ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರಕವಿ ಡಾ। ದ.ರಾ. ಬೇಂದ್ರೆ ಜೊತೆ ನಾನು!

By Staff
|
Google Oneindia Kannada News


ಸಾಧನಕೇರಿಯಲ್ಲಿ ವಾಸ

ಅತಿಥಿಗಳಾಗಿ ಬಂದ 96 ವರ್ಷದ ಪ್ರೊ.ಸೇತೂರಾಮ ಮಳಗಿ ಭಾಷಣ ಮಾಡಿದರು. ತಾವು ಸಾಧನೆಕೇರಿಯಲ್ಲಿ 1929ರಲ್ಲಿ ವಾಸಿಸಲು ಹೋದಾಗಿನಿಂದ ಬೇಂದ್ರೆಯವರ ನಿಕಟ ಸಂಬಂಧ ಬಂದ ಬಗ್ಗೆ ಹೇಳಿದರು. ಬೇಂದ್ರೆ ಕಾವ್ಯದ ಬಗ್ಗೆ ಒಂದು ದೀರ್ಘ ಪ್ರಬಂಧವನ್ನೇ ಬರೆದು ತಂದಿದ್ದರು, ಕೆಲಭಾಗ ಓದಿದರು. ಅವರ ಉತ್ಸಾಹ ತರುಣರನ್ನು ನಾಚಿಸುವಂತಿತ್ತು.

ಬೇಂದ್ರೆಯವರ ನಿಕಟವರ್ತಿಗಳ ಸಂದರ್ಶನವನ್ನು ‘ಈಟಿವಿ’ಯಲ್ಲಿ (‘ಬೇಂದ್ರೆ ಮಾಸ್ತರರಿಗೆ ನಮಸ್ಕಾರ’ಎಂಬ ಸಂದರ್ಶನ ಮಾಲಿಕೆಯನ್ನು), ಸಮರ್ಥವಾಗಿ ಮಾಡಿ ಖ್ಯಾತಿ ಪಡೆದ ಕವಿ ಜಯಂತ ಕಾಯ್ಕಿಣಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬೇಂದ್ರೆಯವರ ಪದ್ಯದಷ್ಟೇ ಅವರ ಗದ್ಯವೂ ಮಹತ್ವದ್ದಾಗಿದೆ ಎಂದು ಹೇಳುತ್ತ ಅವರ ‘ಸಾಹಿತ್ಯದ ವಿರಾಟ ಸ್ವರೂಪ’ ಗ್ರಂಥವನ್ನು ಉದಾಹರಿಸಿದರು.

ಬಿಹೆಚ್‌ಎಸ್‌ ಶಿಕ್ಷಣ ಸಂಸ್ಥೆಯ ಸಹಾಯಕ ಕಾರ್ಯದರ್ಶಿಯಾದ ಪ್ರೊ ಆರ್‌.ವಿ.ಪ್ರಭಾಕರ ಅವರು ಗಣಿತದ ಪ್ರಧ್ಯಾಪಕರು, ಹಿಂದೆ ಧಾರವಾಡದಲ್ಲಿ ಪ್ರಾಧ್ಯಾಪಕರಾಗಿದ್ದಾಗ ಬೇಂದ್ರೆಯವರನ್ನು ಕಂಡವರು, ಬೇಂದ್ರೆ ಕಾವ್ಯದ ಬಗ್ಗೆ ಒಂದು ಪ್ರಬಂಧ ಮಂಡಿಸಿದರು. ಪ್ರಿನ್ಸಿಪಾಲ ಡಿ.ಎನ್‌.ವೆಂಕಟರಾವ್‌ ಅಧ್ಯಕ್ಷತೆ ವಹಿಸಿದ್ದರು. ಸಂಜೆ ವಿಧ್ಯಾರ್ಥಿಗಳಿಂದ ಬೇಂದ್ರೆ ಕಾವ್ಯಗಾಯನ ಚೇತೋಹಾರಿಯಾಗಿತ್ತು.

ಗಂಗಾವತರಣ

ಎರಡನೆಯ ದಿನ ಮೊದಲನೆಯ ಗೋಷ್ಠಿಯಲ್ಲಿ ನಾನು ‘ಬೇಂದ್ರೆಯವರ ಗಂಗಾವತರಣ ಒಂದು ವಿಶ್ಲೇಷಣೆ’ ಎಂಬ ಪ್ರಬಂಧ ಮಂಡಿಸಿದೆ. ಬೇಂದ್ರೆಯವರ ಶ್ರೇಷ್ಠ ಕವಿತೆಗಳಲ್ಲಿ ಒಂದಾದ ಈ ಪದ್ಯ ಅನೇಕ ವಿಮರ್ಶಕರ ಟೀಕೆಗೆ ಒಳಗಾಗಿದೆ. ಅಪಾರ್ಥಸಮೀಕ್ಷರು ಎತ್ತಿದ ಆಕ್ಷೇಪಣೆಗಳಿಗೆ ಇಲ್ಲಿ ಉತ್ತರ ಕೊಡಲಾಗಿದೆ. ಎರಡನೆಯ ಭಾಷಣಕಾರರು ಬರಲು ಸ್ವಲ್ಪ ವಿಳಂಭಬವಾಗುವುದೆಂದು ತಿಳಿದು ನನಗೆ ಹೆಚ್ಚು ಕಾಲಾವಕಾಶ ಕೊಟ್ಟರು.

ಇಪ್ಪತ್ತು ನಿಮಿಷದಲ್ಲಿ ಮಂಡಿಸಬೇಕಾದ ಪ್ರಬಂಧವನ್ನು ಕ್ಲಾಸರೂಮ್‌ ಲೆಕ್ಚರನಂತೆ 45 ನಿಮಿಷಗಳ ವರೆಗೆ ಹೆಚ್ಚು ವಿವರಣೆ ನೀಡುತ್ತ ಮಂಡಿಸಿದೆ. ನಂತರದ ಭಾಷಣಕಾರರು ಬರಲು ಇನ್ನೂ 20 ನಿಮಿಷ ಅವಕಾಶವಿತ್ತು. ಸಭಿಕರಿಗೆ ಪ್ರಶ್ನೆಗಳಿದ್ದರೆ ಬರೆದು ಕಳಿಸಲು ಸಂಘಟಕರು ಕೇಳಿದರು. ಇಪ್ಪತ್ತು ಜನ ಬೇಂದ್ರೆಯವರ ‘ಗಂಗಾವತರಣ’ದ ಬಗ್ಗೆ, ಬೇಂದ್ರೆಯವರ ಜೀವನ ಮತ್ತು ಕಾವ್ಯದ ಬಗ್ಗೆ ಪ್ರಶ್ನೆ ಕೇಳಿದರು. ನನಗೆ ಸುವರ್ಣ ಸಂಧಿ ದೊರೆತಂತಾಯಿತು. ನಂತರ ಪ್ರೊ. ಹಯವದನ ಉಪಾಧ್ಯಾಯರು ‘ಬೇಂದ್ರೆಯವರ ಕಾವ್ಯದಲ್ಲಿ ಒಲವು’ ಎಂಬ ಪ್ರಬಂಧ ಮಂಡಿಸಿದರು.

ಬೇಂದ್ರೆ ಕಾವ್ಯ

ಎರಡನೆಯ ಗೋಷ್ಠಿಯಲ್ಲಿ ಡಾ। ಬಿ.ಬಿ.ರಾಜಪುರೋಹಿತರು ‘ಬೇಂದ್ರೆಯವರ ಕಾವ್ಯದಲ್ಲಿ ಆರ್ಷೇಯ ಪ್ರಭಾವ’ ಎಂಬ ಪ್ರಬಂಧ ಓದಿದರು. ‘ಪ್ರಭಾವ’ ಎಂಬ ಶಬ್ದಕ್ಕಿಂತ ‘ಪ್ರೇರಣೆ’ ಎಂಬ ಶಬ್ದ ಬಳಸಿದರೆ ಹೆಚ್ಚು ಸೂಕ್ತವೆಂದರು. ‘ರಸವೆ ಜನನ । ವಿರಸ ಮರಣ । ಸಮರಸವೇ ಜೀವನ’’ ಇಂಥ ಸಾಲುಗಳಲ್ಲಿ ಬೇಂದ್ರೆಯವರ ‘ನವನವೋನ್ಮೇಷಶಾಲಿನಿ ಪ್ರತಿಭೆ’ ಹೇಗೆ ಕೆಲಸ ಮಾಡಿದೆ ನೋಡಬಹುದು ಎಂದರು.

ಕಲಾವಿದ ಸುರೇಶ ಕುಲಕರ್ಣಿ ‘ಬೇಂದ್ರೆ ವ್ಯಕ್ತಿತ್ವ: ಕೆಲವು ಪ್ರಸಂಗಗಳು’ ಎಂಬ ವಿಷಯವನ್ನು ಕುರಿತು ಮಾತಾಡಿದರು. ‘ ಸೌದರ್ಯವೆಂಬುದು ಕಣ್ಣಿನ ತುತ್ತಲ್ಲ । ಕಣ್ಣಿಗು ಕಣ್ಣಾಗಿ ಒಳಗಿಹುದು’ ಎಂಬ ಬೇಂದ್ರೆ ಸಾಲುಗಳನ್ನು ವಿಶ್ಲೇಷಿಸಿದರು.

‘ದೇವರು ಇದ್ದಾನೆಯೇ? ಎಂಬ ಪ್ರಶ್ನೆಗೆ ಬೇಂದ್ರೆಯವರು ಉತ್ತರಿಸುತ್ತ ‘ನೀನು ಇದ್ದೀಯೋ ಇಲ್ಲೋ?’ ಎಂದು ಕೇಳಿದ್ದರಂತೆ. ಅವರು ಉದ್ಧರಿಸಿದ ಬೇಂದ್ರೆ ಜೀವನ ಘಟನೆಗಳು ಬಹಳೇ ಮಾರ್ಮಿಕವಾಗಿದ್ದವು. ಉತ್ತಮ ಚಿತ್ರಕಲಾವಿದರಾದ ಸುರೇಶ ತಮ್ಮ ಭಾಷಣದಲ್ಲಿ ಚಿತ್ರದ ಪ್ರತ್ಯಕ್ಷಿಕೆಯಿಂದ ಹೆಚ್ಚು ಪ್ರಭಾವ ಬೀರಿದರು. ನಂತರ ವಿದ್ಯಾರ್ಥಿಗಳಿಂದ ಬೇಂದ್ರೆ ಗೀತಗಳ ಕಾರ್ಯಕ್ರಮವಿತ್ತು.

ಬೇಂದ್ರೆ ಕಾವ್ಯದಲ್ಲಿ ಪ್ರಯೋಗಶೀಲತೆ

ಮೂರನೆಯ ದಿನ ಕನ್ನಡದ ಪ್ರಸಿದ್ಧ ವಿಮರ್ಶಕರಾದ ಡಾ। ರಾಜೇಂದ್ರ ಚೆನ್ನಿ ಅವರು ‘ಬೇಂದ್ರೆಯವರ ಕಾವ್ಯದಲ್ಲಿ ಪ್ರಯೋಗಶೀಲತೆ’ ಎಂಬ ಪ್ರಬಂಧ ಮಂಡಿಸಿದರು.

ಕತೆಗಾರರೂ, ಅನುವಾದಕರೂ, ‘ಪ್ರಜಾವಾಣಿ’ಯ ಉಪಸಂಪಾದಕರೂ ಆಗಿರುವ ಎಸ್‌. ದಿವಾಕರ್‌ ಅವರು ‘ಬೇಂದ್ರೆಯವರ ಕಾವ್ಯದ ಲಯ ಮತ್ತು ಸ್ವರೂಪ’ ಎಂಬ ಪ್ರಬಂಧ ಪ್ರಸ್ತುತಗೊಳಿಸಿದರು. ಪ್ರೊ.ಕಿ.ರಂ ನಾಗರಾಜ್‌ ಅವರು ‘ಬೇಂದ್ರೆ ಕಾವ್ಯ ಅರ್ಥೈಸುವ ಬಗೆ’ಯನ್ನು ಕುರಿತು ಮಾತಾಡಿದರು. ಕೆಲವು ಕವಿತೆಗಳನ್ನು ಓದಿದರು.

ಸಮಾರೋಪಕ್ಕೆ ಮೊದಲು ಅತಿಥಿಗಳಾದ ಡಾ। ವಸಂತ ದಿವಾಣಜಿ, ಪ್ರೊ. ಎಸ್‌.ಆರ್‌. ಮಳಗಿ, ಶತಾವಧಾನಿ ಗಣೇಶ ಮಾತಾಡಿದರು. ನಾನು ಸಮಾರೋಪ ಭಾಷಣದಲ್ಲಿ ಬೇಂದ್ರೆಯವರ ಸ್ನೇಹಯೋಗದ ಬಗ್ಗೆ ಮಾತಾಡಿದೆ. ‘ಅಂಬಿಕಾತನಯದತ್ತ ಶ್ರೀಗುರು ನಮನ’ ಎಂಬ ಕವಿತೆಯನ್ನು ಓದಿದೆ. ಮೂರು ದಿನಗಳಲ್ಲಿ ನಡೆದ ಉಚ್ಚ ಮಟ್ಟದ ವಿಚಾರ ವಿನಿಮಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಬಿಹೆಚೆಸ್‌ ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಬಿ.ವಿ.ನಾರಾಯಣರಾವ್‌ ಅಧ್ಯಕ್ಷತೆ ವಹಿಸಿದ್ದರು.

ಒಂದು ವೈಯಕ್ತಿಕ ಕಾರಣಕ್ಕಾಗಿ ಈ ವಿಚಾರ ಸಂಕಿರಣ ನನಗೆ ಅವಿಸ್ಮರಣೀಯವಾಗಿತ್ತು. ನಾನು ಎಲ್ಲಿಯೇ ಭಾಷಣಕ್ಕೆ ಹೋದರೆ ನಮ್ಮ ಪುಸ್ತಕಗಳನ್ನು ಮಾರುವ ವ್ಯವಸ್ಥೆ ಮಾಡಲು ಕೇಳಿಕೊಳ್ಳುತ್ತೇನೆ. ಇದರ ಹಿಂದಿನ ಉದ್ದೇಶ ಕನ್ನಡ ರಸಿಕರಲ್ಲಿ ‘ಕೊಂಡು ಓದುವ’ ಅಭ್ಯಾಸ ಬೆಳೆಯಲಿ ಎಂಬುದಾಗಿದೆ.

ಸಂಘಟರು ಮೂರೂ ದಿನ ನನ್ನ ಪುಸ್ತಕಗಳ ಪ್ರದರ್ಶನ ವಿದ್ಯಾರ್ಥಿ ಸ್ವಯಂಸೇವಕರ ಸಹಕಾರದಿಂದ ಮಾಡಿಸಿದರು. ‘ನಾ ಕಂಡ ಬೇಂದ್ರೆ’ ಪುಸ್ತಕದ 110 ಪ್ರತಿಗಳ ವಿಕ್ರಯದ ಒಂದು ದಾಖಲೆಯೇ ಆಗಿತ್ತು. ಪ್ರಿ. ವೆಂಕಟರಾವ್‌ ಅವರಿಗೆ ಒಂದು ಗೌರವ ಪ್ರತಿ ಕೊಡಲು ಹೋದಾಗ, ‘ನಾನು ಗೌರವ ಪ್ರತಿ ಸ್ವೀಕರಿಸುವುದಿಲ್ಲ, ಕೊಳ್ಳುತ್ತೇನೆ. ತಮ್ಮ ಆಟೋಗ್ರಾಫ್‌ ನನಗೆ ಬೇಕು’ ಎಂದಾಗ ನನ್ನಿಂದ ಶಬ್ದಗಳು ಹೊರಡಲಿಲ್ಲ. ಮನದಲ್ಲಿಯೆ ಅವರಿಗೆ, ಅವರ ಮಹಾನ್‌ ಸಂಸ್ಥೆಗೆ, ಧನ್ಯತೆಯ ಕುಸುಮಗಳನ್ನು ಅರ್ಪಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X