ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪಾಲಭಾತಿ : ಮೆದುಳಿಗೆ ಹೊಳಪು, ಬುದ್ದಿಗೆ ಚುರುಕು

By Staff
|
Google Oneindia Kannada News


ಸಾಮಾನ್ಯರ ಆರೋಗ್ಯಕ್ಕೆ ಬೇಕಾದ ಸುಲಭ ಪ್ರಾಣಾಯಮ ರೂಪಿಸಿದ್ದಾರೆ. ಹಾಗೆ ನೋಡಿದರೆ ವಿಶ್ವ ವಿಖ್ಯಾತ ಯೋಗಾಚಾರ್ಯ ಬಿ.ಕೆ.ಎಸ್‌. ಅಯ್ಯಂಗಾರರು ಪ್ರಾಣಾಯಾಮದ ಬಗ್ಗೆ 300 ಪುಟಗಳ ಹೊತ್ತಿಗೆ (ಲೈಟ್‌ ಆನ್‌ ಪ್ರಾಣಾಯಾಮ) ಬರೆದಿದ್ದಾರೆ. ಅದರ ಕನ್ನಡ ಅನುವಾದವೂ(ಪ್ರಾಣಾಯಾಮ ದೀಪಿಕಾ) ಲಭ್ಯವಾಗಿದೆ. ಆ ಪುಸ್ತಕ ಸಾಮಾನ್ಯ ವಾಚಕ ನೋಡಿದರೆ, ‘ಈ ಜನ್ಮದಲ್ಲಿ ಪ್ರಾಣಾಯಮ ಮಾಡುವುದು ಬೇಡ’ ಎಂದುಕೊಳ್ಳುವಂತಿದೆ. ಹೇಗೆ ಕೂಡಬೇಕು, ಯಾವರೀತಿ ಬೆರಳುಗಳನ್ನು ಹಿಡಿಯಬೇಕು ಎಂಬುದರ ವಿವರ 20-30 ಪುಟಗಳಷ್ಟು ಇದೆ. ಯೋಗಾಭ್ಯಾಸದಲ್ಲಿ ಹೆಚ್ಚಿನ ಪರಿಣತಿ ಪಡೆಯಲು ಬಯಸುವವರು ಯೋಗಾಚಾರ್ಯ ಅಯ್ಯಂಗಾರರ ಪುಸ್ತಕ ಅವಶ್ಯ ಓದಬೇಕು, ಮತ್ತು ಅನುಸರಿಸಬೇಕು.

ನಾವು ಸಾಮಾನ್ಯವಾಗಿ ಮಾಡುವ ಕಪಾಲಭಾತಿಗೂ ‘ಘೕರಂಡ ಸಂಹಿತಾ’ ಹೇಳಿದ ಕಪಾಲಭಾತಿಗೂ ಬಹಳ ಅಂತರವಿದೆ.

1) ವಾತಕರ್ಮ ಕಪಾಲಭಾತಿ

‘‘ಇಡಯಾ ಪೂರಯೇದ್ವಾಯುಂ ರೇಚಯೇತ್ಪಿಂಗಲಯಾ ಪುನಃ ।
ಪಿಂಗಲಯಾ ಪೂರಯಿತ್ವಾ ಪುನಶ್ಚಂದ್ರೇಣ ರೇಚಯೇತ್‌।।
ಪೂರಕಂ ರೇಚಕಂ ಕೃತ್ವಾ ವೇಗೇನ ನ ತು ಧಾರಯೇತ್‌
ಏವಮಭ್ಯಾಸ ಯೋಗೇನ ಕಫ ದೋಷಂ ನಿವಾರಯೇತ್‌ ।।’’
(ಘೕರಂಡ ಸಂಹಿತಾ-56).

‘ಇಡಾ ನಾಡಿಯಿಂದ (ಚಂದ್ರನಾಡಿಯಿಂದ, ಮೂಗಿನ ಎಡ ಹೊರಳೆಯಿಂದ) ಉಸಿರೆಳೆದು ಪಿಂಗಳಾ ನಾಡಿಯಿಂದ (ಸೂರ್ಯ ನಾಡಿಯಿಂದ, ಮೂಗಿನ ಬಲ ಹೊರಳೆಯಿಂದ) ಉಸಿರು ಹೊರಬಿಡಬೇಕು. ನಂತರ ಪಿಂಗಳಾ ನಾಡಿಯಿಂದ ಉಸಿರೆಳೆದು ಇಡಾ ನಾಡಿಯಿಂದ ಹೊರಬಿಡಬೇಕು. ಇದು ಅನುಲೋಮ-ವಿಲೋಮ ಪ್ರಾಣಾಯಮದಂತೆ ತೋರುತ್ತದೆ. ಮುಂದೆ ಹೇಳುತ್ತಾರೆ, ‘ಪೂರಕಂ ರೇಚಕಂ ಕೃತ್ವಾ ವೇಗೇನ ನ ತು ಧಾರಯೇತ್‌’ ಎಂದು. ಅಂದರೆ ವೇಗದಿಂದ ಉಸಿರಾಡಿಸಬಾರದು ಎಂದೂ ಹೇಳುತ್ತಾರೆ.

2) ವ್ಯುತ್ಕರ್ಮ ಕಪಾಲಭಾತಿ

‘‘ನಾಸಾಭ್ಯಾಂ ಜಲಮಾಕೃಷ್ಯ ಪುನರ್ವಕ್ತ್ರೇಣ ರೇಚಯೇತ್‌ ।
ಪಾಯಂ ಪಾಯಂ ವ್ಯುತ್ಕೃಮೇಣ ಶ್ಲೇಷ್ಮಾದೋಷಂ ನಿವಾರಯೇತ್‌ ।।’’ (ಘೕ.ಸಂ.-58)

‘ಮೂಗಿನ ಎರಡೂ ಹೊರಳೆಗಳಿಂದ ನೀರನ್ನು ಒಳಗೆಳೆದು ಬಾಯಿಯಿಂದ ಹೊರಚೆಲ್ಲಬೇಕು.’ ಇದೊಂದು ಕಫ ದೋಷ ನಿವಾರಣೆಯ ಉಪಾಯವೆಂದು ಹೇಳುತ್ತಾರೆ. ಇದು ಬಿಂದು ಚಕ್ರವನ್ನು ಜಾಗ್ರತಗೊಳಿಸುತ್ತದೆಯಂತೆ. ಈ ಕೇಂದ್ರದಿಂದ ಅಮೃತಬಿಂದು ಸ್ರವಿಸುತ್ತದೆಯಂತೆ. ಇದೊಂದು ಬಗೆಯ ಜಲನೇತಿಯೇ ಆಯಿತು.

3) ಶೀತಕ್ರಮ ಕಪಾಲಭಾತಿ

‘‘ಶೀತ್ಕೃತ್ಯ ಪೀತ್ವಾ ವಕ್ತ್ರೇಣ ನಾಸಾನಾಲೈರ್ವಿರೇಚಯೇತ್‌ ।
ಏವಮಭ್ಯಾಸಯೋಗೇನ ಕಾಮದೇವ ಸಮೋ ಭವೇತ್‌ ।।
(ಹ.ಪ್ರ.-59)

ಶೀತ್ಕಾರ ಮಾಡುತ್ತ ಬಾಯಿಯಿಂದ ಜಲವನ್ನು ಗ್ರಹಣ ಮಾಡಿ ಮೂಗಿನಿಂದ ಹೊರತೆಗೆಯಬೇಕು. ಶೀತಾಲಿ ಪ್ರಣಾಯಾಮದಲ್ಲಿ ಹವೆಯನ್ನು ಬಾಯಿಯಿಂದ ತೆಗೆದುಕೊಂಡು ಮೂಗಿನಿಂದ ಹೊರಬಿಡುವಂತೆ, ಇಲ್ಲಿ ನೀರನ್ನು ಬಾಯಿಯಿಂದ ಸೇವಿಸಿ ನಾಸಿಕದಿಂದ ಹೊರಬಿಡಬೇಕು. ಈ ಶುದ್ಧಿಕ್ರಿಯೆಯಿಂದ ಕಾಮದೇವನಂತಹ ಕಾಂತಿಯುತ ದೇಹ ಪಡೆಯಬಹುದು. ಇದರಿಂದ ಶರೀರ ಶುದ್ಧವಾಗುತ್ತದೆ. ಮುಖದಲ್ಲಿ ಕಾಂತಿ ಬರುತ್ತದೆ. ಮುಪ್ಪು, ವ್ಯಾಧಿ ದೂರವಾಗುತ್ತವೆ. ಇದರಿಂದ ಬಿಂದು ಚಕ್ರ ಜಾಗ್ರತವಾಗುತ್ತದೆ.

ಮೇಲೆ ಹೇಳಿದ ಕಪಾಲಭಾತಿ ಕಠಿಣವಾಗಿರುವುದರಿಂದ ಹೆಚ್ಚಿನ ಜನ ಇದನ್ನು ಅನುಸರಿಸುವುದಿಲ್ಲ.

ಪ್ರಚಾರದಲ್ಲಿರುವ ಕಪಾಲಭಾತಿ ‘ವಾತಕ್ರಮ ಕಪಾಲಭಾತಿ’. ಇದರ ಬಗ್ಗೆ ‘ಹಠಯೋಗ ಪ್ರದೀಪಿಕಾ’ದಲ್ಲಿ ಯೋಗಿ ಸ್ವಾತ್ಮಾರಾಮರು ಬರೆಯುತ್ತಾರೆ. ಇದು ಸಾಮಾನ್ಯರಿಗೆ ಉಪಯುಕ್ತವಾದ ಕಪಾಲಭಾತಿಯಾಗಿದೆ. ಹೆಚ್ಚಿನವರು ಇದನ್ನೇ ಅನುಸರಿಸುತ್ತಾರೆ.

‘‘ಭಸ್ತ್ರಾವಲ್ಲೋಹಕಾರಸ್ಯ ರೇಚಪೂರೌ ಸಸಂಭ್ರಮೌ ।
ಕಪಾಲಭಾತಿರ್ವಿಖ್ಯಾತಾ ಕಫದೋಷವಿಶೋಷಣೀ।।
(ಹಠಯೋಗಪ್ರದೀಪಿಕಾ-35).

ಕಮ್ಮಾರನು ತನ್ನ ಲೋಹವನ್ನು ಕಾಯಿಸಲು ತಿದಿಯಿಂದ (ಚರ್ಮದ ಉಪಕರಣದಿಂದ) ಹೇಗೆ ಹವೆಯನ್ನು ತುಂಬುತ್ತಾನೋ ಹಾಗೆ ವೇಗವಾಗಿ ಶ್ವಾಸವನ್ನು ಬಿಡುವದು ಕಪಾಲಭಾತಿ. ‘ಕಪಾಲ’ ಎಂದರೆ ಹಣೆ, ‘ಭಾತಿ’ ಎಂದರೆ ಬೆಳಕು, ಪ್ರಕಾಶ. ಈ ರೀತಿಯ ಕ್ರಿಯೆಯಿಂದ ನಮ್ಮ ಮಿದುಳಿನ ಮುಂಭಾಗ ಹೊಳೆಯುತ್ತದೆ. ಬುದ್ಧಿಶಕ್ತಿ ಪ್ರಖರಗೊಳ್ಳುತ್ತದೆ.

‘ಘೕರಂಡ ಸಂಹಿತಾ’ದಲ್ಲಿ ಮೂರು ಬಗೆಯ ಕಪಾಲಭಾತಿಯ ವರ್ಣನೆ ಇದ್ದರೆ, ‘ಹಠಯೋಗ ಪ್ರದೀಪಿಕಾ’ದಲ್ಲಿ ಒಂದೇ ಬಗೆಯ ಕಪಾಲಭಾತಿಯ ವರ್ಣನೆ ಇದೆ. ಅದುವೆ ‘ವಾತಕ್ರಮ ಕಪಾಲಭಾತಿ’. ಇದನ್ನು ಸಾಮಾನ್ಯವಾಗಿ ಹೆಚ್ಚಿನ ಸಾಧಕರು ಅನುಸರಿಸುತ್ತಾರೆ. ಇದಕ್ಕೆ ಸಿದ್ಧಾಸನದಲ್ಲಿ ಕೂಡಬೇಕು. ಕಣ್ಣು ಮುಚ್ಚಬೇಕು. ಮೇರುದಂಡ ನೇರವಾಗಿರಬೇಕು. ಸಾಮಾನ್ಯವಾಗಿ ಉಸಿರೆಳೆಯಬೇಕು, ಆದರೆ ಉಸಿರು ಹೊರಗೆ ಬಿಡುವಾಗ ಎರಡೂ ಹೊರಳೆಗಳಿಂದ ಜೋರಾಗಿ ಬಿಡಬೇಕು. ಕಮ್ಮಾರನ ತಿದಿಯಂತೆ.

ಐವತ್ತು ಸಲ ನೂರು ಸಲ ಹೀಗೆ ಮಾಡಬಹುದು. ಅಭ್ಯಾಸವಾದ ಮೇಲೆ ಹೆಚ್ಚು ಸಲ ಮಾಡಬಹುದು. ಕೆಲವರಿಗೆ ತಲೆತಿರುಗುವ ಅನುಭವ ಬರುತ್ತದೆ. ಅವರು ಕ್ರಿಯೆಯನ್ನು ನಿಲ್ಲಿಸಿ, ನಂತರ ಮುಂದುವರಿಸಬೇಕು. ಇದನ್ನು ಇತರ ಶುದ್ಧಿಕ್ರಿಯೆಗಳ ನಂತರ, ಆಸನಗಳ ನಂತರ, ಮತ್ತು ಪ್ರಾಣಾಯಮದ ಮೊದಲು ಮಾಡಬೇಕು ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X