ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸುದೇವನ ಬಾಲಲೀಲೆ, ಭೀಮಶಕ್ತಿ ಮತ್ತು ಪವಾಡಗಳು!

By Staff
|
Google Oneindia Kannada News


ತಂದೆ ಮಧ್ಯಗೇಹಭಟ್ಟರು ಪುರಾಣ ಹೇಳುತ್ತಿದ್ದ ಪ್ರಸಂಗ. ವಿವಿಧ ವೃಕ್ಷಗಳನ್ನು ವಿವರಿಸುವ ಶ್ಲೋಕವನ್ನು ವಿವರಿಸುತ್ತಿದ್ದರು. ಒಂದು ಶಬ್ದದ ಅರ್ಥ ಹೇಳದೇ ಮುಂದೆ ಸಾಗಿದರು. ‘‘ನೀವು ‘ಲಿಕುಚ’ ಶಬ್ದದ ಅರ್ಥ ಹೇಳಲಿಲ್ಲವಲ್ಲ?’’ ಎಂದು ಮಗ ತಂದೆಯನ್ನು ಪ್ರಶ್ನಿಸಿದ. ‘‘ನನಗೆ ಗೊತ್ತಿಲ್ಲ, ನಿನಗೆ ಗೊತ್ತಿದ್ದರೆ ಹೇಳು ನೋಡೋಣ.’’ ಎಂದಾಗ ಮಗನು ಉತ್ತರಿಸಿದ್ದ, ‘‘ಹೆಬ್ಬೆಲಸು’’ ಎಂದು. ಮಗ ಸಸ್ಯಶಾಸ್ತ್ರದಲ್ಲಿಯೂ ಪಂಡಿತನಾಗಿದ್ದ. ಮುಂದೆ ಇವರ ಶಿಷ್ಯನಾದ ತ್ರಿವಿಕ್ರಮಪಂಡಿತಾಚಾರ್ಯ ‘ಶ್ರೀವಾಯುಸ್ತುತಿ ರಚಿಸಿದಾಗ, ತಾನು ‘ಲಿಕುಚತಿಲಕ ಸೂನು’ ಎಂದು ತನ್ನನ್ನು ಕರೆದುಕೊಳ್ಳುತ್ತಾನೆ. ಮುಂದೆ ಲಿಕುಚ ವಂಶಜ ತನ್ನ ಸ್ತುತಿ ಬರೆಯುತ್ತಾನೆಂದು ಮೊದಲೇ ಬಾಲಕ ಅರಿತಿದ್ದನು ಎನ್ನಿಸುತ್ತದೆ.

ವಾಸುದೇವನ ಹಲವಾರು ಬಾಲಲೀಲೆಗಳು ಅವನಲ್ಲಿದ್ದ ಭೀಮ ಶಕ್ತಿಗೆ ಉದಾಹರಣೆಗಳಾಗಿವೆ. ಒಮ್ಮೆ ತಾಯಿ ಹಾಲು-ಮೊಸರು ಬೆಕ್ಕಿನಿಂದ ಕಾಪಾಡಲು ಹೇಳಿ ಹೊರಗೆ ಹೋದಾಗ ವಾಸುದೇವ ಎತ್ತಲು ಅಸಾಧ್ಯವಾದ ಬಂಡೆಗಲ್ಲನ್ನು ಮೇಲಿಟ್ಟು ತಾನೂ ಆಡಲು ಹೋದ ಪ್ರಸಂಗವಿದೆ. ತಾಯಿಗೋ ಪರಮಾಶ್ಚರ್ಯ. ಪರಶುರಾಮ ನಿರ್ಮಿತ ಪರಶುತೀರ್ಥ, ಧನುಸ್ತೀರ್ಥ, ಬಾಣತೀಥ, ಮತ್ತು ಗದಾತೀರ್ಥಗಳಲ್ಲಿ ಸ್ನಾನಮಾಡಲು ಬಾಲಕ ಬಹಳ ದೂರ ಹೋಗುತ್ತಿದ್ದ. ಮಳೆ, ಬಿಸಿಲು, ಗಾಳಿ, ಚಳಿ ಯಾವುದೂ ಅವನಿಗೆ ಅಡ್ಡಿಯಾಗುತ್ತಿರಲಿಲ್ಲ.

ತಾಯಿ ವೇದವತಿಗೆ ಇದು ಚಿಂತೆಗೆ ಕಾರಣವಾಗುತ್ತಿತ್ತು. ತಾಯಿಯ ಚಿಂತೆಯನ್ನು ನಿವಾರಿಸಲು ಒಂದು ಪವಾಡ ತೋರಿಸಿದ. ಆಟದ ಕೋಲಿನಿಂದ ಈಶಾನ್ಯ ದಿಕ್ಕಿನಲ್ಲಿ ನೆಲವನ್ನು ಕೆದರಿದ. ಅಲ್ಲಿ ಆಳವಾದ ತಗ್ಗಾಯಿತು, ಅದೇ ‘ವಾಸುದೇವತೀರ್ಥ’. ಅಲ್ಲಿ ಎಲ್ಲ ತೀರ್ಥಗಳ ನೀರು ಬಂದು ಸೇರಿದೆ. ಮಗ ತಾಯಿಗೆ ಹೇಳಿದ, ‘‘ಅಮ್ಮಾ ನಾನು ಇನ್ನು ಮೇಲೆ ಇಲ್ಲೇ ಸ್ನಾನ ಮಾಡುವೆ. ನೀವು ಇನ್ನು ಮೇಲೆ ಆತಂಕಪಡಬೇಕಾಗಿಲ್ಲ.’’ ಎಂದು. ನಂತರ ವಾಸುದೇವನಿಗೆ ಬ್ರಹ್ಮೋಪದೇಶ ಮಾಡಲಾಯಿತು. ಇವನಿಗೆ ಉಪನಯನವಾಗುವುದನ್ನು ವೇದಾಭಿಮಾನಿ ದೇವತೆಗಳು ಕಾತರದಿಂದ ನಿರೀಕ್ಷಿಸುತ್ತಿದ್ದರಂತೆ.

ಮತ್ತೆ ಕೆಲವು ಪವಾಡಗಳು ನಡೆದವು. ವಾಸುದೇವ ಕೈಯಲ್ಲಿ ದಂಡವನ್ನು ಹಿಡಿದು ತಂದೆಗೆ ಹೇಳಿದನಂತೆ, ‘‘ಅಪ್ಪಾ! ನಾನು ವೈಷ್ಣವ ಮತವನ್ನು ಸ್ಥಾಪಿಸುವೆ.’’ ಎಂದು. ಇದಕ್ಕೆ ಅವನ ತಂದೆ, ‘‘ಇದು ಕಲಿಯುಗ, ಅಧರ್ಮ ತಾಂಡವವಾಡುತ್ತಿದೆ’’ ಎನ್ನುತ್ತ, ‘‘ನೀನು ಕೈಯಲ್ಲಿ ಹಿಡಿದ ಕೋಲು ಚಿಗಿತರೆ ನಿನ್ನಿಂದ ಇಂಥ ಕೆಲಸ ಆಗಲು ಸಾಧ್ಯ’’ ಎಂದರಂತೆ.

ಆಗ ವಾಸುದೇವ ಆ ಕೋಲನ್ನು ನೆಲದಲ್ಲಿ ಊರಿ ನೀರು ಹನಿಸಿಯೇ ಬಿಟ್ಟನಂತೆ. ಕೆಲ ದಿನಗಳಲ್ಲಿ ಅದು ಚಿಗಿಯತೊಡಗಿತು. ಅದು ಮರವಾಯಿತಂತೆ. ಇನ್ನೊಂದು ಪ್ರಸಂಗ. ವಟು ತಾಯಿಯಾಡನೆ ವಿಮಾನಗಿರಿಯ ದುರ್ಗೆಯ ದರ್ಶನಕ್ಕೆಂದು ಹೊರಟ. ದಾರಿಯಲ್ಲಿ ಮಣಿಮಂತ ಎಂಬ ಸರ್ಪ ಅವನನ್ನು ಕೊಲ್ಲಲು ಮುಂದೆ ಬಂತು. ಕಚ್ಚಿ ಬಂಡೆಯಲ್ಲಿ ಅಡಗಿತು. ಬಾಲಕ ಆ ಬಂಡೆಯನ್ನು ಕಾಲಿನಿಂದ ಒದ್ದಾಗ ಬಂಡೆ ಪುಡಿಪುಡಿಯಾಯಿತು. ಹಾವು ಸಾವನ್ನಪ್ಪಿತು. ಪಾದದ ಗುರುತು ಬಂಡೆಯಲ್ಲಿ ಮೂಡಿತ್ತು.

ಮಗು ವಾಸುದೇವನ ಉಪನಯನವಾಯಿತು. ಇವನು ಜನ್ಮತಃ ಜಗದ್ಗುರು. ಆದರೂ, ಲೋಕಸಂಗ್ರಹಕ್ಕಾಗಿ ಗುರುಕುಲ ಸೇರಬೇಕು. ಜಗಜ್ಜನಕ ಭಗವಂತ ಕೃಷ್ಣ ಕೂಡ ಲೋಕಸಂಗ್ರಹಕ್ಕಾಗಿ ಉಪನಯನದ ನಂತರ ಉಜ್ಜಯಿನಿಗೆ ತೆರಳಿ ಗುರುಕುಲವಾಸ ಮಾಡಬೇಕಾಯ್ತು. ಹಾಗೆಯೇ ವಾಸುದೇವನು ಆ ಪ್ರಾಂತದಲ್ಲಿ ಖ್ಯಾತಿವೆತ್ತ ತೋಂಟತ್ತಿಲ್ಲಾಯರ ಗುರುಕುಲ ಸೇರಿದ. ವಾಸುದೇವನಿಗೆ ಪಾಠಕ್ಕಿಂತ ಆಟದಲ್ಲೇ ಹೆಚ್ಚು ಆಸಕ್ತಿ, ಎಲ್ಲ ಆಟದಲ್ಲಿ ಇವನಿಗೇ ಪ್ರಥಮಸ್ಥಾನ. ಹನುಮನಂತೆ, ಭೀಮನಂತೆ ಇವನು ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದ್ದ.

ಚೆಂಡಾಟ ಆಡುವಾಗ ತನ್ಮಯತೆಯಿಂದ ಹಾಡುತ್ತಿದ್ದ. ಅವನ ಚೆಂಡಾಟವೇ ‘ಕಂದುಕಸ್ತುತಿ’ ಆಯಿತು. ಸರ್ವವಿದ್ಯೆಗಳು ತನಗೆ ಚೆಂಡಾಟದಂತೆ ಸುಲಭ ಹಾಗೂ ಕರಗತ ಎಂಬುದನ್ನು ತೋರಿಸಿದ. ಆಟದಲ್ಲಿಯ ಇವನ ಹೆಚ್ಚಿನ ಆಸಕ್ತಿಯನ್ನು ಕಂಡು ಒಮ್ಮೆ ಗುರುಗಳು ಇವನನ್ನು ಕೇಳಿದರು, ‘‘ಇತರ ಸಹಪಾಠಿಗಳಂತೆ ನೀನೇಕೆ ಓದಿನಲ್ಲಿ ಆಸಕ್ತಿ ತೋರುತ್ತಿಲ್ಲ?’’ ಎಂದು. ಶಿಷ್ಯನ ಮಾರ್ಮಿಕ ಉತ್ತರ,‘‘ ಗುರುಗಳೇ, ಚರಣಚರಣವಾಗಿ ಪಾಠಮಾಡಿಸುವ ನಿಮ್ಮ ಪದ್ಧತಿ ನನಗೆ ಹಿಡಿಸುವುದಿಲ್ಲ.’’ ಎಂದು.

ಶಿಷ್ಯನ ಉತ್ತರ ಗುರುಗಳಲ್ಲಿ ಕೋಪವನ್ನು ತಂದಿತ್ತು. ಅದು ಶಿಷ್ಯನ ಉದ್ಧಟತನದ ಉತ್ತರವೆಂದು ಬಗೆದು ಗುರುಗಳು ಮತ್ತೊಂದು ಪ್ರಶ್ನೆ ಹಾಕಿದರು, ‘‘ ನೀನು ಮಹಾ ಮೇಧಾವಿಯೇನು? ನಾನು ಹೇಳಿಕೊಟ್ಟ ಪಾಠದ ಮುಂದಿನ ಭಾಗದಲ್ಲಿ ಏನಿದೆ ಹೇಳು?’’ ಆಗ ಶಿಷ್ಯ ಮುಂದಿನ ವೇದ ಮಂತ್ರ ಪಠಿಸತೊಡಗಿದ. ಗುರುಗಳು ಅವಾಕ್ಕಾದರು, ಇದು ಅವರಿಗೆ ಅಪೂರ್ವ ಅನುಭವ ತಂದಿತ್ತು. ಈ ವರೆಗೆ ಗುರುಗಳು ಯಾರಿಗೂ ಹೇಳಿಕೊಡದ ನರಾಯಣೋಪನಿಷತ್ತನ್ನು ಸ್ವರಬದ್ಧವಾಗಿ ಶಿಷ್ಯ ಪಠಿಸಿದ್ದ. ಕೋಪ, ಮತ್ಸರ ಮಾಯವಾಯಿತು, ಆಶ್ಚರ್ಯ, ಗೌರವ ಮೂಡಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X