ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗೆಟಕುವ ಕಾರು, ಕನಸು ಕಂಡವರಾರು?

By ವಿಶ್ವೇಶ್ವರ ಭಟ್
|
Google Oneindia Kannada News


Big Guy behind the small car Business with ethics!

ಹಾಗಂತ ಹೇಳಿದರೆ ಯಾರೂ ನಂಬುವುದಿಲ್ಲ. ಅಷ್ಟಕ್ಕೂ, 'ವ್ಯಾಪಾರಂ ದ್ರೋಹ ಚಿಂತನಂ" ಎಂಬ ಮಾತು-ಸೂತ್ರ ಪುರಾಣ-ಪುಣ್ಯ ಕಥೆಗಳ ಕಾಲದಿಂದಲೇ ನಮಗೆ ಬಳುವಳಿಯಾಗಿ ಬಂದಿದೆ. ಅದರಲ್ಲೂ ಈಗಂತೂ ಕನಿಷ್ಠ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದೂ ಕಷ್ಟ. ವ್ಯಾಪಾರಕ್ಕೆ ಇನ್ನೊಂದು ಹೆಸರೇ ದ್ರೋಹವೆಂಬಂತಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಒಂದು ಅಪವಾದವಿದೆ. ಅದೇ ಟಾಟಾ.

ಈ ದೇಶದ ಒಟ್ಟಾರೆ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾ ಬಂದಿರುವ ಟಾಟಾ ಜಗತ್ತಿನ ಮೂರನೇ ಅತ್ಯಂತ ಪ್ರಾಮಾಣಿಕ ಕಂಪನಿ ಎಂದು ಬ್ರಿಟನ್ ಮೂಲದ ಸ್ವಯಂ ಸೇವಾ ಸಂಘಟನೆ 'ವನ್ ವರ್ಲ್ಡ್ ಟ್ರಸ್ಟ್" ಇತ್ತೀಚೆಗೆ ತೀರ್ಪು ನೀಡಿದೆ! ಇಂತಹ ಟಾಟಾ ಕಂಪನಿ ಅಮೆರಿಕ ಮೂಲದ 'ಒರಿಯಂಟ್ ಎಕ್ಸ್‌ಪ್ರೆಸ್" ಎಂಬ ಐಶಾರಾಮಿ ಹೋಟೆಲ್ ಗ್ರೂಪ್ ಅನ್ನು ಖರೀದಿ ಮಾಡುವ ಆಸಕ್ತಿ ತೋರಿದಾಗ “ಭಾರತೀಯ ಕಂಪನಿಯೊಂದಕ್ಕೆ ಮಾರಾಟ ಮಾಡಿದರೆ ಓರಿಯಂಟ್ ಹೋಟೆಲ್‌ನ ಘನತೆಗೇ ಕುಂದುಂಟಾಗುತ್ತದೆ" ಎಂದು ಅದರ ಅಧ್ಯಕ್ಷ ಪಾರ್ಲ್ ವೈಟ್ ಖಾರವಾಗಿ ಪತ್ರ ಬರೆದರು. ಸಿಟ್ಟಿಗೆದ್ದ ಟಾಟಾ ಕಂಪನಿ ಭಾರತದ ಬಗ್ಗೆ ಕೀಳಾದ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಓರಿಯಂಟ್ ಹೋಟೆಲ್ ಲಿಮಿಟೆಡ್‌ಗೆ ಕಟುವಾಗಿ ಹೇಳಿದೆ!

ಟಾಟಾ ಕಂಪನಿ ನಮ್ಮ ಮನಸ್ಸಿಗೆ ಹತ್ತಿರವಾಗುವುದು ಇಂತಹ ಕಾರಣಗಳಿಂದಾಗಿಯೇ. "what is good for general motors is good for America" ಅಂತ 1955ರಲ್ಲಿ ಜನರಲ್ ಮೋಟಾರ್‍ಸ್ ಕಂಪನಿಯ ಮುಖ್ಯಸ್ಥ ಚಾರ್ಲಿ ವಿಲ್ಸನ್ ಹೇಳಿದ್ದರು. ಆದರೆ ನಮ್ಮ ಟಾಟಾ ಕಂಪನಿಯ ವಿಷಯದಲ್ಲಿ ಮಾತ್ರ what is good for TATA is good for India ಎಂದು ಅನುಮಾನವೇ ಇಲ್ಲದೆ ಹೇಳಬಹುದು.

ನಮಗೆ ಟಾಟಾ, ರತನ್ ಟಾಟಾ ಇಷ್ಟವಾಗುವುದೇ ಈ ಕಾರಣಕ್ಕೆ. ರತನ್ ಟಾಟಾ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ಒಂದು ಲಕ್ಷ ರೂ.ಗೆ ಕಾರನ್ನು ನೀಡುವ ಮಹಾತ್ವಾಕಾಂಕ್ಷಿ ಯೋಜನೆಯನ್ನು ಸಾಕಾರಗೊಳಿಸಿದ್ದಾರೆ. ಸಾಮಾನ್ಯ ವ್ಯಕ್ತಿಯೂ ಇಂದು ಕಾರಿನಲ್ಲಿ ಓಡಾಡುವ ಕನಸ್ಸನ್ನು ನನಸಾಗಿಸಿಕೊಳ್ಳಬಹುದು. ಮನೆಮನೆಗೂ ಕಾರು. ಭಾರತೀಯರೆಲ್ಲರಿಗೂ ಕಾರು ಹತ್ತಿಸುವ ರತನ್ ಟಾಟಾ ಹುಚ್ಚು ಹಠವೇ ಒಂದು ಲಕ್ಷ ರೂ. ಕಾರು!

ಒಂದು ಕ್ಷಣ ಯೋಚಿಸಿ, ಟಾಟಾ ಕೈಯಾಡಿಸದ ಕ್ಷೇತ್ರವೇ ಇಲ್ಲ. ಇಂಥ ರಂಗದಲ್ಲಿ ಆತ ಬಂದಿಲ್ಲ ಎಂಬುದಿಲ್ಲ. ಟಾಟಾ ಕಣ್ಣಿಗೆ ಕಾಣುವ ಸರ್ವಾಂತರ್ಯಾಮಿ. ಈ ದೇಶದ ಜನಜೀವನದಲ್ಲಿ, ಜನಮಾನಸದಲ್ಲಿ ಟಾಟಾ ಹಾಸುಕೊಕ್ಕು. ಟಾಟಾ ಹೆಸರನ್ನು ಕೇಳದವರಿಲ್ಲ. ಈ ಎರಡಕ್ಷರಗಳು ನಮ್ಮ ಮನಸ್ಸಿನಲ್ಲಿ ಎಬ್ಬಿಸುವ ಭಾವಗಳು, ಮೂಡಿಸುವ ದೃಶ್ಯಗಳು ಸಾವಿರಾರು. ಈ ದೇಶದ ನಿರ್ಮಾಣದಲ್ಲಿ ಟಾಟಾ ಕಂಪನಿಯ ಯೋಗದಾನ ಬಹಳ ದೊಡ್ಡದು.

ಈ ಟಾಟಾ ಕಂಪನಿಯಿದೆಯಲ್ಲ, ಇದರೊಂದಿಗಿನ ನಮ್ಮ ನಂಟು ಹೇಗಿದೆ ನೋಡಿ. ಉಪ್ಪು ಬೇಕಾದಾಗ ಟಾಟಾ ಉಪ್ಪು, ಚಹ ಕುಡಿಯಬೇಕೆನಿಸಿದಾಗ ಟಾಟಾ ಟ್ರಕ್ಕು, ಕಾಫಿಗೆ ಟಾಟಾ ಕಾಫಿ, ಹವಾ ನಿಯಂತ್ರಣಕ್ಕೆ ಟಾಟಾ ಏರ್‌ಕಂಡಿಷನರ್, ಹಲೋ ಹೇಳಲು ಟಾಟಾ ಫೋನು, ಮನೆ, ಸೇತುವೆ, ಕಟ್ಟಡ ನಿರ್ಮಾಣಕ್ಕೆ ಟಾಟಾ ಸ್ಟೀಲು, ಮನೆಗೆ ಬಣ್ಣ ಬಳಿಯಲು ಟಾಟಾ ಪೇಂಟು (ನೆರೋಲ್ಯಾಕ್), ಮುಖದ ಸೌಂದರ್ಯ, ತ್ವಚೆಯ ಕಾಂತಿ ವರ್ಧನೆಗೆ ಟಾಟಾ ಕ್ರೀಮು, ಶಾಂಪು, ಪೌಡರ್, ಲಿಪ್‌ಸ್ಟಿಕ್ (ಲಕ್ಮೆ ಸೌಂದರ್ಯವರ್ಧಕಗಳು), ಸಮಯ ನೋಡಲು ಟಾಟಾ ವಾಚು, ಐಷಾರಾಮಾಗಿ ತಂಗಲು ಟಾಟಾ ಹೋಟೆಲು (ತಾಜ್). ಇಷ್ಟಕ್ಕೇ ನಂಟು ಮುಗಿಯುವುದಿಲ್ಲ.

ಟಾಟಾ ಟೆಲಿಕಮ್ಯುನಿಕೇಶನ್ಸ್, ಟಾಟಾ ಫಾರ್ಮಾಸುಟಿಕಲ್ಸ್, ಟಾಟಾ ಸಾಫ್ಟ್‌ವೇರ್, ಟಾಟಾ ಕನ್ಸಲ್ಟೆನ್ಸಿ, ಟಾಟಾ ಬಯೋಟೆಕ್, ಟಾಟಾ ಫರ್ಟಿಲೈಸರ್‍ಸ್, ಟಾಟಾ ಸಿಮೆಂಟ್ (ಎಸಿಸಿ), ಟಾಟಾ ಎಲೆಕ್ಟ್ರಿಕಲ್ಸ್, ವಿಎಸ್ಸೆನ್ನೆಲ್.. ಗುಂಡುಸೂಜಿಯಿಂದ ಹಿಡಿದು ವಿಮಾನದ ತನಕ ಎಲ್ಲವೂ ಟಾಟಾಮಯ. ಅಧಿಕೃತವಾಗಿ ಟಾಟಾ ಹೆಸರಿನಲ್ಲಿ 91 ಕಂಪನಿಗಳಿವೆ. ಆದರೆ ಇಡೀ ಸಂಸ್ಥೆಯು ಮುನ್ನೂರಕ್ಕೂ ಹೆಚ್ಚು ಕಂಪನಿಗಳಲ್ಲಿ ಭಾಗಿಧಾರಿ. ಈ 137 ವರ್ಷಗಳಲ್ಲಿ ಈ ಕಂಪನಿಯಲ್ಲಿ ಸುಮಾರು ಒಂದೂವರೆ ಕೋಟಿ ಮಂದಿ ಕೆಲಸ ಮಾಡಿದ್ದಾರೆ. ಸದ್ಯ 2 ಲಕ್ಷ ಜನರು ಇಲ್ಲಿ ಕೆಲಸಕ್ಕಿದ್ದಾರೆ. “ಮೆಟ್ಟಿದರೆ ಬಾಟಾ ಕಂಪನಿ ಚಪ್ಪಲಿ ಮೆಟ್ಟಬೇಕು. ಮಾಡಿದ್ರೆ ಟಾಟಾ ಕಂಪನಿಯಲ್ಲಿ ಕೆಲ್ಸ ಮಾಡ್ಬೇಕು" ಎಂಬ ಮಾತು ಇಂದಿಗೂ ಪ್ರಚಲಿತ.

ಎರಡು ವರ್ಷಗಳ ಹಿಂದೆ ರತನ್ ಟಾಟಾ ಜತೆ ಕೆಲಕಾಲ ಕಳೆಯುವ ಅವಕಾಶ ಸಿಕ್ಕಿತ್ತು. ಅಂದು 137 ವರ್ಷಗಳ ಇತಿಹಾಸವಿರುವ ಟಾಟಾ ಕಂಪನಿಯ ಮಾಲೀಕ ರತನ್ ಟಾಟಾ ಕುಳಿತಿದ್ದರೆ, 'ಅಗೋಚರ ಪ್ರಭಾವಳಿ" ಕಾಣಿಸುತ್ತಿತ್ತು. ರತನ್ ಟಾಟಾ ಗಂಭೀರವದನರಾಗಿದ್ದರು. ಅವರ ಬದುಕಿನ ಪಯಣ ಅರವತ್ತೆಂಟನೆ ಮೈಲಿಗಲ್ಲನ್ನು ದಾಟಿ ಓಡುತ್ತಿದೆ. ಆ ಬೆಕ್ಕಿನ ಕಣ್ಣುಗಳಲ್ಲಿ ಹಲವು ಕನಸುಗಳ ಹುಯ್ದಾಟ. 79 ಸಾವಿರ ಕೋಟಿ ರೂ. ಸಂಸ್ಥೆಯ ಅಧ್ಯಕ್ಷನಾದರೂ ರತನ್ ಟಾಟಾ ಶುದ್ಧ ಸಂಕೋಚ, ಹಿಂಜರಿಕೆ ಸ್ವಭಾವದವ. ಪ್ರಚಾರವೆಂದರೆ ಅಷ್ಟಕ್ಕಷ್ಟೆ. ಹೀಗಾಗಿ ರತನ್ ಟಾಟಾ ಪತ್ರಿಕೆ, ಟಿವಿಗಳಲ್ಲಿ ನಮ್ಮ ವಾಟಾಳ್ ನಾಗರಾಜ್ ಅವರಷ್ಟೂ ಕಾಣಿಸಿಕೊಳ್ಳುವುದಿಲ್ಲ. ತಾವಾಯಿತು, ತಮ್ಮ ಕಂಪನಿಯಾಯಿತು, ತಮ್ಮ ಕೆಲಸವಾಯಿತು. ಅಗತ್ಯವಿದ್ದಾಗ ಮಾತ್ರ ಕಾಣಿಸಿಕೊಳ್ಳುತ್ತಾರೆ.

ಅವರು ಪತ್ರಿಕಾ ಸಂದರ್ಶನಕ್ಕೆ ಒಪ್ಪುವುದಿಲ್ಲ. ಅಗತ್ಯಕ್ಕೆ ಮೀರಿದ ಮಾತಿಲ್ಲ. ಶಿಸ್ತುಬದ್ಧ ಜೀವನ. ಇಷ್ಟೊಂದು ಬೃಹತ್ ಸಾಮ್ರಾಜ್ಯದ ಒಡೆಯನಾದರೂ ವಿವಾದಕ್ಕೆ ಸಿಲುಕಿದ್ದಿಲ್ಲ. ಕೆಟ್ಟ ಕಾರಣಗಳಿಗೆ ಸುದ್ದಿಯಾದವರಲ್ಲ. ಟಾಟಾ ಕಂಪನಿಯನ್ನು ಕಟ್ಟಿದ ಮಹಾಮಹಿಮರಾದ ಜೇಮ್‌ಸೇಠಜೀ, ನವಲ್ ಹಾಗೂ ಜೆಆರ್‌ಡಿ ಹೆಜ್ಜೆಯಲ್ಲಿಯೇ ಮುನ್ನಡೆಯುತ್ತಿರುವ ರತನ್ ಇನ್ನೂ ಏಳು ವರ್ಷಗಳ ಕಾಲ ಈ ಕಂಪನಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಟಾಟಾ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಕೀರ್ತಿ ಜೆಆರ್‌ಡಿಗೆ ಸಲ್ಲಬೇಕು. ಐದು ದಶಕಗಳ ಕಾಲ ಈ ಸಂಸ್ಥೆಯ ನೇತೃತ್ವವಹಿಸಿದ್ದ ಅವರು ಟಾಟಾ ಸಮೂಹ ಎಲ್ಲ ಕ್ಷೇತ್ರಗಳಲ್ಲಿ ಪಸರಿಸುವಂತೆ ಮಾಡಿದರು. ಹೊಸ ಹೊಸ ರಂಗಗಳನ್ನು ಪ್ರವೇಶಿಸಿದರು. ಸಂಸ್ಥೆಗೊಂದು ಸಿದ್ಧಾಂತದ ಬುನಾದಿ ಹಾಕಿಕೊಟ್ಟು ಅದರ ಮೇಲೆಯೇ ಕಂಪನಿಯನ್ನು ಕಟ್ಟಿದರು. ಟಾಟಾ ಕಂಪನಿ ಇಲ್ಲಿಯತನಕ ಯಾವುದೇ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದನ್ನು ನಾವು ಕೇಳಿಲ್ಲ. ತೆರಿಗೆ ವಂಚಿಸಿದ್ದನ್ನು, ಗ್ರಾಹಕರಿಗೆ ಮೋಸ ಮಾಡಿದ್ದನ್ನು ನೋಡಿಲ್ಲ. ಇಂಥ ಉದಾತ್ತ ವಿಚಾರ, ಧ್ಯೇಯವಿರುವ ಟಾಟಾ ಕಂಪನಿಯ ಯಜಮಾನಿಕೆಯನ್ನು ರತನ್‌ಗೆ ಒಪ್ಪಿಸಲು ಜೆಆರ್‌ಡಿಗೆ ಸಂಪೂರ್ಣ ಮನಸ್ಸಿರಲಿಲ್ಲ. ಮತ್ತ್ಯಾವ ಕಾರಣಗಳಿಗೂ ಅಲ್ಲ. ವಹಿಸಿದರೆ ನಿಭಾಯಿಸಬಹುದಾ ಎಂಬ ಸಣ್ಣ ಸಂದೇಹ, ಆತಂಕ. ಯಾವುದೇ ಯಜಮಾನ ತನ್ನ ಜವಾಬ್ದಾರಿಯನ್ನು ಮುಂದಿನವರಿಗೆ ವಹಿಸುವಾಗ ಅನುಭವಿಸುವ ದುಗುಡವಿದು. ಆದರೆ 1991ರಲ್ಲಿ ಜೆಆರ್‌ಡಿಯಿಂದ ಜವಾಬ್ದಾರಿಯನ್ನು ವಹಿಸಿಕೊಂಡ ಈ ಹದಿನಾಲ್ಕು ವರ್ಷಗಳಲ್ಲಿ ತಾವೆಂಥ ದಕ್ಷ ಆಡಳಿತಗಾರ, ಧೀಮಂತ ನಾಯಕ ಎಂಬುದನ್ನು ರತನ್ ತೋರಿಸಿಕೊಟ್ಟಿದ್ದಾರೆ.

ರತನ್ ಸಾಮರ್ಥ್ಯವೇನೆಂಬುದನ್ನು ಅರಿಯಲು ಆರಂಭದಲ್ಲಿ ಜೆಆರ್‌ಡಿ, ನೆಲ್ಕೋ ಹಾಗೂ ಸೆಂಟ್ರಲ್ ಇಂಡಿಯಾ ಟೆಕ್ಸ್‌ಟೈಲ್ಸ್ ಎಂಬ ಎರಡು ರೋಗಗ್ರಸ್ತ ಕಂಪನಿಗಳನ್ನು ರತನ್‌ಗೆ ಒಪ್ಪಿಸಿದ್ದರು. ಏಳೆಂಟು ವರ್ಷಗಳಿಂದ ಇವು ಭಾರೀ ನಷ್ಟದಲ್ಲಿದ್ದವು. ಜೆಆರ್‌ಡಿಗೆ ತಲೆನೋವಾಗಿದ್ದರೂ ಈ ಕಂಪನಿಗಳನ್ನು ಮುಚ್ಚಲು ಅವರಿಗೆ ಮನಸ್ಸಿರಲಿಲ್ಲ. ರತನ್‌ಗೆ ಇದು ಬಹಳ ದೊಡ್ಡ ಸವಾಲು. ಹಾಗೇ ತಮ್ಮ ಸಾಮರ್ಥ್ಯ ತೋರಿಸಲು ಸದವಕಾಶ. ಕೇವಲ ಎರಡು ವರ್ಷಗಳಲ್ಲಿ ಸೆಂಟ್ರಲ್ ಇಂಡಿಯಾ ಟೆಕ್ಸ್‌ಟೈಲ್ಸ್‌ನ್ನು ಲಾಭದಾಯಕವಾಗಿ ಮಾಡಿತೋರಿಸಿದರು. ಹಾಗೇ ನೆಲ್ಕೋ. ಆ ದಿನಗಳಲ್ಲಿ ರತನ್ ಸ್ವತಃ ಸಿಬ್ಬಂದಿ ಜತೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರ ಜತೆಯಲ್ಲೇ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ನೆಲ್ಕೋವನ್ನು ಲಾಭಕ್ಕೆ ತಿರುಗಿಸಿದ್ದೊಂದು ಪವಾಡ. ಇಂದಿಗೂ ಕೂಡ ಅವರು ತಮ್ಮ ನೆಲ್ಕೋ ದಿನಗಳನ್ನು ನೆನಪಿಸಿಕೊಳ್ಳುವುದುಂಟು. ಜೆಆರ್‌ಡಿ ವಿಶ್ವಾಸ ಗಳಿಸಿಕೊಟ್ಟ ಬಹುದೊಡ್ಡ assignmentಗಳವು.

ನವಲ್ ಹೊರ್ಮುಸ್‌ಜಿ ಟಾಟಾ ಹಾಗೂ ಸೂನೂ ಟಾಟಾ ಅವರ ಮೊದಲ ಮಗನೇ ರತನ್. ಹುಟ್ಟಿದ್ದು ಡಿಸೆಂಬರ್ 28, 1937. ಎರಡು ವರ್ಷಗಳ ನಂತರ ತಮ್ಮನ ಜನನ. ಆತನ ಹೆಸರು ಜಿಮ್ಮಿ. ಟಾಟಾ ಖಾಂದಾನಿನಲ್ಲಿ ಹುಟ್ಟಿದರೆ ಕೇಳಬೇಕೇ, ಹುಟ್ಟಿನೊಂದಿಗೆ ಶ್ರೀಮಂತಿಕೆ ಫ್ರೀ! ಕೈ ಕಾಲಿಗೆ ಆಳುಕಾಳುಗಳು. ಬಾಲಕ ರತನ್‌ನನ್ನು ನೋಡಿಕೊಳ್ಳಲೆಂದು ನಾಲ್ವರು ಆಳುಗಳಿದ್ದರು. ಶಾಲೆಗೆ ಬ್ರಿಟಿಷ್ ಡ್ರೈವರ್ ರೋಲ್ಸ್‌ರಾಯ್ಸ್ ಕಾರಿನಲ್ಲಿ ಬಿಟ್ಟು ಬರುತ್ತಿದ್ದ. ರತನ್‌ನ ತಂದೆಗೆ ಟಾಟಾ ಎಂಬ ಅಡ್ಡ ಹೆಸರು ಬಿಟ್ಟರೆ ಬೇರೇನೂ ಇರಲಿಲ್ಲ. ಜೆಮ್‌ಶೇಠ್‌ಜೀ ಕುಟುಂಬಕ್ಕೆ ಹತ್ತಿರದ ಸಂಬಂಧ. ನವಲ್‌ನ ತಂದೆ ತಾಯಿ (ಅಂದರೆ ರತನ್ ಅಜ್ಜ-ಅಜ್ಜಿ) ಬೇಗನೆ ತೀರಿಹೋದರು. ನವಲ್ ಅನಾಥಾಶ್ರಮದಲ್ಲಿ ಬೆಳೆಯಬೇಕಾಯಿತು. ಮೂರು ವರ್ಷ ಅಲ್ಲಿಯೇ ಬೆಳೆದಿದ್ದಾಯಿತು.

ಸಂತಾನಭಾಗ್ಯವಿಲ್ಲದ ಹಾಗೂ ಗಂಡನನ್ನು ಕಳೆದುಕೊಂಡ ವಿಧವೆ ನವಾಜ್‌ಬಾಯಿ ಟಾಟಾ ಎಂಬಾಕೆ ತನ್ನ ಆಸ್ತಿಯನ್ನು ನೋಡಿಕೊಳ್ಳಲು ಸುಂದರ ಗಂಡುಮಗುವನ್ನು ದತ್ತು ಸ್ವೀಕರಿಸಲು ಯೋಚಿಸುತ್ತಿದ್ದಾಗ ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ನವಲ್ ಕಣ್ಣಿಗೆ ಬಿದ್ದ. ನವಾಜ್‌ಬಾಯ್ ಸರ್ ರತನ್ ಟಾಟಾ ಹೆಂಡತಿ. ಅದೇನೆನಿಸಿತೋ ಏನೋ ಪುಟ್ಟ ನವಲ್ ಆಕೆಯನ್ನು ಆಕರ್ಷಿಸಿದ. ಆತನನ್ನು ಮನೆಗೆ ಕರೆತಂದಳು. ಈತನಿಗೇ ತನ್ನೆಲ್ಲ ಆಸ್ತಿ ಬರೆದಳು. ನವಲ್ ಕೂಡ ಟಾಟಾ ಕಂಪನಿಯಲ್ಲಿ ತನ್ನನ್ನು ತೊಡಗಿಸಿಕೊಂಡ.

ನವಲ್ ಸಣ್ಣ ವಯಸ್ಸಿನಲ್ಲಿ ಸೂನೂ ಎಂಬಾಕೆಯನ್ನು ಪ್ರೀತಿಸಿ ಮದುವೆಯಾದ. ಇವರಿಗೆ ಹುಟ್ಟಿದವನೇ ರತನ್ ಟಾಟಾ. ನವಲ್-ಸೂನೂ ಸಂಬಂಧ ಸರಿಯಾಗಿರಲಿಲ್ಲ. ಗಂಡ-ಹೆಂಡತಿ ಸಣ್ಣ ಸಣ್ಣ ವಿಷಯಗಳಿಗೂ ಹೊಡೆದಾಡುತ್ತಿದ್ದರು. ಕೊನೆಗೆ ಇಬ್ಬರೂ ವಿಚ್ಛೇದನಕ್ಕೆ ನಿರ್ಧರಿಸಿದರು. ಆಗ ರತನ್‌ಗೆ ಏಳು ವರ್ಷ. ತಂದೆ-ತಾಯಿಯ ಒಡಕಲು ಸಂಬಂಧ ರತನ್ ಮೇಲೆ ತೀವ್ರ ಪರಿಣಾಮ ಬೀರಿರಲಿಕ್ಕೆ ಸಾಕು. ತನ್ನಿಬ್ಬರು ಮಕ್ಕಳನ್ನು ಕೊಡುವಂತೆ ಸೂನೂ ಹಠ ಹಿಡಿದಳು. ಆದರೆ ನವಲ್ ಟಾಟಾ ತಾಯಿ ನವಾಜ್‌ಬಾಯಿ ಬಿಡಲಿಲ್ಲ. ತನ್ನ ಮೊಮ್ಮಗನಿಗೆ ತನ್ನ ಗಂಡನ ಹೆಸರು-ರತನ್- ಎಂದೇ ಹೆಸರಿಟ್ಟಳು. ಅಷ್ಟೇ ಅಲ್ಲ ತನ್ನ ಮಗುವಂತೆ ಅಕ್ಕರೆಯಿಂದ ಸಾಕಿದಳು. ರತನ್ ಟಾಟಾ ಜತೆಗೆ ಮಾತುಕತೆಗೆ ಕುಳಿತುಕೊಳ್ಳಿ ಅಥವಾ ಅವರ ಸಂದರ್ಶನವನ್ನು ಆಲಿಸಿ ಅಥವಾ ಅವರ ಅಂತಃಕರಣದ ಮಾತುಗಳಲ್ಲಿ ಇಣುಕಿದರೆ ಹೆಜ್ಜೆಹೆಜ್ಜೆಗೂ ತಮ್ಮ ಅಜ್ಜಿಯನ್ನು ನೆನಪಿಸಿಕೊಳ್ಳುತ್ತಾರೆ- “ಆಕೆ ನನಗೆ ಪ್ರೀತಿಯೇನೆಂಬುದನ್ನು ಹೇಳಿದಳು. ಆಕೆ ತಾಯಿಯ ವಾತ್ಸಲ್ಯ ತೋರಿದಳು. ಆಕೆ ನನಗೆ ಜೀವನ ಮೌಲ್ಯ ಕಲಿಸಿದ ಗುರುವಾದಳು. ಇಂದು ನಾನು ನಾನಾಗಿದ್ದರೆ ಅದಕ್ಕೆ ಅವಳೇ ಕಾರಣ."

ತಂದೆ-ತಾಯಿಯ ಕಲಹ ಸಂಬಂಧವೋ, ಬಾಲ್ಯದ ಕಹಿ, ಕದಡಿದ ನೆನಪೋ ಏನೋ ರತನ್ ಟಾಟಾ ಇಂದಿಗೂ ಮದುವೆಯಾಗಿಲ್ಲ. ಇಂದಿಗೂ ಏಕ. ಒಮ್ಮೆ ಮದುವೆಯಾಗಲು ನಿರ್ಧರಿಸಿದ್ದರು. ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಹೋಗುವ ಮೊದಲೇ ಕೂಡಲಿರುವ ಸಂಬಂಧ ಕಳಚಿ ಬಿತ್ತು. ಅನಂತರ ಮದುವೆ ಯೋಚನೆಯನ್ನೇ ತಲೆಯಿಂದ ತೆಗೆದುಹಾಕಿಬಿಟ್ಟರು! ದೇಶಕ್ಕೆ ದೇಶವೇ ಹೆಮ್ಮೆ ಪಡುವ ಅಭಿಮಾನದಿಂದ ಬೀಗುವ ಟಾಟಾ ಕಂಪನಿಯ ಅಧ್ಯಕ್ಷ ಅರ್ಧಾಂಗಿ, ಮಕ್ಕಳಿಲ್ಲದೇ ಏಕಾಂಗಿ. ಅಚ್ಚರಿಯಾಗಬಹುದು ಅವರದ್ದೆಂಬ ಸ್ವಂತ ಮನೆಯೂ ಅವರಿಗಿಲ್ಲ. ಟಾಟಾ ಕಂಪನಿಯ ಅಧ್ಯಕ್ಷನಿಗೆ ಮೀಸಲಿರುವ ಕ್ವಾರ್ಟರ್ಸ್‌ನಲ್ಲಿ ಅವರ ವಾಸ. ಮನೆಯಲ್ಲಿ ಆಳು, ನಾಯಿಗಳನ್ನು ಬಿಟ್ಟರೆ ಮತ್ಯಾರೂ ಇಲ್ಲ. ತಮ್ಮ ಕಂಪನಿಯ ಸಾಮಾನ್ಯ ಮ್ಯಾನೇಜರ್ ಹೊಂದಬಹುದಾದಂಥ ಮನೆಯಲ್ಲಿ ರತನ್ ದಶಕಗಳಿಂದ ನೆಲೆಸಿದ್ದಾರೆ.

ಇತ್ತೀಚೆಗೆ ಪತ್ರಿಕೆಯೊಂದರ ಸಂದರ್ಶನದಲ್ಲಿ ರತನ್ ಹೇಳಿದ್ದರು - 'I think I am lonely". ನನಗೆ ಕಂಪನಿಯ ಆರ್ಥಿಕ ಒಡೆತನದಲ್ಲಿ ಸಂಪೂರ್ಣ ಹಕ್ಕಿಲ್ಲ. ನನ್ನ ಸ್ಥಾನಮಾನವನ್ನು ವಿಸ್ತರಿಸಿಕೊಳ್ಳುವ ಅಧಿಕಾರವಿಲ್ಲ. ನಾನ್ಯಾವ ನಿರ್ಧಾರ ತೆಗೆದುಕೊಂಡರೂ ಅದು ಕಂಪನಿಯ ಸಿದ್ಧಾಂತ, ವಿಚಾರದ ಚೌಕಟ್ಟಿನೊಳಗಿರಬೇಕು. ಅದನ್ನು ಮೀರಿದ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ನನ್ನ ಸ್ವಂತದ್ದೆನ್ನುವುದೇನೂ ಇಲ್ಲ. ನಾನು ಏಕಾಂಗಿ. ನನಗೆ ತಾತ್ವಿಕ ನಿಲುವು ಎಂಬುದಿದ್ದರೆ ಅದು ನನ್ನ ದೇಶಕ್ಕಾಗಿ ನಾನು ಸಮರ್ಪಿಸಿಕೊಳ್ಳಬೇಕು, ಅದರ ಏಳಿಗೆಗಾಗಿ ಶ್ರಮಿಸಬೇಕು ಎಂಬುದು. ನನಗೆ ಹಣ ಮಾಡಬೇಕೆಂಬ ಆಸೆಗಿಂತ ಸಾಧ್ಯವಾದಷ್ಟು ಜನರಿಗೆ ಉದ್ಯೋಗ ಕಲ್ಪಿಸುವ ಹಂಬಲವಿದೆ."

ರತನ್ ಟಾಟಾಗೊಂದು ಆಸೆಯಿತ್ತು. ಸಂಪೂರ್ಣ ದೇಶಿ ನಿರ್ಮಿತ ಕಾರನ್ನು ತಯಾರಿಸಬೇಕೆಂಬುದು. ಟಾಟಾ ಇಂಡಿಕಾ, ಇಂಡಿಗೋ ಅವರ ಕಲ್ಪನೆಯಿಂದ ಸಾಕಾರಗೊಂಡ ಕೂಸು ಕಾರುಗಳು. ಇಲ್ಲಿಯತನಕ ಐದು ಲಕ್ಷ ಕಾರುಗಳು ಮಾರಾಟವಾಗಿವೆ. 'ಸಿಟಿ ರೋವರ್" ಹೆಸರಿನಲ್ಲಿ ಈ ಕಾರು ಬ್ರಿಟನ್‌ನ ರಸ್ತೆಗಿಳಿದಿವೆ. ರತನ್‌ಗೆ ಮತ್ತೊಂದು ಕನಸಿದೆ. ಭಾರತದಲ್ಲಿರುವ ಸಾಮಾನ್ಯನೂ ತನ್ನದೆಂಬ ಕಾರನ್ನು ಹೊಂದಬೇಕು. ಅದಕ್ಕಾಗಿ ರತನ್ ಒಂದು ಲಕ್ಷ ರೂಪಾಯಿಯೊಳಗೆ ಕಾರನ್ನು ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಇದು ಸಾಧ್ಯವಾದರೆ ಸಂಪರ್ಕ ಪವಾಡ ಅಥವಾ ರಸ್ತೆ ಕ್ರಾಂತಿಯಾಗುವುದು ದಿಟ.

ಟಾಟಾ ಕಂಪನಿಯಾಗಲಿ, ರತನ್ ಟಾಟಾ ಆಗಲಿ ನಮಗೆ ಆಪ್ತವಾಗುವುದು ಅವರಲ್ಲಿ ಹೇರಳ ಹಣವಿದೆಯೆಂಬ ಕಾರಣಕ್ಕೆ ಅಲ್ಲ. ಹೇರಳ ಹಣವಿದ್ದೂ ಆಪ್ತರಾಗುತ್ತಾರೆಂಬ ಕಾರಣಕ್ಕೆ. ನಮ್ಮ ಐಟಿ ದೊರೆಗಳು ನಮಗೆ ಅದು ಕೊಡಿ ಇದು ಕೊಡಿ ಇಲ್ಲದಿದ್ದರೆ ನಾವು ನಿಮ್ಮೂರನ್ನು ಬಿಟ್ಟು ಹೋಗ್ತೇವೆ ಎಂದು ಧಮಕಿ ಹಾಕುವುದನ್ನು, ಸರಕಾರವನ್ನೇ ಬ್ಲ್ಯಾಕ್‌ಮೇಲ್ ಮಾಡುವುದನ್ನು ನೋಡುತ್ತಿದ್ದೇವೆ. ಅವರ ಜಾಗದಲ್ಲಿ ರತನ್ ಟಾಟಾ ಕೂಡ ನಿಂತಿದ್ದಾರೆ. ಅವರ ಬಾಯಿಂದ ಇಂಥ ಒಂದೇ ಒಂದು ಮಾತೂ ಹೊರಬಿದ್ದಿಲ್ಲ. ಅವರೆಂದೂ ಸರಕಾರದ ಗುದಮುರಿಗೆ ಕಟ್ಟಿದವರಲ್ಲ. ಸರಕಾರವೇ ಅವರ ಕಂಪನಿಗೆ ಇನ್ನಿಲ್ಲದ ಆಮಿಷ ತೋರಿಸಿ ಕೈಕೊಟ್ಟಾಗಲೂ ರತನ್ ಸಂಯಮ ಕಳಕೊಂಡವರಲ್ಲ. ಇಂದಿಗೂ ಉತ್ತಮ ಕೆಲಸ, ಸಂಬಳ, ಉದ್ಯೋಗ ತೃಪ್ತಿ, ಆತ್ಮಗೌರವದ ಕಾಯಕಕ್ಕೆ ಟಾಟಾ ಕಂಪನಿಯನ್ನು ಮೀರಿಸುವವರಿಲ್ಲ. ಈ ಭಾವನೆ ಪ್ರತಿಯೊಬ್ಬ ನೌಕರನಲ್ಲೂ ಮೊಳೆಯಬೇಕೆಂಬುದು ರತನ್ ಟಾಟಾ ಆಶಯ.

ಈ ದೇಶದ ಪ್ರಗತಿ, ಅಭಿವೃದ್ಧಿಯ ಪ್ರತಿ ಮೈಲಿಗಲ್ಲಿನಲ್ಲೂ ಟಾಟಾ ಇದೆ. ಟಾಟಾ ಇಲ್ಲದ ಭಾರತವನ್ನು ಊಹಿಸುವುದೂ ಅಸಾಧ್ಯ. ಆ ಪರಿ ಟಾಟಾ ನಮ್ಮನ್ನೆಲ್ಲ ವ್ಯಾಪಿಸಿದೆ. ಪ್ರಾಮಾಣಿಕತೆ, ಶ್ರಮ, ನಿಷ್ಠೆಯೇ ಮೂಲಮಂತ್ರವಾಗಿರುವ ಟಾಟಾ ಇರುವ ತನಕ ಆತ ದುಡಿದಿದ್ದೆಲ್ಲವೂ ಈ ದೇಶಕ್ಕೇ ವಿನಿಯೋಗವಾಗುತ್ತದೆ. ಟಾಟಾನಿಗೆ ಕೊಟ್ಟ ಹಣ ವಾಪಸ್ ನಮಗೇ ಬೇರೆ ರೂಪದಲ್ಲಿ ಸಿಗುತ್ತದೆ.ರತನ್ ಇಷ್ಟವಾಗುತ್ತಾರೆ. ಟಾಟಾ ಕಂಪನಿ ಮೌಲ್ಯ ಅವರ ಕೈಯಲ್ಲಿ ಕ್ಷೇಮವಾಗಿದೆ, ಸುರಕ್ಷಿತವಾಗಿದೆ.

(ಸ್ನೇಹಸೇತು : ವಿಜಯ ಕರ್ನಾಟಕ)

ಪೂರಕ ಓದಿಗೆ:

ವಿಶ್ವದ ಅತ್ಯಂತ ಕಡಿಮೆ ಬೆಲೆಯ ಕಾರು ಬಿಡುಗಡೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X