ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
ಮಲಬದ್ಧತೆಯನ್ನು
ಹೋಗಲಾಡಿಸಲು
ಉಪಾಯ
ನಮ್ಮ
ಶೌಚಾಲಯದಲ್ಲಿಲ್ಲ,
ನಮ್ಮ
ಭೋಜನಾಲಯದಲ್ಲಿದೆ
ಎಂದು
ನಿಸರ್ಗತಜ್ಞ
ಡಾ.
ವಿಠ್ಠಲದಾಸ
ಮೋದಿ
ಹೇಳುತ್ತಾರೆ.
ಹಾಗಾದರೆ
ಮಲಬದ್ಧತೆ
ಇದ್ದವರು
ಏನು
ಮಾಡಬೇಕು?
- ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
ಮಲಬದ್ಧತೆ ಅಸ್ವಾಭಾವಿಕವಾದದ್ದು. ನಿಸರ್ಗವು ನಿಮ್ಮ ಕರುಳಿಗೆ ದೇಹದ ಮಲವನ್ನು ಸ್ವಾಭಾವಿಕವಾಗಿ ಹೊರಗೆಹಾಕುವ ಶಕ್ತಿಯನ್ನು ಕೊಟ್ಟಿದೆ. ಮಲಬದ್ಧತೆಯಿಂದ ಆ ಶಕ್ತಿ ಕ್ಷೀಣವಾಗುತ್ತದೆ. ಮಲಬದ್ಧತೆಗೆ ಮೂಲ ಕಾರಣ ನಮ್ಮ ಆಹಾರ ಮತ್ತು ಅದನ್ನು ಸೇವಿಸುವ ವಿಧಾನ.
ಆಹಾರದಲ್ಲಿ ಮುಖ್ಯವಾಗಿರುವುದು ಧಾನ್ಯ-ಬೇಳೆಕಾಳು, ತರಕಾರಿ, ಹಣ್ಣುಹಂಪಲಗಳು. ನಾವು ಇವನ್ನು ಯೋಗ್ಯ ಸ್ಥಿತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಮಯಕ್ಕೆ, ಸೇವಿಸುತ್ತಿದ್ದೇವೆಯೇ? ಇದರ ಬಗ್ಗೆ ನಮ್ಮ ಗಮನ ಹರಿಸುವುದು ಅವಶ್ಯಕವಾಗಿದೆ.
ಅಕ್ಕಿಯನ್ನು ಹೆಚ್ಚು ಪಾಲಿಶ್ ಮಾಡಬಾರದು, ಅದರಿಂದ ಅಕ್ಕಿಯ ಸತ್ವ ಕಡಿಮೆಯಾಗುತ್ತದೆ. ಗೋಧಿಯ ಹಿಟ್ಟು ಬಳಸುವಾಗ ಅದರಲ್ಲಿಯ ತೌಡು ತೆಗೆಯಬಾರದು, ಕಾರಣ ತೌಡಿನಲ್ಲೇ ಮಹತ್ವದ ಸತ್ವವಿದೆ. ಹಣ್ಣುಹಂಪಲಗಳ ಸಿಪ್ಪೆ ತೆಗೆಯದೆ ಇದ್ದರೆ ಹೆಚ್ಚು ಉಪಯುಕ್ತ. ಕೆಲವು ಹಣ್ಣುಗಳಲ್ಲಿ (ಸೇಬುಹಣ್ಣು) ಹಣ್ಣಿಗಿಂತ ಸಿಪ್ಪೆಯಲ್ಲೇ ಹೆಚ್ಚು ಸತ್ವವಿರುತ್ತದೆ.
ನಾವು ಹಾಲಿನಲ್ಲಿಯ ನೀರು ತೆಗೆದು ರಸಗುಲ್ಲಾ ಮಡುತ್ತೇವೆ, ಕಬ್ಬಿನ ರಸ ತೆಗೆದು ಸಕ್ಕರೆ ಮಾಡುತ್ತೇವೆ, ಹೆಚ್ಚಿನ ಮಸಾಲೆ ಹಾಕಿ ಆಹಾರ ಸ್ವಾದಿಷ್ಟಗೊಳಿಸುತ್ತೇವೆ. ಇದರಿಂದ ಆಹಾರದ ಸತ್ವ ಕಡಿಮೆಯಾಗುತ್ತದೆ ಎಂಬುದನ್ನು ಮರೆಯುತ್ತೇವೆ. ಮಲಬದ್ಧತೆಯನ್ನು ಹೋಗಲಾಡಿಸಲು ಉಪಾಯ ನಮ್ಮ ಶೌಚಾಲಯದಲ್ಲಿಲ್ಲ, ನಮ್ಮ ಭೋಜನಾಲಯದಲ್ಲಿದೆ ಎಂದು ನಿಸರ್ಗತಜ್ಞ ಡಾ. ವಿಠ್ಠಲದಾಸ ಮೋದಿ ಹೇಳುತ್ತಾರೆ. ಹಾಗಾದರೆ ಮಲಬದ್ಧತೆ ಇದ್ದವರು ಏನು ಮಾಡಬೇಕು?
* ಮೈದಾ ಹಾಗೂ ಸೂಕ್ಷ್ಮಗೊಳಿಸಿದ ಹಿಟ್ಟಿನಿಂದ ತಯಾರಿಸಿದ ಆಹಾರ ತ್ಯಜಿಸಬೇಕು.
* ಹೊಟ್ಟುಸಹಿತ ಹಿಟ್ಟು ಬಳಸಿ ತಯಾರಿಸಿದ ಆಹಾರ ಸೇವಿಸಬೇಕು.
* ಸುಪರ್ಫೈನ್ ಅಕ್ಕಿ, ಹೆಚ್ಚು ಬೆಳ್ಳಗೆ ಪಾಲಿಶ್ ಮಾಡಿದ ಅಕ್ಕಿ ಬಳಸಬಾರದು. ಅದರಲ್ಲಿ ಸತ್ವ ಕಡಿಮೆಯಾಗಿರುತ್ತದೆ.
* ಹಾಲು ಕಚ್ಚಾ ಇರಲಿ, ಅಥವಾ ಒಂದೇ ಕುದಿ ಇರಲಿ.
* ಆಹಾರದಲ್ಲಿ ಮೂರು ಭಾಗ ಮಾಡಬೇಕು; ಒಂದು ಭಾಗ ಧಾನ್ಯ-ಬೇಳೆಕಾಳು ಇದ್ದರೆ, ಇನ್ನೊಂದು ಭಾಗ ತರಕಾರಿ ಇರಲಿ, ಮತ್ತೊಂದು ಭಾಗ ಆಯಾ ಋತುಗಳಲ್ಲಿ ದೊರೆಯುವ ಹಣ್ಣುಗಳಿಂದ ಕೂಡಿರಲಿ. ಇದುವೆ ಮಲಬದ್ಧತೆ ನಿವಾರಿಸುವ ಮೂಲ ಮಂತ್ರ.
* ನಿಮ್ಮ ಮಲಬದ್ಧತೆ ಹಳೆಯದಾಗಿದ್ದರೆ, ಕಠಿಣವಾಗಿದ್ದರೆ- ಮುಳ್ಳುಸೌತೆಕಾಯಿ, ಸೌತೆಕಾಯಿ, ಗಜ್ಜರಿ, ಟೊಮ್ಯಾಟೊ, ಪಾಲಕ್, ನೌಲಕೋಲ್ ಕಚ್ಚಾ ರೂಪದಲ್ಲಿ ಸೇವಿಸಬೇಕು. ಇವುಗಳ ಸಣ್ಣ ತುಂಡುಗಳಿಗೆ ಉಪ್ಪು ನಿಂಬೆರಸ ಬೆರೆಸಿದರೆ, ಅದಕ್ಕೆ ಹೊಸ ರುಚಿ ಬರುತ್ತದೆ, ಹೊಸ ಖಾದ್ಯವೂ ಆಗುತ್ತದೆ.
* ದಿನದಲ್ಲಿ ಆಹಾರವನ್ನು ಮೂರಕ್ಕಿಂತ ಹೆಚ್ಚು ಸಲ ಸೇವಿಸಬಾರದು. (ಬ್ರೆಕ್ಫಾಸ್ಟ್-ಲಂಚ್-ಡಿನರ್). ನಲವತ್ತು ವರ್ಷಗಳಾದ ಮೇಲೆ ಎರಡೇ ಸಲ ಭೋಜನ ಮಾಡಬೇಕು. ಅರವತ್ತರ ನಂತರ ಒಂದೇ ಸಲ ಊಟ ಸಾಕಾಗುತ್ತದೆ. ರಾತ್ರಿಯ ಅಲ್ಪೋಪಹಾರ ಮಾಡಬಹುದು. ರಾತ್ರಿ ಊಟ ಎಂದೂ ಭಾರವಾಗಿರಬಾರದು. ಕೆಲವರಿಗೆ 2ರಿಂದ 3 ತಾಸಿಗೆ ಏನಾದರೂ ತಿನ್ನುವ ಚಟವಿರುತ್ತದೆ. ಅದನ್ನು ಪೂರ್ತಿ ನಿಲ್ಲಿಸಬೇಕು.
* ಹಣ್ಣು ಸೇವಿಸುವುದು ಆಹಾರದ ಅವಿಭಾಜ್ಯ ಅಂಗವಾಗಬೇಕು. ಮುಂಜಾನೆಯ ಬ್ರೆಕ್ಫಾಸ್ಟ್ಗೆ ಒಂದು ಹಣ್ಣು ಇರಲಿ. ಜೊತೆಗೆ ಹಾಲು ಸೇವಿಸಬಹುದು. ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ಹಣ್ಣು ಇರಲಿ. ಆಯಾ ಋತುಗಳಲ್ಲಿ ಲಭ್ಯವಾಗುವ ಹಣ್ಣು ಸೇವಿಸಬೇಕು. ಹಣ್ಣು ತಾಜಾ ಇರಬೇಕು, ಇಲ್ಲದಿದ್ದರೆ ಅವುಗಳಿಂದ ಲಾಭವಾಗುವುದಿಲ್ಲ.