"ಬೆಂಗಳೂರಾ ಬ್ಯಾರೀ, ಕರ್ನಾಟಕಾನಾ ಬ್ಯಾರೀ': ಸಿಎನ್ನೆನ್
ಚುನಾವಣಿ ಬಂತಂದ್ರ ಒಬ್ಬೊಬ್ಬ ಮಂದಿ ಒಂದೊಂದು ಉದ್ದೇಶ ಈಡೇರಿಸಿಕೊಳಕ್ಕೆ ಮುಂದಾಗ್ತಾರ. ಭಾಳ ಶಾಣ್ಯಾತನಾ ಮಾಡಿ ನಮ್ಮ ನಾಡ ಒಡ್ಯೋ ಯತ್ನ ಮಾಡೋ ರಗಡ್ ಹುನ್ನಾರಗಳೂ ನಡೀತಾ ಇರ್ತವೆ ಗುರು. "ಅಂಥಾ ಒಂದು ಹುನ್ನಾರಾನ ಈ ರಾಷ್ಟ್ರೀಯ ಮಾಧ್ಯಮಗಳೋರು ಮಾಡಕ ಹತ್ತಾರೇನ?" ಅನ್ನೋ ಪ್ರಶ್ನಿ ಮೊನ್ನಿನ ಈ ಸಿಎನ್ನೆನ್ ಐಬಿಎನ್ ಚಾನಲ್ಲದಾಗ ಬಂದ ವರದಿ ನೋಡಿ ಭಾಳ ಕಾಡ್ಸಾಕ್ ಹತ್ತೈತ್ರೀಪಾ!
"ಬೆಂಗಳೂರಾ ಬ್ಯಾರೀ, ಕರ್ನಾಟಕಾನಾ ಬ್ಯಾರೀ" ಅನ್ನೋ ಸೊಕ್ಕು ಮಾಡ್ಯಾರ!
ಈ ಮಂದಿ ಬೆಂಗಳೂರು ಬ್ಯಾರೀ ಐತಿ, ಉಳ್ಕಿ ಕರ್ನಾಟಕ ಬ್ಯಾರೀ ಐತಿ. ಬೆಂಗಳೂರು ಇಡೀ ಭಾರತಕ್ಕ ಮಾಣಿಕ್ಯದ ಹಾಂಗ ಹೊಳೀತೈತಿ, ಆದ್ರ ಕರ್ನಾಟಕ ಹೊಳ್ಯಂಗಿಲ್ಲಾ. ಬೆಂಗಳೂರಾಗಿನ ಸಂಸ್ಕೃತಿ ಬ್ಯಾರೀ ಐತಿ, ಇಲ್ಲಂದ್ರ ಮಂದಿ ಭಾಳ ಹೈಟೆಕ್ ಅದಾರ, ಎಸ್ಸೆಮ್ ಕೃಷ್ಣ ಇವ್ರುನ್ನ ಪ್ರತಿನಿಧಿಸ್ತಾರ ಅನ್ಕೋತಾ... ಇನ್ನೊಂದು ಕರ್ನಾಟಕ ಐತಿ. ಅದ್ರಾಗ ರೈತಣ್ಣದೀರಂಥಾ ಹಳ್ಳಿ ಮಂದಿ, ಬಡ ಮಂದಿ ಅದಾರ. ಇವ್ರುನ್ನ ಸಿದ್ರಾಮಯ್ಯ ಪ್ರತಿನಿಧಿಸ್ತಾರಾ ಅನ್ನಾಕ ಹತ್ಯಾರ್ರೀ. ಮ್ಯಾಗಿಂದ್ ನೋಡುದ್ರಾ 'ಹೌದಲೇ, ಖರಿ ಐತಿ ಇವ್ರ್ ಮಾತು' ಅನ್ಸೋ ಹಾಂಗ ಥಳಕ್ ಬಳುಕ್ ಮಾಡಿ ಸುದ್ದೀ ಹೇಳ್ಯಾರ್ರೀ. ಅಲ್ರೀ ಮನ್ಷಾನ ತಲೀ ಒಳ್ಗ ಮಿದುಳೈತಿ, ಅದ್ರಾಗಾ ಭಾಳ ಬುದ್ಧಿ ಐತಿ, ಬಾಕಿ ಕಡಿ ಇರಂಗಿಲ್ಲಾ ಅನ್ನೋ ಹಾಂಗ್ ಆತಲ್ರೀ ಇವ್ರ್ ಮಾತು! ಈ ಮರದಾಗ ಏನೂ ಸಾರ ಇಲ್ಲ, ಆದ್ರ ಹಣ್ಣಾಗ್ ಐತಿ ಅನ್ನೋ ಮಂದಿ ಹಣ್ಣು ತುಡುಗು ಮಾಡಕ್ ಬಂದೋರಾ ಆಗಿರ್ತಾರಾ ಮತ್ತಾ! ಈ ಮಂದಿ ನಡ್ಸಿದ್ ಸಂದರ್ಶನದಾಗ ಕೇಳೂ ಪ್ರಶ್ನೆ ಕಂಡ್ರಾ ಮೈ ಉರೀತೈತಿ. ಯಾರೋ ವಲಸಿ ಬಂದಿರೋ ಮಂಗ್ಯಾನ ಹಿಡಕೊಂಡು ಬಂದು "ನೀ ಏನ ಬೆಂಗಳೂರಾಗ ಅದೀಯೋ ಅಥ್ವಾ ಕರ್ನಾಟಕದಾಗೋ?" ಅಂತಾರ. ಅದಕ್ಕ ಅಂವಾ "ನಾ ಬೆಂಗಳೂರಾಗ ಅದೀನಿ" ಅಂತಾನ. ಅಂದ್ರಾ ಬೆಂಗಳೂರೇನು ಅಮೇರಿಕಾದಾಗೈತೇನು? ಈ ಮಾಧ್ಯಮದೋರು ಎಷ್ಟು ಉದ್ಧಟತನ ಮಾಡ್ಲಿಕ್ ಹತ್ಯಾರಾ ಅಂದ್ರ ನಾಳೀ ಬೆಂಗಳೂರು ಕರ್ನಾಟಕದಾಗ್ ಇರೋದ್ ಬ್ಯಾಡಾ ಅಂತ್ಲೂ ಕಾರ್ಯಕ್ರಮ ಮಾಡಾಕೂ ಹೇಸಂಗಿಲ್ಲಾ. ಈ ಮಂದಿಯೆಲ್ಲಾ ಕೂಡಿ ಏನ್ ಮಾಡಕ್ ಹತ್ಯಾರಾ? ಏನದಾ ಇವ್ರ ಉದ್ದೇಶ?
ನಿಮ್ಮೂರಾ ನಿಮದಲ್ಲಾ ಅಂದ್ರ ಏನರ್ಥ?
ನಿಮ್ ಮನೀ ನಿಮದಲ್ಲಾ, ನಿಮ್ ಊರು ನಿಮದಲ್ಲ ಅಂತಾ ಈಗ ಅನ್ನಾಕ್ ಹೊಂಟಿರೋ ಮಂದೀನ ಆವತ್ತು ಮುಂಬೈ ಮರಾಠಿಗ್ರದಲ್ಲಾ, ಮುಂಬೈ ಮೇಲೆ ನಿಮಗಾ ಹಕ್ಕು ಇಲ್ಲ ಅಂತಾ ಶಂಖಾ ಹೊಡದೋರ್ರಿ ಸರಾ... ನಾಳೀ ಇದೇ ಮಂದಿ ಬೆಂಗಳೂರು ಕೆಂಪೇಗೌಡ್ರು ಕಟ್ಟಿದ್ದಲ್ಲ, ಈ ಕೊಂಪೀನಾ ಉತ್ತರಾದಾಗಿಂದ ಬಂದ್ ಭಾಳ ಶಾಣ್ಯಾ ಮಂದಿ ಕಟ್ಯಾರಾ... ಅವರಿಲ್ಲಾಂದ್ರ ಬೆಂಗಳೂರನ್ನದು ಉದ್ಧಾರ ಆಗ್ತಿರಲಿಲ್ಲಾ, ಅದ್ಕ ಇದು ಇಡೀ ಭಾರತದಾಗಿನ ಮಂದೀಗ್ ಸೇರಿದ್ದು ಅಂತಾರಾ ಮತ್ತ. ಇದ್ರ ಮ್ಯಾಲ ಕನ್ನಡಿಗರ ಹಕ್ಕಿಲ್ಲ, ಇಡೀ ವಲಸಿಗ್ರ ಹಕ್ಕೈತಿ ಅಂತಾರ. ಬ್ಯಾರೀ ಭಾಷಾದೋರ್ನ ಬೆಂಗಳೂರು ಉದ್ಧಾರಕ್ಕಾಗೇ ಅವತಾರ ಎತ್ತಿರೋ ದ್ಯಾವತಿಗಳೂ ಅಂತಾರಾ. ಇಂಥಾ ವಾಹಿನಿಗಳಗ ನಿಮ್ಮ ವರದಿ ತಪ್ಪದ ಅಂತ ಈಗ ಅನ್ಲಿಲ್ಲಾ ಅಂದ್ರಾ ಮುಂದಾ ನಾವು ನೀವು ಹೊಯ್ಕಬೇಕಾಗ್ತದಾ ಅಷ್ಟಾ ಗುರುಗಳಾ!
(ಸ್ನೇಹ
ಸೇತು:
ಏನ್ಗುರು)