ಕನ್ನಡ ನುಡಿ ವೈಜ್ಞಾನಿಕವಾಗಿ ಕಲಿಯಲು ಇಲ್ಲಿದೆ ಅವಕಾಶ
ನುಡಿಯರಿಮೆ(ಭಾಷಾ ಜ್ಞಾನ)ಯ ಕ್ಷೇತ್ರದಲ್ಲಿ ದುಡಿಯುವವರಿಗೆ ಸರಿಯಾದ ದಾರಿತೋರಬಲ್ಲ ಹಿರಿಯರ ಮುಂದಾಳ್ತನದಲ್ಲಿ ತರಬೇತಿ ಶಿಬಿರಗಳನ್ನು ನಡೆಸುವ ಅವಶ್ಯಕತೆಯನ್ನು ಮನಗಂಡು ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಬನವಾಸಿ ಬಳಗದವರು ಹೇಳಿದ್ದಾರೆ. ದೇಶ ವಿದೇಶಗಳಲ್ಲಿ ತಮ್ಮ ಅರಿಮೆಯಿಂದ ವಿಖ್ಯಾತರಾಗಿರುವ, ಕನ್ನಡನಾಡಿನ ಹಿರಿಯ ನುರಿತ ನುಡಿಯರಿಗರಾದ ಡಾ.ಡಿಎನ್ ಶಂಕರಬಟ್ಟರ ಮುಂದಾಳ್ತನದಲ್ಲಿ ನುಡಿಯರಿಮೆಯ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರವು ಆಗಸ್ಟ್ ತಿಂಗಳ ಮೊದಲವಾರದಲ್ಲಿ ಶುರುವಾಗಲಿದ್ದು, ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು ನಾಲ್ಕು ಶಿಬಿರಗಳು ನಡೆಯಲಿವೆ. ಪ್ರತೀ ಶಿಬಿರದಲ್ಲೂ ಮೂರು ದಿನಗಳ ತರಬೇತಿ ಇರುತ್ತದೆ. ಇದರಲ್ಲಿ ನುಡಿಯರಿಮೆಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ, ನುಡಿಯರಿಮೆಯ ಅಧ್ಯಯನ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಯ್ಕೆಯಾದವರನ್ನು ಸಂದರ್ಶಿಸಿ ತರಬೇತಿ ಶಿಬಿರಕ್ಕೆ ಸೇರಿಸಿಕೊಳ್ಳಲಾಗುತ್ತದೆ.
ನುಡಿಯರಿಮೆಯ ಕ್ಷೇತ್ರದಲ್ಲಿ, ಡಾ.ಡಿ ಎನ್ ಶಂಕರಬಟ್ ಅವರ ಮುಂದಾಳ್ತನದಲ್ಲಿ ಸಂಶೋಧನೆಗಳನ್ನು ಮಾಡ ಬಯಸುವವರು ತಮ್ಮ ವಿವರಗಳನ್ನು ನಮಗೆ ಕಳಿಸಬೇಕಾಗಿ ಕೋರಿಕೆ. ಈ ಬಾರಿಯ ತರಬೇತಿ ಶಿಬಿರವು ಬೆಂಗಳೂರಿನಿಂದಾಚೆ ತೀರ್ಥಹಳ್ಳಿಯಲ್ಲಿ ನಡೆಯಲಿದ್ದು ಬನವಾಸಿ ಬಳಗವೇ ಉಳಿದುಕೊಳ್ಳುವ, ಊಟ ತಿಂಡಿಯ ಏರ್ಪಾಟು ಮಾಡಲಿದೆ. ಇನ್ನುಳಿದ ವಿವರಗಳನ್ನು ಪಡೆದುಕೊಳ್ಳಲು, ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ: [email protected]