ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊಡ್ಡ ಕರುಳನ್ನು ಸ್ವಚ್ಛವಾಗಿಡಿ! ರೋಗಗಳ ದೂರವಿಡಿ!

By Staff
|
Google Oneindia Kannada News


ದೊಡ್ಡ ಕರುಳಿನಲ್ಲಿ ಸಾಕಷ್ಟು ಮಲ ತುಂಬಿಕೊಂಡಿರುತ್ತದೆ. ಅದನ್ನು ಸಕಾಲಕ್ಕೆ (ಪ್ರತಿನಿತ್ಯ) ಸ್ವಚ್ಛಗೊಳಿಸದಿದ್ದರೆ ಅನೇಕ ವಿಕಾರಗಳಿಗೆ, ರೋಗಗಳಿಗೆ ಕಾರಣವಾಗುತ್ತದೆ. ದೊಡ್ಡ ಕರುಳು ಸ್ವಚ್ಛವಾಗಿ ಇರದಿದ್ದರೆ ಮಲಬದ್ಧತೆ, ಅಲ್ಲದೆ ಮೂಲವ್ಯಾಧಿ ಬಾಧಿಸುತ್ತವೆ. ಓದಿ; ‘ಯೋಗವಿದ್ದಲ್ಲಿ ರೋಗವಿಲ್ಲ’ ಮಾಲಿಕೆಯ ಆರನೇ ಭಾಗ.

Yoga helps keep your body cleanಮೂರನೆಯ ಶುದ್ಧಿಕ್ರಿಯೆ ‘ಬಸ್ತಿಕ್ರಿಯೆ’. ಇದರಲ್ಲಿ ಎರಡು ಪ್ರಕಾರಗಳಿವೆ ;

1) ಜಲಬಸ್ತಿ

2) ಶುಷ್ಕಬಸ್ತಿ ಅಥವಾ ಸ್ಥಲಬಸ್ತಿ

‘ಹಠಯೋಗಪ್ರದೀಪಿಕಾ’ ಇದನ್ನು (ಈ ಕ್ರಿಯೆಯನ್ನು) ‘ಬಸ್ತಿ’ ಎಂದು ಕರೆದರೆ ‘ಘೕರಂಡ ಸಂಹಿತಾ’ ಇದನ್ನು ‘ವಸ್ತಿ’ ಎಂದು ಕರೆಯುತ್ತದೆ.

ನಮ್ಮ ಹೆಚ್ಚಿನ ಕಾಯಿಲೆಗಳಿಗೆ ನಮ್ಮ ಹೊಟ್ಟೆಯೇ ಕಾರಣವಾಗಿರುತ್ತದೆ. ಹೊಟ್ಟೆಯ ಕೆಲಸ ಉಂಡ ಅನ್ನವನ್ನು ಪಚನ ಮಾಡುವುದು. ಅದು ಸರಿಯಾಗಿ ಪಚನವಾಗದಿದ್ದರೆ ಮಲವು ಉಳಿದುಬಿಡುತ್ತದೆ. ಮಲ ಶೇಖರವಾಗಿರುವ ಸ್ಥಾನವೇ ದೊಡ್ದ ಕರುಳು. ಆದ್ದರಿಂದ ದೊಡ್ಡ ಕರುಳನ್ನು ಸ್ವಚ್ಛವಾಗಿ ಇಡುವುದು ಆವಶ್ಯಕವಾಗಿದೆ.

ದೊಡ್ಡ ಕರುಳನ್ನು ಸ್ವಚ್ಛಗೋಳಿಸುವ ಅನುಪಮ ಕ್ರಿಯೆ ಎಂದರೆ ‘ಬಸ್ತಿ’ (ವಸ್ತಿ). ದೊಡ್ಡ ಕರುಳಿನಲ್ಲಿ ಸಾಕಷ್ಟು ಮಲ ತುಂಬಿಕೊಂಡಿರುತ್ತದೆ. ಅದನ್ನು ಸಕಾಲಕ್ಕೆ (ಪ್ರತಿನಿತ್ಯ) ಸ್ವಚ್ಛಗೊಳಿಸದಿದ್ದರೆ ಅನೇಕ ವಿಕಾರಗಳಿಗೆ, ರೋಗಗಳಿಗೆ ಕಾರಣವಾಗುತ್ತದೆ. ದೊಡ್ಡ ಕರುಳು ಸ್ವಚ್ಛವಾಗಿ ಇರದಿದ್ದರೆ ಮಲಬದ್ಧತೆ, ಅಲ್ಲದೆ ಮೂಲವ್ಯಾಧಿ ಬಾಧಿಸುತ್ತವೆ. ಕೆಲವರು ನಿಯಮಿತವಾಗಿ ಯೋಗಾಸನ ಹಾಕುತ್ತಿದ್ದರೂ ಇಂಥ ವ್ಯಾಧಿಗಳಿಗೆ ಅವರೇಕೆ ಬಲಿಯಾಗುತ್ತಾರೆಂದು ಇತರರು ಪ್ರಶ್ನಿಸುತ್ತಾರೆ. ಅವರು ನಿಯಮಿತವಾಗಿ ಯೋಗಾಸನ ಹಾಕುತ್ತಿರಬಹುದು, ಆದರೆ ಅವರು ಶುದ್ಧಿಕ್ರಿಯೆ ಮಾಡುವುದನ್ನು ಮರೆತಿರಬೇಕು. ಅವರ ವ್ಯಾಧಿಗಳಿಗೆ ಅವರು ನಿರ್ಲಕ್ಷ್ಯ ಮಾಡಿದ ಶುದ್ಧಿಕ್ರಿಯೆಯೂ ಒಂದು ಮಹತ್ವದ ಕಾರಣ ಎಂದು ಹೇಳಬೇಕಾಗುವುದು.

ರೋಗ ದಮನ ಮತ್ತು ಸಾಮಾನ್ಯ ರೀತಿಯ ರೋಗ ನಿರ್ಮೂಲನೆ ಇವುಗಳಲ್ಲಿ ಬಹಳ ಅಂತರವಿದೆ ಎಂದು ತಜ್ಞರು ಹೇಳುತ್ತಾರೆ. ನಮಗೆ ಯಾವುದಾದರೂ ರೋಗ ಬಾಧೆಯಾದರೆ ನಮ್ಮ ಅಭ್ಯಾಸದಲ್ಲಿ ಏನೋ ಕೊರತೆ ಇದೆ ಎಂದರ್ಥ. ನಮಗೆ ಮಲಬದ್ಧತೆ ಕಾಡಿದರೆ ‘ಶಂಖಪ್ರಕ್ಷಾಲನೆ’ ಮಾಡಲು ಯೋಗನಿಪುಣರು ಹೇಳುತ್ತಾರೆ. ಈ ಕ್ರಿಯೆಯನ್ನು ತಿಂಗಳಿಗೆ ಒಂದು ಸಲ ಮಾಡಬಹುದು. ಆದರೆ ವಿಪರೀತ ಮಲಬದ್ಧತೆ (ಕ್ರಾನಿಕ್‌ ಕಾನ್‌ಸ್ಟಿಪೇಶನ್‌) ಇರುವವರು ಬಸ್ತಿಕ್ರಿಯೆ ಮಾಡಿದರೆ ಅವರಿಗೆ ಬೇಗನೇ ಉಪಶಮನ ದೊರೆಯುತ್ತದೆ.

ನಿಸರ್ಗೋಪಚಾರದಲ್ಲಿ ದೊಡ್ಡ ಕರುಳನ್ನು ಸ್ವಚ್ಛಮಾಡಲು ‘ಎನಿಮಾ’ ಕೊಡುತ್ತಾರೆ. ಬಸ್ತಿಕ್ರಿಯೆ ಕೆಲಮಟ್ಟಿಗೆ ಅದನ್ನು ಹೋಲುತ್ತದೆ. ನಮ್ಮ ಪೂರ್ವಜರು ಮಾಡುವ ಬಸ್ತಿಕ್ರಿಯೆ ಸ್ವಲ್ಪ ಕಷ್ಟಕರವಾಗಿತ್ತು. ಹರಿಯುವ ನೀರಲ್ಲಿ, ಅಂದರೆ ನದಿಯಲ್ಲಿ ಅಥವಾ ಹಳ್ಳದ ನೀರಲ್ಲಿ ನಿಂತುಕೊಂಡು ಈ ಕ್ರಿಯೆ ಮಾಡುತ್ತಿದ್ದರು. ಇದನ್ನು ಹೊಂಡ ಅಥವಾ ಕೆರೆಯಲ್ಲಿ ಕೂಡ ಮಾಡಬಹುದು. ಈ ಕ್ರಿಯೆಯಿಂದ ಮಲವು ಹೊರಗೆ ಹೋಗುತ್ತದೆ, ನಿಂತ ನೀರು ಕೊಳೆಯಾಗುತ್ತದೆ. ಈ ಕಾರಣದಿಂದ ಹರಿವ ನೀರೇ ಮೇಲು.

ಇದನ್ನು ಪ್ರಯೋಗಿಸುವವರು ಟೊಂಕದ ವರೆಗೆ ನೀರಲ್ಲಿ ಉತ್ಕಟಾಸನದಲ್ಲಿ ನಿಲ್ಲಬೇಕು. ಉತ್ಕಟಾಸನವೆಂದರೆ ಎರಡು ಕಾಲು ಅಗಲ ಮಾಡಿ ಬಾಗಿ ನಿಲ್ಲಬೇಕು. ಶ್ವಾಸೋಚ್ಛ್ವಾಸದ ಜೊತೆಗೆ ಗುದದ್ವಾರದ ಆಕುಂಚನ ಹಾಗೂ ಪ್ರಸರಣ ಕ್ರಿಯೆ ಮಾಡುತ್ತಿರಬೇಕು. ಮೊದಮೊದಲು ಗುದದ್ವಾರದಲ್ಲಿ ಸಾಕಷ್ಟು ನೀರು ಸೇರುವುದಿಲ್ಲ. ನಿಯಮಿತ ಅಭ್ಯಾಸದಿಂದ ಇದನ್ನು ಸಾಧಿಸಬಹುದು. ಕೆಲವರು ತಮ್ಮ ಗುದದ್ವಾರದಲ್ಲಿ ನಳಿಕೆಯನ್ನು ಹಾಕಿಕೊಂಡು ನೀರನ್ನು ಒಳಗೆ ಎಳೆಯುತ್ತಾರೆ.

‘‘ನಾಭಿಮಗ್ನಜಲೇ ಪಾಯುನ್ಯಸ್ತನಾಲೋತ್ಕಟಾಸನಃ ।
ಆಕುಂಚನಂ ಪ್ರಸಾರಂಚ ಜಲ ವಸ್ತಿಂ ಸಮಾಚರೇತ್‌ ।।

ಪ್ರಮೇಹಂ ಚ ಉದಾವರ್ತಂ ಕ್ರೂರವಾಯುಂ ನಿವಾರಯೇತ್‌ ।
ಭವೇತ್‌ ಸ್ವಚ್ಛಂದ ದೇಹಶ್ಚ ಕಾಮದೇವಸಮೋ ಭವೇತ್‌ ।।

(46-47 ಘೕರಂಡ ಸಂಹಿತಾ).

ಹೊಕ್ಕಳವರೆಗೆ ನೀರಿನಲ್ಲಿ ಉತ್ಕಟಾಸನದಲ್ಲಿ ನಿಲ್ಲಬೇಕು, ಗುಹ್ಯ ಭಾಗವನ್ನು ಆಕುಂಚನ ಪ್ರಸರಣ ಮಾಡಬೇಕು, ಅದಕ್ಕೆ ವಸ್ತಿ (ಬಸ್ತಿ) ಎನ್ನಲಾಗುತ್ತದೆ. ಈ ಜಲವಸ್ತಿಯಿಂದ ದೊಡ್ಡ ಕರುಳಿನಲ್ಲಿ ಸಂಚಿತವಾದ ಮಲವು, ಮತ್ತು ಅದರಿಂದ ಉಂಟಾಗುವ ಕ್ರೂರ ವಾಯುವು ತೊಲಗಿ ಮನುಷ್ಯ ದೇಹವು ಕಾಂತಿಯುತವಾಗುತ್ತದೆ. ಈ ಕ್ರಿಯೆಯನ್ನು ಮಾಡುವಾಗ ಹೊಟ್ಟೆಯನ್ನು ಅಲ್ಲಾಡಿಸಬಾರದು, ಗುದದ್ವಾರವನ್ನು ಮಾತ್ರ ಆಕುಂಚನ ಮತ್ತು ಪ್ರಸರಣ ಮಾಡುತ್ತಿರಬೇಕು.

ಅಭ್ಯಾಸವಾದಂತೆ ನೀರು ಸಲೀಸಾಗಿ ಒಳಸೇರುತ್ತದೆ ಮತ್ತು ಹೊರಗೆ ಬರುವಾಗ ಕರುಳಿನಲ್ಲಿ ಶೇಖರಣೆಗೊಂಡ ಕಶ್ಮಲವನ್ನು ತೊಳೆದುಬಿಡುತ್ತದೆ. ಆಯುರ್ವೇದದಲ್ಲಿ ಕೂಡ ಈ ರೀತಿಯ ಕ್ರಿಯೆಯು ಇದೆ. ಪ್ರಾರಂಭದಲ್ಲಿ ಇದು ಕಷ್ಟವೆನಿಸಬಹುದು. ನಂತರ ಬಹಳ ಸುಲಭ ಸಾಧ್ಯವೆನಿಸುವುದು. ಪ್ರಕೃತಿ ಚಿಕಿತ್ಸೆಯಲ್ಲಿ ಟಬ್‌ಬಾಥ ಮಾಡಿಸುತ್ತಾರೆ ಅದು ಕೂಡ ಬಹಳ ಪ್ರಯೋಜನಕಾರಿಯಾಗಿದೆ.

ಇದರಲ್ಲಿ ಇನ್ನೊಂದು ಪ್ರಕಾರ ಶುಷ್ಕಬಸ್ತಿ ಅಥವಾ ಸ್ಥಲಬಸ್ತಿ.

‘‘ಪಶ್ಚಿಮೋತ್ತಾನತೋ ವಸ್ತಿಂ ಚಾಲಯಿತ್ವಾ ಶನೈಃ ಶನೈಃ ।
ಅಶ್ವಿನೀಮುದ್ರಯಾ ಪಾಯುಮಾಕುಂಚಯೇತ್‌ ಪ್ರಸಾರಯೇತ್‌ ।।

ಏವಮಭ್ಯಾಸಯೋಗೇನ ಕೋಶ್ಠದೋಷೋ ನವಿದ್ಯತೇ ।
ವಿವರ್ಧಯೇಜ್ಜಠರಾಗ್ನಿಮಾಮವಾತಂ ವಿನಾಶಯೇತ್‌ ।।

(ಘೕರಂಡ ಸಂಹಿತಾ, 48-49)

ಈ ಕ್ರಿಯೆಯನ್ನು ಸುಲಭವಾಗಿ ಯಾರಾದರೂ ಮಾಡಬಹುದಾಗೆದೆ. ಅಶ್ವಿನಿಮುದ್ರೆಯಲ್ಲಿ ಗುದದ್ವಾರವನ್ನು ಅಕುಂಚನಗೊಳಿಸಬೇಕು ಮತ್ತೆ ಪ್ರಸರಣ ಮಾಡಬೇಕು. (ಆಕಳು ಅಥವಾ ಎತ್ತು ಮಲವಿಸರ್ಜನೆ ಮಾಡುವಾಗ ಆಕುಂಚನ ಪ್ರಸರಣ ಮಾಡಿದಂತೆ). ಇದರಿಂದ ಕೋಷ್ಠದೋಷ, ಆಮವಾತದೋಷ ಶಮನಗೊಳ್ಳುತ್ತದೆ ಅಷ್ಟೇ ಅಲ್ಲ ಇದರಿಂದ ಜಠರಾಗ್ನಿಯು ಪ್ರದೀಪ್ತಗೊಳ್ಳುತ್ತದೆ. ಅಂದರೆ ಹಸಿವೆ ಸ್ವಭಾವಿಕವಾಗಿ ಆಗುತ್ತದೆ.

ಪಶ್ಚಿಮೋತ್ತಾನಾಸನದಲ್ಲಿ (ಎರಡು ಕಾಲುಗಳನ್ನು ನೆಲದಮೇಲೆ ಚಾಚಿಬೇಕು, ಇಲ್ಲಿ ಕಾಲುಗಳನ್ನು 12 ಇಂಚು ದೂರ ಸರಿಸಬೇಕು.) ನಂತರ ಅಶ್ವಿನಿ ಮುದ್ರೆ ಮಾಡಬೇಕು. ಪಶ್ಚಿಮೋತ್ತನಾಸನದಲ್ಲಿ ತಲೆಯನ್ನು ಮೊಣಕಾಲಿಗೆ ಹಚ್ಚುತ್ತಾರೆ, ಇಲ್ಲಿ ಹಾಗೆ ಮಾಡಬೇಕಾಗಿಲ್ಲ. ಎದೆಯನ್ನು ಸೆಟೆಸಿ ಕುಳಿತುಕೊಳ್ಳಬೇಕು. ಇಲ್ಲಿ ಗುದಮಾರ್ಗವನ್ನು ಆಕುಂಚನ-ಪ್ರಸರಣ ಮಾಡುವಾಗ, ಅಂದರೆ ಶ್ವಾಸ ತೆಗೆದುಕೊಳ್ಳುವಾಗ ಗುದದ್ವಾರವನ್ನು ಮೇಲೆ ಎಳೆಯಬೇಕು, ಇದರಿಂದ ಆಕುಂಚನವಾಗುತ್ತದೆ, ಶ್ವಾಸಬಿಡುವಾಗ ಅದು ಪ್ರಸರಣಗೊಳ್ಳುತ್ತದೆ.

ಈ ಕ್ರಿಯೆ ಮಾಡುವಾಗ ಕೆಲವರು ಗುದದ್ವಾರದಲ್ಲಿ ಪೈಪು ಸೇರಿಸುತ್ತಾರೆ, ಕೆಲವರು ಮಧ್ಯಮ ಬೆರಳನ್ನು ಸೇರಿಸುತ್ತಾರೆ. ಇಂಥದೆಲ್ಲ ಮಾಡುವಾಗ ಮಾರ್ಗದರ್ಶನ ಅವಶ್ಯವಾಗುತ್ತದೆ. ಅಶ್ವಿನಿಮುದ್ರೆಯಲ್ಲಿ ಗುದದ್ವಾರದ ಆಕುಂಚನ-ಪ್ರಸರಣವನ್ನು ಯಾರೂ ಮಾಡಬಹುದಾಗಿದೆ. ಆದರೆ ರಕ್ತದ ಏರೊತ್ತಡ ಇರುವವರು, ಹರ್ನಿಯಾ ಇದ್ದವರು ಈ ಕ್ರಿಯೆಯನ್ನು ಮಾಡಬಾರದು. ಈ ಕ್ರಿಯೆ ಮಾಡಲು ಯಾವುದೇ ಸಮಯ ಆರಿಸಬಹುದು. ಆದರೆ ಬೆಳಗ್ಗೆ ಮಾಡಿದರೆ ಹೆಚ್ಚು ಲಾಭಕರ. ಉಪವಾಸ ಪೂರ್ವದಲ್ಲಿ ಈ ಕ್ರಿಯೆಯನ್ನು ಶಿಫಾರಸು ಮಾಡುತ್ತಾರೆ.

ಜಲಬಸ್ತಿಯನ್ನು ಶುದ್ಧ ನೀರು ಹೊರಗೆ ಬರುವ ವರೆಗೆ ಮಾಡಬಹುದು. ಇದನ್ನು ಪ್ರತಿದಿನ ಮಾಡಬಾರದು. ಎನಿಮಾದಂತೆ ಎರಡು ವಾರಕ್ಕೆ ಒಂದು ಸಲ ಮಾಡಬಹುದು. ಇದರಿಂದ ವಾಯುವಿಕಾರ, ಪಿತ್ತ, ಅಪಚನ, ಮಲಬದ್ಧತೆ, ಕಫ ಮುಂತಾದವುಗಳ ಬಾಧೆಯಿಂದ ಉಪಶಮನ ದೊರೆಯುತ್ತದೆ. ಮೂಲವ್ಯಾಧಿ ಇದ್ದವರು ಬಹು ಎಚ್ಚರಿಕೆಯಿಂದ ಮಾಡಬೇಕಾಗುವುದು. ಇದರಿಂದ ಕೋಷ್ಠದೋಷ ಅಂದರೆ ಹೊಟ್ಟೆಯ ಒಳಭಾಗಗಳಾದ ಕರುಳು, ಯಕೃತ್ತು ಮುಂತಾದವುಗಳ ದೋಷ ನಿವಾರಣೆಯಾಗುತ್ತದೆ. ಆಮಾಂಶಯ ಕಡಿಮೆಯಾಗುತ್ತದೆ.

ಜಠರಾಗ್ನಿಯ ಅಭಾವದಿಂದ ಪಚನಶಕ್ತಿ ಕಡಿಮೆಯಾಗುತ್ತದೆ, ಇದರಿಂದ ಕೆಲವು ರೋಗಗಳು ಉಂಟಾಗುತ್ತವೆ- ವಾಯುವಿಕಾರ, ಅಪಚನ, ಮಲಬದ್ಧತೆ, ಕಫ, ಪಿತ್ತ- ಇವೆಲ್ಲವೂ ಈ ಕ್ರಿಯೆಯಿಂದ ಉಪಶಮನ ಪಡೆಯುತ್ತವೆ. ಇದರಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ, ನಾಡಿಗಳು ಸ್ವಸ್ಥವಾಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X