ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗವಿದ್ದಲ್ಲಿ ರೋಗವಿಲ್ಲ!

By Staff
|
Google Oneindia Kannada News


ಬೆಳಗಿನ ಜಾವದಲ್ಲಿ ನಿತ್ಯ ಎದ್ದು ಯಾರು ತನ್ನ ಮೂಗಿನ ಹೊರಳೆಯಿಂದ ನೀರನ್ನು ಕುಡಿಯುತ್ತಾನೋ, ಅವನು ಬುದ್ಧಿವಂತನಾಗುತ್ತಾನೆ, ಅವನ ಕಣ್ಣುಗಳು ತೀಕ್ಷ್ಣವಾಗುತ್ತವೆ, ಅವನ ಚರ್ಮ ಸುಕ್ಕುವುದಿಲ್ಲ, ಕೂದಲು ನೆರೆಯುವುದಿಲ್ಲ, ಅವನು ಎಲ್ಲ ರೋಗಗಳಿಂದ ಮುಕ್ತನಾಗುತ್ತಾನೆ!

ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಯೋಗದ ಬಗ್ಗೆ ಸಾಕಷ್ಟು ಅಜ್ಞಾನವಿದೆ. (ನಮ್ಮ ನಗರಗಳಲ್ಲಿಯೂ ಅಜ್ಞಾನವಿದೆ, ಆ ಮಾತು ಬೇರೆ.) ಯೋಗದ ಬಗ್ಗೆ ಸಾಕಷ್ಟು ಪ್ರಚಾರದ ಅವಶ್ಯಕತೆ ಇದೆ. ಇದು ಪ್ರಚಾರದ ಯುಗವಲ್ಲವೇ? ‘ಥಂಡಾ ಮಾನೆ ಕೋಕಾಕೋಲಾ’ (‘ಥಂಡಾ ಅಂದರೆ ಕೋಕಾಕೋಲಾ’) ಎಂದು ಪ್ರಚಾರ ಮಾಡುವಂತೆ, ‘ಯೋಗಾ ಮಾನೆ ರೋಗಾ ಗಾಯಬ್‌’ (ಯೋಗ ಅಂದರೆ ರೋಗ ಮಾಯ’) ಎಂದೂ ಪ್ರಚಾರ ಮಾಡುವ ಅವಶ್ಯಕತೆ ಇದೆ.

ನಾನು ಹಿಂದಿಯಲ್ಲಿ ಉದ್ಧರಿಸಲು ಕಾರಣವಿದೆ. ಅನೇಕ ಕನ್ನಡ-ಕುಟುಂಬಗಳಲ್ಲಿ ಮಕ್ಕಳು ಪರಸ್ಪರ ಹಿಂದಿಯಲ್ಲಿ ಮಾತಾಡುತ್ತವೆ. ಇನ್ನು ಹಿರಿಯರು ಯೋಗ ಅಭ್ಯಾಸ ಮಾಡದಿದ್ದರೆ ಮಕ್ಕಳು ಕಲಿಯುವುದು ಹೇಗೆ. ಮುಂಜಾನೆ ಎದ್ದೊಡನೆ ‘ಬೆಡ್‌ ಟೀ’( ಅದು ಬ್ಯಾಡ್‌ ಟೀ ಆಗಿರಬಹುದು’) ಎದ್ದೊಡನೆ ‘ಶುದ್ಧಿಕ್ರಿಯೆ’ ನೆನಪಾಗಬೇಕು, ‘ಜಲನೇತಿ’ ನೆನಪಾಗಬೇಕು.

ಎದ್ದೊಡನೆ ಹಲ್ಲುಜ್ಜುವಂತೆ ಮಕ್ಕಳು ಸಹಜವಾಗಿ ಜಲನೇತಿ ಮಾಡಬೇಕು. ಇದು ಶುದ್ಧಿಕ್ರಿಯೆ ಎಂಬುದನ್ನು ಕಲಿಸಬೇಕಾಗುತ್ತದೆ. ಪ್ರಚಾರ ಕಾರ್ಯ ಭರದಿಂದ ಸಾಗಬೇಕಾಗಿದೆ. ಒಂದು ಉದಾಹರಣೆ ಕೊಡಬೇಕೆಂದರೆ, ಭಾರತದ ಹಳ್ಳಿಗಳಲ್ಲಿ ‘ಡಿಹೈಡ್ರೇಶನ್‌’(ನಿರ್ಜಲೀಕರಣ)ದಿಂದಾಗ ಬಹಳ ದೊಡ್ಡ ಪ್ರಮಾಣದಲ್ಲಿ ಶಿಶುಗಳು ಸಾವಿಗೀಡಾಗುತ್ತಿದ್ದವು. ಇದನ್ನು ‘ವಿಶ್ವ ಆರೋಗ್ಯ ಸಂಸ್ಥೆ’ ಗಮನಿಸಿ ಅಜ್ಞಾನಿಗಳಾದ ಹಳ್ಳಿಗರಿಗೆ ತಿಳಿವಳಿಕೆ ನೀಡಲು ದೊಡ್ಡ ಕಾರ್ಯಕ್ರಮವನ್ನೇ ಹಮ್ಮಿಕೊಂಡಿದ್ದರು.

ಮಕ್ಕಳಿಗೆ ಅತಿಭೇದಿ ಆದಾಗ ತಾಯಂದಿರು ಮಕ್ಕಳಿಗೆ ಆಹಾರ ಕೊಡುವುದನ್ನು ನಿಲ್ಲಿಸುತ್ತಿದ್ದರು. ಅದರ ಜೊತೆಗೆ ನೀರನ್ನೂ ಕೊಡುತ್ತಿರಲಿಲ್ಲ. ಇದರಿಂದಾಗಿ ಮಕ್ಕಳಗೆ ‘ದಿಹೈಡ್ರೇಶನ್‌’ ಉಂಟಾಗಿ ಮಕ್ಕಳು ಸಾಯುತ್ತಿದ್ದವು. ಈ ಸ್ಥಿತಿಯಲ್ಲಿ ಮಕ್ಕಳಿಗೆ ಸಕ್ಕರೆ ಮತ್ತು ಉಪ್ಪು ಮಿಶ್ರಿತ ನೀರು ಕುಡಿಸುವುದು ಅವಶ್ಯವೆಂದು ಪ್ರಚಾರ ಮಾಡಬೇಕಾಯಿತು. ವಿಶ್ವ ಆರೋಗ್ಯ ಸಂಸ್ಥೆಯವರೂ ಯೋಗದ ಬಗ್ಗೆ ಪ್ರಚಾರ ಮಾಡುವ ದಿನಗಳು ದೂರ ಇಲ್ಲ. ಏನೂ ಖರ್ಚಿಲ್ಲದೆ ಉತ್ತಮ ಆರೋಗ್ಯ ಪಡೆಯಬಹುದಾದರೆ, ಅದರ ಬಳಕೆ ಯಾಕೆ ಮಾಡಬಾರದು.

ಈ ದಿನಗಳಲ್ಲಿ ಟಿ.ವಿ.ಯಲ್ಲಿ ಯೋಗದ ಪ್ರಚಾರ ಪ್ರಾರಂಭವಾಗಿದೆ. ಯೋಗದ ಪ್ರಚಾರದಲ್ಲಿ ಸ್ವಾಮಿ ರಾಮದೇವ ಮಾಡುತ್ತಿರುವ ಕೆಲಸ ಬಹಳ ದೊಡ್ಡದು. ಮಕ್ಕಳಿಗೆ ಯೋಗಾಭ್ಯಾಸ ಹೇಳಿಕೊಡಬಾರದು ಎಂದು ಹೇಳುವ ಬುದ್ಧಿವಂತರೂ ನಮ್ಮ ನಾಡಿನಲ್ಲಿದ್ದಾರೆ. (ನನ್ನ ಸ್ವಂತದ ಅನುಭವದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ.) ಅಂಥ ಬುದ್ಧಿವಂತರಿಗೆ ತಕ್ಕ ಉತ್ತರ ನೀಡಿದ್ದಾರೆ ಸ್ವಾಮಿ ರಾಮದೇವ.

ಮೊದಲು ಶುದ್ಧಿಕ್ರಿಯೆ ಮಾಡಿಯೇ ಪ್ರಾಣಯಾಮ ಮಾಡಬೇಕು ಎಂದು ಹಠಯೋಗ ಪ್ರದೀಪಿಕೆ ಬರೆಯುತ್ತದೆ:

‘‘ಷಟ್‌ಕರ್ಮನಿರ್ಗತ ಸ್ಥೌಲ್ಯ ಕಫದೋಷಮಲಾದಿಕಃ ।
ಪ್ರಾಣಾಯಾಮಂ ತಂತಃ ಕುರ್ಯಾತ್‌ ಅನಾಯಸೇನ ಸಿದ್ಧ್ಯತಿ ।।’’(ಹ.ಪ್ರ.-36)

ಕಫ-ದೋಷ-ಮಲ ಇವುಗಳನ್ನು ನಿವಾರಿಸಿ ಪ್ರಾಣಾಯಮಾ ಮಾಡಬೇಕು. ಆದರೆ ಕೆಲವು ಆಚಾರ್ಯರು ಪ್ರಾಣಾಯಾಮಕ್ಕೇ ಹೆಚ್ಚಿನ ಮಹತ್ವಕೊಡುತ್ತಾರೆ. ಅವರ ಪ್ರಕಾರ ಪ್ರಾಣಯಾಮ ಮಾತ್ರದಿಂದಲೇ ಶರೀರದ ಎಲ್ಲ ದೋಷಗಳು ಪರಿಹಾರಗೊಳ್ಳುತ್ತವೆ. ಈ ಮಾತನ್ನು ಸ್ವಾಮಿ ರಾಮದೇವ ಅವರು ಪ್ರಾಣಯಾಮಕ್ಕೆ ಕೊಡುವ ಮಹತ್ವದಿಂದ ಸ್ಪಷ್ಟವಾಗುತ್ತದೆ.

(‘‘ಪ್ರಾಣಾಯಾಮೈರೇವ ಸರ್ವೇ ಪ್ರಶುಷ್ಯಂತಿ ಮಲಾ ಇತಿ ।
ಆಚಾರ್ಯಾಣಾಂ ತು ಕೇಷಾಂಚಿದನ್ಯತ್ಕರ್ಮ ನ ಸಮ್ಮತಮ್‌ ।।’’ ಹ.ಪ್ರ-37)

‘ಘೕರಂಡ ಸಂಹಿತಾ’ದಲ್ಲಿ ಬಹಳ ವಿಸ್ತಾರವಾಗಿ ಶುದ್ಧಿಕ್ರಿಯೆಗಳ ಬಗ್ಗೆ ವಿವೇಚಿಸಲಾಗಿದೆ. 41 ಶ್ಲೋಕಗಳಿವೆ, 51 ಪುಟಗಳಷ್ಟು ವಿವರಣೆ ಇದೆ. ಸಂಕ್ಷಿಪ್ತವಾಗಿ ಅವುಗಳ ಬಗ್ಗೆ ಇಲ್ಲಿ ಬರೆಯುವ ಉದ್ದೇಶವೆಂದರೆ ವಾಚಕರು ಮೂಲ ಗ್ರಂಥಗಳನ್ನು ಓದಿ, ಯೋಗ್ಯ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗಜೀವನವನ್ನು ಅಳವಡಿಸಬೇಕು, ರೋಗ ಇಲ್ಲದವರು ರೋಗಗಳು ಮುಂದೆ ಬರದಂತೆ ಜಾಗ್ರತೆ ವಹಿಸಬೇಕು ಮತ್ತು ರೋಗದಿಂದ ಬಳಲುವವರು ತಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು ಮತ್ತು ಒಳ್ಳೆಯ ಆರೋಗ್ಯ ಪಡೆಯಬೇಕು ಎಂಬುದಾಗಿದೆ.

ಶುದ್ಧಿಕ್ರಿಯೆ ಅಥವಾ ಷಟ್‌ಕರ್ಮಗಳ ಬಗ್ಗೆ ಕೆಲವು ಮಹತ್ವದ ಅಂಶಗಳನ್ನು ತಿಳಿದುಕೊಳ್ಳುವುದು ಶ್ರೀಸಾಮನ್ಯರಿಗೆ ಅವಶ್ಯವಾಗಿದೆ.

ಸ್ವಾತ್ಮಾರಾಮರ ‘ಹಠಯೋಗ ಪ್ರದೀಪಿಕಾ’ ದಲ್ಲಿ ಷಟ್‌ಕರ್ಮಗಳ ಉಲ್ಲೇಖ ಬರುತ್ತದೆ.

‘‘ಧೌತಿರ್ಬಸ್ತಿ ಸ್ತಥಾನೇತಿ ಸ್ತ್ರಾಟಕಂ ನೌಲಿಕಂ ತಥಾ ।
ಕಪಾಲಭಾತಿ ಶ್ಚೈತಾನಿ ಷಟ್ಕರ್ಮಾಣಿ ಪ್ರಚಕ್ಷತೇ ।।’’.

ಸ್ವಾತ್ಮಾರಾಮರ ಪ್ರಕಾರ 1) ಧೌತಿ, 2) ಬಸ್ತಿ, 3) ನೇತಿ, 4) ತ್ರಾಟಕ, 5) ನೌಲಿಕಾ, 6) ಕಪಾಲಭಾತಿ - ಇವು ಆರು ಶುದ್ಧಿಕ್ರಿಯೆಗಳು. ಸ್ವಾಮಿ ರಾಮದೇವ ಅವರು ಶುದ್ಧಿಕ್ರಿಯೆಯಾದ ‘ಕಪಾಲಭಾತಿ’ಗೆ ಬಡತಿ ಕೊಟ್ಟಿದ್ದಾರೆ, ಅದನ್ನು ಪ್ರಾಣಾಯಮದ ಮಟ್ಟಕ್ಕೆ ಏರಿಸಿದ್ದಾರೆ. ಅದರ ಬಗ್ಗೆ ನಂತರ ಚರ್ಚಿಸೋಣ.

ಮೇಲ್ಕಾಣಿಸಿದ ಆರು ಶುದ್ಧಿಕ್ರಿಯೆಗಳಲ್ಲಿ ನಾವು ಪ್ರತಿನಿತ್ಯ ಮಾಡಲೇ ಬೇಕಾದ ಕ್ರಿಯೆಗಳೆಂದರೆ - ಜಲನೇತಿ, ತ್ರಾಟಕ, ಕಪಾಲಭಾತಿ. ಇನ್ನುಳಿದ ಮೂರನ್ನು ವಾರಕ್ಕೆ ಅಥವಾ ಪಕ್ಷಕ್ಕೆ ಒಂದು ಸಲ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X