ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲಬದ್ಧತೆ : ಇದು ಅಂತಾರಾಷ್ಟ್ರೀಯ ಮಟ್ಟದ ಕಾಯಿಲೆ!

By Staff
|
Google Oneindia Kannada News

ನಾನು ಬಾಲ್ಯದಲ್ಲಿ ವಿಜಾಪುರದಲ್ಲಿ ನಮ್ಮ ದೊಡ್ಡಪ್ಪನ ಮನೆಯಲ್ಲಿ ಇದ್ದು, ಪ್ರಾಥಮಿಕ ಶಾಲೆಯ ನಾಲ್ಕನೆಯ ಕ್ಲಾಸು ಓದುತ್ತಿದ್ದೆ. ಆಗ ನನಗೆ ಮಲಬದ್ಧತೆ ಕಾಡುತ್ತಿತ್ತು. ನನಗೆ ಊಟವಾದ ಮೇಲೆ ಮಧ್ಯಾಹ್ನ ಬಹಿರ್ದೇಶಕ್ಕೆ ಹೋಗುವ ಅಭ್ಯಾಸ. ಆ ದುರಭ್ಯಾಸ ತಿದ್ದಲು ಅವರು ನನಗೆ ಒಂದು ತಾಮ್ರದ ತಂಬಿಗೆಯಲ್ಲಿ ನೀರನ್ನು ಮುಂಜಾನೆ ಕುಡಿಯಲು ಕಲಿಸಿದರು. ಅದಕ್ಕೇ ಉಷಃಪಾನ ಎನ್ನುತ್ತಾರೆ. ಅದರಿಂದಲೂ ನನ್ನ ಮಧ್ಯಾಹ್ನದ ಅಭ್ಯಾಸ ತಪ್ಪಲಿಲ್ಲ. ಅದಕ್ಕೆ ಅವರು ಒಂದುಉಪಾಯ ಮಾಡಿದರು.

ಬೆಳಗ್ಗೆ ಕಡ್ಡಾಯವಾಗಿ ಟಾಯ್‌ಲೆಟ್‌ನಲ್ಲಿ ಐದು ನಿಮಿಷ ಕೂಡಲು ವಿಧಿಸಿದರು. ನನಗೋ ಬೇಸರ. ಎರಡು ಕಲ್ಲು ಕೊಟ್ಟು ಬಾರಿಸುತ್ತ ಕೂಡಲು ಹೇಳಿದರು. ಅವರ ಸಲಹೆ ವಾರದಲ್ಲಿ ಯಶಸ್ವಿಯಾಯಿತು. ಅವರ ವಾದಸರಣಿ ಹೀಗಿತ್ತು. ಬೆಳಗ್ಗೆ ನಮಗೆ ಮಲವಿಸರ್ಜನೆಯ ಅನಿಸಿಕೆ ಬರಲಿ ಬಿಡಲಿ ನಾವು ಶೌಚಾಲಯದಲ್ಲಿ ಕೂಡುವ ಅಭ್ಯಾಸ ರೂಢಿಮಾಡಿಕೊಳ್ಳಬೇಕು. ದುರಭ್ಯಾಸಗಳು ತಾವೇ ಅಂಟಿಕೊಂಡುಬಿಡುತ್ತವೆ, ಆದರೆ ಒಳ್ಳೆಯ ಅಭ್ಯಾಸಗಳನ್ನು ನಾವು ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಿದ್ದರು.

ನಮ್ಮ ದೊಡ್ಡಪ್ಪ ಒಳ್ಳೆಯ ಶಿಕ್ಷಕರಾಗಿದ್ದರು. ನಮಗೆ ಅಭ್ಯಾಸದ ಜೊತೆಗೆ ಈಜಲು ಕಲಿಸಿದ್ದರು, ಸೂರ್ಯನಮಸ್ಕಾರ ಹಾಗೂ ಶೀರ್ಷಾಸನ ಅವರೇ ಕಲಿಸಿದ್ದರು. ನಂತರ ನನಗೆ ಮಲಬದ್ಧತೆ ಎಂದೂ ಕಾಡಲಿಲ್ಲ. ಇದಕ್ಕೆ ನಾನು ನನ್ನ ದೊಡ್ಡಪ್ಪನನ್ನು ನೆನೆಯುತ್ತೇನೆ.

ಮಲಬದ್ಧತೆ ವಿಷಯ ಚರ್ಚಿಸುವಾಗ ಒಂದೊಂದು ಮನೆಯಲ್ಲಿ ಒಂದೊಂದು ಕತೆ ಇರುತ್ತದೆ. ಒಂದೆರಡು ಇಲ್ಲಿ ಬರೆಯುವೆ.

ಒಂದು ಮನೆಯಲ್ಲಿ ಅಣ್ಣ ಪ್ರಾಧ್ಯಾಪಕ, ತಮ್ಮ ಇಂಜಿನಿಯರ್, ತಂಗಿ ವಿದ್ಯಾರ್ಥಿನಿ. ಅಣ್ಣ ಟಾಯ್‌ಲೆಟ್‌ನಲ್ಲಿ ಕುಳಿತರೆ ಒಂದು ತಾಸು ಹೊರಬರುತ್ತಿರಲಿಲ್ಲ. ತಮ್ಮ ಚೇಷ್ಟೆಗಾಗಿ ಅಲ್ಲಿ ಹೊರಗೆ ಧ್ಯಾನಮಂದಿರ ಎಂದು ಬರೆದಿದ್ದ. ನಾನು ಒಮ್ಮೆ ಅತಿಥಿಯಾಗಿ ಅವರ ಮನೆಗೆ ಹೋಗಿದ್ದೆ. ನನಗೆ ಟಾಯ್‌ಲೆಟ್‌ಗೆ ಹೋಗಬೇಕಾಗಿತ್ತು. ನನಗೆ ತಮ್ಮ ಹೇಳಿದ, 'ಅಂಕಲ್, ಅಣ್ಣನನ್ನು ಹೊರಗೆ ಬರುವಂತೆ ಮಾಡುವೆ. ನೀವು ಅದರ ಲಾಭ ಪಡೆಯಿರಿ." ಅವನು ಅಲ್ಲಿಯ ಲೈಟ್ ಆನ್ ಮಾಡಿದ. ಅಣ್ಣನಿಗೆ ಹಗಲು ಯಾರಾದರೂ ಎಲ್ಲಿಯಾದರೂ ಲೈಟ್ ಹಾಕಿದರೆ ಕೋಪ ಬರುತ್ತಿತ್ತು. ಅದನ್ನು ಆರಿಸಲು ಹೊರಗೆ ಬಂದ. ನನ್ನ ಸಮಸ್ಯೆ ಬಗೆಹರಿದಿತ್ತು. ಮಲಬದ್ಧತೆಯ ಬಗ್ಗೆ ಮಾತಾಡುವಾಗ ಈ ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ.

ಇನ್ನೊಂದೆಡೆ ಬೇರೆಯ ತರಹದ ಮೋಜು ಕಂಡೆ. ನಮ್ಮ ಸಂಬಂಧಿಕರ ಮನೆಯಲ್ಲಿ ಎರಡೂ ಬಾಲ್ಕನಿ ಇವೆ. ಮನೆಗೆ ಯಾರಾದರು ಬಂದರೆ ಒಂದೇ ಬಾಲ್ಕನಿ ತೋರುಸುತ್ತಾರೆ. ಎರಡನೆಯದು ಯಾವಾಗಲೂ ಮುಚ್ಚಿರುತ್ತದೆ. ಒಮ್ಮೆ ಕುತೂಹಲದಿಂದ ಅಲ್ಲಿ ಏನಿದೆ ಎಂದು ನೋಡಿದೆ. ನನಗೆ ಪರಮಾಶ್ಚರ್ಯ ಕಾದಿತ್ತು. ಅಲ್ಲಿ ಒಂದು ಕಮೋಡ್ ಹಾಕಿಸಲಾಗಿತ್ತು. ಇದೇನು ಎಂದಾಗ ಮನೆಯ ಯಜಮಾನ ಹೇಳಿದ; ನನ್ನ ಎರಡನೆಯ ಮಗನಿಗೆ ಒಂದು ತಾಸು ಕೂಡುವ ಅಭ್ಯಾಸವಿದೆ. ಇದರಿಂದ ಇತರರಿಗೆಲ್ಲ ತೊಂದರೆ. ಆ ಸಮಸ್ಯೆ ಬಗೆಹರಿಸಲು ಇದೊಂದು ಉಪಾಯ ಎಂದಿದ್ದ.

ಈ ಉಪಾಯದಲ್ಲಿ ಒಂದು ಅಪಾಯವೂ ಇದೆ. ಇದರಿಂದಾಗಿ ಆ ಹುಡುಗ ಮಲಬದ್ಧತೆಯಿಂದ ಹೊರಬರುವ ದಾರಿಯೇ ಮುಚ್ಚಿದಂತಾಗುವುದಿಲ್ಲವೇ?
ವಿದೇಶಗಳಲ್ಲಂತೂ ಜನ ಟಾಯ್‌ಲೆಟ್‌ನಲ್ಲಿ ಕುಳಿತು ಪುಸ್ತಕ ಓದುತ್ತಾರೆ. ಇದಕ್ಕಾಗಿ 'ಟಾಯ್‌ಲೆಟ್ ಸಾಹಿತ್ಯ" ಪ್ರಕಟವಾಗುತ್ತಿದೆ ಎಂಬ ಮಾತು ನಂಬುವುದು ಕಷ್ಟ. ಆದರೆ ಇದು ಸತ್ಯ.

ಪ್ರಕೃತಿಚಿಕಿತ್ಸೆಯಿಂದ, ಯೋಗಾಭ್ಯಾಸದಿಂದ ಮಲಬದ್ಧತೆಯನ್ನು ಹೋಗಲಾಡಿಸಬಹುದು ಎಂಬ ವಿಚಾರ ಹೆಚ್ಚಿನ ಜನರಿಗೆ ಹೊಳೆಯುವುದೇ ಇಲ್ಲ. ದೇಹ ಯಂತ್ರದಂತೆ ಕೆಲಸ ಮಾಡುತ್ತದೆ. ನೀವು ಎಚ್ಚರವಿರಲಿ ಅಥವಾ ಮಲಗಿರಲಿ ನಿಮ್ಮ ದೇಹದ ಯಂತ್ರ ಕೆಲಸಮಾಡುತ್ತಲೇ ಇರುತ್ತದೆ. ಮಲಬದ್ಧತೆಗೆ ಕಾರಣವನ್ನು ನಾವು ಮನಸ್ಸಿನ ಸ್ಥಿತಿಯಲ್ಲಿ ಹಾಗೂ ಆಹಾರದಲ್ಲಿ ಹುಡುಕಬೇಕು, ಅದನ್ನು ಸರಿಪಡಿಸಬೇಕು.

ಮಲಬದ್ಧತೆಯಿಂದ ಬಹಳ ತೊಂದರೆಗಳಿವೆ. ಶರೀರ ಸುಸ್ತಾಗುತ್ತದೆ, ಹೊಟ್ಟೆ ಭಾರವಾಗುತ್ತದೆ, ತಲೆಯಲ್ಲಿ ನೋವು ಕಾಣುತ್ತದೆ. ಕೆಲಸಲ ನಿದ್ದೆ ಬರುವುದಿಲ್ಲ. ತಲೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಹಸಿವೆ ಅಡಗಿಹೋಗುತ್ತದೆ. ಇದು ಅನೇಕ ಇತರ ರೋಗಗಳಿಗೆ ಆಮಂತ್ರಣ ಕೂಡ ನೀಡುತ್ತದೆ. ಎಲ್ಲ ರೋಗಗಳ ಮೂಲ ಮೂಲಾಧಾರದಲ್ಲಿದೆ. ಮೂಲಬೇರು ಮಲಬದ್ಧತೆಯಲ್ಲಿದೆ. ಉಂಡ ಅನ್ನ ಪಚನವಾದ ಮೇಲೆ ಅಲ್ಲಿ ಉಳಿದುಕೊಂಡಿರುವ ಮಲ ದೊಡ್ಡ ಕರುಳಿನಿಂದ ಸುಲಭವಾಗಿ ಹೊರಬೀಳದಿದ್ದರೆ ಅದು ಅಲ್ಲೆ ಕೊಳೆಯುತ್ತದೆ. ದುರ್ಗಂಧಕ್ಕೆ ಎಡೆಮಾಡುತ್ತದೆ. ಗ್ಯಾಸ ಆಗುತ್ತದೆ. ಅದು ವಿಷವಾಯು. ಅದು ಎಲ್ಲೆಡೆ ಹರಡುತ್ತದೆ ಮತ್ತು ದೈಹಿಕ ಸ್ವಾಭಾವಿಕ ಕ್ರಿಯೆಗೆ ತಡೆಯೊಡ್ಡುತ್ತದೆ.

ಮಲದ ಸ್ಥಾನ ಕರುಳು. ಕರುಳಿಗೆ ಹೀರುವ ಸ್ವಭಾವವಿರುತ್ತದೆ. ಮಲವು ಸುಲಭವಾಗಿ ಹೊರಬೀಳದಿದ್ದರೆ, ಸ್ನಾಯುಗಳ ಮೇಲೆ ಪರಿಣಾಮವಾಗುತ್ತದೆ, ರಕ್ತ ದೂಷಿತವಾಗುತ್ತದೆ. ಈ ಗತಿ, ಈ ವಿಕೃತಿ, ದಿನಗಟ್ಟಲೆ, ವರುಷಗಟ್ಟಲೆ ಮುಂದುವರಿದರೆ ದೇಹದ ಗತಿಯೇನು? ಮಲಬದ್ಧತೆ ಅಸ್ವಾಭಾವಿಕ. ನಿಸರ್ಗ ನಮಗೆ ಮಲವಿಸರ್ಜನೆ ಮಾಡುವ ಸ್ವಾಭಾವಿಕ ಶಕ್ತಿ ನೀಡಿದೆ. ನಾವು ಅಸ್ವಾಭಾವಿಕ ನಡತೆಯಿಂದ ನಮ್ಮ ದೇಹದ ಯಂತ್ರವನ್ನು ಕೆಡಿಸುತ್ತೇವೆ. ನಾವು ಯೋಗ್ಯ ರೀತಿಯಿಂದ ಆಹಾರ ಸೇವಿಸಿದರೆ ನಾವು ಮಲಬದ್ಧತೆಯಿಂದ ಮುಕ್ತಿ ಪಡೆಯಬಹುದು. ಇದಕ್ಕೆ ಸಂಬಂಧಿಸಿದಂತೆ ನಿಸರ್ಗ ಚಿಕಿತ್ಸಾ ತಜ್ಞರ ವಿಚಾರಗಳನ್ನು ಮುಂದೆ ತಿಳಿಯೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X