ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಆರ್‌ಡಿ ಪರಿಚಯ ಬೇಕೆಂದರೆ ಈ ಪತ್ರಗಳನ್ನು ಓದಿ

By * ವಿಶ್ವೇಶ್ವರ ಭಟ್
|
Google Oneindia Kannada News

J R D Tata
ಎಲ್ಲರೂ ಓದುವ ಸಾಹಿತ್ಯ ಅಂದ್ರೆ ಪತ್ರ ಸಾಹಿತ್ಯ! ಯಾರೂ ಓದದ, ಪೂರ್ತಿ ಓದದ ಪುಸ್ತಕಗಳು ಸಿಗಬಹುದು, ಆದರೆ ಪತ್ರಗಳು ಮಾತ್ರ ಸಿಗಲಿಕ್ಕಿಲ್ಲ. ಪತ್ರವನ್ನು ಓದುವುದೆಂದರೆ ಎಲ್ಲರಿಗೂ ಅಷ್ಟೊಂದು ಇಷ್ಟ. ಈ ವಿಷಯದಲ್ಲಿ ಪ್ರತಿಯೊಬ್ಬರೂ Man of letters. ಅದರಲ್ಲೂ ಬೇರೆಯವರಿಗೆ ಬಂದ ಪತ್ರಗಳನ್ನು ಓದುವುದೆಂದರೆ ಬಲು ಇಷ್ಟ. ಅದು ಲವ್ ಲೆಟರ್‌ಗಳಾಗಿದ್ದರೆ ಇನ್ನೂ ಇಷ್ಟ. ಅಲ್ಲದೇ ಪತ್ರಗಳನ್ನು ಯಾರೂ ಅರ್ಧ ಓದಿ ನಿಲ್ಲಿಸುವುದಿಲ್ಲ. ಕೆಲವರು ಒಂದೆರಡು ಬಾರಿ, ಪುನಃ ಪುನಃ ಓದುವುದುಂಟು. ಪತ್ರಗಳ ಮಹಿಮೆ ಅಂಥದು. ನನ್ನ ಬಳಿ ಪತ್ರಗಳ ಕಟ್ಟು, ಇವನ್ನೆಲ್ಲ ಸಂಗ್ರಹಿಸಿ ಸಂಕಲನವಾಗಿ ಪ್ರಕಟಿಸಿದ ಪುಸ್ತಕಗಳಿವೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷರು ಅಧಿಕಾರದಲ್ಲಿದ್ದಾಗ, ಬೇರೆ ಊರುಗಳಿಗೆ ಹೋದಾಗ ತಮ್ಮ ಪತ್ನಿಯರಿಗೆ ಬರೆದ ಪತ್ರಗಳನ್ನೆಲ್ಲ ಸಂಗ್ರಹಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದನ್ನು ಸ್ನೇಹಿತರೊಬ್ಬರು ಕಳಿಸಿಕೊಟ್ಟಿದ್ದರು.

ಗಂಡ-ಹೆಂಡತಿಗೆ, ಹೆಂಡತಿ-ಗಂಡನಿಗೆ ಬರೆದ ಪತ್ರಗಳೆಂದ ಮೇಲೆ ಅವು ಸ್ವಾರಸ್ಯವಾಗಿರಲೇಬೇಕು. ಈ ಪುಸ್ತಕವನ್ನು ಸಂಪಾದಿಸಿದ ಪುಣ್ಯಾತ್ಮ ಪತ್ರಗಳ ಅತ್ಯಂತ ಕುತೂಹಲದ ಭಾಗಗಳನ್ನೇ ಎಡಿಟ್ ಮಾಡಿ, ಕತ್ತರಿಸಿ ಮಾನವಕುಲಕ್ಕೇ ದ್ರೋಹ' ಎಂದು ಬಣ್ಣಿಸುವಂಥ ಅಪಚಾರ ಮಾಡಿದ್ದಾನೆಂಬುದು ನನ್ನ ಆರೋಪ. ಎಡಿಟ್ ಮಾಡದೇ ಹೋಗಿದ್ದರೆ ಇನ್ನೆಂಥ ದ್ರೋಹ'ವಾಗುತ್ತಿತ್ತೋ ಗೊತ್ತಿಲ್ಲ. ಅಂತೂ ಆ ಪತ್ರಗಳ ಕಟ್ಟು ಸ್ವಾರಸ್ಯವಾಗಿದೆ. ಇತ್ತೀಚೆಗೆ ಟಾಟಾ ಕಂಪನಿಯ ಮಹಾನ್ ವ್ಯಕ್ತಿಗಳಲ್ಲೊಬ್ಬರಾದ ಜೆ.ಆರ್.ಡಿ. ಟಾಟಾ ಅವರ ಪತ್ರಗಳ ಸಂಕಲನವನ್ನು ಎರಡನೇ ಬಾರಿ (ಮರುಓದು) ಓದುತ್ತಿದ್ದೆ. ನಾಲ್ಕೈದು ವರ್ಷಗಳ ಹಿಂದೆ ಅವರ ಕೆಲವು ಪತ್ರಗಳನ್ನು ಪ್ರಸ್ತಾಪಿಸಿದ್ದೆ. ಈ ಸಲ ಮತ್ತಷ್ಟು ಪತ್ರಗಳು ಸಿಕ್ಕವು- ನಿಮಗೆ ಗೊತ್ತಿರಬಹುದು ಜೆಆರ್‌ಡಿ ಟಾಟಾ ಪ್ರತಿದಿನ ಕನಿಷ್ಠ 50 ಪತ್ರಗಳನ್ನಾದರೂ ಬರೆಯುತ್ತಿದ್ದರು. ಅವರಿಗೆ ಯಾರೇ ಬರೆದರೂ ಉತ್ತರಿಸದೇ ಹೋಗುತ್ತಿರಲಿಲ್ಲ. ಪತ್ರಗಳಿಂದ ಅದನ್ನು ಬರೆದ ವ್ಯಕ್ತಿ ಯಾರು, ಹೇಗೆ ಎಂಬುದನ್ನು ಅರಿಯಬಹುದು. ಜೆಆರ್‌ಡಿ ಹೇಗಿದ್ದರು? ಅವರ ಪತ್ರಗಳನ್ನೇ ಓದಿ, ಬೇರೆಯವರ ಪತ್ರಗಳನ್ನು ಓದುವುದು ಒಳ್ಳೆಯ ಅಭ್ಯಾಸ ಅಲ್ಲ ಎಂಬ ಸಂಗತಿ ಗೊತ್ತಿದ್ದರೂ!

***

ಜನ ಜೆಆರ್‌ಡಿ ಅವರಂಥ ವ್ಯಕ್ತಿಗಳು ಹೇಗೆ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ ಹಾಗೂ ಜೆಆರ್‌ಡಿ ಅಂಥವರು ಅಂಥ ಚಿಕ್ಕ ಅಪೇಕ್ಷೆ ಹಾಗೂ ಚಿಕ್ಕ ಸಂಗತಿಗಳಿಗೂ ಪ್ರತಿಕ್ರಿಯಿಸಿ ಹೇಗೆ ದೊಡ್ಡವರೆನಿಸಿಕೊಳ್ಳುತ್ತಾರೆ ಎಂಬುದಕ್ಕೆ ತಮ್ಮ ಆ ಕ್ಷಣದ ಸಿಟ್ಟಿಗೆ ತುತ್ತಾದ ಗಗನಸಖಿಯೊಬ್ಬರಿಗೆ ಅವರು ಕ್ಷಮೆ ಕೇಳಿದ ಘಟನೆಯೊಂದು ತಿಳಿಸಿ ಕೊಡುತ್ತದೆ. ಪತ್ರ ವ್ಯವಹಾರದಲ್ಲೇ ಬಿಚ್ಚಿಕೊಳ್ಳುವ ಆ ಘಟನೆಯನ್ನು ಓಲೆಯ ಒಕ್ಕಣೆಯಲ್ಲೇ ಸವಿದರೆ ಚೆಂದ.

ಗೌರವಾನ್ವಿತ ಟಾಟಾ ಅವರೇ,

ಈ ಪತ್ರದ ಮೂಲಕ ನಿಮಗೆ ಒಂದು ವಿವರಣೆಯನ್ನು ಕೊಡಲಿಕ್ಕಿದೆ ಹಾಗೂ ಕ್ಷಮೆಯನ್ನೂ ಕೇಳಬೇಕಿದೆ. ಮಾರ್ಚ್ 18ರ ಸೋಮವಾರ ಸಂಜೆ 8 ಗಂಟೆಯ ಸಮಯದಲ್ಲಿ ನಾನು ಸ್ಟರ್ಲಿಂಗ್ ರಸ್ತೆಯಿಂದ ಹೊರಬಿದ್ದು ಪೆದ್ದಾರ್ ರೋಡ್ ಕಡೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದೆ. ಉಲ್ಟಾ ತಿರುವು ಪಡೆದುಕೊಳ್ಳುವುದಕ್ಕೆ ಯಾವಾಗಲೂ ಎಡಬದಿ ಸಾಲಿನ ತುದಿಯಲ್ಲೇ ಇರುತ್ತಿದ್ದ ನಾನು ಆ ದಿನ ಹಾಗೆ ಮಾಡಲಿಕ್ಕೆ ಆಗದೇ ಹೋಯಿತು. ಆ ಸಂದರ್ಭದಲ್ಲಿ ಹಸಿರು ಸಿಗ್ನಲ್ ಬಿದ್ದೊಡನೆ ನನ್ನಿಂದಾಗಿ ಮುಂದೆ ಹೋಗಲಿಕ್ಕಾಗುತ್ತಿಲ್ಲ ಎಂದು ನಿಮ್ಮ ಕಾರಿನ ಚಾಲಕ ಅಸಹನೆ ವ್ಯಕ್ತಪಡಿಸಲು ಶುರು ಮಾಡಿದ. ಸುಮಾರು ಐದು ಸೆಕೆಂಡ್‌ಗಳ ನಿಮ್ಮ ಸಮಯ ಇದರಿಂದ ವ್ಯಯವಾಯಿತು. ಮನೆಗೆ ಹೋಗಲು ತಡವಾಗುತ್ತಿದೆ ಎಂಬ ಅಸಹನೆಯಿಂದಲೋ ಏನೋ ಆ ಅವಧಿಯಲ್ಲಿ ನೀವು ನಿಮ್ಮ ಕಾರಿನಿಂದ ಹೊರಗೆ ಮುಖ ಹಾಕಿ ಅಸಭ್ಯವಾಗಿ ಕೂಗಿದಿರಿ.

ತಪ್ಪು ಸಾಲಿನಲ್ಲಿ ನಿಂತು ನಿಮ್ಮ ಅಮೂಲ್ಯ ಐದು ಸೆಕೆಂಡ್‌ಗಳನ್ನು ವ್ಯಯಿಸಿದ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ. ಆದರೆ ಟಾಟಾ ಅವರೇ ಆ ಸಮಯದಲ್ಲಿ ನಿಮ್ಮಿಂದ ವ್ಯಕ್ತವಾದ ವರ್ತನೆ ಇದೆಯಲ್ಲ, ಅದು ನನ್ನನ್ನು ಸಿಟ್ಟಿಗೇಳಿಸಿತು ಅನ್ನುವುದಕ್ಕಿಂತ ಅಚ್ಚರಿಯ ಮಡುವಿಗೆ ತಳ್ಳಿತು. ಚಾಲಕನನ್ನು ಹೊಂದಿರುವ ಐಷಾರಾಮಿ ಕಾರಿನಲ್ಲಿ ಕುಳಿತ ನೀವೇ ಅಷ್ಟೊಂದು ರೊಚ್ಚಿಗೇಳುತ್ತೀರಿ ಎಂದಾದರೆ, ಮುಂಬೈನಂಥ ಕೆಟ್ಟ ಸಂಚಾರ ವ್ಯವಸ್ಥೆಯ ನಗರದಲ್ಲಿ ನೌಕರಿ ಮಾಡುವ ಗೃಹಿಣಿಯ ಪರಿಸ್ಥಿತಿ ಏನಿರಬಹುದು ಹಾಗೂ ಅಸಹನೆಯಲ್ಲಿ ಆಕೆಯಿಂದ ಆಗುವ ತಪ್ಪುಗಳು ಸಹಜವೇ ಆಗಿರುತ್ತವೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬಲ್ಲಿರಿ.

ನಿಮ್ಮ ಕಾರಿಗೆ ಅಡ್ಡಿಯಾಗಿದ್ದಕ್ಕೆ ನಾನು ಖಂಡಿತ ಕ್ಷಮೆಯಾಚಿಸುತ್ತೇನಾದರೂ ನನ್ನ ಕಡೆಯಿಂದ ಈ ವಿವರಣೆಯನ್ನೂ ಮುಂದಿಡುತ್ತಿದ್ದೇನೆ. ನಿಮ್ಮಿಂದ ವ್ಯಕ್ತವಾದ ಸಹ್ಯವಲ್ಲದ ನಡವಳಿಕೆಗೆ ವಿಷಾದವಿದೆ. ಏಕೆಂದರೆ ನಿಮ್ಮನ್ನು ಯಾವತ್ತೂ ಒಬ್ಬ ಅತ್ಯಂತ ಸಭ್ಯಸ್ತ ಎಂದೇ ಭಾವಿಸಿಕೊಂಡು ಬಂದವಳು ನಾನು.

ಇತಿ, ಶ್ರೀಮತಿ ಆರ್. ಲಾಲ್ವಾನಿ

ಇದಕ್ಕೆ ಜೆಆರ್‌ಡಿ ಟಾಟಾ ಕೊಟ್ಟ ಉತ್ತರ ಹೀಗಿತ್ತು-
ಆತ್ಮೀಯ ಶ್ರೀಮತಿ ಲಾಲ್ವಾನಿ, ನಿಮ್ಮ ಪತ್ರ ತಲುಪುತ್ತಲೇ ನನ್ನಲ್ಲಿ ಆಶ್ಚರ್ಯ ಹಾಗೂ ಪಶ್ಚಾತ್ತಾಪಗಳು ಒಮ್ಮೆಗೇ ಹುಟ್ಟಿದವು. ನನಗೆ ಇದನ್ನು ಬರೆಯುವ ಶ್ರಮ ತೆಗೆದುಕೊಂಡ ನಿಮ್ಮನ್ನು ಅಭಿನಂದಿಸುತ್ತೇನೆ. ನಾನು ಈಗಷ್ಟೇ ವಿದೇಶದಿಂದ ಹಿಂತಿರುಗಿದ್ದರಿಂದ ಹಾಗೂ ಅದುವರೆಗೂ ನಿಮ್ಮ ಪತ್ರ ನನ್ನ ಮನೆಯಲ್ಲಿ ವಾರಗಟ್ಟಲೇ ಹಾಗೆ ತೆರೆಯದ ಸ್ಥಿತಿಯಲ್ಲಿ ಇದ್ದಿದ್ದರಿಂದ ಉತ್ತರಿಸಲು ತಡವಾಗುತ್ತಿರುವುದಕ್ಕೆ ವಿಷಾದಿಸುತ್ತೇನೆ.

ನನಗೆ ಆಶ್ಚರ್‍ಯವಾಗಿದ್ದೇಕೆಂದರೆ ನೀವು ವಿವರಿಸಿದ ಘಟನೆ ನನಗೆ ನೆನಪಿನಲ್ಲಿಲ್ಲ. ಪಶ್ಚಾತ್ತಾಪ ಏಕೆಂದರೆ ನೀವು ಹೇಳಿರುವ ಪ್ರಕಾರ ನಾನು ಹಾಗೆ ಅಸಭ್ಯವಾಗಿ ಕೂಗಿಕೊಂಡಿದ್ದೆ ಎನ್ನುವುದಕ್ಕೆ. ಮಹಿಳೆಯರ ಬಗ್ಗೆ ನಾನು ರಜಪೂತರು ಹೊಂದಿದ್ದಂಥ ಅಭಿಮಾನಪೂರ್ವಕ ಗೌರವವನ್ನು ಹೊಂದಿರುವವನು. ಅಂಥದ್ದರಲ್ಲಿ ಅದ್ಯಾಕೆ ಒಬ್ಬರ ವಿಷಯದಲ್ಲಿ ಹಾಗೆ ಸಭ್ಯತೆಯಿಲ್ಲದೇ ನಡೆದುಕೊಳ್ಳಬೇಕಾದ ಪರಿಸ್ಥಿತಿ ಬಂತು ಎಂದು ಅರ್ಥವಾಗುತ್ತಿಲ್ಲ. ಅದೇನೇ ಪ್ರಚೋದನೆ ಉಂಟಾಗಿದ್ದರೂ ಆ ವರ್ತನೆ ಸಮರ್ಥನೀಯವಲ್ಲ. ಈಗ ನಾನು ಮಾಡಬಹುದ್ದಾಗಿದ್ದೇನೆಂದರೆ ನಿಮಗೆ ನನ್ನ ತಪ್ಪೊಪ್ಪಿಗೆ ತಿಳಿಸುತ್ತ ಕ್ಷಮೆಯಾಚಿಸುವುದು. ಇದರೊಂದಿಗೆ ಕಳುಹಿಸಿಕೊಡುತ್ತಿರುವ ಹೂಗುಚ್ಛವನ್ನು ಸ್ವೀಕರಿಸಿ ನೀವು ನನ್ನನ್ನು ಮನ್ನಿಸುತ್ತೀರಿ ಹಾಗೂ ಈ ಘಟನೆಗೂ ಮೊದಲು ನನ್ನ ವಿಷಯದಲ್ಲಿ ಯಾವ ಭಾವನೆ ಹೊಂದಿದ್ದಿರೋ ಅದನ್ನೇ ಇಟ್ಟುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ.

ನಿಮ್ಮ ವಿಶ್ವಾಸಿ,
ಜೆಆರ್‌ಡಿ ಟಾಟಾ

***

ಜೆಆರ್‌ಡಿಯವರು ಜಿ.ಡಿ. ಬಿರ್ಲಾ ಅವರಿಗೆ ಬರೆದ ತುಂಬ ಚಿಕ್ಕ ಪತ್ರವೊಂದು ಆತ್ಮೀಯತೆಯ ದೊಡ್ಡ ಅಧ್ಯಾಯವೊಂದನ್ನೇ ನಮ್ಮೆದುರು ತೆರೆದಿಟ್ಟಂತೆ ಭಾಸವಾಗುತ್ತದೆ. ಓದಿ.

ನನ್ನ ಪ್ರೀತಿಯ ಘನಶ್ಯಾಮದಾಸ್,
ನನಗೊಂದು ಲೇಖನ ಕಳುಹಿಸಿಕೊಟ್ಟಿದ್ದಕ್ಕಾಗಿ ಧನ್ಯವಾದ. ಅದನ್ನು ತುಂಬ ಆಸಕ್ತಿಯಿಂದ ಓದಿಕೊಂಡು ಹಿಂತಿರುಗಿಸುತ್ತಿದ್ದೇನೆ. ನಾನು ನಿಕೋಟಿನ್ ಬಿಟ್ಟಾಗಿದೆ. ಕಾಫಿ ಇಲ್ಲವೇ ಮದ್ಯವನ್ನು ಸೇವಿಸುವುದೂ ತುಂಬ ಅಪರೂಪ. ಬೇರೆಯವರು ಹೇಳುವ ಪ್ರಕಾರ ನಾನು ಮಾಂಸವನ್ನೂ ತ್ಯಜಿಸಬೇಕು. ಆದರೆ ನಾನು ಬಿಡಬೇಕು ಎಂದುಕೊಳ್ಳುವುದು ಕೆಲಸವನ್ನು!...
ನಿಮ್ಮ ವಿಶ್ವಾಸಿ,
ಜೇ

ಟಾಟಾ ಅವರ ಮತ್ತೊಂದಿಷ್ಟು ಪತ್ರಗಳ ನಮೂನೆಟಾಟಾ ಅವರ ಮತ್ತೊಂದಿಷ್ಟು ಪತ್ರಗಳ ನಮೂನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X