ಕನಸು ಕಾಣುವುದು ತಪ್ಪಲ್ಲ, ಆದರೆ ನನಸಾಗಿಸದಿರುವುದು!
***
ಹೋದಲ್ಲಿ ಬಂದಲ್ಲಿ ಜನ ನನ್ನನ್ನು ಕೇಳುತ್ತಾರೆ- 'ಯಾವಾಗಲೂ ನೀವು ಉತ್ಸಾಹದಲ್ಲಿರುತ್ತೀರಾ. ಸದಾ ನಗುನಗುತ್ತೀರಾ. ಬೇರೆಯವರನ್ನೂ ಸಂತಸಪಡಿಸುತ್ತೀರಾ. ಬಿಲಿಯನರ್ ಆಗಿದ್ದರೂ ಸ್ವಲ್ಪವೂ ಟೆನ್ಶನ್ ಮಾಡಿಕೊಳ್ಳುವುದಿಲ್ಲ. ಸಿಬ್ಬಂದಿ ಮೇಲೆ ರೇಗುವುದಿಲ್ಲ. ಯಾವತ್ತೂ ಹೊಸ ಹೊಸ ಸಾಹಸಕ್ಕೆ ಮುಂದಾಗುತ್ತೀರಾ. ಸವಾಲುಗಳನ್ನು ಸಲೀಸಾಗಿ ಎದುರಿಸುತ್ತೀರಾ. ಬ್ರ್ಯಾನ್ಸನ್ ಯಾವ ಹೊಸ ಸಾಹಸಕ್ಕೆ ಸ್ಕೆಚ್ ಹಾಕುತ್ತಿರಬಹುದು ಎಂದು ಯೋಚಿಸುತ್ತಿರುವಾಗಲೇ ಅದನ್ನು ಮಾಡಿ ಮುಗಿಸಿ ಮುಂದಿನದಕ್ಕೆ ಯೋಚಿಸುತ್ತಾ ಕುಳಿತಿರುತ್ತೀರಾ. ಇವೆಲ್ಲ ಹೇಗೆ ಸಾಧ್ಯವಾಗುತ್ತದೆ ನಿಮಗೆ? ನೀವು ಹೇಗೆ ಕೆಲಸ ಮಾಡುತ್ತೀರಾ? ಕೆಲಸದ ಹೊರತಾಗಿ ಹೇಗೆ ಸಮಯ ಕಳೆಯುತ್ತೀರಾ? ನಿಮ್ಮ ಖಯಾಲಿಗಳೇನು? ನಮಗೂ ಸ್ವಲ್ಪ ಹೇಳಬಾರದಾ?' ತಕ್ಷಣ ನಾನು ನಕ್ಕು ಸುಮ್ಮನಾಗುತ್ತೇನೆ. ಆದರೆ ಅವರು ಸುಮ್ಮನೆ ಬಿಡುವುದಿಲ್ಲ. ಹೇಳಲೇಬೇಕೆಂದು ಪ್ರೀತಿಯಿಂದ ಜಗಳ ತೆಗೆಯುತ್ತಾರೆ, ಮುನಿಸಿಕೊಳ್ಳುತ್ತಾರೆ.
ನನಗೆ ಅತ್ಯಂತ ಸಂತಸವಾಗುವುದು ಯಾವಾಗ ಅಂದ್ರೆ ಆ ಹಣವನ್ನು ಚಾರಿಟಿಗೋ, ಸಮಾಜ ಕಾರ್ಯಕ್ಕೋ ದಾನ ನೀಡಿದಾಗ! | |
ಈ ಪ್ರಶ್ನೆಗಳೇ ಎಲ್ಲರನ್ನೂ ಬಾಧಿಸಿದರೆ ವಿಮಾನ ಇರುತ್ತಿರಲಿಲ್ಲ, ಕ್ಷಿಪಣಿಗಳನ್ನು ಕಂಡುಹಿಡಿಯುತ್ತಿರಲಿಲ್ಲ, ಹಡಗನ್ನು ಯಾರೂ ನಿರ್ಮಿಸುತ್ತಿರಲಿಲ್ಲ, ಆಕಾಶದಿಂದ ಯಾರೂ ನೆಗೆಯುತ್ತಿರಲಿಲ್ಲ, ಆಳ ಸಮುದ್ರದ ರಹಸ್ಯ ಭೇದಿಸುತ್ತಿರಲಿಲ್ಲ, ಅಂಟಾರ್ಟಿಕಾಕ್ಕೆ ಹೋಗುತ್ತಿರಲಿಲ್ಲ, ಹಿಮಾಲಯ ಏರುತ್ತಿರಲಿಲ್ಲ, ಕಾಡಿನಲ್ಲಿ ಬೇಟೆಗೆ ಹೋಗುತ್ತಿರಲಿಲ್ಲ, ಬಹುಮಹಡಿ ಕಟ್ಟಡ ಕಟ್ಟುತ್ತಿರಲಿಲ್ಲ. ಎಲ್ಲರೂ ಮನೆಯಲ್ಲಿ ಸುಮ್ಮನೆ ಕೈಕಾಲು ಚೆಲ್ಲಿ ಕುಳಿತಿರುತ್ತಿದ್ದರು. ಸಾಹಸಕ್ಕೆ ಯಾರೂ ಮುಂದಾಗುತ್ತಿರಲಿಲ್ಲ. ಹೀಗೆ ಹೇಳುವವರನ್ನು ಕಂಡರೆ ಅವರ ತಲೆಮೇಲೆ ಹಿಡಿದು ಮೊಟಕಬೇಕು ಎಂದೆನಿಸುತ್ತಿತ್ತು. ನನ್ನಿಂದ ಏನಾದರೂ ಅಲ್ಪಸ್ವಲ್ಪ ಸಾಹಸವಾಗಿದ್ದರೆ, ಈ ನೆಗೆಟಿವ್ ಪ್ರತಿಕ್ರಿಯೆಗೆ ನನ್ನ ಪ್ರತಿಭಟನೆಯ ಸಂಕೇತವಾಗಿ ಮೂಡಿದ ಉತ್ತರ- ನಾನು ಸಾಧಿಸಿ ತೋರಿಸುತ್ತೇನೆ ನೋಡ್ತಾ ಇರಿ. ನೀವು ರಾಂಗ್ ಎಂದು ನಾನು ಸಾಬೀತು ಮಾಡಬಲ್ಲೆ.' ಯಾರಾದರೂ ನನ್ನ ಬಳಿ ಬಂದು ನಿನ್ನಿಂದ ಇದು ಸಾಧ್ಯ ಇಲ್ಲ' ಎಂದು ಹೇಳುವ ಧೈರ್ಯ ಮಾಡುವುದಿಲ್ಲ. ಹೇಳಿದ ಕ್ಷಣದಲ್ಲೇ ಸಾಧ್ಯ ಮಾಡಿ ತೋರಿಸಲು ಪಣತೊಡುತ್ತೇನೆ ಹಾಗೂ ಸಾಧ್ಯ ಮಾಡಿ ತೋರಿಸುತ್ತೇನೆ.
ಚಂದ್ರಲೋಕಕ್ಕೆ ಹೋಗ್ತೀಯಾ' ಅಂತ ಕೇಳಿದರೆ ಹೂಂ, ರೆಡಿ' ಅಂದುಬಿಡುತ್ತೇನೆ. ಈಗ ನಾನು ಚಂದ್ರಲೋಕಕ್ಕೆ ಹೋಗುವ ಎಲ್ಲ ತಯಾರಿ ಮಾಡುತ್ತಿದ್ದೇನೆ, ನಿಮಗೆ ಗೊತ್ತಿರಲಿ. ನಿಮ್ಮನ್ನು ನಿಲ್ಲಿಸುವ, ನಿಯಂತ್ರಿಸುವ ಶಕ್ತಿಯಿರುವುದು ನಿಮಗೆ ಮಾತ್ರ. ಈ ಕೆಲಸವನ್ನು ನಾವು ಬಹುತೇಕ ಸಂದರ್ಭಗಳಲ್ಲಿ ಬೇರೆಯವರಿಗೆ ಕೊಟ್ಟುಬಿಡುತ್ತೇವೆ. ಹೀಗಾಗಿ ಅವರು ನಮ್ಮನ್ನು ಆಳುತ್ತಾರೆ. ನಮ್ಮ ಸಾಮರ್ಥ್ಯ, ಶಕ್ತಿಯನ್ನು ಕುಗ್ಗಿಸಿಬಿಡುತ್ತಾರೆ. ಹಿಮಾಲಯ ಏರುವ ತನಕ ಅದೇ ದೊಡ್ಡ ಸಾಹಸವೆನಿಸುತ್ತದೆ. ಒಮ್ಮೆ ಏರಿದ ಬಳಿಕ ಅದಕ್ಕೂ ಎತ್ತರದ ಪರ್ವತವನ್ನೇರಬಹುದು ಎಂಬ ವಿಶ್ವಾಸ ಮೂಡುತ್ತದೆ. ಚಿಕ್ಕ ಬೆಟ್ಟವೇರದವನಿಗೆ ಹಿಮಾಲಯ ಕನಸಿನ ಮಾತೇ ಸರಿ. ಮೊದಲು ಮನೆಯಿಂದ ಹೊರಬಿದ್ದು ಪರ್ವತವೇರಲು ತೊಡಗಬೇಕು. ಹಿಮಾಲಯದ ತುತ್ತತುದಿಯಿಂದ ನೋಡಿದಾಗ ಜಗತ್ತು ನಮಗೆ ಬೇರೆ ರೀತಿಯಲ್ಲೇ ಕಾಣಿಸುತ್ತದೆ. ಅದನ್ನು ಮನೆಯಲ್ಲಿ ಆಲಸಿಯಾಗಿ ಬಿದ್ದುಕೊಂಡವನಿಗೆ ಹೇಳಿದರೆ ಅರ್ಥವಾಗುವುದಿಲ್ಲ. ಅಂಥವರಿಗೆ ಹೇಳಲೂಬಾರದು. ಹೀಗಾಗಿ ಯಾರಾದರೂ ನನ್ನನ್ನು ನಿಮಗೆ ಇವೆಲ್ಲ ಹೇಗೆ ಸಾಧ್ಯವಾಯಿತು?' ಎಂದು ಕೇಳಿದರೆ ನಕ್ಕು ಸುಮ್ಮನಾಗುತ್ತೇನೆ.
ಬನ್ನಿ ನನ್ನ ಜತೆ, ತೋರಿಸುತ್ತೇನೆ ನೀವು ಅಂದುಕೊಂಡಂತೆ ಜಗತ್ತು ವಿಶಾಲವಾಗಿಲ್ಲ, ಬಹಳ ಚಿಕ್ಕದಾಗಿದೆ. ಮನೆಯಲ್ಲಿ ಕುಳಿತವನಿಗೆ ಮಾತ್ರ ಹಾಗೆ ಅನಿಸಬಹುದು. ಜಗತ್ತು ಸುತ್ತುವವನಿಗೆ ಅದು ಚಿಕ್ಕದೇ. ಸಮುದ್ರದ ತಳ ಮುಟ್ಟಿ ಬಂದವ, ಆಳವಾದ ಬಾವಿಯಲ್ಲಿ ನಡೆದು ಹೋಗುತ್ತಾನೆ ಎಂಬ ಮಾತನ್ನು ಕೇಳಿರಬಹುದು. ಮೋಡದ ಮೇಲಿಂದ ಜಿಗಿದವನಿಗೆ ಮಾತ್ರ ಹಕ್ಕಿಯ ಸ್ವಾತಂತ್ರ್ಯವೇನೆಂಬುದು ಅರ್ಥವಾದೀತು. ನೀವು ಮೇಲಿಂದ ಜಿಗಿಯುವ ತನಕ ನಿಮ್ಮ ಜೀವ ಉಳಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದೂ ಗೊತ್ತಾಗುವುದಿಲ್ಲ. ನನಗೆ ಪ್ರತಿಕ್ಷಣವೂ ಅದ್ಭುತವೆನಿಸುತ್ತದೆ. ಏನೂ ಮಾಡದೇ ಸುಮ್ಮನೆ ಕಳೆದರೆ ನನಗೇ ನಾನು ದ್ರೋಹ ಮಾಡಿಕೊಂಡಷ್ಟು ಬೇಸರವಾಗುತ್ತದೆ. ಆದ್ದರಿಂದ ನಾನು ಹೊಸ ಉದ್ಯಮಕ್ಕೆ ಕೈಹಾಕುತ್ತೇನೆ, ಸಾಹಸಕ್ಕೆ ಮುಂದಾಗುತ್ತೇನೆ, ಆಕಾಶದಿಂದ ಜಿಗಿಯುತ್ತೇನೆ, ಹಡಗಿನಲ್ಲಿ ಜಗತ್ತು ಸುತ್ತುತ್ತೇನೆ, ಚಂದ್ರಲೋಕದ ಕನಸು ಕಾಣುತ್ತೇನೆ. ಇದು ನನಗೊಂದೇ ಸಾಧ್ಯವಾಗುತ್ತದೆಯೆಂದು ಭಾವಿಸಿದರೆ ಅದು ತಪ್ಪು. ಇದು ಪ್ರತಿಯೊಬ್ಬರಿಂದಲೂ ಸಾಧ್ಯ. ನನಗೆ ಇರುವಂತೆ ಉಳಿದವರಿಗೂ ಯೋಚಿಸುವ, ನಿರ್ಧಾರ ತೆಗೆದುಕೊಳ್ಳುವ ಶಕ್ತಿಯಿದೆ. ಹಾಗೆಂದು ಇವನ್ನೆಲ್ಲ ಸಾಧಿಸಿದ ಮೊದಲ ವ್ಯಕ್ತಿ ನಾನಲ್ಲ. ನಾನೂ ಸಹ ಸಾಧನೆ ಮಾಡಿದವರಿಂದ ಪ್ರೇರಣೆ ಪಡೆದವ. ಸಾಧನೆಗೆ ಮಿತಿಯಿಲ್ಲವೆಂಬುದು ನನಗೆ ಬಹಳ ಬೇಗ ಅರಿವಾಯಿತು. ಅದೇ ಪ್ರೇರಣೆ ನನ್ನನ್ನು ಕೈಹಿಡಿದು ಮುನ್ನುಗ್ಗುವಂತೆ ಮಾಡುತ್ತಿದೆ.
ಪ್ರತಿದಿನ ಹೊಸ ಸಂಗತಿಗಳನ್ನು ತಿಳಿಯುವುದು, ಹೊಸ ಹೊಸ ಜನರನ್ನು ಭೇಟಿ ಮಾಡುವುದು, ಹೊಸತನಕ್ಕೆ ಮುಖಮಾಡುವುದು ಖುಷಿಯ ಅಂಶಗಳೇ. ಇದೇ ನನಗೆ ವಿಭಿನ್ನ ಕ್ಷೇತ್ರಗಳಲ್ಲಿ ಉದ್ಯಮ ಮಾಡುವುದಕ್ಕೆ ಕಾರಣ. ಹಣ ಮಾಡುವುದೇ ಮುಖ್ಯ ಅಲ್ಲ. ಹಣ ಹೇಗಿದ್ದರೂ ಬಂದೇ ಬರುತ್ತದೆ. ಹಣ ಮಾಡುವುದನ್ನು ಮೀರಿದ ಆಕರ್ಷಣೆ ನಮ್ಮನ್ನು ಅಂಥ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತದೆ. ನನಗೆ ಯಾವುದು ಸಂತಸ, ನೆಮ್ಮದಿ ತಂದುಕೊಡುತ್ತದೋ ಅದನ್ನು ಎದೆಗವುಚಿಕೊಂಡು ಮಾಡುತ್ತೇನೆ. ಅದರಿಂದ ಎಷ್ಟು ಹಣ ಬರುತ್ತದೆಂಬುದು ನನಗೆ ಮುಖ್ಯವಾಗುವುದಿಲ್ಲ. ಯಾವುದೇ ಕೆಲಸವನ್ನು ಹೀಗೆ ಭಾವಿಸಿದರೆ ಅದು ವಿಫಲವಾಗಲು ಸಾಧ್ಯವೇ ಇಲ್ಲ. ಈ ಸಂಗತಿ ನನಗೆ ಎಲ್ಲ ಉದ್ಯಮವನ್ನು ಆರಂಭಿಸಿದಾಗಲೂ ಮನವರಿಕೆಯಾಗಿದೆ.
ಮುಂದೆ ಓದಿ : ಎಲ್ಲರಂತೆ ನಾನೂ ಹಣವನ್ನು ಪ್ರೀತಿಸುತ್ತೇನೆ »