ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22 ವರ್ಷ ಪ್ರಧಾನಿ ಕಚೇರಿಯಲ್ಲಿದ್ದರೂ ಅವರು ಬಸ್ಸಿನಲ್ಲಿ ತಿರುಗುತ್ತಿದ್ದರು!

By Staff
|
Google Oneindia Kannada News


ಶಾರದಾಪ್ರಸಾದ್‌ ಮೈಸೂರಿಗರು, ಅಪ್ಪಟ ಕನ್ನಡಿಗರು ಎಂಬುದೇ ಹೆಮ್ಮೆಯ ಸಂಗತಿ. ಅನೇಕ ವರ್ಷ ಕನ್ನಡ ನೆಲದಿಂದ ದೂರವಿದ್ದರೂ, ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದರೂ ಅವರು ಕನ್ನಡ ಮರೆತವರಲ್ಲ... ಅವರ ಬಗ್ಗೆ ನೂರೆಂಟು ಮಾತು.

  • ವಿಶ್ವೇಶ್ವರ ಭಟ್‌
  • H Y Sharadaprasadಎಚ್‌.ವೈ.ಶಾರದಾಪ್ರಸಾದ್‌ ಬಗ್ಗೆ ಹೇಳುತ್ತೇನೆ. ಅದಕ್ಕೂ ಮೊದಲು ಸುತ್ತಿಬಳಸಿ ಒಂದು ಪ್ರಸಂಗ ಹೇಳಬಹುದೇನೋ? ಸುಮಾರು ಒಂದು ವರ್ಷದ ಹಿಂದಿನ ಮಾತು. ಒಂದು ದಿನ ಬೆಳಗ್ಗೆ ಹೊಸದಿಲ್ಲಿಯಲ್ಲಿರುವ ಕೆ.ನಟವರ್‌ ಸಿಂಗ್‌ಗೆ ಪೋನ್‌ ಮಾಡಿದೆ. ಆಗ ತಾನೆ ಅವರು ಮಾಜಿ ಸಚಿವರಾಗಿದ್ದರು. ಆಹಾರಕ್ಕಾಗಿ ತೈಲ ಹಗರಣದಲ್ಲಿ ಸಿಲುಕಿದ ಆರೋಪಕ್ಕೆ ತುತ್ತಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಇಂಗ್ಲಿಷ್‌ ಪತ್ರಿಕೆಯಾಂದಕ್ಕೆ ಅವರು ಅಂಕಣ ಬರೆಯಲು ಒಪ್ಪಿರುವುದು ಅವರಿಂದ ಲೇಖನ ಬರೆಸುವ ಇಚ್ಛೆಯಿಂದ, ನಮಗಿಬ್ಬರಿಗೂ commnon friend ಆಗಿರುವವರಿಂದ ಪೋನ್‌ ನಂಬರ್‌ ಪಡೆದು ನಟವರ್‌ ಸಿಂಗ್‌ಗೆ ಪೋನ್‌ ಮಾಡಿದೆ. ಪತ್ರಿಕೆ ಬಗ್ಗೆ ಕೇಳಿದರು. ಅವುಗಳ ಬಗೆಗೆಲ್ಲ ಹೇಳಿದೆ. ಅಂಕಣಕಾರರ ಕುರಿತು ಕೇಳಿದರು. ಪತ್ರಿಕೆಗೆ ಬರೆಯುವ ಪ್ರಮುಖ ಅಂಕಣಕಾರರ ಬಗ್ಗೆ ಹೇಳುತ್ತಾ, ವಿಜಯ ಕರ್ನಾಟಕಕ್ಕೆ ಎಚ್‌.ವೈ.ಶಾರದಾಪ್ರಸಾದ್‌ ಸಹ ಬರೆಯುತ್ತಾರೆ ಎಂದೆ. ಆಗ ಶಾರದಾಪ್ರಸಾದ್‌ ಪ್ರತಿ ಭಾನುವಾರ ‘ಕಾಲ-ದೇಶ’ ಎಂಬ ಅಂಕಣ ಬರೆಯುತ್ತಿದ್ದರು.

    ಶಾರದಾಪ್ರಸಾದ್‌ರ ಹೆಸರು ಹೇಳುತ್ತಿದ್ದಂತೆ ಒಂದು ಕ್ಷಣ ನಿಂತು ‘ಹೌದಾ ಅವರು ಬರೆಯುತ್ತಿದ್ದಾರಾ? ಗ್ರೇಟ್‌. ಹಾಗಾದರೆ ನೀವು ಅದೃಷ್ಟಶಾಲಿಗಳು. ನಿಮ್ಮದು ಪ್ರಮುಖ ಪತ್ರಿಕೆಯಾಗಿರಬೇಬೇಕು. ಅವರು ಬರೆಯುತ್ತಿದ್ದಾರೆ ಅಂದ್ರೆ ನಾನೂ ಬರೆಯುತ್ತೇನೆ ’ಎಂದರು ನಟವರ್‌ ಸಿಂಗ್‌.

    ಶಾರದಾಪ್ರಸಾದ್‌ ಹೆಸರು ಹೇಳಿದ್ದೇ ತಡ ಕೆಲಸ ಆಗಿಹೋಯಿತು!

    ಮುಂದಿನದೆಲ್ಲ ಉಭಯಕುಶಲೋಪರಿ. ಹಾಗೇ ಮಾತಾಡುವಾಗ ನಟವರ್‌ ಸಿಂಗ್‌ ತಮಾಷೆಯಿಂದ ‘ನನಗೆಷ್ಟು ಸಂಭಾವನೆ ಕೊಡ್ತೀರಿ? ಶಾರದಾಪ್ರಸಾದ್‌ಗೆ ಎಷ್ಟು ಕೊಡ್ತಾ ಇದ್ದೀರಿ? ’ ಎಂದು ಕೇಳಿದರು. ನಾನು ಹೇಳಿದೆ. ಹದಿನೈದಿಪ್ಪತ್ತು ಸೆಕೆಂಡ್‌ ಆ ಕಡೆಯಿಂದ ಮೌನ. ಆನಂತರ ನಟವರ್‌ ಸಿಂಗ್‌ ಮುಂದುವರಿಸಿದರು -‘ಒಂದು ಕೆಲಸ ಮಾಡಿ. ನನಗೆ ಕೊಡುವ ಸಂಭಾವನೆ ಹಣವನ್ನು ಶಾರದಾಪ್ರಸಾದ್‌ಗೆ ಕಳಿಸಿಬಿಡಿ. ಅವರಿಗೆ ಈಗ ಹಣದ ಅಗತ್ಯವಿದೆ. ಆದರೆ ಅವರು ಪರಮ ಸ್ವಾಭಿಮಾನಿ. ಬೇರೆಯವರಿಂದ ಹಣ ಕೇಳುವುದಿಲ್ಲ. ಕೊಟ್ಟರೆ ಸಿಟ್ಟಾಗುತ್ತಾರೆ.’

    ಅರ್ಧಗಂಟೆ ಬಳಿಕ ಪುನಃ ನಟವರ್‌ಸಿಂಗ್‌ ಫೋನ್‌ ಬಂತು -‘ನಾನು ಜೋಕಿಗೆ ಹೇಳಿದ್ದಲ್ಲ. ಶಾರದಾ ಪ್ರಸಾದ್‌ ಅವರಿಗೆ ನನ್ನ ಸಂಭಾವನೆ ಹಣ ಕಳಿಸಿ. ಆದರೆ ಅವರಿಗೆ ಈ ವಿಷಯ ಗೊತ್ತಾಗುವುದು ಬೇಡ’ ಎಂದರು.

    ನಟವರ್‌ ಸಿಂಗ್‌ ಹೇಳಿದ ಇನ್ನೊಂದು ಮಾತು ನನ್ನ ಮನಸ್ಸಿನೊಳಗೇ ಚಕ್ಳಮಕ್ಳ ಹಾಕಿ ಕುಳಿತುಕೊಂಡಿತು -ಶಾರದಾ ಪ್ರಸಾದ್‌ ನಿಜಕ್ಕೂ ಗ್ರೇಜ್‌ ಮನುಷ್ಯ. ಅವರು ಅಪ್ಪಟ ಗಾಂಧಿವಾದಿ. ಬಹಳ ವರ್ಷಗಳ ಕಾಲ ದಿಲ್ಲಿಯಲ್ಲಿ ಅವರಿಗೊಂದು ಸ್ವಂತ ಮನೆ ಸಹ ಇರಲಿಲ್ಲ. ಈ ವಿಷಯ ಹೇಗೊ ಸೋನಿಯಾ ಗಾಂಧಿಯವರಿಗೆ ಗೊತ್ತಾಯಿತು. ಶಾರದಾಪ್ರಸಾದ್‌ ಅವರಿಗೆ ಕಡಿಮೆ ಬಾಡಿಗೆ ಸರಕಾರಿ ಮನೆ ನೀಡುವಂತೆ ಸೂಚಿಸಿದರು. ತಮಗೆ ಇಂಥ ಮನೆ ಕೊಡಿಸಿ ಎಂದು ಸೋನಿಯಾ ಮುಂದೆ ಏನಿಲ್ಲವೆಂದರೂ ಹತ್ತು ಸಾವಿರ ಮಂದಿ ಅರ್ಜಿ ಹಿಡಿದು ನಿಂತಿರಬಹುದು. ಆದರೆ ಶಾರದಾಪ್ರಸಾದ್‌ ಬಹಳ ವಿನಯಪೂರ್ವಕವಾಗಿ ಇದನ್ನು ತಿರಸ್ಕರಿಸಿದರು. ಸೈಟು ನೀಡಲು ಸರ್ಕಾರ ಮುಂದೆ ಬಂದಾಗಲೂ ಅವರು ತೆಗೆದುಕೊಳ್ಳಲಿಲ್ಲ. ಇಂಥ ವ್ಯಕ್ತಿಗಳು ಈ ಕಾಲದಲ್ಲೂ ಇದ್ದಾರೆ ಅಂದ್ರೆ ನಂಬುವುದು ಕಷ್ಟ. ಅವರೆಂಥ ಸರಳ ಜೀವನ ನಡೆಸುತ್ತಿದ್ದಾರೆಂಬುದನ್ನು ನೋಡಲು ಅವರ ಮನೆಗೊಮ್ಮೆ ಹೋಗಿ ನೋಡಿ.

    ಕಳೆದ ವರ್ಷ ನಮ್ಮ ಹೊಸದಿಲ್ಲಿ ವರದಿಗಾರ ಅಶೋಕ್‌ರಾಮ್‌ ಜತೆಗೆ ಶಾರದಾಪ್ರಸಾದ್‌ ಮನೆಗೆ ಹೋದಾಗ, ನಟವರ್‌ ಸಿಂಗ್‌ ಹೇಳಿದ್ದರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲವೆನಿಸಿತು. ದಿಲ್ಲಿಯ ಹೊರವಲಯದಲ್ಲಿರುವ ವಯಸ್ಸಾದ ಫ್ಲಾಟೊಂದರ ಎರಡನೆ ಮಹಡಿಯಲ್ಲಿ ಶಾರದಾ ಪ್ರಸಾದ್‌ ಹಾಗೂ ಅವರ ಪತ್ನಿ ವಾಸವಾಗಿದ್ದರು. ಮನೆ ಬಾಗಿಲು ತಟ್ಟಿದಾಗ ಸ್ವತಃ ಅವರೇ ಕೋಲೂರುತ್ತಾ ಬಂದು ಬಾಗಿಲು ತೆರೆದರು.

    ಅದಕ್ಕೂ ಮೊದಲು ಮೂರ್ನಾಲ್ಕು ಸಲ ಫೋನಿನಲ್ಲಿ ಮಾತಾಡಿದ್ದೆ. ಅವರಿಂದ ಅಂಕಮ ಬರೆಸಲು ಒಪ್ಪಿಸುವ ತನಕ ಸಾಕೋಸಾಕಾಗಿತ್ತು. ಕನ್ನಡದಲ್ಲಿ ಬರೆಯಲು ಸಾಧ್ಯವಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಗ್ಲಿಷ್‌ ಲೇಖನ ತರ್ಜುಮೆ ಮಾಡಿಬಳಸಿಕೊಳ್ಳುತ್ತೇವೆ ಎಂದಾಗ ‘ಅನುವಾದ ಬಹಳ ಕಷ್ಟ. ಮೂಲ ಲೇಖಕನಿಗೆ ಯಾವತ್ತೂ ನಿಷ್ಠವಾಗಿ ಇರುವುದು ಅಸಾಧ್ಯ’ ಎಂದು ನನ್ನ ಮನವಿಯನ್ನು ತಿರಸ್ಕರಿಸುತ್ತಲೇ ಇದ್ದರು. ಕೊನೆಗೆ ‘ನಾನೇ ಅನುವಾದಿಸುತ್ತೇನೆ, ನಿಮಗೆ ನಿಷ್ಠನಾಗಿರುತ್ತೇನೆ’ ಎಂದು ಮನವರಿಕೆ ಮಾಡಿಕೊಟ್ಟಾಗಲೇ ಶಾರದಾಪ್ರಸಾದ್‌ ಅಂಕಣಕ್ಕೆ ಅನುಮತಿ ನೀಡಿದ್ದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X