ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಿಚುಂಚನಗಿರಿ ಗಂಗಾ : ಹಳ್ಳಿಗರಿಗೆ ವರದಾನ

By Staff
|
Google Oneindia Kannada News

ಆದಿಚುಂಚನಗಿರಿ ಗಂಗಾ : ಹಳ್ಳಿಗರಿಗೆ ವರದಾನ
ವೈಜ್ಞಾನಿಕವಾಗಿ ಪರೀಕ್ಷೆಗೊಳಪಟ್ಟ, ಅಕ್ವಾಗಾರ್ಡ್‌ನಷ್ಟೇ ಶುದ್ಧ ನೀರು ಇಂದು ಹಳ್ಳಿಗಳಲ್ಲಿ ಅತೀ ಕಡಿಮೆ ದರದಲ್ಲಿ ಸಿಗುವಂತೆ ಮಾಡಿರುವುದು ಡಾ. ಲೀಲಾ ಅವರ ಸಂಶೋಧನೆಗೆ ಸಿಕ್ಕ ಫಲ.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
[email protected]

ಆದಿಚುಂಚನಗಿರಿ ಮಠದ ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ಬಗ್ಗೆ ಕೇಳಿದ್ದೆ, ಸದಾ ಪ್ರವಾಸದಲ್ಲಿರುವ ಸ್ವಾಮಿಗಳ ಅನುಕೂಲಕ್ಕೆಂದು ಅವರ ಅನಿವಾಸಿ ಭಕ್ತರು ಮತ್ತು ಭಾರತದ ಭಕ್ತರು ಸೇರಿ ಅವರಿಗೊಂದು ಹೆಲಿಕಾಪ್ಟರನ್ನೇ ಕಾಣಿಕೆಯಾಗಿ ಕೊಟ್ಟು ಒಂದು ಹೆಲಿಪ್ಯಾಡ್‌ ವ್ಯವಸ್ಥೆಯನ್ನೂ ಮಾಡಿದ್ದಾರೆ ಎಂದೂ ಕೇಳಿದ್ದೆ. ಅವರಷ್ಟು ವಿದ್ಯಾ ಸಂಸ್ಥೆಗಳನ್ನು ಭಾರತದಲ್ಲಿ ಬೇರಾರೂ ಸ್ಥಾಪಿಸಿಲ್ಲ ಎಂದೂ ಕೇಳಿದ್ದೆ. ಅವರನ್ನೊಮ್ಮೆ ಕಾಣಬೇಕೆಂಬ ಬಯಕೆ ಬಹುಕಾಲದಿಂದ ಇತ್ತು.

ನನ್ನ ಪುಸ್ತಕಗಳನ್ನು ಹೆಚ್ಚಾಗಿ ಓದಿದ, ನನ್ನ ಯೋಗ ಮತ್ತು ನಿಸರ್ಗ ಚಿಕ್ಕಿತ್ಸೆಯ ಆಸಕ್ತಿಗಳನ್ನು ಬಹುವಾಗಿ ಮೆಚ್ಚಿದ, ಆದಿಚುಂಚನಗಿರಿ ಬಯೋಟೆಕ್ನಾಲಜಿ ಅಂಡ ಕ್ಯಾನ್ಸರ್‌ ರಿಸರ್ಚ್‌ ಇನ್‌ಸ್ಟಿಟ್ಯೂಟಿನ ಡೈರೆಕ್ಟರರಾದ ಡಾ। ಲೀಲಾ ಶ್ರೀನಿವಾಸ್‌ ಅವರಿಗೆ ನನ್ನ ಆಸೆಯ ಬಗ್ಗೆ ಹೇಳಿದ್ದೆ.

Adichuchanagiri Swamiji felicitating GV Kulkarni‘ಸ್ವಾಮಿಗಳು ಸದಾ ಪ್ರವಾಸದಲ್ಲಿರುತ್ತಾರೆ. ಇಲ್ಲಿ ಮಹಿಳೆಯರಿಗಾಗಿ, ಪುರುಷರಿಗಾಗಿ ಶಿಬಿರ ನಡೆಯುತ್ತವೆ ಆಗ ಅವರು ಮಠದಲ್ಲೇ ಇರುತ್ತಾರೆ. ಏಪ್ರಿಲ್‌ ಕೊನೆ ಅಥವಾ ಮೇ ಪ್ರಾರಂಭದಲ್ಲಿ ನೀವು ಬೆಂಗಳೂರಿಗೆ ಬಂದರೆ ತಿಳಿಸಿರಿ, ಭೇಟಿ ಮಾಡಿಸುತ್ತೇನೆ’ ಎಂದರು. ಏಪ್ರಿಲ್‌ 23-24ರಂದು ಬೆಂಗಳೂರಲ್ಲಿ ‘ಶ್ರೀ ನೃಸಿಂಹಸ್ತುತಿ’ಯ ರೆಕಾರ್ಡಿಂಗ್‌ ಇತ್ತು. ಆ ನಿಮಿತ್ತ ನಾನು ಬೆಂಗಳೂರಲ್ಲಿದ್ದೆ. 25 ಏಪ್ರಿಲ್‌(2006) ದಿನ ನನಗೆ ಅತಿಥಿಯಾಗಿ ಆದಿಚುಂಚನಗಿರಿ ಕ್ಷೇತ್ರಕ್ಕೆ ಹೋಗುವ ಸುವರ್ಣಾವಕಾಶ ಒದಗಿ ಬರುವುದೆಂದು ನಾನು ನಿರೀಕ್ಷಿಸಿರಲಿಲ್ಲ.

ಡಾ। ಲೀಲಾ ಅವರು ನನ್ನನ್ನು ಈ ವೇಳೆಗೆ ಕರೆಸಲು ಇನ್ನೊಂದು ಕಾರಣವಿತ್ತು. ಗ್ರಾಮಾಂತರದಲ್ಲಿ ವಾಸಿಸುವ ಬಡವರಿಗಾಗಿ ಶುದ್ಧ ನೀರನ್ನು ಪೂರೈಸಲು ‘ಆದಿಚುಂಚನಗಿರಿ ಗಂಗಾ’ ಎಂಬ ಸುಲಭ ಸಲಕರಣೆಯನ್ನು, ವಿನೂತನ ವೈಜ್ಞಾನಿಕ ಅನುಸಂಧಾನದ ಆವಿಷ್ಕಾರದ ಫಲವಾಗಿ ಅವರು ತಯಾರಿಸಿದ್ದರು. ಶ್ರೀಗಳು ಈ ವಿನೂತನ ಪ್ರಾಜೆಕ್ಟನ್ನು ಉದ್ಘಾಟಿಸುವವರಿದ್ದರು. ಅದರ ಉದ್ಘಾಟನೆಯ ಶುಭ ಅವಸರದಲ್ಲಿ ನಾನು ಕೂಡ ಅಲ್ಲಿ ಉಪಸ್ಥಿತನಿರಬೇಕು ಎಂಬುದು ಅವರ ಬಯಕೆಯಾಗಿತ್ತು.

ಮಹಿಳಾ ಜಾಗೃತಿ ಶಿಬಿರ :

ಏಪ್ರಿಲ್‌ 25ರಂದು ನಾನು ಮೊದಲು ಬಯೋಟೆಕ್ನಾಲಜಿ ಮತ್ತು ಕ್ಯಾನ್ಸರ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ಗೆ ಹೋದೆ. ಅಲ್ಲಿಂದ ಶ್ರೀ ಮಠದ ವಿಶಾಲ ಸಭಾಗೃಹಕ್ಕೆ ಕರೆದೊಯ್ದರು. ಅಲ್ಲಿ 12ನೆಯ ರಾಜ್ಯ ಮಟ್ಟದ ಮಹಿಳಾ ಜಾಗೃತಿ ಶಿಬಿರ ನಡೆದಿತ್ತು(20 ಎಪ್ರಿಲ್‌ನಿಂದ ಮೇ 5ರ ವರೆಗೆ). ರಾಜ್ಯದ ಎಲ್ಲ ಭಾಗಗಳಿಂದ ಸುಮಾರು ಆರು ಸಾವಿರ ವಿದ್ಯಾರ್ಥಿನಿಯರು ಎರಡು ವಾರಗಳ ಸಾಂಸ್ಕೃತಿಕ ಪ್ರಶಿಕ್ಷಣ ಪಡೆಯಲು ಇಲ್ಲಿ ಬಂದಿದ್ದರು.

ಶ್ರೀ ಮಠದಿಂದ ಪ್ರಕಟಿತವಾದ ‘ಸಂಸ್ಕಾರ ಸೌರಭ’ವೆಂಬ ಪುಸ್ತಕ ಎಲ್ಲರ ಕೈಯಲ್ಲಿತ್ತು. ಈ ಪುಸ್ತಕದಲ್ಲಿ ಪ್ರಾರ್ಥನೆ, ಸ್ತೋತ್ರಗಳು, ಗುರುಸ್ತವನ, ಗೀತೆಯ ಧ್ಯಾನ ಶ್ಲೋಕಗಳು, ಸಂಸ್ಕೃತ ಸುಭಾಷಿತಗಳು, ಶರಣರ ವಚನಗಳು, ಪುರಂದರದಾಸ ಕನಕದಾಸರ ಹಾಡುಗಳು, ಸರ್ವಜ್ಞ ವಚನಗಳು, ಜಾನಪದಗೀತಗಳು, ಕುವೆಂಪು-ಬೇಂದ್ರೆ ಕವಿತೆಗಳು, ಮಂಕುತಿಮ್ಮನ ಕಗ್ಗದ ಆಯ್ದ ವಚನಗಳು, ಭರತೀಯ ವಾರ ತಿಥಿ ನಕ್ಷತ್ರದ ಮಾಹಿತಿ ಕೊಡುವ ಪಂಚಾಂಗ ಪರಿಚಯ, ಜೊತೆಗೆ ಯೋಗಾಸನಗಳ ಪರಿಚಯ- ಮುಂತಾದವು ಇವೆ. ಮಕ್ಕಳು ಹಾಡುತ್ತಾರೆ, ಕಿರಿಯ ಸ್ವಾಮಿಗಳ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಾರೆ.

ಇವರಿಗಾಗಿ ವಿವಿಧ ಕ್ಷೇತ್ರಗಳಲ್ಲಿಯ ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ಸಂಜೆ ಮನರಂಜನೆಯಲ್ಲಿ ನೃತ್ಯ, ನಾಟಕ, ವೃಂದಗೀತಗಳು ಇರುತ್ತವೆ. ಎರಡು ವಾರಗಳ ಶಿಬಿರದ ನಂತರ ಹೊಸ ಸಂಸ್ಕಾರ ಪಡೆದು ಹೊಸ ಉತ್ಸಾಹ ಗಳಿಸಿ ತಮ್ಮ ಮನೆಗಳಿಗೆ ತೆರಳುತ್ತಾರೆ. ಇದೊಂದು ವಿನೂತನ ‘ಸಮರ್‌ ಕ್ಯಾಂಪ್‌’ ಎನ್ನಬಹುದು. ಇಲ್ಲಿ ಆಯ್ಕೆಗೊಳ್ಳುವ ವಿದ್ಯಾರ್ಥಿಗಳಲ್ಲಿ ಜಾತಿವರ್ಗಗಳ ಭೇದವಿಲ್ಲ. ಇದೇ ರೀತಿ ಪುರುಷರಿಗಾಗಿಯೂ ಎರಡು ವಾರಗಳ ಶಿಬಿರ ಇರುತ್ತದೆ. ಈ ಸಮಯದಲ್ಲಿ ಶ್ರೀಗಳು ಶ್ರೀ ಮಠದಲ್ಲೇ ಇದ್ದು ದಿನಾಲೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉದ್ಬೋಧಕ ವಚನಾಮೃತ ಉಣಬಡಿಸುತ್ತಾರೆ.

ಪ್ರೇಕ್ಷಕನಾಗಿ ಬರಲು ಬಯಸಿದವನನ್ನು, ಅತಿಥಿಯಾಗಿ ಆಮಂತ್ರಿಸಿ, ಸತ್ಕರಿಸಿ, ನನ್ನಿಂದ ಮಕ್ಕಳಿಗೆ ಬೋಧನೆ ಮಾಡಿಸುವ ಉಪಕ್ರಮವು ಶ್ರೀಗಳ ಹಿರಿಮೆಗೆ ಮತ್ತು ಗುಣಗ್ರಾಹಿತ್ವಕ್ಕೆ ಒಂದು ಉದಾಹರಣೆಯಾಗಿದೆ. ನನ್ನನ್ನು ವರಕವಿ ಬೇಂದ್ರೆಯವರ ಶಿಷ್ಯನೆಂದೂ, ಯೋಗಪ್ರಚಾರದಲ್ಲಿ ನಿರತನೆಂದೂ ಪರಿಚಯಿಸಿದ್ದರಿಂದ ನಾನು ಬೇಂದ್ರೆಯವರ ಕಾವ್ಯದ ಬಗ್ಗೆ ಮಾತಾಡಿದೆ. ಯೋಗವೆಂದರೆ ಆಸನ ಮಾತ್ರವಲ್ಲ, ಶುದ್ಧಿಕ್ರಿಯೆ ಹಾಗೂ ಪ್ರಾಣಾಯಾಮ ಮರೆಯಬಾರದು, ಅವುಗಳಿಂದ ರೋಗಗಮುಕ್ತರಾಗಬಹುದು ಎಂದು ಎಂದು ಹೇಳಿದೆ. ಒಂದು ದಿನ ಇರಲು ಹೋದವನಿಗೆ ಎರಡು ದಿನ ಇರಲು ಹೇಳಿ ಮುಕ್ತಸಂವಾದದಲ್ಲಿ ಶ್ರೀಗಳು ತೊಡಗಿದರು. ಅವರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡೆ. ನಾನಲ್ಲಿ ಕಳೆದ ಎರಡು ದಿನ ನನ್ನ ಜೀವನದಲ್ಲಿಯ ಅವಿಸ್ಮರಣೀಯವಾದ ದಿನಗಳು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.

ಕಡಿಮೆ ವೆಚ್ಚದಲ್ಲಿ ಶುದ್ಧ ನೀರು :

ಹಳ್ಳಿಯಲ್ಲಿ ವಾಸಿಸುವ ಬಡವರಿಗೆ ಶುದ್ಧ ಕುಡಿಯುವ ನೀರನ್ನು ಅತಿ ಕಡಿಮೆ ಖರ್ಚಿನಲ್ಲಿ ಒದಗಿಸುವ ಉಪಕರಣದ ಬಗ್ಗೆ ಸಂಶೋಧನೆ ಮಾಡಲು ಶ್ರೀಗಳು ಡಾ। ಲೀಲಾ ಅವರಿಗೆ ಹೇಳಿದ್ದರಂತೆ. ಹಳ್ಳಿಯಲ್ಲಿ ದೊರೆವ ನೀರು- ಬಾವಿ, ಕೆರೆ, ಹೊಂಡ ಇಲ್ಲವೆ ಹಳ್ಳದಿಂದ ಸಂಗ್ರಹಿಸಿದ್ದು, ಅದು ಶುದ್ಧವಾಗಿರುವುದಿಲ್ಲ. ಅಲ್ಲಿರುವ ಬೆಕ್ಟೀರಿಯಾ, ಫಂಗೀ ಇವುಗಳನ್ನು ಹೋಗಲಾಡಿಸುವುದು ಹೇಗೆ? ಪಟ್ಟಣದವರು ಅಕ್ವಾಗಾರ್ಡ ಬಳಸುತ್ತಾರೆ. ಇದು ಹಳ್ಳಿಗರಿಗೆ ಹೇಗೆ ಸಾಧ್ಯ?’ ಎಂಬ ಶ್ರೀಗಳ ಪ್ರಶ್ನೆಗಳಿಗೆ ಅನತಿಕಾಲದಲ್ಲಿ ಡಾ। ಲೀಲಾ ಅವರು ಉತ್ತರ ಹುಡುಕಿದ್ದಾರೆ.

ಅದುವೆ ‘ಆದಿಚುಂಚನಗಿರಿ ಗಂಗಾ’ ಎಂಬ ರೂ. 70ರಷ್ಟು ಕಡಿಮೆ ವೆಚ್ಚದಲ್ಲಿ ಸಿದ್ಧವಾದ ಆರು ಮಡಕೆಗಳ ಒಂದು ಆವಿಷ್ಕಾರ. ಇದರ ಉದ್ಘಾಟನೆಯು ಕೂಡ ಇದೇ ಸಮಯದಲ್ಲಿತ್ತು. ಮಡಕೆಗಳನ್ನು ಹಳ್ಳಿಗರು ಬಳಸುತ್ತಾರೆ. ಅದರಲ್ಲಿ ಹಾಲು ಮೊಸರು ಉತ್ತಮ ಸ್ಥಿತಿಯಲ್ಲಿ ಇರುತ್ತವೆ. ಅದರಲ್ಲಿಯ ನೀರು ತಂಪಾಗಿರುತ್ತದೆ, ಫ್ರಿಝ್‌-ನೀರಿನಂತೆ ಹಾನಿಕರವಲ್ಲ. ಮಡಕೆ ಎಂದೊಡನೆ ಶ್ರೀ ಕೃಷ್ಣನ ಬಾಲಲೀಲೆಗಳ ನೆನಪಾಗುತ್ತದೆ. ‘ಮೈ ನಹೀ ಮಾಖನ ಖಾಯೋ’ ಹಾಡು ನೆನಪಿಗೆ ಬರುತ್ತದೆ. ಮಡಕೆಯಲ್ಲಿ ರಂಧ್ರ(ತೂತು) ಹಾಕಿದಾಗ ಅದು ಶಿವನ ತಲೆಯ ಮೇಲಿನ ಗಂಗಾಜಲವನ್ನು ನೆನಪಿಗೆ ತರುತ್ತದೆ.

ಶುದ್ಧ ನೀರು ಪಡೆಯುವ ಬಗೆ :

Dr. Leela demonstrating how to get pure water using 6 potsಡಾ। ಲೀಲಾ ಅವರು ಬಳಸುವ ಆರು ಮಡಕೆಗಳಲ್ಲಿ ಐದರಲ್ಲಿ ತಳದಲ್ಲಿ ತೂತು ಹಾಕಿದ್ದಾರೆ. ಮೊದಲನೆಯ(ಮೇಲಿನಿಂದ) ಮಡಿಕೆಯಲ್ಲಿ ಕಾಜಿನ(ಮಾರ್ಬಲ್‌) ಗೋಳಿಹಾಕುತ್ತಾರೆ. ಅವುಗಳ ಹೊರ ಭಾಗ ತಿಕ್ಕಿ ನುಣುಪು ತೆಗೆಯಲಾಗುತ್ತದೆ. ಎರಡನೆಯ ಮಡಕೆಯಲ್ಲಿ ಇಟ್ಟಿಗೆಯ ಪುಡಿ, ಮೂರನೆಯ ಮಡಕೆಯಲ್ಲಿ ದಪ್ಪ ಉಸುಕು(ಮರಳು) ಮತ್ತು ದಪ್ಪ ಇದ್ದಲು ಪುಡಿ, ಬೇವಿನ ಸೊಪ್ಪು ಮತ್ತು ಅರಿಷಣ ಪುಡಿ, ನಾಲ್ಕನೆಯ ಮಡಕೆಯಲ್ಲಿ ಸಣ್ಣ ಉಸುಕು(ಮರಳು) ಮತ್ತು ದಪ್ಪ ಇದ್ದಲು ಪುಡಿ, ಐದನೆಯ ಮಡಕೆಯಲ್ಲಿ ಸಣ್ಣ ಇದ್ದಲು ಪುಡಿ ಸ್ಫಟಿಕದ ಪುಡಿ.

ಇನ್ನು ಆರನೆಯ ಮತ್ತು ಕೊನೆಯ ಮಡಕೆಯಲ್ಲಿ ರಂಧ್ರವಿರುವದಿಲ್ಲ. ಇದರಲ್ಲಿ ಜಜ್ಜಿದ ಹಸಿ ಶುಂಠಿ ಹಾಕುತ್ತಾರೆ. ಮೇಲಿನ ಐದು ಮಡಕೆಗಳಲ್ಲಿ ತೂತು(ರಂಧ್ರ) ಇರುತ್ತದೆ. ಅದರ ಮೇಲೆ ಒಂದು ತುಂಡು ಸ್ವಚ್ಛ ಬಟ್ಟೆ ಹಾಕುತ್ತಾರೆ. ಅದರ ಮೇಲೆ ಈ ಮೊದಲು ಹೇಳಿದ ವಸ್ತುಗಳನ್ನು ಇಡುತ್ತಾರೆ. ಮೇಲಿನ, ಮೊದಲನೆಯ ಮಡಕೆಯಲ್ಲಿ ನೀರು ತುಂಬುತ್ತಾರೆ. ಅದು ಖಾಲಿಯಾಗುತ್ತ ಹೋಗುತ್ತದೆ. ಎಲ್ಲಕ್ಕಿಂತ ತಳಕ್ಕೆ ಇದ್ದ ಮಡಕೆಯಲ್ಲಿ ಶುದ್ಧ ನೀರು ಸಂಗ್ರಹಗೊಳ್ಳುತ್ತದೆ. ಹೀಗೆ ಒಂದು ತಾಸಿಗೆ ಒಂದು ಲೀಟರ್‌ ಶುದ್ಧ ಕುಡಿಯುವ ನೀರು ದೊರೆಯುತ್ತದೆ.

ನೀರನ್ನು ಬೇರೆ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಅದರ ಮೇಲೆ ಶುಭ್ರ ಬಟ್ಟೆಯಾಂದನ್ನು ಕಟ್ಟಬೇಕು (ಉಪ್ಪಿನಕಾಯಿ ಭರಣಿಗೆ ಕಟ್ಟಿದಂತೆ). ಈ ನೀರನ್ನು ವೈಜ್ಞಾನಿಕ ಪರೀಕ್ಷಣೆಗಳಿಗೆ ಒಳಪಡಿಸಿದಾಗ ಇದು ಅಕ್ವಾಗಾರ್ಡ ನೀರಿನಷ್ಟೇ ಶುದ್ಧವಾಗಿರುವುದು ಕಂಡು ಬಂದಿದೆ. ಇದು ಬೆಕ್ಟೀರಿಯಾ ಮುಕ್ತವಾಗಿದೆ. ಇದರಲ್ಲಿ ಫಂಗೀ ಇಲ್ಲ. ಲವಣಗಳು ಕಡೆಮೆ ಪ್ರಮಾಣದಲ್ಲಿ ಕರಗಿರುತ್ತವೆ. ಸಂಗ್ರಹಿಸಿದಾಗ ಈ ನೀರು 4-5 ದಿನಗಳ ವರೆಗೆ ಶುದ್ಧವಾಗಿ ಉಳಿಯುತ್ತದೆ.

ಈ ವಿನೂತನ ವಿಧಾನಕ್ಕೆ ಹೆಚ್ಚು ಖರ್ಚಿಲ್ಲ. ಒಳಗಿನ ವಸ್ತುಗಳು ಸುಲಭವಾಗಿ ದೊರೆಯುವಂತಹವು. ವಾರಕ್ಕೊಮ್ಮೆ ಬದಲಿಸುವುದು ಕಷ್ಟಕರವಾಗಿಲ್ಲ. ‘ಆದಿಚುಂಚನಗಿರಿ ಗಂಗಾ’ ಅತ್ಯಾಧುನಿಕ ತಂತ್ರಜ್ಞಾನವನ್ನು ಹಳ್ಳಿಯ ಗುಡಿಸಲಿಗೆ ತರುವಲ್ಲಿ ಯಶಸ್ವಿಯಾಗಿದೆ. ಇದಕ್ಕಾಗಿ ಡಾ। ಲೀಲಾ ಅವರು ಅಭಿನಂದನಾರ್ಹರು.


ಆದಿಚುಂಚನಗಿರಿಯ ನೆತ್ತಿಯಲ್ಲಿ ಪುಣ್ಯಧಾಮ...


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X