ನಾವೆಲ್ಲ ಬಿಸಿ ಕಡಾಯಿಯಲ್ಲಿ ಮೈ ಕಾಯಿಸಿ ಸತ್ತುಹೋಗುವ ಕಪ್ಪೆ ಥರಾ...
ಶೌರಿ
ಮಾತುಗಳನ್ನು
ಕೇಳುತ್ತಿದ್ದರೆ
ಬೇಸರ,
ವ್ಯಥೆ,
ಸಿಟ್ಟು
ಎಲ್ಲವೂ
ಬರುತ್ತವೆ.ಹೌದಲ್ಲ.
ನಾವು
ಒಂದಿ
ದಿನ
ಕಡಾಯಿ
ಕಪ್ಪೆಯಂತೆ
ಸತ್ತು
ಹೋಗುತ್ತೇವೆ.
ಛೇ!
- ವಿಶ್ವೇಶ್ವರ ಭಟ್
ಇಡೀ ದೇಶಕ್ಕೆ ದೇಶವೇ ಹಾಲಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಿ ಎಂದುಒಕ್ಕೊರಲಿನಿಂದ ಕೂಗುತ್ತಿವೆ. ಟೀವಿ ಚಾನೆಲ್, ಪತ್ರಿಕೆಗಳು ನಡೆಸಿದ ಸಮೀಕ್ಷೆಗಳೆಲ್ಲ ಡಾ.ಕಲಾಂ ಮುಂದುವರಿಯಲಿ ಎಂದು ಹೇಳುತ್ತಿವೆ. ಡಾ.ಕಲಾಮೇ ಬೇಕು ಎಂದು ಸಾವಿರಾರು ವೆಬ್ಸೈಟುಗಳು, ಬ್ಲಾಗ್ಗಳು ಕೂಗುತ್ತಿವೆ. ಅವರು ಬೇಡ ಎಂದು ಹೇಳಲು ಕಾರಣಗಳೇ ಇಲ್ಲ. ಎರಡನೇ ಅವಧಿಗೆ ಒಲ್ಲೆ ಎಂದಿದ್ದ ಡಾ.ಕಲಾಂ, ಜನರ ಪ್ರೀತಿ, ವಿಶ್ವಾಸ, ಒತ್ತಾಸೆ, ಒತ್ತಡಗಳನ್ನು ಗಮನಿಸಿ ಸ್ಪರ್ಧೆಯಾಗದೇ ಗೆಲ್ಲಿಸುವುದಾದರೆ ಸಿದ್ಧ ಎಂದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಎಂಬ ಈ ದೇಶವನ್ನು ಆಳುವ ಅತಿಮಾನುಷ ಶಕ್ತಿ ಕೂಡದು ಎಂದುಬಿಟ್ಟಿತು! ಇಡೀ ದೇಶವೇ ಒಂದು ಕಡೆ, ಆ ಅತಿಮಾನುಷ ಶಕ್ತಿಯೇ ಇನ್ನೊಂದು ಕಡೆ.
ಕೊನೆಗೂ ಗೆದ್ದಿದ್ದು ಈ ದೇಶ ಅಲ್ಲ. ಆ ಅತಿಮಾನುಷ ಶಕ್ತಿ! ತನಗೆ, ತನ್ನ ಕುಟುಂಬಕ್ಕೆ ನಿಷ್ಠರಾಗಿದ್ದರೆಂಬ ಕಾರಣಕ್ಕೆ, ಯಾವಜ್ಜೀವ ನಿಷ್ಠರಾಗಿರುತ್ತಾರೆಂಬ ಕಾರಣಕ್ಕೆ ಅಪರಿಚಿತರಾಗಿದ್ದವರೊಬ್ಬರನ್ನು ಕರೆತಂದು ಇವರೇ ನಮ್ಮ ರಾಷ್ಟ್ರಪತಿ ಎಂದು ಹೇಳುತ್ತಿದ್ದಾರೆ. ಸಂದೇಹವೇ ಬೇಡ, ಅವರೇ ನಮ್ಮ ಮುಂದಿನ ರಾಷ್ಟ್ರಪತಿಯಾಗುತ್ತಾರೆ ಹಾಗೂ ಯಾವಜ್ಜೀವ ಆ ಶಕ್ತಿಗೆ ನಿಷ್ಠರಾಗಿರುತ್ತಾರೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಅಂತಾರೆ. ಆದರೆ ಇದನ್ನೆಲ್ಲ ಗಮನಿಸಿದರೆ ಪ್ರಜೆಗಳ ಮಾತಿಗೆ ದಮಡಿ ಕಿಮ್ಮತ್ತಿಲ್ಲವೆಂಬುದು ವೇದ್ಯವಾಗುತ್ತದೆ. ಆ ಅತಿಮಾನುಷ ಶಕ್ತಿ, ಪ್ರತಿಭಾ ಪಾಟೀಲ್ ಬದಲು ಯಾರನ್ನೇ ಹಿಡಿದು ತಂದು, ಇವರೇ ನಮ್ಮ ರಾಷ್ಟ್ರಪತಿ ಅಭ್ಯರ್ಥಿ ಎಂದಿದ್ದರೆ ಯಾರೂ ಏನೂ ಮಾಡುತ್ತಿರಲಿಲ್ಲ. ಯಾಕೆಂದರೆ ನಾವು ಈಗೇನು ಮಾಡಿದ್ದೇವೆ? ಇಂದಿರಾ ಗಾಂಧಿ ಮೂರು ದಶಕಗಳ ಹಿಂದೆ ವಿ.ವಿ.ಗಿರಿ ಎಂಬ ಅಯೋಗ್ಯ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದಂತೆ, ಅವರ ಸೊಸೆ ಸೋನಿಯಾ ಗಾಂಧಿ ಅಜ್ಞಾತ ವ್ಯಕ್ತಿಯೋರ್ವರನ್ನು ರಾಷ್ಟ್ರಪತಿ ಮಾಡಲು ಹೊರಟಿದ್ದಾರೆ. ದುರ್ದೈವವೆಂದರೆ, ತಮ್ಮ ಕೆಲಸದಲ್ಲಿ ಯಶಸ್ವಿಯೂ ಆಗುತ್ತಾರೆ. ಇದು ಜಗತ್ತಿನ ಬೇರೆ ಯಾವುದಾದರೂ ದೇಶದಲ್ಲಿ ನಡೆಯಲು ಸಾಧ್ಯವಾ?
ಹೀಗೆಲ್ಲ ಯೋಚಿಸುತ್ತಿರುವಾಗ ಕಳೆದ ವಾರ ಖ್ಯಾತ ಪತ್ರಕರ್ತ ಹಾಗೂ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿಯವರಿಗೆ ಫೋನ್ ಮಾಡಿದ್ದನ್ನು ಹೇಳಬೇಕು. ನನ್ನ ಹೊಸ ಪುಸ್ತಕವೊಂದರ ಬಿಡುಗಡೆಗೆ ಅವರನ್ನು ಆಹ್ವಾನಿಸಬೇಕಿತ್ತು. ಸ್ವತಃ ಶೌರಿಯವರೇ ಪೋನ್ ಎತ್ತಿಕೊಂಡರು. ಅವರು ಕೇಂದ್ರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದಾಗಲೂ ಫೋನ್ ಮಾಡಿದರೆ ಅವರೇ ರಿಸೀವರ್ ಎತ್ತಿಕೊಳ್ಳುತ್ತಿದ್ದರು. ಇದರಲ್ಲೇನು ಮಹಾ ಎಂದು ಕೇಳಬಹುದು.
ದಿಲ್ಲಿಯಲ್ಲಿ ಮಂತ್ರಿಯೊಬ್ಬನ ಜತೆ ಮಾತಾಡುವುದೇ ಕಷ್ಟ. ಅದರಲ್ಲೂ ಫೋನಿನಲ್ಲಿ ಮಾತಾಡಬೇಕೆಂದರೆ ಕನಿಷ್ಠ 10ನಿಮಿಷ ಯಾತನಾಮಯ ಹೋಲ್ಡ್ ಆನ್ ಮ್ಯೂಸಿಕ್ ಕೇಳಿಸಿಕೊಂಡು ಮೂರ್ನಾಲ್ಕು ಸಹಾಯಕರನ್ನು ದಾಟಿ ಮಂತ್ರಿಯನ್ನು ಹಿಡಿಯಬೇಕು. ಈ ಹಂತ ದಾಟದೇ ಯಾವ ಮಂತ್ರಿ ಜತೆ ಮಾತಾಡುವುದು ಸಾಧ್ಯವೇ ಇಲ್ಲ. ಆದರೆ ಶೌರಿ ಹಾಗಿರಲಿಲ್ಲ. ಅವರ ಮನೆಗೆ ಸೇವಕರೇ ಇರಲಿಲ್ಲ. ಮನೆ ಬಾಗಿಲು ತಟ್ಟಿದರೂ ಅವರೇ ಕದ ತೆರೆಯುತ್ತಿದ್ದರು. ಕಚೇರಿಗೆ ಹೋದರೆ ಅವರೇ ಎದುರುಗೊಳ್ಳುತ್ತಿದ್ದರು. ಶೌರಿಗೆ ಅಂಥ ಹೃದಯವಂತಿಕೆ, ಸಜ್ಜನಿಕೆ ಹಾಗೂ ವಿನಯವಂತಿಕೆ ಇದೆ. ಫೋನು ಮಾಡಿದಾಗ ಅವರು ಮೀಟಿಂಗ್ನಲ್ಲಿದ್ದರೆ, ಅರ್ಧಗಂಟೆ ನಂತರ ತಾನೇ ಫೋನ್ ಮಾಡುತ್ತೇನೆಂದು ಹೇಳಿದರೆ, ಅರ್ಧಗಂಟೆ ಬಳಿಕ ಅವರಿಂದ ಫೋನ್ ಬರುತ್ತದೆ.
ಮೊನ್ನೆ ಹಾಗೇ ಆಯಿತು. ಎರಡು ಗಂಟೆ ಬಿಟ್ಟು ಮಾತಾಡುತ್ತೇನೆ ಅಂದರು ಹಾಗೂ ಎರಡು ಗಂಟೆ ನಂತರ ಫೋನ್ ಬಂತು. ಮಾತಿನಲ್ಲಿ ಎಲ್ಲೂ ಧಾವಂತ ಇಲ್ಲ. ಮೃದು ಮಾತು ಹಾಗೂ ಸಮಾಧಾನದಿಂದ ಆಲಿಸುವುದು ಅವರ ಬಗ್ಗೆ ಒಂದು ಆಕರ್ಷಣೆಯನ್ನು ಕಟ್ಟಿಕೊಡುತ್ತದೆ. ಶಿಸ್ತುಬದ್ಧವಾಗಿ, ನಿಯಮಿತವಾಗಿ ಒಂದೆರಡು ವರ್ಷಗಳಿಗೆ ಒಂದು ಪುಸ್ತಕ ಹಾಗೂ ಪತ್ರಿಕೆಗಳಿಗೆ ಲೇಖನ ಬರೆದುಕೊಂಡಿದ್ದ ಶೌರಿ,ಮಂತ್ರಿಯಾಗುತ್ತಿದ್ದಂತೆ ಕಳೆದು ಹೋಗುತ್ತಾರೇನೋ ಎಂದು ಅನೇಕರು ಭಾವಿಸಿದ್ದರು.