ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೆಫೆ ಕಾಫಿ ಡೇ' ಎಂಬ ಅಪ್ಪಟ ಕನ್ನಡ ಬ್ರ್ಯಾಂಡ್

By * ವಿಶ್ವೇಶ್ವರ ಭಟ್
|
Google Oneindia Kannada News

VG Siddharth
ವಿ.ಜಿ. ಸಿದ್ದಾರ್ಥ ಅಂದ್ರೆ ಯಾರಿಗೆ ಗೊತ್ತಿಲ್ಲ? ಎಲ್ಲರಿಗೂ ಗೊತ್ತು. ಅವರ ಬಗ್ಗೆ ಏನು ಗೊತ್ತು ಅಂದ್ರೆ ಅವರು ಎಸ್.ಎಂ. ಕೃಷ್ಣ ಅವರ ಅಳಿಯ ಅಂತ ಅಷ್ಟೆ. ಅದಕ್ಕಿಂತ ಹೆಚ್ಚಿಗೆ ಏನೂ ಇಲ್ಲ. ಇನ್ನು ಕೆಲವರು ಅವರು ಹಾಗಂತೆ, ಹೀಗಂತೆ ಎಂದು ಹೇಳಬಹುದು. ಅದೂ ಸಹ ಯಾರೋ ಹೇಳಿದ್ದು. ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ಇನ್ನು ಅವರನ್ನು ಯಾರಾದರೂ ನೋಡಿದ್ದೀರಾ, ಯಾರೂ ಹೌದು ಎಂದು ಹೇಳಲಿಕ್ಕಿಲ್ಲ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಿನಿತ್ಯ ಅವರ ಮನೆ ಕಡೆ ಸುಳಿದಾಡಿದ ಪತ್ರಕರ್ತರೂ ಸಹ ಸಿದ್ದಾರ್ಥ ಅವರನ್ನು ನೋಡಿದ್ದು ಅನುಮಾನವೇ. ಸಿದ್ದಾರ್ಥ ನಮ್ಮ ಮುಂದೆಯೇ ಹಾದು ಹೋದರೂ ಅವರನ್ನು ಯಾರೂ ಗುರುತು ಹಿಡಿಯಲಿಕ್ಕಿಲ್ಲ. ಇವರೇ ಸಿದ್ದಾರ್ಥ ಅಂದರೂ ಯಾರೂ ನಂಬಲಿಕ್ಕಿಲ್ಲ.

ಯಾಕೆಂದರೆ ಸಿದ್ದಾರ್ಥ ಅಂದ್ರೆ ಹೀಗಿರಬಹುದು ಎಂದು ಅಂದುಕೊಂಡವರು ಅವರನ್ನು ನೋಡಿ ತುಸು ಆಶ್ಚರ್ಯಚಕಿತರಾಗಬಹುದು. ಅವರು ಅಷ್ಟೊಂದು ಸಿಂಪಲ್ ಹಾಗೂ unassuming. ಒಂದೆರಡು ಟ್ಯಾಬ್ಲಾಯಿಡ್ ಪತ್ರಿಕೆಗಳು ಆಗಾಗ ಅವರ ಯಾವುದೋ ಜಮಾನದ ಫೋಟೊವನ್ನು ಪ್ರಕಟಿಸುತ್ತಿರುತ್ತವೆ. ಅದನ್ನು ಬಿಟ್ಟರೆ ರಾಜ್ಯದ ಪತ್ರಿಕಾ ಕಾರ್ಯಾಲಯಗಳಲ್ಲೂ ಅವರದ್ದೊಂದು ಫೋಟೊ ಸಿಗಲಿಕ್ಕಿಲ್ಲ. ಅಷ್ಟರಮಟ್ಟಿಗೆ ಅವರು ಸುಪರಿಚಿತರಾಗಿಯೂ ಅಪರಿಚಿತ ಹಾಗೂ ಅಗೋಚರ. ಅವರನ್ನು ಹತ್ತಿರದಿಂದ ಬಲ್ಲವರು, ಸಿದ್ದಾರ್ಥ ಮೂಲತಃ ಸಂಕೋಚದ ಸ್ವಭಾವದವರು. ಅವರಿಗೆ ಪಬ್ಲಿಸಿಟಿಗಿಂತ ಸಿಂಪ್ಲಿಸಿಟಿಯೇ ಹೆಚ್ಚು ಆಪ್ತ. ಹೀಗಾಗಿ ಅವರು ಕೃಷ್ಣ ಅವರ ಅಳಿಯನಾಗಿಯೂ ಕೆಮರಾಕಣ್ಣುಗಳಿಂದ ದೂರವೇ ಉಳಿದಿದ್ದಾರೆ' ಅಂತಾರೆ.

ನನಗೂ ಗೊತ್ತು, ಅವರ ಕುರಿತ ಈ ಲೇಖನವನ್ನು ಸಹ ಅವರು ಇಷ್ಟಪಡುವುದಿಲ್ಲ ಅಂತ. ನಾನು ಅವರ ಬಿಜಿನೆಸ್ ಬಗ್ಗೆ ಒಂದೊಂದಾಗಿ ಕೇಳಲಾರಂಭಿಸಿದಾಗ, ನೀವು ನಿಮ್ಮ ಪತ್ರಿಕೆಯಲ್ಲಿ ಬರೆಯೋದಾದ್ರೆ ನಾನು ಹೇಳೊಲ್ಲ. ನನಗೆ ಪಬ್ಲಿಸಿಟಿ ಬೇಕಾಗಿಲ್ಲ. ನಾನು ಅದರಿಂದ ದೂರ. ನನ್ನ ಪಾಡಿಗೆ ನಾನಿರೋದು, ನನ್ನ ಮಿತಿಯಲ್ಲಿ ಕೆಲಸ ಮಾಡೋದು ನನಗೆ ಇಷ್ಟ. ಪ್ರಚಾರದ ಅಗತ್ಯವಿಲ್ಲ' ಎಂಬ ಮುನ್ನುಡಿಯೊಂದಿಗೇ ಸಿದ್ದಾರ್ಥ ತಮ್ಮ ಕಾಫಿತೋಟದ ಹಾದಿಯುದ್ದಕ್ಕೂ ಅವರ ಕತೆಯನ್ನು ಹೇಳುತ್ತಾ ಹೋದರು. ಅವೆಲ್ಲವನ್ನೂ ಕೇಳಿದ ಬಳಿಕ ನನಗೆ ಬರೆಯದಿರಲು ಮನಸ್ಸಾಗಲಿಲ್ಲ. ಕನ್ನಡಿಗರೊಬ್ಬರು ಮಾಡಿದ ಸಾಧನೆಯನ್ನು ಕನ್ನಡಿಗರ ಮುಂದೆ ಹೇಳಿದರೆ ತಪ್ಪೇನು, ಅಷ್ಟಕ್ಕೂ ಅವರು ಮಾಡಿದ ಸಾಧನೆ ಅಸಾಧಾರಣ ಎಂದು ಅನಿಸಿದ್ದರಿಂದ, ಸಿದ್ದಾರ್ಥ ಅವರ ಬಗ್ಗೆ ಅಡಾಪಡಾ ಕೇಳಿದವರಿಗೆ ಅವರಿಗೆ ಸಂಬಂಧಿಸಿದ ಸರಿಯಾದ ಮಾಹಿತಿಯಿರಲಿ ಎಂಬ ಕಾರಣಕ್ಕೆ, ಅವರಿಗೆ ಬೇಸರವಾದರೂ ಪರವಾಗಿಲ್ಲ ಎಂದು ತುಸು ಸಲುಗೆ ಪಡೆದು ನಾಲ್ಕು ಸಾಲು ಬರೆಯುತ್ತಿದ್ದೇನೆ. ಕೆಫೆ ಕಾಫಿ ಡೇ!

ಈ ತಲೆಮಾರಿನ ಜನರ ಹಾಟ್‌ಸ್ಪಾಟ್. ಇದು ಕೇವಲ ಕಾಫಿ ಕುಡಿಯುವ ತಾಣ ಅಲ್ಲ. ಇದು ಪ್ರೇಮಿಗಳ ಕೂಡು ತಾಣವೂ (meeting place) ಹೌದು. ಸ್ನೇಹಿತರಿಗೆ ಹರಟೆಕಟ್ಟೆ. ಸರಿಕರಿಗೆ ದಣಿವಾರಿಸಿಕೊಳ್ಳುವ ಜಾಗ. ಅರ್ಧಗಂಟೆ ಕುಳಿತು ಮಾತಾಡಿ ಒಂದು ಡೀಲ್ ಮುಗಿಸುವವರಿಗೆ ಹೇಳಿ ಮಾಡಿಸಿದ ಸ್ಥಳ. ಹದಿನೈದು ನಿಮಿಷ ಕಾಲಕ್ಷೇಪ ಮಾಡಿ ಬಿಸಿಬಿಸಿ ನೊರೆನೊರೆ ಕಪುಚಿನೋ ಕುಡಿದು ಸ್ವಲ್ಪ ರೀಚಾರ್ಜ್ ಆಗಬಯಸುವವರಿಗೆ ಒಂದು ರಿಲ್ಯಾಕ್ಸ್ ತಾಣ. ಒಂದು ಕಪ್ ಕಾಫಿ ಹೀರಿ, ಅರ್ಧಗಂಟೆಇಂಟರ್‌ನೆಟ್ ಸರ್ಫ್ ಮಾಡುತ್ತಾ, ಇ-ಮೇಲ್ ಓದಿ, ರಿಪ್ಲೈ ಮಾಡಿ ಆ ದಿನದ ಮೇಲ್ ಕೋಟಾ ಚುಕ್ತಾ ಮಾಡಿ ಹಗುರಾಗುವ ವರಿಗೆ ಅದುವೇ ಇಂಟರ್‌ನೆಟ್ ಪಾರ್ಲರ್. ಕುಡುಮಿಗಳಿಗೆ ಇದೇ ಲೈಬ್ರರಿ.

ಕಾಫಿಡೇ ಒಬ್ಬೊಬ್ಬರಿಗೆ ಒಂದೊಂದು ಥರಾ. ಪ್ರತಿಯೊಬ್ಬರಿಗೂ ಅಲ್ಲಿಗೆ ಹೋಗಲು ಕಾರಣಗಳು ಸಿಗುತ್ತವೆ. ಕಾರಣ ಬೇಕಿಲ್ಲದವರಿಗೂ ಅದೊಂದು ಅಪೂರ್ವ ತಾಣ. ಬರೀ ಕಾಫಿ ಕುಡಿಯುವ ತಾಣವಾಗಿದ್ದರೆ ಅದು ಹತ್ತರ ಜತೆಗೆ ಮತ್ತೊಂದು ಎಂಬಂತೆ ಹನ್ನೊಂದನೆಯ ಹೋಟೆಲ್ ಆಗಿರುತ್ತಿತ್ತು. ಕಾಫಿ ಡೇ ಕೇವಲಹೋಟೆಲ್ ಅಲ್ಲ. ಅದು ಹೋಟೆಲ್ಲೂ ಹೌದು ಹಾಗೂ ಇನ್ನೂ ಏನೇನೋ. ಯುವ ಪೀಳಿಗೆಯ ಅಚ್ಚುಮೆಚ್ಚಿನ ತಾಣವಾಗಿರುವ ಕಾಫಿಡೇ ಒಂದು ಸಾಮಾಜಿಕ ಸಂಸ್ಕೃತಿಯ ಭಾಗವಾಗಿ, ನಗರ ಜೀವನದ ಜನಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. A lot can happen over coffee ಎಂಬ ಕಾಫಿಡೇ ಸ್ಲೋಗನ್ ಅಲ್ಲಿನ ಪರಿಸರವನ್ನು ಸಮರ್ಪಕವಾಗಿ ಹಿಡಿದಿಡುತ್ತದೆ. ಕಾಫಿಡೇ ಅನೇಕರಿಗೆ ಹವ್ಯಾಸವಾದರೆ, ಇನ್ನು ಕೆಲವರಿಗೆ ಬಿಡಿಸಲಾರದ ನಂಟು. ಬಹುತೇಕ ಮಂದಿಗೆ ಅದೊಂದು ಅಂಟು. ಬಿಸಿಕಾಫಿಯ ಜತೆಗೆ ಕೆಲವು ಸ್ಮರಣೀಯ, ಆಸ್ವಾದನೀಯ ಕ್ಷಣಗಳ ವಿನಿಮಯ. ಅಂಥದ್ದೊಂದು ಅಪರೂಪದ ಅನೂಹ್ಯ ಪರಿಸರ ಕಾಫಿಡೇಯಲ್ಲಿ ತೆರೆದುಕೊಳ್ಳುತ್ತದೆ. ಅಚ್ಚರಿಯಾಗಬಹುದು, ಅದಕ್ಕಾಗಿಯೇ ಬೆಂಗಳೂರಿನಿಂದ ಕೆಲವರು ರಾತ್ರಿಯಾಗುತ್ತಿದ್ದಂತೆ ಮದ್ದೂರಿಗೆ ಬೈಕ್, ಕಾರಿನಲ್ಲಿ ಹೋಗಿ ಕಾಫಿಡೇಯಲ್ಲಿ ಕುಳಿತು ಒಂದೆರಡು ತಾಸು ಕಳೆದು ಕಾಫಿ ಕುಡಿದು ಬರುತ್ತಾರೆ. ಮೈಸೂರಿನ ಪ್ರೇಯಸಿ, ಬೆಂಗಳೂರಿನ ಪ್ರಿಯಕರನಿಗೆ ಮದ್ದೂರ ಕಾಫಿಡೇ ಕನ್ನಂಬಾಡಿ ಕಟ್ಟೆ. ಇದೇ ಕಾರಣಕ್ಕೆ ಬೆಳ್ಳೂರು ಕ್ರಾಸ್‌ನಲ್ಲಿರುವ ಕಾಫಿಡೇಗೆ ಎಲ್ಲೆಲ್ಲಿಂದಲೋ ಜನ ಬರುತ್ತಾರೆ. ಖಂಡಿತವಾಗಿಯೂ ಕಾಫಿಡೇಯಲ್ಲಿ ಉತ್ತಮ ಕಾಫಿ ಜತೆಗೆ ಮತ್ತೇನೋ ಸಿಗುತ್ತಿರಬೇಕು. ಅವುಗಳ ಪೈಕಿ ಸುಂದರ ನೆನಪೂ ಇರಲಿಕ್ಕೆ ಸಾಕು.

ಕಾಫಿಡೇಯಲ್ಲಿ ಒಂದು ಅದ್ಭುತ ಆಕರ್ಷಣೆಯಂತೂ ಇದ್ದೇ ಇದೆ. ಅಲ್ಲಿನ ಪ್ರತಿ ಟೇಬಲ್ ಕೂಡ ಒಂದು ಪುಟ್ಟ ರಹಸ್ಯ, ಪಿಸುಮಾತು ಹಂಚಿಕೊಳ್ಳುವ ಕವಾಟದಷ್ಟು ಖಾಸಗಿ ಖಾಸಾಪರಿಸರವನ್ನು ಸೃಷ್ಟಿಸಿಕೊಡುವುದು ಸುಳ್ಳಲ್ಲ. ಹೀಗಾಗಿ ಇದು ಈ ಜಮಾನದ rage. ಕಾಫಿಡೇಗೆ ಒಂದು ಸಲವೂಹೋಗದಿದ್ದವರು ಸಿಗಬಹುದು. ಆದರೆ ಒಂದು ಸಲ ಮಾತ್ರ ಹೋದವರು ಸಿಗಲಾರರು. ಏಕೆಂದರೆ ಅದು ಪದೇಪದೆ ಹೋಗಬೇಕೆನಿಸುವ ತಾಣ. ಪಬ್, ಬಾರ್‌ಗೆ ಹೋಗುವುದಕ್ಕಿಂತ ಕಾಫಿಡೇ ಹೆಚ್ಚು ಸುರಕ್ಷಿತ. ಈ ಕಾಫಿಡೇ ಸಂಸ್ಕೃತಿಯನ್ನು ಹುಟ್ಟುಹಾಕಿದವರೇ ಸಿದ್ದಾರ್ಥ!

ಇಂದು ಕೆಫೆ ಕಾಫಿಡೇ ಕೇವಲ ಕಾಫಿ ಜಾಯಿಂಟ್ ಅಲ್ಲ. ಅದೊಂದು ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್. ಕಾಫಿ ಮಾರುಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್‌ಬಕ್ಸ್ ಹಾಗೂ ಬರಿಸ್ಟಾ ಹೇಗೆ ಖ್ಯಾತಿ ಗಳಿಸಿದೆಯೋ ಭಾರತದ ಮಟ್ಟಿಗೆ ಕೆಫೆ ಕಾಫಿಡೇ ಅಂಥ ಜನಪ್ರಿಯತೆ, ಜನಮನ್ನಣೆ ಗಳಿಸಿದೆ. ಹಾಗೆ ನೋಡಿದರೆ, ಇದೊಂದು ಅಪ್ಪಟ ಕನ್ನಡದ ಬ್ರ್ಯಾಂಡ್. ಕನ್ನಡಿಗರೊಬ್ಬರು ಹುಟ್ಟುಹಾಕಿದ ಬ್ರ್ಯಾಂಡ್. ಇತ್ತೀಚಿನ ದಿನಗಳಲ್ಲಿ ಕರ್ನಾಟಕ, ಕನ್ನಡ, ಕನ್ನಡಿಗರ ಬ್ರ್ಯಾಂಡೊಂದು ಈ ಪರಿ ವ್ಯಾಪಕವಾಗಿ ಪಸರಿಸಿದ ಮತ್ತೊಂದು ನಿದರ್ಶನ ಸಿಗುವುದಿಲ್ಲ. ಕೆಫೆ ಕಾಫಿಡೇಯನ್ನು ಏಷಿಯಾದ ಸ್ಟಾರ್‌ಬಕ್ಸ್' ಎಂದು ಬಣ್ಣಿಸಬಹುದು. ಶ್ರೀಮಂತರ ಬಡಾವಣೆ, ಜನನಿಬಿಡ ಸ್ಥಳ, ಶಾಪಿಂಗ್‌ಮಾಲ್, ಕಮರ್ಷಿಯಲ್ ಸೆಂಟರ್, ಕಾಲೇಜು ಆಜೂಬಾಜು, ಆಸ್ಪತ್ರೆ, ಬುಕ್‌ಶಾಪ್, ರೈಲು ನಿಲ್ದಾಣ, ಸಾಫ್ ವೇರ್ ಕಂಪನಿ ಕ್ಯಾಂಟೀನು, ಏರ್‌ಪೋರ್ಟ್‌ನಿಂದ ಹಿಡಿದು ಮದ್ದೂರು, ಬೆಳ್ಳೂರು ಕ್ರಾಸ್, ಉತ್ತರಹಳ್ಳಿ ಸರ್ಕಲ್‌ನಂಥ ಕಡೆಗಳಲ್ಲೂ ಕೆಫೆ ಕಾಫಿಡೇ ಘಮಲು. 1996ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಆರಂಭವಾದ ಕಾಫಿಡೇ ಇಂದು ಭಾರತದಲ್ಲಿ ಟಾಪ್‌ಟೆನ್ ಬ್ರ್ಯಾಂಡ್ ಗಳಲ್ಲೊಂದಾಗಿ ಹೊರಹೊಮ್ಮಿರುವುದರ ಹಿಂದೆ ಸಿದ್ದಾರ್ಥ ಅವರ ಬಹಳ ದೊಡ್ಡ ಹೋರಾಟವಿದೆ. ಇಂದು ದೇಶದ ಯಾವುದೇ ನಗರ, ಪಟ್ಟಣಕ್ಕೆ ಹೋದರೂ ಕಾಫಿಡೇ ಸಿಗುತ್ತದೆ. ಅಲ್ಲಿ ನಮ್ಮ ಚಿಕ್ಕಮಗಳೂರು ಕಾಫಿ ತೋಟದಲ್ಲಿ ಬೆಳೆದ ಕಾಫಿ ಸಿಗುತ್ತದೆ. ಅದನ್ನು ನಮ್ಮ ಕನ್ನಡದ ಹುಡುಗರು serve ಮಾಡುತ್ತಾರೆ. ಅಷ್ಟೊಂದು ಕನ್ನಡತನ ಈ ಬ್ರ್ಯಾಂಡಿನಲ್ಲಿದೆ. ಕಾಫಿಡೇ ಕೇವಲ ನಮಗೆ ಮಾತ್ರ ಅಲ್ಲ, ವಿದೇಶಿಯರ ಅಚ್ಚುಮೆಚ್ಚಿನ ತಾಣವೂ ಆಗಿದೆ. ಇಂದು ಭಾರತದ 110 ಊರುಗಳಲ್ಲಿ ಸುಮಾರು 900 ಕಾಫಿಡೇ ಔಟ್‌ಲೆಟ್‌ಗಳಿವೆ. ಅಲ್ಲದೇ 400 ಕಾಫಿಬೀನ್, ಪೌಡರ್ ರಿಟೇಲ್ ಔಟ್‌ಲೆಟ್, 895 ಕಾಫಿ ಡೇ ಕಿಯಾಸ್ಕ್, 12 ಸಾವಿರ ಕಾಫಿ ವೆಂಡಿಂಗ್ ಮಶೀನ್‌ಗಳಿವೆ.

ಸಣ್ಣ ಮಾತಲ್ಲ, ಕಾಫಿಡೇಯಲ್ಲಿ ಪ್ರತಿ ವರ್ಷ ಸುಮಾರು 800 ಕೋಟಿ ರೂ. ವಹಿವಾಟು ನಡೆಯುತ್ತದೆ! ಪ್ರತಿದಿನ ಕನಿಷ್ಠ ಎರಡು ಲಕ್ಷ ಜನ ಕಾಫಿಡೇಗೆ ಭೇಟಿಕೊಡುತ್ತಾರೆ! ನೋಡನೋಡುತ್ತಿದ್ದಂತೆ ಮೆಲ್ಲ ಮೆಲ್ಲ ಸಿದ್ದಾರ್ಥ ಒಂದು ಅಸಾಧಾರಣ ಮೌನಕ್ರಾಂತಿ ಮಾಡಿದ್ದಾರೆ! ಕಾಫಿ ಗೀಳನ್ನು ಇಡೀ ದೇಶಾದ್ಯಂತ ಪಸರಿಸಿದ್ದಾರೆ. ಕಾಫಿ ಇಲ್ಲಿಯತನಕ ದಕ್ಷಿಣಭಾರತದ ಸಂಪ್ರದಾಯಸ್ಥರ, ಮೇಲ್ವರ್ಗದವರ ಪೇಯವಾಗಿತ್ತು. ಚಹ ಜನಸಾಮಾನ್ಯರ ಪೇಯವಾದರೆ ಕಾಫಿ ಶ್ರೀಮಂತರದು ಎಂಬ ಭಾವನೆಯೂ ಇತ್ತು. ಆದರೆ ಸಿದ್ದಾರ್ಥ ಈ ಭಾವನೆಯನ್ನು ಹೊಡೆದೋಡಿಸಿ ಅದನ್ನು ಸರ್ವವ್ಯಾಪಿಗೊಳಿಸಿದ್ದಾರೆ.ಕೆಫೆ ಕಾಫಿಡೇಯ ಹುಟ್ಟು, ಬೆಳವಣಿಗೆ ಹಾಗೂ ಅದರ ಸರ್ವವ್ಯಾಪ್ತಿ ಆಕಸ್ಮಿಕ ಅಲ್ಲ. ಹಾಗೆ ಸುಮ್ಮನೆ ತನ್ನಷ್ಟಕ್ಕೆ ತಾನೇ ಅದೃಷ್ಟ ಖುಲಾಯಿಸಿ ದೊರೆತ ಯಶೋಗಾಥೆಯೂ ಅಲ್ಲ. ಕಾಫಿಡೇ ಹಿಂದೆ ಸಿದ್ದಾರ್ಥ ಅವರ ದೂರದೃಷ್ಟಿ, ಚಿಂತನೆ, ವ್ಯವಹಾರ ಚತುರತೆ, ಬದ್ಧತೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಎದ್ದು ಕಾಣುತ್ತದೆ. ಮೂಲತಃ ಕಾಫಿ ಬೆಳೆಗಾರರು ಹಾಗೂ ಎಸ್ಟೇಟ್ ಮಾಲೀಕರೂ ಆಗಿರುವ ಸಿದ್ದಾರ್ಥ, 1990ರ ಸುಮಾರಿಗೆ ಕಾಫಿ ಪ್ಲಾಂಟರ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯೋಚಿಸುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಫಿಗೆ ಬೆಲೆ ಸ್ಥಿರತೆಯಿರಲಿಲ್ಲ. ಬೆಳೆ ಚೆನ್ನಾಗಿ ಬಂದವರ್ಷ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆ ಇಲ್ಲ ಎಂಬಂಥ ಸ್ಥಿತಿ. ಅಲ್ಲದೇ ಕಾಫಿಗೆ ಹತ್ತಾರು ರೋಗಗಳ ಕಾಟ. ಜತೆಗೆ ಬೆಳೆಗಾರರನ್ನು ಹಿಂಸಿಸುವ ಮಧ್ಯವರ್ತಿಗಳು. ಅಷ್ಟೇ ಅಲ್ಲ, ಪ್ಲಾಂಟರ್‌ಗಳು ಬೆಳೆದ ಕಾಫಿಯನ್ನು ಕಾಫಿಬೋರ್ಡ್‌ಗೆ ಮಾರಾಟ ಮಾಡಬೇಕೆಂಬ ಸರಕಾರದ ಕಟ್ಟಳೆ ಬೇರೆ. 1993ರಲ್ಲಿ ಆರ್ಥಿಕ ಉದಾರೀಕರಣದ ಫಲವಾಗಿ ಈ ನಿರ್ಬಂಧಗಳೆಲ್ಲ ಸಡಿಲವಾದವು. ಅದಕ್ಕೆ ಸಿದ್ದಾರ್ಥ ಅವರ ಹೋರಾಟವೂ ಕಾರಣವಾಗಿತ್ತು. ಅದೇ ವರ್ಷ ಅವರು ಅಮಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಲಿಮಿಟೆಡ್' (ಎಬಿಸಿಟಿಸಿಎಲ್) ಸ್ಥಾಪಿಸಿದರು.

ಸುಮಾರು ಹತ್ತು ಸಾವಿರ ಎಕರೆ ಕಾಫಿತೋಟವನ್ನು ಹೊಂದಿದ್ದ ಸಿದ್ದಾರ್ಥ, ಸಣ್ಣ ಪ್ರಮಾಣದ ಕಾಫಿ ಬೆಳೆಗಾರರ ಕಾಫಿಯನ್ನು ಖರೀದಿಸಿ ಪೌಡರ್ ಮಾಡಿ ವಿದೇಶಗಳಿಗೆ ರಫ್ತು ಮಾಡುವ ಯೋಜನೆ ಹೊಂದಿದ್ದರು. ಆದರೆ ಬೆಲೆಸ್ಥಿರತೆಯಲ್ಲಿ ಕಾಲಕಾಲಕ್ಕೆ ಏರು-ಪೇರಾಗುತ್ತಿದ್ದುದರಿಂದ ಬೇರೊಂದು ಮಾರ್ಗವನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಈ ಸಂದರ್ಭದಲ್ಲಿ ಹುಟ್ಟಿದ್ದು ಕೆಫೆ ಕಾಫಿ ಡೇ. ಇಂಟರ್‌ನೆಟ್ ಸೇವೆಯೊಂದಿಗೆ ಆರಂಭವಾದ (ಕಾಫಿ ಜತೆಗೆ ಒಂದು ತಾಸು ಸರ್ಫಿಂಗ್‌ಗೆ ನೂರು ರೂ.) ಕಾಫಿ ಡೇ ಸಹಜವಾಗಿ ಯುವಕರನ್ನು ಆಕರ್ಷಿಸಿತು. ಪಬ್, ಬಾರುಗಳಲ್ಲಿ ಮೈಮರೆಯುತ್ತಿದ್ದ ಯುವಕ, ಯುವತಿಯರಿಗೆ ಪರ್ಯಾಯವಾಗಿ ಮತ್ತೊಂದು ಹಿತಕರ, ಆರೋಗ್ಯಕರ ಜಾಗ ತೆರೆದುಕೊಂಡಂತಾಗಿತ್ತು. ಅಲ್ಲಿಯ ತನಕ ಕೇವಲ ಕಾಫಿ ಹೀರುತ್ತಿದ್ದವರಿಗೆ ಕಾಫಿಡೇಯಲ್ಲಿ ಕಾಫಿ ಮೂಲದ ಹಲವಾರು ಪೇಯಗಳು ಸಿಗಲಾರಂಭಿಸಿದಾಗ ಆಕರ್ಷಿತರಾದರು. ಅಲ್ಲದೇ ಕಾಫಿಡೇ ಯುವ ಮನಸ್ಸುಗಳಿಗೆ, ಹೊಸತನ ಅರಸುವವರಿಗೆ, ಒಂದಷ್ಟು ಫ್ರೆಶ್ ಆದ ಪರಿಸರವನ್ನು ಅನಾವರಣಗೊಳಿಸಿತು. ಇದರಿಂದ ಎಲ್ಲ ವಯೋಮಾನದವರನ್ನೂ ಕಾಫಿಡೇ ಆಕರ್ಷಿಸಲಾರಂಭಿಸಿತು. ಕಾಲೇಜು ಕ್ಯಾಂಪಸ್‌ಗಳಲ್ಲಿ ಒಂದು ಮಾತಿದೆ- ಕ್ಲಾಸಿನಲ್ಲಿ ಪಾಠ ಮಾಡೋ ಬದಲು ಕಾಫಿಡೇಯಲ್ಲಿ ಪಾಠ ಮಾಡಿದರೆ ಸೆಂಟ್‌ಪರ್ಸೆಂಟ್ ಅಟೆಂಡೆನ್ಸ್.' ಅದು ಎಷ್ಟು ನಿಜ ಅಂದ್ರೆ ಕ್ಲಾಸಿಗೆ ಹೋಗದ ಶ್ರೀಮಂತರ ಮನೆ ಮಕ್ಕಳು ಕಾಫಿಡೇಗೆ ಹೋಗದೇ ಇರುವುದಿಲ್ಲ. ಐಟಿ, ಬಿಟಿ, ಬಿಪಿಒ ಉದ್ಯಮದಲ್ಲಾದ ಕ್ಷಿಪ್ರ ಬೆಳವಣಿಗೆಯಿಂದ ಯುವಜನರಲ್ಲಿ ಕಾಂಚಾಣ ಓಡಾಡಲು ಶುರುವಾಗಿದ್ದೇ ತಡ ಕಾಫಿಡೇ ನಗರದ ಎಲ್ಲ ಬಡಾವಣೆಗಳಲ್ಲೂ ತಲೆಯೆತ್ತಲಾರಂಭಿಸಿತು. ಕಳೆದ ಐದು ವರ್ಷಗಳಲ್ಲಿ ಅಂತಾ ರಾಷ್ಟ್ರೀಯ ಬ್ರ್ಯಾಂಡ್‌ಗಳಾದ ಪಿಜ್ಜಾಹಟ್, ಮೆಕ್‌ಡೋನಾಲ್ಡ್ ಗಿಂತ ವೇಗವಾಗಿ ಕಾಫಿಡೇ ಬೆಳೆದಿದೆ. ದೇಶದಲ್ಲಿರುವ ಎಲ್ಲ ಕಾಫಿಡೇಗಳಿಗೆ ಇಂದು ಎಬಿಸಿಟಿಸಿಎಲ್ ಕಾಫಿಯನ್ನು ಸರಬರಾಜು ಮಾಡುತ್ತದೆ. ಅಷ್ಟೇ ಅಲ್ಲ ಎಬಿಸಿಟಿಸಿಎಲ್ ಭಾರತದ ನಂಬರ್ ಒನ್ ಕಾಫಿ ಎಕ್ಸ್‌ಪೋರ್ಟರ್. ಮೊದಲ ಐದು ವರ್ಷಗಳಲ್ಲಿ ಬೆರಳೆಣಿಕೆಯಷ್ಟಿದ್ದ ಕಾಫಿಡೇ, ಇಂದು ದೇಶದ ಅಗ್ರಗಣ್ಯ ರಿಟೇಲ್ ಚೈನ್ ಆಗಿ ಮಾರ್ಪಟ್ಟಿದೆ.

ಡರ್ಬಿ ಓವರ್‌ಸೀಸ್ ಇನ್ವೆಸ್ಟ್‌ಮೆಂಟ್‌ನ ಮುಖ್ಯಸ್ಥ ರಿಚರ್ಡ್ ಫ್ರಾಂಕ್ ಪ್ರಕಾರ Coffee Day has successfully consolidated its market leader status and is positioned to take further advantage of the ongoing macroeconomics and lifestyle changes. We are attracted ABCTCL because of its leadership position and its strong execution capabilities. ಕಾಫಿಡೇ ಹೊಡೆತಕ್ಕೆ ಪ್ರತಿಸ್ಪರ್ಧಿಗಳು ಕಂಗಾಲಾಗಿರುವುದು ಗಮನಾರ್ಹ. ಸ್ಟಾರ್‌ಬಕ್ಸ್, ಬರಿಸ್ಟಾ, ಫ್ರೆಶ್ ಆಂಡ್ ಆನೆಸ್ಟ್, ಬ್ರಿಟನ್‌ನ ಕೋಸ್ಟಾ ಕಾಫಿ, ಆಸ್ಟ್ರೇಲಿಯಾದ ಗ್ಲೋರಿಯಾ ಜಿನ್ಸ್, ಅನಿಲ್ ಅಂಬಾನಿ ಗ್ರೂಪ್‌ನ ಜಾವಾಗ್ರೀನ್‌ಗಳೆಲ್ಲ ಕಾಫಿಡೇ ಬೆಳವಣಿಗೆ ಕಂಡು ಬಾಲಮುದುರಿಕೊಂಡಿವೆ. ಇವರೆಲ್ಲರಿಗಿಂತ ಕಾಫಿಡೇಗೆ ಒಂದು ಅಡ್ವಾಂಟೇಜ್ ಇದೆ. ಅದೇನೆಂದರೆ ಸ್ವಂತ ಕಾಫಿತೋಟ, ಫ್ಯಾಕ್ಟರಿ, ಕ್ಯೂರಿಂಗ್ ವರ್ಕ್ಸ್, ಕಾಫಿಬೀಜ ಸಂಗ್ರಹಿಸುವ ಏಜೆಂಟ್‌ಗಳು ಇತ್ಯಾದಿ. ಟಾಟಾ ಕಾಫಿ ಎಸ್ಟೇಟ್ ನಂತರ ಭಾರತದಲ್ಲಿ ಎರಡನೆ ಅತಿ ಹೆಚ್ಚು ಕಾಫಿ ಪ್ಲಾಂಟೇಶನ್ ಹೊಂದಿ ರುವ ಸಿದ್ದಾರ್ಥ, ರಿಟೇಲ್ ಕಾಫಿ ವಹಿವಾಟಿನಲ್ಲಿ ಏಕಸ್ವಾಮ್ಯ ಸ್ಥಾಪಿಸುವಷ್ಟು ಗಟ್ಟಿಯಾಗಿ, ದೊಡ್ಡದಾಗಿ ಬೆಳೆದಿದ್ದಾರೆ. ಹಾಗಾದರೆ ಕಾಫಿಡೇ ಯಶಸ್ಸಿಗೆ ಕಾರಣವೇನು?

ಹಾಗಂತ ಸಿದ್ದಾರ್ಥ ಅವರನ್ನು ಕೇಳಿದರೆ ಹೇಳೋದೇನೆಂದರೆ ಹಲವಾರು ಕಾರಣಗಳಿರಬಹುದು. ಆದರೆ ಮುಖ್ಯ ಕಾರಣ ನಮ್ಮ ಕಾಫಿಯನ್ನು ಬ್ರ್ಯಾಂಡ್ ಮಾಡಿದ್ದು. ಅಡಕೆಯನ್ನು ಪಾನ್‌ಪರಾಗ್, ಮಾಣಿಕ್‌ಚಂದ್ ಎಂದು ಬ್ರ್ಯಾಂಡ್ ಮಾಡಿದ್ದರಿಂದ ಅದು ಯಶಸ್ವಿಯಾಯಿತು. ಅಡಕೆ ಉತ್ಪನ್ನ ಟಿವಿ ಜಾಹೀರಾತಿನಲ್ಲಿ ಕಂಗೊಳಿಸಿತು. ಗುಟಕಾ ಕಂಪನಿಗಳು ದೊಡ್ಡ ದೊಡ್ಡ eventಗಳನ್ನು ಸ್ಪಾನ್ಸರ್ ಮಾಡುವ ಮಟ್ಟಕ್ಕೆ ಬೆಳೆದವು. ಅಲ್ಲೂ ಅವು ಬ್ರ್ಯಾಂಡ್ ಆಗಿ ಕಣ್ಸೆಳೆದವು. ನಾವು ಮಾಡಿದ್ದೂ ಅದನ್ನೇ. ಕೃಷಿ ಉತ್ಪನ್ನಗಳಿಗೆ ಬ್ರ್ಯಾಂಡ್ ಸ್ಥಾನಮಾನ ಸಿಕ್ಕರೆ ಮಾತ್ರ ಕೃಷಿ ಲಾಭದಾಯಕವಾಗಿ ಪರಿಣಮಿಸುತ್ತದೆ. ಕೃಷಿಯನ್ನು ಒಂದು ಉದ್ಯಮವಾಗಿ ಪರಿಗಣಿಸಿದ್ದರ ಸಾಕಾರಸ್ವರೂಪವೇ ಕಾಫಿಡೇ." ಕಾಫಿಡೇ ದೆಸೆಯಿಂದಾಗಿ ಮಲೆನಾಡಿನ ಸಾಮಾಜಿಕ, ಆರ್ಥಿಕ ಚಿತ್ರಣವೇ ನಿಧಾನವಾಗಿ ಬದಲಾಗುತ್ತಿದೆ. ಕಾಫಿ ಬೆಳೆಗಾರರಿಗೆ ತಾವು ಬೆಳೆದ ಬೆಳೆ ಬಗ್ಗೆ ಒಂದಷ್ಟು ಯೋಗ್ಯಬೆಲೆ ಸಿಗುತ್ತದೆಂಬ ಭರವಸೆ ಮೂಡಿದೆ. ಕಾಫಿ ತೋಟದಲ್ಲಿನ ಕೆಲಸಗಾರರಿಗೆ ಕೆಲಸ ಹಾಗೂ ಒಳ್ಳೆಯ ಸಂಬಳ ಸಿಗುತ್ತಿದೆ. ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ಸುತ್ತಮುತ್ತಲ ಪ್ರದೇಶಗಳಲ್ಲಿನ ಯುವಕ-ಯುವತಿಯರಿಗೆ ಕಾಫಿಡೇಯಲ್ಲಿ ಕೆಲಸ ಸಿಗುತ್ತಿದೆ. ಇದಕ್ಕಾಗಿ ಸಿದ್ದಾರ್ಥ ಅವರು ಚಿಕ್ಕಮಗಳೂರಿನಲ್ಲಿ ತಮ್ಮ ತಂದೆಯವರಾದ ಗಂಗಯ್ಯ ಹೆಗ್ಗಡೆಯವರ ಹೆಸರಿನಲ್ಲಿ ವೊಕೇಶನಲ್ ಟ್ರೇನಿಂಗ್ ಕಾಲೇಜನ್ನು ಸ್ಥಾಪಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಪಾಸಾಗಿ ಮುಂದೆ ಓದಲಾಗದ ಬಡ ಹುಡುಗ-ಹುಡುಗಿಯರನ್ನು ಕರೆತಂದು ಅವರಿಗೆ ಸೂಕ್ತ ತರಬೇತಿಯನ್ನು ಉಚಿತವಾಗಿ ನೀಡಿ ಅವರಿಗೆ ಕಾಫಿಡೇಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ.

ಪ್ರತಿವರ್ಷ ಮುನ್ನೂರು ಮಂದಿ ಆ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮುಂದಿನ ಸಲ ದಿಲ್ಲಿ, ಮುಂಬಯಿ, ಚೆನ್ನೈ, ಕಾಶ್ಮೀರ, ವೈಷ್ಣೋದೇವಿಗೆ ಹೋದಾಗ, ಅಲ್ಲಿನ ಕಾಫಿಡೇಗೆ ಹೊಕ್ಕಾಗ ಕನ್ನಡದಲ್ಲಿ ಮಾತಾಡಿದರೆ ನೊರೆಕಾಫಿ ಉಕ್ಕೀತು. ಕೂಲಿಕಾರ, ಟ್ಯಾಕ್ಸಿಚಾಲಕ, ಬಡಬಗ್ಗರ ಮಕ್ಕಳು ತಕ್ಕಮಟ್ಟಿಗೆ ಕೈತುಂಬಾ ಸಂಪಾದಿಸುತ್ತಿದ್ದಾರೆ. ಹೀಗಾಗಿ ಈ ಕಾಫಿಡೇ ಮಲೆನಾಡಿನ ಭಾಗದ ಕೆಲವು ಸಾವಿರ ಕುಟುಂಬಗಳಿಗೆ ಆಶಾಕಿರಣವಾಗಿದೆ. ಕಾಫಿಡೇಯಲ್ಲಿ ಇಂದು ಸುಮಾರು ಎಂಟು ಸಾವಿರ ಮಂದಿಗೆ ಉದ್ಯೋಗ ಲಭಿಸಿದೆ. ಕಾಫಿ ಎಸ್ಟೇಟ್‌ಗಳಲ್ಲೂ ಹೆಚ್ಚೂಕಮ್ಮಿ ಇಷ್ಟೇ ಮಂದಿ ಕೆಲಸ ಮಾಡುತ್ತಿರಬಹುದು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿದ ಸಿದ್ದಾರ್ಥ ಮುಂಬಯಿ ಯಲ್ಲಿ ಜೆ.ಎಂ. ಫೈನಾನ್ಶಿಯಲ್ ಸರ್ವೀಸಸ್ (ಈಗಿನ ಜೆಎಂ ಮೊರ್ಗನ್ ಸ್ಟಾನ್ಲೆ)ನಲ್ಲಿ ಮ್ಯಾನೇಜ್‌ಮೆಂಟ್ ಟ್ರೇನಿಯಾಗಿ ಕೆಲಸಕ್ಕೆ ಸೇರಿಕೊಂಡರು. ಇದೇ ವೇಳೆ ಸ್ಟಾಕ್ ಮಾರ್ಕೆಟ್‌ನಲ್ಲೂ ಟ್ರೇಡಿಂಗ್ ಆರಂಭಿಸಿದರು. ಎರಡು ವರ್ಷಗಳ ಬಳಿಕ ಬೆಂಗಳೂರಿಗೆ ಬಂದು ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಹಾಗೂ ಸ್ಟಾಕ್ ಬ್ರೋಕಿಂಗ್‌ಗಾಗಿ ಸಿವಾನ್ ಎಂಬ ಕಂಪನಿ ಆರಂಭಿಸಿದರು. 2000ದಲ್ಲಿ ಗ್ಲೋಬಲ್ ಟೆಕ್ನಾಲಜಿ ವೆಂಚರ್‍ಸ್ ಲಿಮಿಟೆಡ್ ಸಂಸ್ಥೆಯನ್ನು ಆರಂಭಿಸಿದರು. ಹಣ ನಿರ್ವಹಣೆ, ಬಂಡವಾಳ ತೊಡಗಿಸುವಿಕೆಗೆ ಸಂಬಂಸಿದ ಈ ಸಂಸ್ಥೆ ಜಿಟಿವಿ, ಮೈಂಡ್‌ಟ್ರೀ, ಲಿಕ್ವಿಡ್ ಕ್ರಿಸ್ಟಲ್, ವೇಟು ವೆಲ್ತ್ ಮುಂತಾದ ಕಂಪನಿಗಳೊಂದಿಗೆ ಸಂಬಂಧ ಹೊಂದಿದೆ. ವಿದೇಶಿ ಮಾರುಕಟ್ಟೆ ಮೇಲೂ ಕಣ್ಣಿಟ್ಟಿರುವ ಸಿದ್ದಾರ್ಥ ಈಗಾಗಲೇ ವಿಯೆನ್ನಾದಲ್ಲಿ ಮೂರು ಹಾಗೂ ಕರಾಚಿಯಲ್ಲಿ ಎರಡು ಕಾಫಿಡೇಗಳನ್ನು ತೆರೆದಿದ್ದಾರೆ. ಭಾರತದಾಚೆ ಐವತ್ತು ಕಾಫಿಡೇಗಳನ್ನು ತೆರೆಯುವ ಗುರಿ ಹೊಂದಿದ್ದಾರೆ. ಕರ್ನಾಟಕದ ಕಾಫಿಗೆ ಜಾಗತಿಕ ಕಿರೀಟ ತೊಡಿಸಲು ಹೊರಟಿರುವ ಸಿದ್ದಾರ್ಥ ಅವರದು ಸರಳ ಹಾಗೂ ಸ್ನೇಹಪರ ವ್ಯಕ್ತಿತ್ವ. ತುಂಬಿದ ಕೊಡ' ಅಂದ ಹಾಗೆ ಅವರು ತುಂಬಿದ ಕಾಫಿಕಪ್'. ಮುಂದಿನ ಹತ್ತು ವರ್ಷಗಳಲ್ಲಿ ಕಾಫಿಡೇಯನ್ನು ವಿಶ್ವದ ಮೂರು ಕಾಫಿ ಬ್ರ್ಯಾಂಡ್‌ಗಳ ಪೈಕಿ ಒಂದನ್ನಾಗಿ ಮಾಡುವ ಕನಸು ಸಿದ್ದಾರ್ಥ ಅವರದು. ಸಿದ್ದಾರ್ಥ ಕೇವಲ ಎಸ್.ಎಂ. ಕೃಷ್ಣ ಅವರ ಅಳಿಯ ಅಲ್ಲ. ನಮ್ಮಲ್ಲೂ ಕೂಡ ರಾಜಕಾರಣಿಗಳ ಸಾಕಷ್ಟು ಅಳಿಯಂದಿರಿದ್ದಾರೆ.ಆದರೆ ಅವರು ಯಾರೂ ಕೂಡ ಸಿದ್ದಾರ್ಥ ಆಗಿಲ್ಲ. Entrepreneurship ಎಂಬುದು ನೆಂಟಸ್ಥಿಕೆಯಿಂದ ಬರುವಂಥದ್ದಲ್ಲ. ಸಾವಿರಾರು ಮಂದಿಗೆ ಉದ್ಯೋಗ ನೀಡಿ, ಹೊಸ ಉದ್ಯೋಗ ಪರ್ವ ಆರಂಭಿಸಿದ ಸಿದ್ದಾರ್ಥ ಭಿನ್ನವಾಗಿ ಎದ್ದು ಕಾಣುತ್ತಾರೆ. ಸಾಫ್ಟ್‌ವೇರ್‌ನಲ್ಲಿ ಇನೋಸಿಸ್‌ನ ನಾರಾಯಣಮೂರ್ತಿ ಮೆರೆದ ಉದ್ಯಮಶೀಲತೆಯನ್ನು ಈಗ ಮತ್ತೊಬ್ಬ ಕನ್ನಡಿಗನಲ್ಲಿ ಕಾಣಬಹುದಾದರೆ ತಟ್ಟನೆ ಕಣ್ಮುಂದೆ ಬರುವವರು ಸಿದ್ದಾರ್ಥ ಎಂದರೆ ಅತಿಶಯೋಕ್ತಿಯಲ್ಲ. ನಿಜಕ್ಕೂ ಅವರು ಕನ್ನಡಿಗರ brew -eyed boy.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X