ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಟ್ಟೆ ಮತ್ತು ಕಣ್ಣನ್ನು ತಂಪು ಮಾಡೋದು ಹೇಗೆ?

By Staff
|
Google Oneindia Kannada News


GV Kulkarni demonstrating Trataka ಐದನೆಯ ಶುದ್ಧಿಕ್ರಿಯೆ ‘ತ್ರಾಟಕ’ :

‘‘ನಿಮೇಷೋನ್ಮೇಷಕಂ ತ್ಯಕ್ತ್ವಾ ಸೂಕ್ಷಲಕ್ಷ್ಯಂ ನಿರೀಕ್ಷಯೇತ್‌ ।
ಪತಂತಿ ಯಾವದಶ್ರೂಣಿ ತ್ರಾಟಕಂ ಪ್ರೋಚ್ಚತೇ ಬುಧೈಃ ।।

ಏವಮಭ್ಯಾಸಯೋಗೇನ ಶಾಂಭವೀ ಜಾಯತೇ ಧ್ರುವಮ್‌ ।
ನೇತ್ರರೋಗಾ ವಿನಶ್ಯಂತಿ ದಿವ್ಯದೃಷ್ಟಿಃ ಪ್ರಜಾಯತೇ ।।
(53,54 ಘೕರಂಡ ಸಂಹಿತಾ)

ಎವೆಗಳನ್ನು ಪಿಳಕಿಸದೆಯೇ, ಕಂಗಳಲ್ಲಿ ನೀರು ಬರುವ ವರೆಗೆ, ಒಂದು ಸೂಕ್ಷ್ಮ ವಸ್ತುವಿನ ಮೇಲೆ ದಿಟ್ಟಿಸಿ ನೋಡುವುದೇ ತ್ರಾಟಕ ಎಂಬ ಕ್ರಿಯೆ. ಇದರ ಅಭ್ಯಾಸದಿಂದ ಶಾಂಭವೀ ಮುದ್ರೆಯ ಸ್ಥಿತಿ ಪ್ರಾಪ್ತವಾಗುತ್ತದೆ. ನೇತ್ರದೋಷಗಳಿಗೆ ಪರಿಹಾರ ದೊರೆಯುತ್ತದೆ, ದಿವ್ಯ ದೃಷ್ಟಿ ಪ್ರಾಪ್ತವಾಗುತ್ತದೆ.

ಮಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಅಂತಾರಾಷ್ಟ್ರೀಯ ಮಟ್ಟದ ಹಿರಿಯ ಯೋಗ ಸಾಧಕರು, ವೈದ್ಯರು ಕೂಡ. ಅವರನ್ನು ನಾನು ಸಂದರ್ಶಿಸಿದಾಗ ಅವರಿಗೆ 105 ವರ್ಷಗಳಾಗಿದ್ದವು. ನಾನು ಕೊಟ್ಟ ಪುಸ್ತಿಕೆಯನ್ನು ಕನ್ನಡಕವಿಲ್ಲದೆ ಓದತೊಡಗಿದರು.

‘‘ಸ್ವಾಮೀಜಿ, ತಾವು ಕನ್ನಡಕ ಇಲ್ಲದೆ ಓದುತ್ತಿದ್ದೀರಲ್ಲ, ಇದು ಹೇಗೆ ಸಾಧ್ಯವಾಯಿತು?’’ ಎಂದಾಗ ಅವರು ಉತ್ತರಿಸಿದ್ದರು, ‘‘ನಾನು ನಿತ್ಯ ತ್ರಾಟಕ ಮಾಡುತ್ತೇನೆ.’’ ಈ ಮಾತಿನಿಂದ ತಾಟಕದ ಮಹಿಮೆ ತಿಳಿಯುವುದು. ಈ ದಿನಗಳಲ್ಲಿ ಎಳೆ ವಯದ ಮಕ್ಕಳು ಕನ್ನಡಕ ಹಾಕಿಕೊಳ್ಳುತ್ತಿದ್ದಾರೆ. ಅವರಿಗೆ ಆಹಾರದ ಕೊರತೆ ಇಲ್ಲ. ಬಹುಶಃ ಕಂಪ್ಯೂಟರ್‌, ಟಿ.ವಿ.ಗಳ ಪ್ರಭಾವ ಇರಬೇಕು. ಅವರು ತ್ರಾಟಕದೊಂದಿಗೆ ಜಲನೇತಿ ಹಾಗೂ ಕುತ್ತಿಗೆಯ ವ್ಯಾಯಮು ತಪ್ಪದೇ ಮಾಡಬೇಕು. ಅದರಿಂದ ಖಂಡಿತ ಅವರ ದೃಷ್ಟಿ ಮರಳಿ ಲಭಿಸುತ್ತದೆ. ಇದಕ್ಕೆ ಸಂಶಯವಿಲ್ಲ.

ತ್ರಾಟಕ ಮಾಡಲು ಬೆಳಗಿನ ಜಾವ ಅತ್ಯುತ್ತಮ ಸಮಯ. ಇದನ್ನು ಸಂಜೆ ಸಮಯದಲ್ಲಿ ಮಾಡಿದರೂ ಪರವಾ ಇಲ್ಲ. ಮನೆಯಲ್ಲಿ ದೇವರಮನೆ ಇದ್ದರೆ, ಅಲ್ಲಿ ಒಂದು ನಂದಾದೀಪ ಉರಿಯುತ್ತಿದ್ದರೆ ಅದನ್ನು ದಿಟ್ಟಿಸಿ ನೋಡಿ ತ್ರಾಟಕ ಮಾಡಬಹುದು. ಅದನ್ನು ಮೂರು ಅಡಿ ಅಂತರದಿಂದ ದಿಟ್ಟಿಸಿ ನೋಡಬೇಕು, ಕಣ್ಣುಗಳಲ್ಲಿ ನೀರು ಬರುವ ವರೆಗೆ ನೋಡಬೇಕು ಅಥವಾ 1 ರಿಂದ 100 ಅಂಕಿ ಎಣಿಸುವ ವರೆಗೆ ದಿಟ್ಟಿಸಿ ನೋಡಬೇಕು. ದೀಪವಿಲ್ಲದಿದ್ದರೆ ಕೈಯನ್ನು ಮುಂದೆ ಚಾಚಿ ಹೆಬ್ಬೆರಳನ್ನು ದಿಟ್ಟಿಸಿ ನೋಡಬೇಕು.

ತ್ರಾಟಕದಲ್ಲಿ ಎರಡು ಪ್ರಕಾರಗಳಿವೆ. ಒಂದು ಅಂತರಂಗ ತ್ರಾಟಕ, ಇನ್ನೊಂದು ಬಹಿರಂಗ ತ್ರಾಟಕ. ಬಹಿರಂಗ ತ್ರಾಟಕದಲ್ಲಿ ಪಳಗಿದ ಮೇಲೆ ಗುರುಗಳು ಅಂತರಂಗ ತ್ರಾಟಕವನ್ನು ಕಲಿಸುತ್ತಾರೆ. ಕಣ್ಣು ಮುಚ್ಚಿ ಮನದಲ್ಲಿಯೇ ಸೂರ್ಯ, ಚಂದ್ರ ಅಥವಾ ತಮ್ಮ ಇಷ್ಟದೇವತೆ ಅಥವಾ ಗುರುಗಳ ಪ್ರತಿಮೆಯನ್ನು ದಿಟ್ಟಿಸುವುದು. ತ್ರಾಟಕದ ಪ್ರಕಾರಗಳ ಬಗ್ಗೆ ಸ್ವಾಮಿ ಶ್ರೀ ನಿರಂಜನಾನಂದ ಸರಸ್ವತಿಯವರು ಬರೆಯುತ್ತಾರೆ.

ಮೂರನೆಯ ಪ್ರಕಾರವೂ ಇದೆ. ಅರ್ಧ ಕಣ್ಣು ತೆರೆದು, ಅರ್ಧ ಕಣ್ಣು ಮುಚ್ಚಿ, ನಾಸಿಕಾದೃಷ್ಟಿಯಲ್ಲಿ ತ್ರಾಟಕ ಮಾಡಬಹುದಂತೆ. ಇವುಗಳಿಗೆ ಪೂರ್ಣಿಮಾ ದೃಷ್ಟಿ (ಇದು ಬಾಹ್ಯತ್ರಾಟಕ), ಅಮಾದೃಷ್ಟಿ, ಅಂದರೆ ಅಮಾವಾಸ್ಯಾ ದೃಷ್ಟಿ (ಇದು ಅಂತರ್‌ ತ್ರಾಟಕ), ನಾಸಿಕಾ ದೃಷ್ಟಿ ಎನ್ನುತ್ತಾರೆ. (ಇದು ಧ್ಯಾನಕ್ಕೆ ಸೂಕ್ತ ತ್ರಾಟಕ).

ಧ್ಯಾನ ಮಾಡುವವರಿಗೆ ತ್ರಾಟಕ ಮುಖ್ಯ. ಚಿತ್ತದ ಏಕಾಗ್ರತೆ ತ್ರಾಟಕದಿಂದ ಲಭಿಸುತ್ತದೆ. ಕಣ್ಣು ಮುಚ್ಚಿ ಒಂದು ಜ್ಯೋತಿಯನ್ನು ಕಲ್ಪಿಸಿ ತ್ರಾಟಕ ಮಾಡಿದರೆ ಮನದ ಏಕಾಗ್ರತೆ ಸಾಧ್ಯವಾಗುತ್ತದೆ. ಮನಸ್ಸು ಚಂಚಲವಾಗಿ ಅತ್ತ ಇತ್ತ ಸುಳಿದಾಡಿದರೆ ಅದನ್ನು ಎಳೆದು ತಂದು ದೀಪದೆಡೆ ನಿಲ್ಲಿಸಬೇಕು, ಅದರಿಂದ ಏಕಾಗ್ರತೆ ಸಾಧ್ಯವಾಗುತ್ತದೆ.

ತ್ರಾಟಕವನ್ನು ಐದು ನಿಮಿಷಗಳಿಗಿಂತ ಹೆಚ್ಚು ಮಾಡಬಾರದು. ಹೆಚ್ಚು ಮಾಡಬೇಕಾದರೆ ಗುರುವಿನ ಅಪ್ಪಣೆ ಅವಶ್ಯ ಎನ್ನುತ್ತಾರೆ. ಇದರಿಂದ ಅನೇಕ ಲಾಭಗಳಿವೆ. ಮೊದಲನೆಯದಾಗಿ ಇದರಿಂದ ಕಣ್ಣಿನ ರೋಗಗಳು ತೊಲಗುತ್ತವೆ (ನೇತ್ರರೋಗಾ ವಿನಶ್ಯಂತಿ). ಎರಡನೆಯ ಲಾಭ ದಿವ್ಯ ದೃಷ್ಟಿ ಲಭಿಸುತ್ತದೆ (ದಿವ್ಯದೃಷ್ಟಿಃ ಪ್ರಜಾಯತೇ). ಶಾಂಭವೀ ದೃಷ್ಟಿ ಪ್ರಾಪ್ತವಾಗುತ್ತದೆ (ಶಾಂಭವೀ ಜಾಯತೇ ಧ್ರುವಮ್‌).

ಶಾಂಭವಿಯು ತಂದೆ ದಕ್ಷಪ್ರಜಾಪತಿಯ ಮನೆಯಲ್ಲಿ ಅವಮಾನಗೊಂಡಾಗ, ತನ್ನ ದೃಷ್ಟಿಯನ್ನು ಜಾಗ್ರತಗೊಳಿಸಿ ಅದರ ಅಗ್ನಿಯಲ್ಲಿ ದೇಹತ್ಯಾಗ ಮಾಡಿದಳೆಂಬ ಪುರಾಣದ ಕತೆಯನ್ನು ಸ್ವಾಮಿಗಳು ಉಲ್ಲೇಖಿಸುತ್ತಾರೆ. ಅಧ್ಯಾತ್ಮ ಮಾರ್ಗದಲ್ಲಿ ಮುನ್ನಡೆವವರಿಗೆ ಶಾಂಭವೀ ದೃಷ್ಟಿ ಲಾಭಪ್ರದವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X