ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಬ್ಬಿಂಗ್ ಮಾರಕವಲ್ಲ ಪೂರಕ, ಸತ್ಯಮೇವ ಜಯತೆ!

By Prasad
|
Google Oneindia Kannada News

Satyameva Jayate by Aamir Khan
ಸ್ಟಾರ್ ಸಮೂಹದ ಅಂಗವಾಗಿರುವ ಸುವರ್ಣ ಕನ್ನಡ ವಾಹಿನಿಯವರು ಅಮೀರ್‌ ಖಾನ್ ಪ್ರೊಡಕ್ಷನ್ ಸಂಸ್ಥೆಯ "ಸತ್ಯಮೇವ ಜಯತೆ" ಕಾರ್ಯಕ್ರಮವನ್ನು, ಕನ್ನಡದಲ್ಲಿಯೂ ಡಬ್ ಮಾಡಿ ಪ್ರಸಾರ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಈ ಕಾರ್ಯಕ್ರಮ ಪ್ರಸಾರವಾಗುತ್ತದೆ ಎನ್ನುವ ಸುದ್ದಿ ಬಂದ ಕೂಡಲೇ ಪ್ರಜಾಸತ್ತಾತ್ಮಕವಾಗಿ ಒಂದಷ್ಟು ಸಿನಿಮಾ/ಟಿವಿ ಮಂದಿ ಸುವರ್ಣ/ ಸ್ಟಾರ್ ಮುಖ್ಯಸ್ಥರನ್ನು ಭೇಟಿ ಮಾಡಿ ಅತ್ಯಂತ "ಪ್ರಜಾಸತ್ತಾತ್ಮಕ"ವಾದ ರೀತಿಯಲ್ಲಿ ಅವರನ್ನು ಡಬ್ಬಿಂಗ್ ಧಾರಾವಾಹಿ ಪ್ರಸಾರ ಮಾಡದಿರಲು ಒಪ್ಪಿಸಿ ಬಂದರಂತೆ. ಹೀಗೆ ಹೋದವರ ಕಣ್ಣಲ್ಲಿ "ಪ್ರಜಾಪ್ರಭುತ್ವ" ಅಂದ್ರೇ ಏನರ್ಥ ಅಂತಾ ತಿಳ್ಕೊಳ್ಳೋ ಕುತೂಹಲ! ಇರಲಿ.. ಈಗ ವಿಷಯದ ಬಗ್ಗೆ ಮಾತಾಡೋಣ ಗುರೂ!

ಜನರ ಅನಿಸಿಕೆ ಮತ್ತು ಚಿತ್ರರಂಗದ ನಿಲುವು!

ನಮ್ಮ ನಾಡಲ್ಲಿ ಚಿತ್ರರಂಗದವರು (ಚಿತ್ರರಂಗದವರೆಂದರೆ ಚಲನಚಿತ್ರ ಮತ್ತು ದೂರದರ್ಶನಗಳ ಮಂದಿ) ಹೇಗೆ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡಿರುವರೋ ಹಾಗೆ ಜನಸಾಮಾನ್ಯರಿಗೆ ಅಂಥಾ ವೇದಿಕೆಯಿಲ್ಲ ಎನ್ನುವುದು ವಾಸ್ತವ. ಹಾಗಾಗಿ ಜನರು ತಮಗೆ ಸಿಗುವ ಫೇಸ್‍ಬುಕ್ಕು, ಟ್ವಿಟ್ಟರ್, ಪತ್ರಿಕೆಗಳ ವಾಚಕರ ಪತ್ರಗಳ ಮೂಲಕ, ಅಲ್ಲಿ ಇಲ್ಲಿ ಮಿಂಬಲೆತಾಣಗಳಲ್ಲಿ ಚರ್ಚೆಗಳಲ್ಲಿ, ಅದರ ಮತದಾನದಲ್ಲಿ ತಮ್ಮ ಅಭಿಪ್ರಾಯ ಹೇಳಬಲ್ಲರು ಅಷ್ಟೆ. ಇನ್ನು ಚಿತ್ರರಂಗದ ಒಳಗಿನ ಅದೆಷ್ಟೊ ಜನರು, ಖಾಸಗಿಯಾಗಿ ಡಬ್ಬಿಂಗ್ ಪರವಾಗಿ ಮಾತನ್ನಾಡಿದರೂ ಬಹಿಷ್ಕಾರ/ ಪ್ರತಿಭಟನೆಗಳ ಭಯದಿಂದ ಸಾರ್ವಜನಿಕವಾಗಿ ಈ ಬಗ್ಗೆ ದನಿಯೆತ್ತಲಾರರು!

ಇಂಥಾ ಸನ್ನಿವೇಶ ನಮ್ಮ ನಾಡಲ್ಲಿದ್ದು ಕನ್ನಡ ಚಿತ್ರರಂಗದೋರು ತಮ್ಮ ಸಂಘಟನೆಗಳನ್ನೇ ಬಂಡವಾಳ ಮಾಡಿಕೊಂಡು ಕಾನೂನುಬಾಹಿರವಾಗಿ ನಿಷೇಧವನ್ನು ಸಮರ್ಥಿಸುತ್ತಾ ಹೇಳೋ ಮಾತುಗಳು ಮಜವಾಗಿದೆ. ನಮ್ಮ ನಾಯಕರೊಬ್ಬರು ಜನರೆನ್ನುವ ನಿಜವಾದ "ಅಭಿಮಾನಿ ದೇವರು"ಗಳನ್ನು "ಫೂಲುಗಳು" ಎನ್ನುತ್ತಿದ್ದರೆ, ಗಣ್ಯ ನಿರ್ದೇಶಕರೊಬ್ಬರು "ಡಬ್ಬಿಂಗ್ ಬೇಕೆನ್ನೋರು ಲಾಭಬಡುಕ ಕನ್ನಡ ದ್ರೋಹಿಗಳು" ಅಂತಾರೆ. "ಡಬ್ಬಿಂಗ್ ಮಾಡ್ಲಿ, ಅದೆಂಗೆ ಪ್ರಸಾರ ಮಾಡ್ತಾರೋ ನೋಡೇ ಬುಡ್ತೀವಿ" ಅಂದವರು ಮತ್ತೊಬ್ಬ ನಟಿಮಣಿ.

ಒಟ್ನಲ್ಲಿ ಡಬ್ಬಿಂಗ್ ಎನ್ನುವ 'ನುಡಿ ಉಳಿಸೋ ಅಸ್ತ್ರ’ವನ್ನು, ಸ್ಪರ್ಧೆ ಎದುರಿಸಲಾಗದ ಕೆಲಮಂದಿ ಹಿಂದೆಂದೋ ಆಗಿದ್ದ ನಿಷೇಧವನ್ನು ಮುಂದುವರೆಸಲು ಮಾಡಿರೋ ತಂತ್ರಗಳ ಸಾಲಿಗೆ ಈಗ ಇದಕ್ಕೆ "ಪ್ರಜಾಪ್ರಭುತ್ವ" ಎನ್ನುವ ನುಣುಪುಲೇಪ ಹಚ್ಚಲು ತೊಡಗಿದ್ದಾರೆ. ಇರಲಿ, ಇವರು ಯಾರಿಗೂ ಕೂಡಾ ತಾವು "ಜನಸಾಮಾನ್ಯರ ತಮ್ಮ ತಾಯ್ನುಡಿಯಲ್ಲಿ ಮನರಂಜನೆ ಪಡೆದುಕೊಳ್ಳುವ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೇವೆ" ಮತ್ತು ಅದು ಪಾಪ ಎನ್ನುವ ಪ್ರಜ್ಞೆಯೂ ಇಲ್ಲಾ. ಎಷ್ಟೆಂದರೂ ತಾವು ಉಳಿದರೆ ಸಾಕು, ನಾಡು ಹಾಳಾದರೇನು? ನಾಡಿನ ಜನಕ್ಕೆ ಅನ್ಯಾಯವಾದರೇನು? ಅಲ್ವಾ ಅನ್ನೋ ಮನಸ್ಥಿತಿ ಇವರದ್ದಿರುವಂತಿದೆ. ವಿಶ್ವಸಂಸ್ಥೆಯೂ ಕೂಡಾ ಡಬ್ಬಿಂಗ್ ಎನ್ನುವುದನ್ನು ಒಂದು ಭಾಷಿಕರಿಗೆ ತಮ್ಮ ಭಾಷೆಯನ್ನುಳಿಸಿಕೊಳ್ಳಲು ಇರುವ ಅಸ್ತ್ರವೆಂದೇ ಪರಿಗಣಿಸಿರುವ ಹಿನ್ನೆಲೆಯಲ್ಲಿ ನೋಡಿದರೆ ಚಿತ್ರರಂಗದ ಕೆಲಮಂದಿ ತಮ್ಮ ಸ್ವಹಿತಾಸಕ್ತಿಯ ಕಾರಣದಿಂದ, ಕಾನೂನುಬಾಹಿರವಾಗಿರುವ ಒಂದು ನಿಷೇಧವನ್ನು ಉಳಿಸಿಕೊಳ್ಳಲು ಶ್ರಮಿಸುವುದಕ್ಕೆ "ಪ್ರಜಾಪ್ರಭುತ್ವ"ದ ಮುಸುಕು ಹಾಕೋದು, "ಕನ್ನಡಪ್ರೇಮ"ದ ನೆಪ ಹೇಳೋದೂ ಹಾಸ್ಯಾಸ್ಪದವೇ ಆಗಿದೆ!

English summary
Should good quality TV programs be allowed to be dubbed to Kannada or not? Enguru Kannada blog has started one petition seeking opinion of the Kannadigas on dubbing issue. Kannada film industry says Aamir Khan's Satyameva Jayate should not be dubbed to Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X