ಅಷ್ಟೊಂದು ಬಿಜಿನಾ? ಸುಳ್ಳು ಹೇಳಬೇಡಿ!
ಈ ವಿಷಯದಲ್ಲಿ ಅದ್ಭುತ' ಅಂತ ಅನಿಸುವುದು ಶಂಕರಾಚಾರ್ಯರ ಬಗ್ಗೆ. ಅವರು ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿದರು. ಶೃಂಗೇರಿ, ಪುರಿ, ದ್ವಾರಕಾ ಹಾಗೂ ಬದರಿಯಲ್ಲಿ ಧರ್ಮಪೀಠಗಳನ್ನು ಸ್ಥಾಪಿಸಿದರು. ನೇಪಾಳದ ನೆತ್ತಿ ಹತ್ತಿ ಅಲ್ಲಿ ಪಶುಪತಿನಾಥ ದೇವಾಲಯವನ್ನೂ ಸ್ಥಾಪಿಸಿದರು. ಅವರು ಹೋದೆಡೆಯಲ್ಲೆಲ್ಲಾ ಸ್ಥಾಪಿಸಿದ ದೇಗುಲಗಳು ಎಷ್ಟೋ? ಧರ್ಮಕಾರ್ಯಗಳಿಗೆ ಜನರನ್ನು ಪ್ರೇರೇಪಿಸಿ, ಅಣಿಗೊಳಿಸಿದ ಮನಸ್ಸುಗಳೆಷ್ಟೋ? ಜೀವನಪರ್ಯಂತ ಈ ಕೆಲಸಗಳಿಗೇ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಇಷ್ಟಕ್ಕೂ ಅವರು ಬದುಕಿದ್ದೇ ಕೇವಲ ಮೂವತ್ತೆರಡು ವರ್ಷ! ಈ ಕಾಲದಲ್ಲೂ ಬಹುತೇಕ ಮಂದಿ ಅಷ್ಟು ವಯಸ್ಸಿನಲ್ಲಿ ತಮ್ಮ ರಾಜ್ಯವನ್ನೇ ದಾಟಿರುವುದಿಲ್ಲ. ಹಾಗಿರುವಾಗ ಶಂಕರರು ಇಡೀ ಹಿಂದುಸ್ತಾನವನ್ನು ಸುತ್ತಿ ತಮ್ಮ ಸಂದೇಶ ಸಾರಿ ಬಂದಿದ್ದರು.
ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ, ನೀವು ಯಾರನ್ನೇ ಕೇಳಿ, ನಾನು ಬಹಳ ಬಿಜಿ, ಪುರುಸೊತ್ತೇ ಇಲ್ಲ, ನನಗೆ ಟೈಮ್ ಇಲ್ಲ, ಟೈಮ್ ಸಿಕ್ಕಿದರೆ ಬರ್ತೇನೆ, ವಿಪರೀತ ವರ್ಕ್ಲೋಡ್' ಅಂತಾರೆ. ತಾನು ಆರಾಮವಾಗಿದ್ದೇನೆ ಎಂದು ಹೇಳುವವರೇ ಇಲ್ಲ. ತನಗೆ ಟೈಮಿದೆ ಎಂದು ಹೇಳುವವರೂ ಇಲ್ಲ. ಎಲ್ಲರನ್ನೂ ಅಪಾಯಿಂಟ್ ಮೆಂಟ್ ತೆಗೆದುಕೊಂಡೇ ಭೇಟಿ ಮಾಡಬೇಕು. ಬೆಂಗಳೂರಿನಂಥ ನಗರವೊಂದೇ ಅಲ್ಲ, ಜಿಲ್ಲೆಗಳಲ್ಲಿರುವವರೂ ತಮಗೆ ಟೈಮೇ ಇಲ್ಲ ಅಂತ ಭಾವಿಸಿಬಿಟ್ಟಿದ್ದಾರೆ. ನಿಜಕ್ಕೂ ಅವರೆಲ್ಲ ಬಿಜಿನಾ? ಅವರಿಗೆ ಟೈಮೇ ಇಲ್ಲವಾ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಇರಬಹುದು, ನಿಜಕ್ಕೂ ಬಿಜಿಯಾಗಿಯೇ ಇರಬಹುದು. ಆದರೆ ಯಾರೂ ಸಹ ಟೈಮೇ ಇಲ್ಲದಷ್ಟು ಬಿಜಿಯಾಗಿರುವುದಿಲ್ಲ. ಅಷ್ಟಕ್ಕೂಲ್ಲದಕ್ಕೂ ಟೈಮನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಅದು ಸುಮ್ಮನೆ ಸರಿದು ಹೋಗುತ್ತದೆ. ಪ್ರತಿಯೊಬ್ಬರಿಗೂ ದಿನವಿಡೀ ಕೈತುಂಬಾ ಕೆಲಸ ಮಾಡಿದ ನಂತರವೂ ತುಸು ಸಮಯ ಉಳಿದಿರುತ್ತದೆ. ಉದಾಹರಣೆಗೆ ಬೆಂಗಳೂರಿನ ಟ್ರಾಫಿಕ್ಜಾಮ್. ಪ್ರಾಯಶಃ ನಮ್ಮೆಲ್ಲ delayಗೆ ಟ್ರಾಫಿಕ್ ಜಾಮ್ನಂಥ excuse ಮತ್ತೊಂದಿಲ್ಲ. ನಮ್ಮೆಲ್ಲ ತಪ್ಪುಗಳನ್ನು ಅದೇ ಜಾಮ್ ಮೇಲೆಯೇ ಹೊರಿಸಿ ಬಚಾವ್ ಆಗುತ್ತೇವೆ.
ಹಾಗೆ ನೋಡಿದರೆ, ಟ್ರಾಫಿಕ್ ಜಾಮ್ ವಿರುದ್ಧ ಸಿಡಿಮಿಡಿಗೊಳ್ಳದವರು ಇಲ್ಲವೇ ಇಲ್ಲ. ಯಾವ ಪತ್ರಿಕೆ ಇದರ ವಿರುದ್ಧ campaign ಮಾಡಿಲ್ಲ ಹೇಳಿ. ಆದರೆ ಪರಿಣಾಮ ಮಾತ್ರ ಸೊನ್ನೆ. ಎಷ್ಟು ದಿನ ಅಂತ ಟ್ರಾಫಿಕ್ ಜಾಮನ್ನು ದೂಷಿಸೋದು? ಇನ್ನೊಂದು ರೀತಿಯಲ್ಲಿ ಯೋಚಿಸಿದರೆ ಟ್ರಾಫಿಕ್ ಜಾಮ್ನನ್ನು ನಿತ್ಯ ಸಂಗಾತಿಯಾಗಿ ಮಾಡಿಕೊಳ್ಳಬಹುದು. ಅಂದರೆ ಟ್ರಾಫಿಕ್ ಜಾಮ್ ವಿರುದ್ಧ ಮುಖ ಸಿಂಡರಿಸಿಕೊಳ್ಳುವುದನ್ನು ನಿಲ್ಲಿಸಬಹುದು. ಬಹಳ ಜನರಿಗೆ ಗೊತ್ತಿಲ್ಲ, ಟ್ರಾಫಿಕ್ ಜಾಮ್ನಂತಹ ಜತೆಗಾರ ಮತ್ತೊಬ್ಬನಿಲ್ಲ. ನನ್ನ ದೈನಂದಿನ ಬಹುತೇಕ ಕೆಲಸಗಳೆಲ್ಲ ಕಾರು ಯಾವುದೋ ಜಾಮ್ನಲ್ಲಿ ಸಿಲುಕಿಕೊಂಡಾಗಲೇ ಆರಂಭವಾಗುತ್ತದೆ. ರಾಜರಾಜೇಶ್ವರಿನಗರದಿಂದ ಚಾಮರಾಜ ಪೇಟೆಯಲ್ಲಿರುವ ನನ್ನ ಕಚೇರಿ ತಲುಪಲು ಏನಿಲ್ಲವೆಂದರೂ ಒಂದು, ಒಂದೂಕಾಲು ಗಂಟೆ ಬೇಕು. ಈ ಅವಧಿಯಲ್ಲಿ ಆ ಕಾರಿನಲ್ಲಿ ಎಲ್ಲ ಪೇಪರ್ಗಳನ್ನು ತಿರುವಿಹಾಕಬಹುದು. ಇ-ಮೇಲ್ ಗಳನ್ನು ಓದಬಹುದು. ಹಾಗೆ ತುರ್ತು ಉತ್ತರಿಸಬೇಕಾದವರಿಗೆ ಉತ್ತರಿಸಬಹುದು. ಹತ್ತಾರು ಫೋನ್ ಕರೆಗಳನ್ನು ಮಾಡಬಹುದು. ಕೆಲವರಿಗೆ ಎಸ್ಸೆಮ್ಮೆಸ್ಗಳನ್ನು ಕಳಿಸಬಹುದು. ಅಷ್ಟಾಗಿಯೂ ಸಮಯ ಉಳಿದರೆ ವರ್ಷದ ಹಿಂದೆ ಸಿಕ್ಕ ಬಾಲ್ಯದ ಗೆಳೆಯನಿಗೆ ಫೋನ್ ಮಾಡಿ ಸಿಹಿ ಅಚ್ಚರಿ' ನೀಡಬಹುದು. ಆಷ್ಟೊತ್ತಿಗೆ ಕಚೇರಿ ಬಂದಿರುತ್ತದೆ. ಆ ದಿನದ ಬಹುತೇಕ ಕೆಲಸಗಳಿಗೆ ಕಚೇರಿ ತಲುಪುವುದಕ್ಕಿಂತ ಮೊದಲೇ ಚಾಲನೆ ಕೊಟ್ಟಂತಾಯಿತು. ಅಂದರೆ ಆ ದಿನದ ಅರ್ಧಕ್ಕರ್ಧ ಕೆಲಸ ಮುಗಿದಂತೆ.
ಟ್ರಾಫಿಕ್ ಜಾಮ್ನ ಅವಧಿ ವಿಸ್ತರಿಸಿದರೆ ಚಿಂತೆಯಿಲ್ಲ. ಪುಸ್ತಕದ ಪುಟಗಳನ್ನು ತಿರುವಿ ಹಾಕಬಹುದು. ಆಡಿಯೊ ಸಿ.ಡಿ.ಗಳನ್ನು ತುರುಕಿದರೆ ಸಂಗೀತ ತನ್ನಪಾಡಿಗೆ ಜಿನುಗುತ್ತಿರುತ್ತದೆ. ಈಗಂತೂ ಪುಸ್ತಕಗಳು ಸಿ.ಡಿ.ಗಳಲ್ಲಿ ಸಿಗುತ್ತಿವೆ. ಪುಸ್ತಕಗಳನ್ನು ಓದುವ ತಾಪತ್ರಯವೇ ಇಲ್ಲ. ಯಾರೋ ಓದುತ್ತಿರುತ್ತಾರೆ, ಕೇಳಿಸಿಕೊಂಡರಾಯಿತು. ಪುಸ್ತಕ ಓದಿದ ಧನ್ಯತೆ ನಮ್ಮದಾಗಿರುತ್ತದೆ. ಅಂದರೆ ಒಂದು ನಿಮಿಷ ಸಹ ವ್ಯರ್ಥವಾಗುವುದಿಲ್ಲ. ನಾನೇನಾದರೂ ಪುಸ್ತಕಗಳನ್ನು ಓದಿದ್ದರೆ ಹೆಚ್ಚಾಗಿ ಬೆಂಗಳೂರಿನ ಬಸ್ ನಿಲ್ದಾಣಗಳಲ್ಲಿ, ಬಸ್ಸುಗಳಲ್ಲಿ, ರೈಲಿನಲ್ಲಿ, ಕಾರಿನಲ್ಲಿ, ವಿಮಾನದಲ್ಲಿ. ಬಹುತೇಕ ಕ್ಯಾಸೆಟ್, ಸಿ.ಡಿ.ಗಳನ್ನು ಕೇಳಿದ್ದೂ ಕಾರಿನಲ್ಲೇ. ಕಾರಿನಂಥ private space ಮತ್ತೊಂದಿಲ್ಲ. ಹೀಗಿರುವಾಗ ಟ್ರಾಫಿಕ್ ಜಾಮ್ನ ಸಂಪೂರ್ಣ ಲಾಭ ಪಡೆಯಬಹುದು.
ಇನ್ನು ನೀವು ಪ್ರತಿದಿನ ನಿದ್ದೆ ಮಾಡುವ ಅವಧಿಯಲ್ಲಿ ಒಂದು ತಾಸು ಕಡಿತಗೊಳಿಸಿದರೆ ನೀವಂದುಕೊಂಡ, ಬಾಕಿ ಉಳಿಸಿಕೊಂಡ ಎಲ್ಲ ಕೆಲಸಗಳನ್ನೂ ಮುಗಿಸಬಹುದು. ಇತ್ತೀಚೆಗೆ ಕನ್ನಡ ಟಿವಿ ಚಾನೆಲ್ನವರು ಸಿನಿಮಾ ಪ್ರಶಸ್ತಿ ಆಯ್ಕೆಗಾಗಿ ನನ್ನನ್ನು ತೀರ್ಪುಗಾರರಾಗಿ ಬನ್ನಿ ಎಂದರು. ನೂರಾರು ಸಿನಿಮಾಗಳನ್ನು ನೋಡುವ ಕೆಲಸ ಒಪ್ಪಿಕೊಂಡಂತೆ. ಆದರೆ ಒಂದೊಂದೇ ಸಿನಿಮಾ ನೋಡಲಾರಂಭಿಸಿದಾಗ ಗೊತ್ತಾಯಿತು ಇದೆಂಥ ಘನಘೋರ ಕೆಲಸವೆಂದು. ಪ್ರತಿದಿನ ಒಂದಾದರೂ ಸಿನಿಮಾ ನೋಡಲೇಬೇಕು. ಮೂರು ತಾಸು ಒಂದೆಡೆ ಕುಳಿತುಕೊಳ್ಳಬೇಕು. ಒಂದು ಯೋಚನೆ ಬಂತು. ಪೋರ್ಟಬಲ್ ಡಿವಿಡಿ ಪ್ಲೇಯರ್ ತಂದುಕೊಂಡು (ಟಾಯ್ಲೆಟ್ನಲ್ಲಿ, ಟ್ರಾಫಿಕ್ಜಾಮ್ನಲ್ಲಿ) ಎಲ್ಲೆಂದರಲ್ಲಿ ಸಿನಿಮಾ ನೋಡಲಾರಂಭಿಸಿದೆ. ಅದೊಂದು ಕೆಲಸ ಅಂದುಕೊಳ್ಳುವ ಬದಲು ಎಂಜಾಯ್ ಮಾಡಲಾರಂಭಿಸಿದೆ. ಸಿನಿಮಾ ನೋಡುವುದರಲ್ಲಿ ಖುಷಿ ಸಿಗಲಾರಂಭಿಸಿತು.
ನಂಗೆ ಟೈಮ್ ಇಲ್ಲ' ಅಂತ ಹೇಳುವವನನ್ನು ಮಾತ್ರ ನಂಬಬೇಡಿ. ಆತ ನಿಮಗೆ ಮಾತ್ರ ಅಲ್ಲ, ತನಗೂ ಸುಳ್ಳು ಹೇಳಿಕೊಳ್ಳುತ್ತಿದ್ದಾನೆ ಎಂದರ್ಥ. ಹಾಂ.