ಅನ್ನದಿಂದ ಹಸಿವು, ಅಕ್ಷರದಿಂದ ಅಜ್ಞಾನ ಕಳೆದ ಸ್ವಾಮೀಜಿಗಳಿಗೆ ಶರಣು ಶರಣು
ಶ್ರೀ
ಬಾಲಗಂಗಾಧರ
ನಾಥ
ಸ್ವಾಮೀಜಿ,
ಶ್ರೀ
ವೀರೇಂದ್ರ
ಹೆಗ್ಗಡೆ,
ಪೇಜಾವರ
ಶ್ರೀಗಳು,
ಸಿದ್ಧಗಂಗಾ
ಶ್ರೀ,
ಶ್ರೀ
ರವಿಶಂಕರ್
ಸೇರಿದಂತೆ
ಕರ್ನಾಟಕದ
ಸ್ವಾಮೀಜಿಗಳ
ಕುರಿತು
ನೂರೆಂಟು
ಮಾತು.
- ವಿಶ್ವೇಶ್ವರ ಭಟ್
ಹಾಗೆಂದು ಕೆಲ ತಿಂಗಳುಗಳ ಹಿಂದೆ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಹೇಳಿದ್ದರು. ಇದು ಅಕ್ಷರಶಃ ನಿಜ ಕೂಡ. ರಾಜ್ಯದ ಕೆಲವು ಮಠಾಧೀಶರು ಎಷ್ಟೊಂದು ವಿಶ್ವಾಸ, ಪ್ರಭಾವ ಬೆಳೆಸಿಕೊಂಡಿದ್ದಾರೆಂದರೆ ಅವರು ರಾಷ್ಟ್ರಪತಿ, ಪ್ರಧಾನಿಯನ್ನು ನೇರವಾಗಿ ಫೋನಿನಲ್ಲಿ ಸಂಪರ್ಕಿಸಿ ಮಾತಾಡಬಲ್ಲರು. ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿಯವರು ವಾಜಪೇಯಿ ಪ್ರಧಾನಿಯಾಗಿದ್ದಾಗ ನೇರವಾಗಿ ಮಾತಾಡುತ್ತಿದ್ದರು. ಪ್ರಧಾನಿ ಮನೆಗೆ ಅವರಿಗೆ ಮುಕ್ತ ಪ್ರವೇಶವಿತ್ತು. ಅಡ್ವಾಣಿಯವರೊಂದಿಗೆ ಸಹ ಅವರದೊಂದು ಸಲುಗೆಯಿತ್ತು.
ಅದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿಯವರಾಗಲಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಾಗಲಿ, ಸಿದ್ಧಗಂಗಾ ಮಠಾಧೀಶರಾಗಲಿ ರಾಷ್ಟ್ರಪತಿ, ಪ್ರಧಾನಿಯವರ ಉಪಸ್ಥಿತಿಯಿಲ್ಲದೇ ತಮ್ಮ ಮಠದ ಯಾವ ಕಾರ್ಯಕ್ರಮವನ್ನೂ ಮಾಡುವುದಿಲ್ಲ. ಶಿಷ್ಟಾಚಾರದಂತೆ ರಾಷ್ಟ್ರಪತಿಯವರು ಪದೇ ಪದೇ ಒಂದೇ ಮಠಕ್ಕೆ ಹೋಗುವುದಿಲ್ಲ. ಅದರೆ ನಮ್ಮ ಮಠಾಧೀಶರು ಕರೆದರೆ ಇಲ್ಲ ಅಂತ ಹೇಳುವುದಿಲ್ಲ. ಅದಿಚುಂಚನಗಿರಿ ಶ್ರೀಗಳು ಬೆಳ್ಳೂರು ಕ್ರಾಸ್ (ಬಿಜಿ ನಗರ) ಸನಿಹ ಒಂದು ಮೆಡಿಕಲ್ ಕಾಲೇಜು ಕಟ್ಟಿಸಿದ್ದಾರೆ. ಅದರ ಶಂಕುಸ್ಥಾಪನೆಗೆ ಬಂದಿದ್ದ ರಾಷ್ಟ್ರಪತಿಯವರು ಹನ್ನೊಂದು ತಿಂಗಳೊಳಗೆ ಕಟ್ಟಡ ನಿರ್ಮಾಣ ಪೂರ್ಣಗೊಂಡಾಗ ಅದರ ಉದ್ಘಾಟನೆಗೂ ಬಂದಿದ್ದರು!
ಇನ್ನು ಶ್ರೀ ಶ್ರೀ ರವಿಶಂಕರ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆಯವರು ಕರೆದರೆ ಯಾರೂ ಒಲ್ಲೆ ಅನ್ನೋದಿಲ್ಲ. ಅದೇ ತಮ್ಮ ಸೌಭಾಗ್ಯವೆಂದು ಬಂದು ಹೋಗುತ್ತಾರೆ. ಕೇವಲ ಧಾರ್ಮಿಕ ಚಟುವಟಿಕೆಯಲ್ಲೇ ನಿರತರಾಗಿರುವ ಶೃಂಗೇರಿ ಶ್ರೀಗಳನ್ನು ರಾಷ್ಟ್ರನಾಯಕರೇ ಸಂಪರ್ಕಿಸಿ ಮಹತ್ವದ ವಿಷಯಗಳಿಗೆ ಸಂಬಂಧಪಟ್ಟಂತೆ ಸಲಹೆ, ಮಾರ್ಗದರ್ಶನ ಪಡೆಯುವುದುಂಟು.
ಅದರೆ ಕರ್ನಾಟಕದ ಮಠಾಧೀಶರು ತೀರಾ ಸಾಯಿಬಾಬಾ ಅವರಂತೆ ಒಳಮನೆಗೆ ರಾಷ್ಟ್ರ ನಾಯಕರನ್ನು ಕರೆಸಿಕೊಂಡು ರಾಜಕೀಯ ಚರ್ಚಿಸಿದವರಲ್ಲ. ಪವರ್ ಬ್ರೋಕರಿಕೆಯನ್ನು ಮಾಡಿದವರಲ್ಲ. ಈ ಎಲ್ಲ ‘ಉಸಾಬರಿ’ಯಿಂದ ಸುರಕ್ಷಿತ ಅಂತರ ಕಾಪಾಡಿಕೊಂಡು ಬಂದಿದ್ದಾರೆ.
ನರಸಿಂಹರಾವ್ ಪ್ರಧಾನಿಯಾಗಿದ್ದಾಗ, ಎಸ್.ಬಿ. ಚವಾಣ್ ಗೃಹ ಸಚಿವರಾಗಿದ್ದಾಗ ಪುಟ್ಟಪರ್ತಿಯ ಸಾಯಿಬಾಬಾ ಅನುಯಾಯಿಗಳಿಗೂ ಬೇಸರವಾಗುವಷ್ಟು ಸಲ ಅಲ್ಲಿಗೆ ಬಂದು ಹೋಗಿದ್ದಾರೆ. ತಿಂಗಳಿಗೊಮ್ಮೆ ಬರದಿದ್ದರೆ ಚವಾಣ್ಗೆ ಸಮಾಧಾನವಾಗುತ್ತಿರಲಿಲ್ಲ . ಪ್ರತಿದಿನ ಸಾಯಿಬಾಬಾ ಜತೆ ಮಾತಾಡುತ್ತಿದ್ದರು. ಇನ್ನು ಬಾಬಾ ಅವೆಷ್ಟು ಸಲ ಫೋನ್ ಮಾಡುತ್ತಿದ್ದರೋ? ಪುಟ್ಟಪರ್ತಿ ಅರ್ಧಕರ್ಧ ಉದ್ಧಾರವಾಗಿದ್ದು ಈ ಅತಿಗಣ್ಯರ ಅಗಮನದಿಂದಲೇ. ಹಾಗಂತ ನಮ್ಮ ಮಠಾಧೀಶರಾರೂ ತಮ್ಮ ಸಲುಗೆ ಸಾಮಿಪ್ಯವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಒಂದು ಚೆಂದವೆನಿಸುವ ಸಂಬಂಧವನ್ನು ಇಟ್ಟುಕೊಂಡಿದ್ದಾರೆ.