ಗುರು ಶ್ರೀ ರಾಘವೇಂದ್ರ ದಯೆ ತೋರೋ
ದಾರಿ ಕಾಣದಾಗಿದೆ ರಾಘವೇಂದ್ರನೇಎಂದು ದಾರಿ ತೋರಿಸುವಂತೆ ರಾಯರನ್ನು ಪ್ರಾರ್ಥಿಸುವವರ ಸಂಖ್ಯೆ ದೊಡ್ಡದು. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಶ್ರೀ ರಾಘವೇಂದ್ರರ ಆರಾಧನೆ ವಿಶ್ವದೆಲ್ಲೆಡೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ರಾಯರ ಬದುಕು, ಪವಾಡ, ಸಾಧನೆ ಬಗ್ಗೆ ಒಂದಿಷ್ಟು ಅರಿಯೋಣ.
ಕಲಿಯುಗದ ಕಲ್ಪತರು, ಕಲ್ಪವೃಕ್ಷವೆಂದೇ ಪ್ರಸಿದ್ಧರಾಗಿರುವ ಶ್ರೀ ರಾಘವೇಂದ್ರಸ್ವಾಮಿಗಳ ಹೆಸರನ್ನು ಕೇಳದ ಕನ್ನಡಿಗರು ವಿರಳ. ತಿರುಪತಿಯ ನಂತರ ಅತ್ಯಧಿಕ ಯಾತ್ರಿಕರನ್ನು ಆಕರ್ಷಿಸುವ ದಕ್ಷಿಣ ಭಾರತದ ಕ್ಷೇತ್ರವೆಂದರೆ 'ಮಂತ್ರಾಲಯ" ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ರಾಘವೇಂದ್ರಸ್ವಾಮಿಗಳು ತಮಿಳುನಾಡಿನಲ್ಲಿ (ಕಾವೇರಿ ಪಟ್ಟಣದಲ್ಲಿ) ಜನಿಸಿದರು, ಆಂಧ್ರದಲ್ಲಿ (ಮಂಚಾಲಿ ಗ್ರಾಮದಲ್ಲಿ) ವೃಂದಾವನಸ್ಥರಾದರು, ಆದರೆ ಅವರ ಅತ್ಯಧಿಕ ಭಕ್ತರು ಕರ್ನಾಟಕದಲ್ಲಿದ್ದಾರೆ. ಜಗದ್ಗುರು ಶ್ರೀಮಧ್ವಾಚಾರ್ಯರ ಸಿದ್ಧಾಂತವನ್ನು ಪ್ರಸಾರ ಮಾಡಿದ ಯತಿವರೇಣ್ಯರಲ್ಲಿ ಶೀಮನ್ಯಾಯಸುಧಾ ಕರ್ತೃ ಶ್ರೀ ಜಯತೀರ್ಥರು ಪ್ರಮುಖರು. ಅವರ ತರುವಾಯ ಮಹತ್ವದ ಸ್ಥಾನವನ್ನು ಅಲಂಕರಿಸುವ ವಿದ್ವಾಂಸರಲ್ಲಿ ಪರಿಮಳಾಚಾರ್ಯರೆಂದು ಪ್ರಸಿದ್ಧಿ ಪಡೆದ ಶ್ರೀ ರಾಘವೇಂದ್ರಸ್ವಾಮಿಗಳೂ ಒಬ್ಬರಾಗಿದ್ದಾರೆ.
ರಾಘವೇಂದ್ರ ಸ್ವಾಮಿ ಪವಾಡಪುರುಷರೆಂದೇ ಪ್ರಸಿದ್ಧರಾಗಿದ್ದರೂ ಅವರು ಪ್ರಕಾಂಡ ವಿದ್ವಾಂಸರಾಗಿದ್ದರು, ಅಮೂಲ್ಯ ಗ್ರಂಥಗಳನ್ನೂ ಬರೆದರು ಎಂಬ ಸಂಗತಿ ಬಹಳ ಜನರಿಗೆ ಗೊತ್ತಿಲ್ಲ. ಕನ್ನಡದಲ್ಲಿ ಶ್ರೀಗಳ ಜೀವನವನ್ನು ಆಧರಿಸಿ ಎರಡು ಚಲನಚಿತ್ರಗಳು ತೆರೆ ಕಂಡವು (ನಟ ಸಾರ್ವಭೌಮ ರಾಜಕುಮಾರ ಮತ್ತು ನಟವರ ಶ್ರೀನಾಥರು ಅಭಿನಯಿಸಿದ ಚಿತ್ರಗಳು). ತಮಿಳಿನಲ್ಲಿ ಕೂಡ ಒಂದು ಚಿತ್ರ (ಸೂಪರ್ಸ್ಟಾರ ರಜನೀಕಾಂತ ಅಭಿನಯ)ಬಹಳ ಪ್ರಸಿದ್ಧಿ ಪಡೆಯಿತು. 'ಗುರುವಾರ ಬಂತಮ್ಮ | ಗುರು ರಾಯರ ನೆನೆಯಮ್ಮ|" ಹಾಡು ಅಸಂಖ್ಯ ಕನ್ನಡಿಗರ ಕರ್ಣಗಳಲ್ಲಿ ಸದಾ ನಿನಾದಿಸುತ್ತಿದೆ.
ಶ್ರೀ ರಾಘವೇಂದ್ರರ ಬೃಂದಾವನ ಪ್ರವೇಶದ ಮಾಸ ಶ್ರಾವಣಮಾಸ; ಪಕ್ಷ ಕೃಷ್ಣಪಕ್ಷ; ತಿಥಿ ದ್ವಿತೀಯಾ. ಬ್ರಹ್ಮಸೂತ್ರಗಳ ಮೇಲೆ ಏಳು ಮತ್ತು ಗೀತೆಯ ಮೇಲೆ ಮೂರು ಗ್ರಂಥಗಳನ್ನು ರಚಿಸಿದ ಅಸಾಧಾರಣ ಮಹತ್ವವೂ ಇವರದಾಗಿದೆ.
“ಪೂರ್ವಾಶ್ರಮದಲ್ಲಿ ಗಂಧ ತೇಯ್ದಿದ್ದ ಶ್ರೀ ರಾಘವೇಂದ್ರರು, ಅನಂತರ ಶಾಸ್ತ್ರ ಸೌಗಂಧ್ಯವನ್ನೇ ಜಗತ್ತಿಗೆ ಬೀರಿ ಪರಿಮಳಾಚಾರ್ಯರೆನ್ನಿಸಿದರು. ವೈಣಿಕರಾಗಿದ್ದ ಅವರು ಯೋಗ್ಯ ಜನಗಳ ಹೃದಯವೀಣೆಯನ್ನೇ ತಮ್ಮ ನಡೆನುಡಿಗಳಿಂದ ಮಿಡಿಯುವ ವೈಣಿಕರಾದರು. ತಮ್ಮ ದೇಹವನ್ನೇ ದೈವೀ ವೀಣೆಯನ್ನಾಗಿಸಿಕೊಂಡು ಭಗವಂತನ ಗುಣಗಳನ್ನು ನುಡಿಸಿದ ದಿವ್ಯ ಅನುಭಾವಿಗಳು." ಈ ಮಾತನ್ನು ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯರು “ರಾಘವೇಂದ್ರ ದರ್ಶನ" ಎಂಬ ತಮ್ಮ ಅಪೂರ್ವ ಪುಸ್ತಕದಲ್ಲಿ ನುಡಿದಿದ್ದಾರೆ.
ರಾಘವೇಂದ್ರ ಮಹಿಮೆ ಕುರಿತ ಸತ್ಯ ಕಥೆ