ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತನಗೆ ಟೈಮಿಲ್ಲ ಎಂದು ಹೇಳುವವನನ್ನು ನಂಬಬೇಡಿ!

By * ವಿಶ್ವೇಶ್ವರ ಭಟ್
|
Google Oneindia Kannada News

Busiest person is one who finds time for everything
ಕೆಲವು ವ್ಯಕ್ತಿಗಳ ಬಗ್ಗೆ ಅಚ್ಚರಿಯಾಗುತ್ತದೆ. ಅವರು ನೂರೆಂಟು ಕೆಲಸಗಳನ್ನು ತಲೆಮೇಲೆ ಎಳೆದುಕೊಂಡಿರುತ್ತಾರೆ. ಎಲ್ಲ ಪ್ರಮುಖ ಕಾರ್ಯಕ್ರಮ, ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟಿವಿ ಪರದೆಯಲ್ಲಿ ಮಿಂಚುತ್ತಿರುತ್ತಾರೆ. ಯಾವುದೇ ಮದುವೆ, ಮುಂಜಿ, ಗೃಹಪ್ರವೇಶ, ವರಪೂಜೆ, ಅಂತ್ಯಸಂಸ್ಕಾರವನ್ನು ತಪ್ಪಿಸಿಕೊಳ್ಳುವುದಿಲ್ಲ. ಸಿನಿಮಾ ಪ್ರೀಮಿಯರ್ ಷೋ, ಪ್ರತಿಭಟನೆ, ಟ್ರಸ್ಟ್ ಮೀಟಿಂಗ್, ಆರ್ಟ್ ಗ್ಯಾಲರಿ ಪ್ರದರ್ಶನದಲ್ಲೂ ಹಾಜರ್. ಫೋನ್ ಮಾಡಿದಾಗ ಯಾವುದೋ ದೇಶದಲ್ಲಿರುತ್ತಾರೆ. ದೈನಂದಿನ ಆಫೀಸು ಕೆಲಸ, ಮೀಟಿಂಗ್, ಕಾನ್ಫರೆನ್ಸನ್ನು ತಪ್ಪಿಸುವಂತಿಲ್ಲ. ಇವೆಲ್ಲವುಗಳ ನಡುವೆ ಪುಸ್ತಕ ಬರೆಯುತ್ತಿರುತ್ತಾರೆ, ಓದುತ್ತಿರುತ್ತಾರೆ. ಹವ್ಯಾಸವೆಂದು ಕಾಡು-ಮೇಡು ಅಲೆಯುತ್ತಿರುತ್ತಾರೆ. ಮುಖದಲ್ಲಿ ಅವಸರದ ಗೆರೆಗಳಿಲ್ಲ. ನೋವಿನ ಸ್ನಾಯುಗಳು ಹೊಯ್ದಾಡುವುದಿಲ್ಲ. ಶಾಂತ ಮುಖಮುದ್ರೆ. ಈ ಎಲ್ಲ ಕೆಲಸಗಳು ನಿರಾತಂಕವಾಗಿ, ವ್ಯವಸ್ಥಿತವಾಗಿ ಗಡಿಯಾರದ ಮುಳ್ಳುಗಳಂತೆ ನಡೆಯುತ್ತಿರುತ್ತವೆ. ಇವೆಲ್ಲ ಹ್ಯಾಗಪ್ಪ ಸಾಧ್ಯ?

ಅವೇನು ಮಹಾ ಬಿಡಿ ಸಾರ್, ಇಂಥವರಿಗೆ ಕೈಗೆ, ಕಾಲಿಗೆ ಸೆಕ್ರೆಟರಿಗಳಿರುತ್ತಾರೆ, ಆಳು-ಕಾಳುಗಳಿರುತ್ತಾರೆ. ಎಲ್ಲವನ್ನೂ ಕೈಗೆ ತಂದುಕೊಡುವ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರೆ. ಅವರ ಪರವಾಗಿ ಕೆಲಸ ಮಾಡುವ ಹತ್ತಾರು ಕಾಣದ ಕೈಗಳಿರುತ್ತವೆ. ಹೀಗಿರುವಾಗ ಅದೇನು ಹೆಚ್ಚಲ್ಲ' ಎಂದು ಉಡಾಫೆಯಿಂದ ಮಾತಾಡುತ್ತಾರೆ. ಇಂಥವರು ಕೈಲಾಗದವರು ಅಥವಾ ಬೇರೆಯವರ ಸಾಧನೆ ನೋಡಿ ಕರುಬುವವರು. ನಿಜವಿರಬಹುದು, ಇವರಿಗೆ ಕೈಗೆ, ಕಾಲಿಗೆ ಕೆಲಸದವರು, ಆಳು-ಕಾಳುಗಳು, ಸೆಕ್ರೆಟರಿಗಳು ಇರಬಹುದು. ಅವರು ಇವರ ಕೆಲಸಕಾರ್ಯಗಳನ್ನು ಸುಲಭ ಅಥವಾ ಸರಳಗೊಳಿಸಬಹುದು. ಆದರೂ ಎಲ್ಲ ಕೆಲಸಗಳನ್ನೂ ಬೇರೆಯವರಿಗೆ ಹೊರಿಸಿ ಅವರು ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಸೆಕ್ರೆಟರಿ ಫೋನ್ ನಂಬರ್ ಹುಡುಕಿ, ರಿಂಗ್ ಮಾಡಿ ಕೊಡಬಹುದು. ಆದರೆ ಫೋನ್‌ನಲ್ಲಿ ಮಾತಾಡುವವರು ಅವರೇ. ಸೆಕ್ರೆಟರಿ ವಿಮಾನ ಟಿಕೆಟ್ ಬುಕ್ ಮಾಡಿಕೊಡಬಹುದು, ಆದರೆ ವಿಮಾನದಲ್ಲಿ ಪ್ರಯಾಣಿಸುವವರು ಅವರೇ. ಪ್ರೀಮಿಯರ್ ಷೋಗೆ ಟಿಕೆಟ್ ತಂದುಕೊಡಬಹುದು, ಮೂರು ತಾಸು ಸಿನಿಮಾ ನೋಡುವವರು ಅವರೇ.

ಗೊತ್ತಿರಲಿ, ಎಲ್ಲರಂತೆ ಅವರಿಗಿರುವುದೂ ಇಪ್ಪತ್ನಾಲ್ಕೇ ಗಂಟೆ! ಎಂಟು ತಾಸು ನಿದ್ದೆ. ಎಲ್ಲರಂತೆ ಊಟ, ತಿಂಡಿ, ಉಪಾಹಾರ, ಸ್ನಾನ, ಪ್ರಾತವಿಧಿ-ವಿಧಾನ ಅವರಿಗೂ ಇರುತ್ತದೆ. ಇವೆಲ್ಲವುಗಳಿಗೆ ಎಲ್ಲರ ಹಾಗೆ ಮೂರು ತಾಸು ಬೇಕು. ಉಳಿದವರಿಗೂ ಅವರಿಗೂ ಇರುವ ಒಂದೇ ವ್ಯತ್ಯಾಸವೆಂದರೆ, ಉಳಿದ ಹದಿಮೂರು ತಾಸುಗಳನ್ನು ಹೇಗೆ ಕಳೆಯುತ್ತಾರೆ ಎಂಬುದು. ಇಂಗ್ಲಿಷಿನಲ್ಲಿ ಒಂದು ಮಾತಿದೆ. The most busiest person is one who finds time for everything. ಎಲ್ಲ ಚಟುವಟಿಕೆಗಳನ್ನು ಮುಗಿಸಿ ಇನ್ನೂ ಕೆಲವು ಕೆಲಸಗಳಿಗೆ ತನ್ನ ಸಮಯವನ್ನು ತೆಗೆದಿಟ್ಟುಕೊಂಡವನು ಇನ್ನೂ busiest person.

ನಾನು ಇತ್ತೀಚೆಗೆ ಆರೆಸ್ಸೆಸ್ ನಾಯಕರಾಗಿದ್ದ ಹೊ.ವೆ. ಶೇಷಾದ್ರಿ ಯವರ ಜೀವನಚರಿತ್ರೆಯನ್ನು ಓದುತ್ತಿದ್ದೆ. ಅವರು ತಮ್ಮ ದೈನಂದಿನ ಕೆಲಸ-ಕಾರ್ಯ, ಪ್ರವಾಸ, ಗಣ್ಯರ ಭೇಟಿ, ಕಾರ್ಯಕ್ರಮ, ಭಾಷಣ, ಬೈಠಕ್ ಜತೆಯಲ್ಲಿ ಪ್ರತಿದಿನ ಕನಿಷ್ಠ 70-80 ಮಂದಿಗೆ ಸ್ವಹಸ್ತಾಕ್ಷರದಲ್ಲಿ ಪತ್ರ ಬರೆಯುತ್ತಿದ್ದರು. ವಿಕ್ರಮ' ಪತ್ರಿಕೆಗೆ ಎರಡು ದಶಕಗಳಿಗೂ ಹೆಚ್ಚು ಕಾಲ ನಿರಂತರವಾಗಿ ಅಂಕಣ ಬರೆದರು. ಉತ್ಥಾನ' ಪತ್ರಿಕೆಗೆ 'ಪರಿಪ್ರಶ್ನ' ಎಂಬ ಪ್ರಶ್ನೋತ್ತರ ಅಂಕಣ ಬರೆದರು. ಜತೆಯಲ್ಲಿ ಸಾಮಯಿಕ ಲೇಖನಗಳನ್ನು ಬರೆದರು. ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದರು. ಇಡೀ ಭಾರತವನ್ನು ಅವರು ಅದೆಷ್ಟು ಸಲ ಸುತ್ತುಹೊಡೆದರೋ? ಅವೆಷ್ಟು ಸಾವಿರ ಸಾವಿರ ಸಭೆಗಳನ್ನುದ್ದೇಶಿಸಿ ಭಾಷಣ ಮಾಡಿದರೋ? ಲೆಕ್ಕವಿಟ್ಟವರಾರು? ಅವರ ಲೇಖನವನ್ನು ಅಪೇಕ್ಷಿಸಿ ಬಂದವರಿಗೆ ಟೈಮಿಲ್ಲ, ಬಹಳ ಬಿಜಿ' ಎಂಬ ಸುಳ್ಳು ಸಬೂಬುಗಳನ್ನು ಹೇಳಿ ಅವರೆಂದೂ ಸಾಗಹಾಕಲಿಲ್ಲ.

ಒಮ್ಮೆ ಅವರ ಲೇಖನವನ್ನು ಅಪೇಕ್ಷಿಸಿ ಶೇಷಾದ್ರಿಯವರಿಗೆ ಬರೆದಿದ್ದೆ. ಆಗ ಅವರು ದಿಲ್ಲಿಯಲ್ಲಿದ್ದರು. ಅನಾರೋಗ್ಯ ಅವರನ್ನು ಅಮರಿಕೊಂಡಿತ್ತು. ಆದರೂ ಶೇಷಾದ್ರಿಯವರು ತಮ್ಮ ಕೈಬರಹದಲ್ಲಿ ಪತ್ರ ಬರೆದು ಲೇಖನ ಕಳಿಸಲು ಸಾಧ್ಯವಾಗದ ಬಗ್ಗೆ ವಿಷಾದಿಸಿದ್ದರು. ರೈಲಿನಲ್ಲಿ ಪ್ರಯಾಣಿಸುವಾಗ ಅವರು ಒಂದೋ, ನೂರಾರು ಪತ್ರ, ಲೇಖನಗಳನ್ನು ಬರೆಯುತ್ತಿದ್ದರು, ಇಲ್ಲವೇ ಒಂದೆರಡು ಪುಸ್ತಕಗಳನ್ನು ಓದಿ ಮುಗಿಸಿರುತ್ತಿದ್ದರು. ಇನ್ನು ಅವರ ಜತೆ ಮಾತಿಗೆ ಕುಳಿತರೆ, ಕೆಲಸ-ಕಾರ್ಯಗಳ ಗೊಡವೆಯಿಲ್ಲದೇ ಸುಮ್ಮನೆ ಕುಳಿತಿರುತ್ತಾರಲ್ಲ, ಅವರ ಹಾಗೆ ತಾಸುಗಟ್ಟಲೆ ಹರಟೆಹೊಡೆದು ಕಳಿಸುತ್ತಿದ್ದರು. ತಾನು ಬಹಳ ಬಿಜಿ, ಕೈತುಂಬಾ ನೂರಾರು ಕೆಲಸ, ಅಲ್ಲಿಗೆ ಹೋಗಬೇಕು, ಇಲ್ಲಿಗೆ ಹೋಗಬೇಕು, ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದು ಚಡಪಡಿಸುತ್ತಾರಲ್ಲ, ಪುರುಸೊತ್ತಿಲ್ಲವೆಂದು ಅಂಡುಸುಟ್ಟ ಬೆಕ್ಕಿನಂತೆ ಅತ್ತಿತ್ತ ಬಹಳ tensionನಿಂದ ತಿರುಗುತ್ತಿರುತ್ತಾರಲ್ಲ, ಜಗತ್ತೇ ತನ್ನ ಹೆಗಲ ಮೇಲೆ ಕುಳಿತಿದೆಯೆಂಬಂತೆ ಪೋಸು ಕೊಡುತ್ತಾರಲ್ಲ, ಅಂಥ ಯಾವ ಚಿಕ್ಕ ಸುಳಿವನ್ನೂ ಸಹ ಬಿಡದೇ, ನಗುನಗುತ್ತಾ ಬಾಯ್ತುಂಬಾ ಮಾತಾಡಿ ಕಳಿಸುತ್ತಿದ್ದರು. ಹಾಗೆಂದು ಶೇಷಾದ್ರಿಯವರು ಬಹಳ ಬಿಜಿಯೇ. ಆದರೆ ಇವೆಲ್ಲವುಗಳಿಗೂ ಅವರು ಸಮಯ ಹೊಂದಿಸಿಕೊಳ್ಳುತ್ತಿದ್ದರು. ಅದನ್ನು ಹೇಗೆ ಹೊಂದಿಸಿಕೊಳ್ಳುತ್ತಿದ್ದರೋ, ನಿಗೂಢ!

ಈ ವಿಷಯಕ್ಕೆ ಬಂದರೆ ಪ್ರಾಯಶಃ ಗಾಂಧೀಜಿಯವರನ್ನು ಮೀರಿಸುವವರು ಯಾರೂ ಇರಲಿಕ್ಕಿಲ್ಲ. ಅವರೂ ಸಹ ತಮಗೆ ಬರೆದವರಿಗೆಲ್ಲ ಸ್ವತಃ ತಾವೇ ಉತ್ತರಿಸುತ್ತಿದ್ದರು. ಕೊನೆಕೊನೆಗೆ ತಮಗೆ ಬರುವ ಪತ್ರಗಳ ಸಂಖ್ಯೆ ಸಾವಿರ ದಾಟಿದಾಗಲೇ ಮಹಾದೇವ ದೇಸಾಯಿಯವರನ್ನು ನೇಮಿಸಿಕೊಂಡಿದ್ದು. ಆದರೆ ಗಾಂಧೀಜಿ ಆ ಎಲ್ಲ ಪತ್ರಗಳನ್ನು ತಾವೇ ಓದುತ್ತಿದ್ದರು. ಪ್ರಸಂಗ ಬಂದರೆ ಪ್ರಮುಖ ಪತ್ರಗಳಿಗೆ ತಾವೇ ಉತ್ತರ ಬರೆಯುತ್ತಿದ್ದರು. ಅವರ ಭೇಟಿಗೆ ದಿನವೂ ಸಾವಿರಾರು ಜನ ಬರುತ್ತಿದ್ದರು. ಹತ್ತಾರು ಕಿಮೀ ನಡೆಯುತ್ತಿದ್ದರು. ಸಾಯಂಕಾಲದ ಭಜನೆಯನ್ನು ಅವರು ತಪ್ಪಿಸುತ್ತಿರಲಿಲ್ಲ. ಉಳಿದಂತೆ ಗಣ್ಯರ ದಂಡು ಅವರ ಭೇಟಿಗೆ ಸದಾ ಕಾದಿರುತ್ತಿತ್ತು. ಆದರೆ ಗಾಂಧೀಜಿ ಈ ಎಲ್ಲ ಕೆಲಸಗಳಿಗೂ ಸಮಯ ಹೊಂದಿಸಿಕೊಳ್ಳುತ್ತಿದ್ದರು. ಆಗ ಈಗಿನಂತೆ ವಿಮಾನ, ಮೊಬೈಲು, ಕಂಪ್ಯೂಟರ್, ಇ-ಮೇಲ್ ಯಾವುವೂ ಇರಲಿಲ್ಲ. ಜತೆಯಲ್ಲಿ ಅವರು ಪತ್ರಿಕೆಗಳನ್ನು ನಡೆಸಿದರು. ಒಂದಲ್ಲ-ಎರಡಲ್ಲ, ಆರು ಪತ್ರಿಕೆಗಳಿಗೆ ಅವರು ಸಂಪಾದಕರಾಗಿದ್ದರು. ಸ್ವತಃ ಅವರೇ ಆ ಪತ್ರಿಕೆಗಳಿಗೆ ಬರೆಯುತ್ತಿದ್ದರು.

ಇಷ್ಟೇ ಅಲ್ಲ, ಸಮಾಜದಲ್ಲಿ ಓರೆ-ಕೋರೆಗಳನ್ನು ಕಂಡಾಗ ಪತ್ರಿಕೆಗಳ ಓದುಗರ ಪತ್ರ' ವಿಭಾಗಕ್ಕೆ ಬರೆಯುತ್ತಿದ್ದರು. ಗಾಂಧೀಜಿಯವರು ಹೀಗೆ ಬರೆದ ಪತ್ರಗಳ ಸಂಕಲನ ಓದಿದರೆ ಗೊತ್ತಾಗುತ್ತದೆ ಅವರ ಕಾಳಜಿ ಏನಿತ್ತೆಂಬುದು. ಲಂಡನ್‌ಗೆ ಹಡಗಿನಲ್ಲಿ ಹೋಗುವಾಗ ಹಿಂದ್ ಸ್ವರಾಜ್' ಬರೆಯಲಾರಂಭಿಸಿದ ಗಾಂಧೀಜಿಗೆ ಬಲಗೈ ಕೈಕೊಟ್ಟಿತು. ಮುಂದಿನ ಸುಮಾರು ನಲವತ್ತೇಳು ಪುಟಗಳನ್ನು ಅವರು ಎಡಗೈಯಲ್ಲಿ ಬರೆದು ಪೂರ್ಣಗೊಳಿಸಿದರು. ಅದನ್ನು ಬರೆಯುವುದಕ್ಕಿಂತ ಮೊದಲು ಎಡಗೈಯಲ್ಲಿ ಬರೆದು ಬರೆದು ಪ್ರಾಕ್ಟೀಸು ಮಾಡಿರಬೇಕು. ಹಡಗು ಪ್ರಯಾಣವನ್ನು ವೃಥಾ ವ್ಯರ್ಥಗೊಳಿಸಲು ಅವರಿಗೆ ಇಷ್ಟವಾಗಿರಲಿಕ್ಕಿಲ್ಲ. ಒಮ್ಮೆ ಅಲಹಾಬಾದ್‌ನಿಂದ ಮುಂಬಯಿಗೆ ರೈಲಿನಲ್ಲಿ ಪ್ರಯಾಣಿಸುವಾಗ ಟಾಯ್ಲೆಟ್‌ನಲ್ಲಿ ತಂಬಿಗೆ ಇಲ್ಲದೇ ಗಾಂಧೀಜಿಯವರು ಪರಿತಪಿಸಿದರು. ಬೇರೆಯವರಾದರೆ ಸುಮ್ಮನಾಗುತ್ತಿದ್ದರೇನೋ, ಗಾಂಧೀಜಿಯವರು ತಮಗಾದ ತೊಂದರೆ ಬೇರೆಯವರಿಗೂ ಆಗದಿರಲಿ ಎಂದು, ತಕ್ಷಣ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಲೆಟರ್‍ಸ್ ಟು ದಿ ಎಡಿಟರ್' ವಿಭಾಗಕ್ಕೆ ಪತ್ರ ಬರೆದು ಸಾರ್ವಜನಿಕರ ಗಮನಸೆಳೆದರು. ಅಂಥ ಸಣ್ಣಪುಟ್ಟ ಸಂಗತಿಗಳ ಬಗ್ಗೆ ಕ್ರಮ ಜರುಗಿಸುವುದು ಕೂಡ ಬಹಳ ಮುಖ್ಯವೆಂದು ಅವರು ಭಾವಿಸಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ಅವರು ಈ ಸಂಗತಿಗಳ ಬಗ್ಗೆ ಬರೆಯಲು ಸಹ ಸಮಯವಿಟ್ಟುಕೊಂಡಿದ್ದರು.

ಮುಂದೆ ಓದಿ : ಅಷ್ಟೊಂದು ಬಿಜಿನಾ? ಸುಳ್ಳು ಹೇಳಬೇಡಿ! »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X