ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವುಗಳ ಕಲಿಯಿರಿ, ಸುಖವಾಗಿ ಬಾಳಿರಿ!

By Staff
|
Google Oneindia Kannada News


ವಿಷಾಹಾರ ಬಾಧೆಯಾದಾಗ ಜಲಧೌತಿ(ವ್ಯಾಘ್ರಧೌತಿ) ನಮಗೆ ಅತ್ಯಂತ ಉಪಕಾರಿ! ಅದೇ ರೀತಿ ವಸ್ತ್ರಧೌತಿಯ ಅಭ್ಯಾಸದಿಂದ ಗುಲ್ಮ, ಜ್ವರ, ಪ್ಲೀಹ, ಕುಷ್ಠ, ಕಫ, ಪಿತ್ತ ವಿಕಾರಗಳಿಗೆ ಶಮನ.

GV Kulkarni demonstrating Jaladhoutiಧೌತಿ ಶುದ್ಧಿಕ್ರಿಯೆಯಲ್ಲಿ ಹಲವಾರು ಪ್ರಕಾರಗಳಿವೆ. ಹೆಚ್ಚು ಪರಿಚಿತವಾಗಿರುವುದು ‘ಜಲಧೌತಿ’.

‘ಜಲಧೌತಿ’ ಎಂಬ ಮಹತ್ವದ ಶುದ್ಧಿಕ್ರಿಯೆಯನ್ನು ಬಹಳ ಕಡೆಗಳಲ್ಲಿ,(ಯೋಗ ತರಬೇತಿ ಕೇಂದ್ರಗಳಲ್ಲಿ), ಕಲಿಸುವುದೇ ಇಲ್ಲ. ಠಾಣಾದ ಹಠಯೋಗಿ ನಿಕಂ ಗುರೂಜಿಯವರ ‘ಅಂಬಿಕಾ ಯೋಗ ಕುಟೀರ’ದ ಶಾಖೆಗಳಲ್ಲಿ ಇದನ್ನು ಪ್ರಾರಂಭದಲ್ಲಿಯೇ ಕಡ್ಡಾಯವಾಗಿ ಕಲಿಸುತ್ತಾರೆ. ಇದು ಸುಲಭವಾಗಿದೆ, ಆದರೆ ಪ್ರಯತ್ನಿಸಿ ಕಲಿಯಬೇಕಾಗುತ್ತದೆ. ನಮಗೆ ತಿನ್ನುವುದು ಗೊತ್ತಿದೆ, ವಮನ ಮಾಡಿಕೊಳ್ಳಲು ಮನ ಒಪ್ಪುವುದಿಲ್ಲ. ಈ ಶುದ್ಧಿಕ್ರಿಯೆಯನ್ನು ಪ್ರತಿ ನಿತ್ಯ ಮಾಡುವ ಅವಶ್ಯಕತೆ ಇಲ್ಲ. ಎರಡು ವಾರಕ್ಕೊಮ್ಮೆ ಮಾಡಿದರೆ ಸಾಕು.

ಸಿದ್ಧತೆ :

ಬೆಳಗ್ಗೆ ಎದ್ದು 2-3 ಲೀಟರ್‌ ನೀರನ್ನು ಉಗುರುಬೆಚ್ಚಗೆ ಮಾಡಿ ಅದರಲ್ಲಿ ಮೂರು ಚಮಚೆ ಉಪ್ಪು ಬೆರೆಸಬೇಕು. ಕಾಗಾಸನದಲ್ಲಿ ಇಲ್ಲವೆ ಸುಖಾಸನದಲ್ಲಿ ಕುಳಿತು ನೀರು ಕಂಠದವರೆಗೆ ಬರುವ ತನಕ ಕುಡಿಯಬೇಕು. ನಂತರ ಬಾಗಿ ನಿಂತು ಎಡ ಕೈ ಎಡಮೊಳಕಾಲ ಮಂಡೆಯಮೇಲಿಟ್ಟು ಬಲಗೈಯ ಬೆರಳುಗಳನ್ನು(ತರ್ಜನೀಯ ಮತ್ತು ಮಧ್ಯ ಬೆರಳು) ಬಾಯಲ್ಲಿ ಹಾಕಿ ವಾಂತಿ ಮಾಡಲು ಪ್ರಯತ್ನಿಸಬೇಕು. ಬಹಳ ‘ಫೋರ್ಸ್‌’ ಮಾಡಬಾರದು. ಒಮ್ಮೊಮ್ಮೆ ನೀರು ಎದೆ ಸೇರಿ ತೊಂದರೆಯುಂಟಾಗುವ ಪ್ರಸಂಗ ಉಂಟಾಗಬಹುದು. ಇಂಥ ಕ್ರಿಯೆ ಮೊದಲ ಸಲ ಮಾಡುವಾಗ ಮಾರ್ಗದರ್ಶನ ಅವಶ್ಯಕತೆ ಇದೆ.

‘ಜಲಧೌತಿ’ಯನ್ನು ಕಲಿಸುವಾಗ ನಾನು ಒಂದು ಉಪಕಥೆಯನ್ನು ಹೇಳುತ್ತೇನೆ. ನಾನು ಹಿಂದೆ ನಿಯಮಿತವಾಗಿ ಉದಯ ಟಿ.ವಿ.ಯಲ್ಲಿ ಬೆಳಗ್ಗೆ ಬರುವ ಪರಿಚಯ ಕಾರ್ಯಕ್ರಮ ನೋಡುತ್ತಿದ್ದೆ. (ಈಗ ಅದು ನಿಂತಿದೆ.) ರಾಮಚಂದ್ರ ಮಲ್ಯ ಎಂಬವರ ಸಂದರ್ಶನದಿಂದ ನಾನು ಪ್ರಭಾವಿತನಾಗಿದ್ದೆ (1 ಫೆಬ್ರುವರಿ, 2002). ಅವರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿ. ಒಳ್ಳೆ ವಾಗ್ಮಿ, ಬಹುಶ್ರುತರು, ಪತಂಜಲಿಯ ಯೋಗಸೂತ್ರದ ಬಗ್ಗೆ ಚೆನ್ನಾಗಿ ಮಾತಾಡುವವರು. ಮನುಷ್ಯ ಸ್ವಭಾವತಃ ಜಿಪುಣ. ಪಡೆಯುವುದು ಸುಲಭ, ಕೊಡುವುದು ಕಷ್ಟದ ಕೆಲಸ ಎನ್ನುತ್ತ, ಸ್ವಾಮಿ ಚಿನ್ಮಯಾನಂದರು ಹೇಳುತ್ತಿದ್ದ ಒಂದು ಪ್ರಸಂಗವನ್ನು ಅವರು ಉದ್ಧರಿಸಿದ್ದರು.

ಒಬ್ಬ ನೀರಲ್ಲಿ ಬಿದ್ದು ಮುಳುಗುತ್ತಿದ್ದ. ಈಜಲು ಬರುತ್ತಿರಲಿಲ್ಲ. ದಂಡೆಯಲ್ಲಿದ್ದ ಒಬ್ಬ ಅವನನ್ನು ಉಳಿಸಲು ‘ಕೈ ತಾ’ ಎಂದು ಕೂಗಿದ. ಎಂದೂ ಏನನ್ನೂ ಕೊಟ್ಟು ಗೊತ್ತಿಲ್ಲದ ಮನುಷ್ಯ ಹಾಗೆಯೇ ಮುಳುಗಿ ಎದ್ದು ‘ರಕ್ಷಿಸಿ’ ಎಂದ. ಹೊರಗಿದ್ದ ವ್ಯಕ್ತಿ ಮತ್ತೆ ‘ತಾ’ ಎಂದರೂ ಅವನು ಕೈ ನೀಡದಿರಲು, ದಂಡೆಯಲ್ಲಿದ್ದವ, ‘ಇದು ತೊಗೊ’ ಎಂದು ತನ್ನ ಕೈ ಚಾಚಿದ್ದ. ಸದಾ ತೊಗೊಂಡು ಗೊತ್ತಿದ್ದ ಮುಳುಗುವ ಮನುಷ್ಯ ಅವನ ಕೈ ಹಿಡಿದು ಬದುಕಿದನಂತೆ. ಹಾಗೆಯೇ ಕುಡಿದ ನೀರನ್ನು ಹೊರಗೆ ಹಾಕಲು ಕಲಿಸಬೇಕಾಗುತ್ತದೆ. ‘ಒಂದು ಲೀಟರ್‌ ನೀರು ಕುಡಿದೂ ಒಂದು ಹನಿ ಕೂಡ ಹೊರಗೆ ಹಾಕಲು ಸಾಧ್ಯವಾಗದವರೂ ಇದ್ದಾರೆ’ ಎಂದು ಪೀಠಿಕೆ ಹಾಕಿ, ‘ನೀರು ಕುಡಿಯುವುದನ್ನು ಕಲಿಸಬೇಕಾಗಿಲ್ಲ, ಆದರೆ ವಮನ ಮಾಡುವುದನ್ನು ಕಲಿಸಬೇಕಾಗುತ್ತದೆ’ ಎಂದು ಹೇಳಿ ಜಲನೇತಿ ಕಲಿಸುವ ಪರಿಪಾಠ ನನ್ನದು.

ಈ ಸಂದರ್ಭದಲ್ಲಿ ಇನ್ನೊಂದು ಘಟನೆ ನೆನಪಾಗುತ್ತದೆ. ಮೊದಲ ಸಲ ನಿಸರ್ಗೋಪಚಾರ ತಜ್ಞ ಡಾ। ಪಿ.ಕೆ ಬೋಳಾರ ಅವರನ್ನು ಭೇಟಿಯಾದ ಸಂದರ್ಭ. ನನ್ನ ವಿದ್ಯಾರ್ಥಿ ಮಿತ್ರ ವಸಂತ ಕಿಣಿಯವರು ನನಗೆ ಡಾ। ಪದ್ಮನಾಭ ಬೋಳಾರರ ಬಗ್ಗೆ ಹೇಳಿದ್ದರು. ಆ ದಿನಗಳಲ್ಲಿ ನನ್ನ ಅರ್ಧಾಂಗಿಗೆ ಎದೆಯಲ್ಲಿ ಉರಿತದ ಬಾಧೆ(ಎಸಿಡಿಟಿ)ಇತ್ತು. ಅನೇಕ ವಿಧದ ಉಪಚಾರವಾದರೂ ಉಪಶಮನ ದೊರೆತಿರಲಿಲ್ಲ.

ಡಾ। ಬೋಳಾರರು ಬೆಳಗ್ಗೆ ಒಂದು ಕಪ್‌ ಬೂದು ಕುಂಬಳಕಾಯಿ (ಸಂಡಿಗೆಯ ಕುಂಬಳ) ರಸವನ್ನು ಒಂದು ಚಮಚೆ ಮಧುವಿನೊಂದಿಗೆ ಎರಡು ವಾರ ಸೇವಿಸಲು ಶಿಫಾರಸು ಮಾಡಿದ್ದರು. ಅದರಿಂದ ಮಡದಿಗೆ ಉಪಶಮನ ದೊರೆತಿತ್ತು. ನಾನು ಈ ವಿಷಯ ನಮ್ಮ ಯೋಗ ಶಿಕ್ಷಕರಾಗಿದ್ದ ಹಠಯೋಗಿ ನಿಕಂ ಗುರೂಜಿಯವರಿಗೆ ಹೇಳಿದ್ದೆ. ಅವರು ನಗುತ್ತ ಎಂದಿದ್ದರು, ‘‘ಕುಂಬಳಕಾಯಿಗೆ ಹಣ ವೆಚ್ಚ ಮಾಡುವುದೇತಕ್ಕೆ? ನಾವು ಯೋಗದಲ್ಲಿ ಪುಕ್ಕಟೆಯಾಗಿ ಗುಣಪಡಿಸುತ್ತೇವೆ.’’ ಎಂದು. ಅದೇನೆಂದು ಕೇಳಿದಾಗ ಅವರು ನಮಗೆ ಕಲಿಸಿದ ಶುದ್ಧಿಕ್ರಿಯೆಯಲ್ಲಿ ಒಂದಾದ ‘ಜಲಧೌತಿ’ಯನ್ನು ನೆನಪಿಸಿ, ‘‘ತಪ್ಪದೇ 3-4 ದಿನ ಜಲಧೌತಿ ಮಾಡಿದರೆ ಎಸಿಡಿಟಿ ಹೊರಟು ಹೋಗುತ್ತದೆ’’ ಎಂದಿದ್ದರು.

ನಾನು ನಿಯಮಿತವಾಗಿ ತಿಂಗಳಲ್ಲಿ ಎರಡು ಸಲ ಜಲಧೌತಿ ಮಾಡುತ್ತಿದ್ದೆ. ಒಮ್ಮೆ ಅದರ ಮಹತ್ವ ನನಗೆ ತಿಳಿಯಿತು, ಅನುಭವಕ್ಕೆ ಬಂತು. ಯಾವುದೋ ಮದುವೆಯ ಪಾರ್ಟಿಯಲ್ಲಿ ನನಗೆ ಊಟದ ನಂತರ ವಿಪರೀತ ತಲೆಸಿಡಿತ (ಗಿಡಿನೆಸ್‌), ಜೊತೆಗೆ ಮೈ ಬೆವೆಯಲು ಪ್ರಾರಂಭವಾಯ್ತು. ಆಹಾರದಲ್ಲಿ ವಿಷದಂತಹ ಪದಾರ್ಥ ಮಿಶ್ರಿತವಾಗಿರಬಹುದು ಎಂಬ ಸಂಶಯ ನನಗೆ ಬಂತು. ಮನೆಗೆ ಬಂದವನೇ ಮೂರು ಲೀಟರ್‌ ನೀರು ಬೆಚ್ಚಗೆ ಮಾಡಿ, ಸ್ವಲ್ಪ ಉಪ್ಪು ಸೇರಿಸಿ, ಕುಡಿದು ಬಿಟ್ಟೆ. ಬಚ್ಚಲಿಗೆ ಹೋಗಿ ಜಲಧೌತಿ ಪ್ರಕ್ರಿಯೆ ಪ್ರಾರಂಭಿಸಿದೆ. ನೀರಂತು ಹೊರಬಂತು, ಜೊತೆಗೆ ನಾನು ಸೇವಿಸಿದ ಆಹಾರವೆಲ್ಲ ಹೊರಬಿದ್ದಿತು. ಮರುದಿನ ನನಗೆ ಬಾಧೆಯಿಂದ ಮುಕ್ತಿ ದೊರೆತಿತ್ತು. (ಮುಂಜಾನೆ ಹೊಟ್ಟೇ ಖಾಲಿ ಇದ್ದಾಗ ನೀರುಕುಡಿದು ವಾಂತಿ ಮಾಡಿದರೆ ಅದಕ್ಕೆ ‘ಕುಂಜಾಲಧೌತಿ’ ಎನ್ನುತ್ತಾರೆ, ಊಟವಾದ ಮೇಲೆ ಮಾಡುವ ಈ ಕ್ರಿಯೆಗೆ ‘ವ್ಯಾಘ್ರಧೌತಿ’ ಎನ್ನುತ್ತಾರೆ ಎಂದು ಕೆಲ ಸಂಸ್ಕೃತ ಗ್ರಂಥಗಳನ್ನು ಓದಿದಾಗ ತಿಳಿಯಿತು.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X