಗತ್ತಿನ ಉದ್ಧಾರವಾಗಬೇಕಿದ್ದರೆ ಅದು ಯೋಗದಿಂದ ಮಾತ್ರ ಸಾಧ್ಯ ಎಂಬ ಮಾತು ಮನದಟ್ಟಾಗಿದೆ. ನಾವು ದೆಹಲಿ ತಲುಪಿದಾಗ ರಾಜಕಾರಣಿಗಳು ‘ಸೆಕ್ಸ್ ಎಜ್ಯುಕೇಶನ್' ಶಾಲೆಗಳಲ್ಲಿ ಕಡ್ಡಾಯ ಮಾಡಬೇಕು ಎಂದರೆ, ಸ್ವಾಮಿ ರಾಮದೇವರು, ‘ಯೋಗಾಭ್ಯಾಸವನ್ನು ಕಡ್ಡಾಯಗೊಳಿಸಬೇಕು, ಸೆಕ್ಸ್ಅಭ್ಯಾಸವನ್ನಲ್ಲ' ಎಂಬ ಹೇಳಿಕೆ ಕೊಟ್ಟರು. ಅದು ಎಲ್ಲ ಪತ್ರಿಕೆಗಳಲ್ಲಿ ಅವರ ಫೋಟೋದೊಂದಿಗೆ ಪ್ರಕಟವಾಗಿತ್ತು.
ಸ್ವಾಮಿ ರಾಮದೇವ ಲೋಕ ಗುರುಗಳು. ಮನೆಮನೆಗೆ ಬಂದು ಟಿ.ವಿ.(ಆಸ್ಥಾ) ಮೂಲಕ ಯೋಗಾಭ್ಯಾಸ ಹೇಳಿಕೊಡುತ್ತಾರೆ. ಯೋಗಾಚಾರ್ಯ ಬಿ.ಕೆ.ಎಸ್.ಐಯ್ಯಂಗಾರ್, ಹಟಯೋಗಿ ನಿಕಂ ಗುರೂಜಿ, ಶತಾಯು ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿಗಳಿಂದ ಯೋಗ ಕಲಿತಂತೆ ಸ್ವಾಮಿ ರಾಮದೇವರಿಂದ ಕಲಿಯುವುದು ಸಾಕಷ್ಟಿದೆ. ಅವರು ಅಭಿನವ ದ್ರೋಣಾಚಾರ್ಯರಂತೆ ಕಲಿಸುತ್ತಾರೆ. ನನ್ನ ಹೊಸ ಪರಿಕಲ್ಪನೆ ‘ವನ್ ಡೇ ಯೋಗವರ್ಕಶಾಪ್'ಗೆ ಈ ನಾಲ್ಕು ಗುರುಗಳ ಯೋಗದಾನವಿದೆ.
ಹರಿದ್ವಾರದಲ್ಲಿ ನಾನು..ಈ ಯೋಗಪೀಠ ರೂರಕಿ ಹಾಗೂ ಹರಿದ್ವಾರದ ಮಧ್ಯದಲ್ಲಿ ಇದೆ. (ರೂರಕಿಯಿಂದ ಹದಿನೈದು ಕಿ.ಮೀ ದೂರ, ಅಲ್ಲಿಂದ ಹರಿದ್ವಾರ ಹದಿನೈದು ಕಿ.ಮೀ. ದೂರ ಇದೆ.) ಹೆದ್ದಾರಿಯ ಮೇಲೆ ‘ಪತಂಜಲಿ ಯೋಗಪೀಠ' ಎಂಬ ಭವ್ಯ ಮಹಾದ್ವಾರ ನಮ್ಮನ್ನು ಸ್ವಾಗತಿಸುತ್ತದೆ. ಅತ್ಯಾಧುನಿಕ ಕಟ್ಟಡಗಳಿಂದ, ಉದ್ಯಾನದಿಂದ, ಕಾರಂಜಿಗಳಿಂದ ಸುಶೋಭಿತ ಸುಂದರವಾದ ಕ್ಯಾಂಪಸ್ ನೋಡಿ ಮನಸ್ಸು ಪ್ರಫುಲ್ಲಿತಗೊಂಡಿತು. ಅತಿಥಿಗಳಿಗೆ ವಾಸಮಾಡಲು ಒಳ್ಳೆಯ ರೂಮ್ಗಳಿವೆ.
ಅಲ್ಲಿ ಪ್ರತಿ ತಾಸಿಗೆ ಯೋಗ ಕ್ಲಾಸು ನಡೆಯುತ್ತವೆ, ‘ಪಂಚಕರ್ಮ'ದ ಅನುಕೂಲತೆಯೂ ಇದೆ ಎಂದು ಕೇಳಿದೆ. ಪ್ರವಾಸ ಸುಖಕರವಾಗಿರಲಿಲ್ಲ. ರಸ್ತೆ ಬಹಳ ದುಸ್ಥಿತಿಯಲ್ಲಿವೆ. ಅಲ್ಲಿಯ ಕ್ಯಾಂಪಸ್ ಸುತ್ತು ಹಾಕುವ ಮೊದಲು ‘ಅನ್ನಪೂರ್ಣಾ' ಭವನ ಸೇರಿ ಅಹಾರ ಸೇವಿಸಿದೆ.
ಮಾಹಿತಿ ಕೇಂದ್ರದಲ್ಲಿ ನನ್ನನ್ನು ಆಕರ್ಷಿಸಿದ್ದು ‘ಪತಂಜಲಿ ಯೋಗಪೀಠ'ದ ಮಾಸ ಪತ್ರಿಕೆ ‘ಯೋಗ ಸಂದೇಶ'. ಇದು ಹನ್ನೊಂದು ಭಾಷೆಗಳಲ್ಲಿ ಮುದ್ರಿತವಾಗುತ್ತದೆ. (ಹಿಂದಿ, ಮರಾಠಿ, ಬಂಗಲಾ, ಪಂಜಾಬಿ, ನೇಪಾಲಿ, ತೆಲಗು, ಇಂಗ್ಲಿಷ್, ಗುಜರಾತಿ, ಉಡಿಯಾ, ಅಸಾಮಿಯಾ ಹಾಗೂ ಕನ್ನಡ.) ಮೊದಲು ಕನ್ನಡ ಪತ್ರಿಕೆಯ ಚಂದಾ ಹಣ ತುಂಬಿ ಸದಸ್ಯನಾದೆ. ಹಿಂದಿಯ ತರುವಾಯ ಅತ್ಯಧಿಕ ಮಾರಾಟವಾಗುವ ಭಾಷೆ ಮರಾಠಿ. ಹಾಗೆ ನೋಡಿದರೆ ಸ್ವಾಮಿ ರಾಮದೇವ ಅವರ ಅತ್ಯಧಿಕ ವಿದ್ಯಾರ್ಥಿಗಳು ಮಹಾರಾಷ್ಟ್ರದಲ್ಲಿದ್ದಾರೆ.