ಬೆಂಗಳೂರಿನ ಬೀಡಾಡಿ ನಾಯಿಯನ್ನು ಅವರು ಮ್ಯೂನಿಚ್ಗೆ ಕರೆಸಿಕೊಂಡರು!
ನಾಯಿ
ಕಳೆದುಕೊಂಡವರನ್ನು,
ಧಣಿ
ಕಳೆದುಕೊಂಡ
ನಾಯಿಯನ್ನು
ಸಂತೈಸುವುದು
ಸುಲಭದ
ಮಾತಲ್ಲ.
ನಾಯಿಯನ್ನು
ಮನೆ
ಮಕ್ಕಳಂತೆ
ಸಾಕಿದವರಿಗೆ
ಮಾತ್ರ
‘ನಾಯಿ
ಪ್ರೇಮ’
ಅರ್ಥವಾಗಲು
ಸಾಧ್ಯ!
- ವಿಶ್ವೇಶ್ವರ ಭಟ್
ಒಂದು ಕ್ಷಣ ಮನಸ್ಸು ಚಡಪಡಿಸಿತು. ವೃದ್ಧ ತಾಯಿಯ ನಿಧನಕ್ಕೆ ಅವರು ಅದೆಷ್ಟು ರೋದಿಸುತ್ತಿರಬಹುದೆನಿಸಿತು. ಅವರಿಗೆ ಮೊದಲಿನಿಂದಲೂ ತಾಯಿಯೆಂದರೆ ಪ್ರಾಣ. ಆಕೆಯನ್ನು ಬಿಟ್ಟು ಎಂದೂ ಉಳಿದವರಲ್ಲ. ಆಕೆಗಾಗಿ ಮದುವೆಯನ್ನೂ ಆದವರಲ್ಲ. ಹೆಂಡತಿ ಬಂದರೆ ತಾಯಿ ಮೇಲಿನ ಮಮತೆ ಕಡಿಮೆಯಾಗಬಹುದೆಂಬ ವಿಚಿತ್ರ ಆತಂಕ ಅವರನ್ನು ಕಾಡಿದ್ದಿರಬೇಕು. ಹೀಗಾಗಿ ಮದುವೆಯೆಂದರೆ ಒಲ್ಲೆ ಎನ್ನುತ್ತಿದ್ದರು. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೈತುಂಬಾ ಕೆಲಸ, ಕಿಸೆ ತುಂಬಾ ಸಂಬಳ, ವಿದೇಶ ಪ್ರಯಾಣ, ಬೆಂಗಳೂರಿನಲ್ಲೊಂದು ಭವ್ಯ ಮನೆ, ಕಾರು, ಆಳುಕಾಳು, ಮನಸ್ಸಿನ ತುಂಬಾ ತಂಗಾಳಿಯಂಥ ನೆಮ್ಮದಿ, ಹಿಮ ಕಂಡಷ್ಟು ಆನಂದ ಅವರದ್ದಾಗಿತ್ತು. ಕೊರಗಲು ಅವರಲ್ಲಿ ಜಾಗವಿರಲಿಲ್ಲ.
ಆರು ವರ್ಷಗಳ ಹಿಂದೆ ಕಾರಿನಡಿಯಲ್ಲಿ ಸಿಕ್ಕ ನಾಯಿಯಾಂದನ್ನು ಮನೆಗೆ ತಂದು ಆರೈಕೆ ಮಾಡಿ, ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ಮಾಡಿಸಿ, ಗುಣಮುಖವಾದ ಬಳಿಕ ಮನೆಯಲ್ಲೇ ತಂದಿರಿಸಿಕೊಂಡಿದ್ದರು. ಆಫೀಸಿಗೆ ಹೋಗುವಾಗ, ಬರುವಾಗ ಆಸ್ಪತ್ರೆಗೆ ಭೇಟಿ ನೀಡಿ ನಾಯಿಯ ಆರೋಗ್ಯ ವಿಚಾರಿಸುತ್ತಿದ್ದರು. ವೈದ್ಯರು ನಾಯಿಯ ಮುಂದಿನ ಎಡಗಾಲಿಗೆ ಸ್ಟೀಲಿನ ಸಲಾಕೆ ಹಾಕಿದ್ದರು. ಆ ನಾಯಿ ಎಂದಿನಂತೆ ಓಡಾಡಲು ಆರಂಭಿಸಿದ ಬಳಿಕ ಮನೆಗೆ ತಂದು ಪ್ರೀತಿಯಿಂದ ಸಾಕಲಾರಂಭಿಸಿದ್ದರು. ಆ ಹೆಣ್ಣು ನಾಯಿಗೆ ‘ಸಿಹಿ’ ಎಂದು ಹೆಸರಿಸಿದ್ದರು. ಅದು ಜಾತಿ ನಾಯಿಯೋ?, ನಾಯಿ ಜಾತಿಯೋ ಎಂಬ ಯಾವ ಸಂಗತಿಯನ್ನು ಗಮನಿಸದೇ ಮನೆಯ ಅಕ್ಕರೆಯ ಸದಸ್ಯನಂತೆ ಸಾಕಲಾರಂಭಿಸಿದ್ದರು.
ತಾಯಿಗೂ ಅಷ್ಟೇ ಸಿರಿ ಅಂದ್ರೆ ಮುಗೀತು. ಒಂದು ಕ್ಷಣ ಅದು ನಾಯಿ ಎಂಬುದನ್ನು ಮನಸ್ಸಿನಿಂದ ತೆಗೆದುಹಾಕಿದರೆ, ಮಾತಾಡಲು ಬರೊಲ್ಲ ಎಂಬುದನ್ನು ಒಂದು ಕ್ಷಣ ಮರೆತರೆ ಅದು ಥೇಟು ಮನುಷ್ಯರಂತೆ. ಅದಕ್ಕೆ ಎಲ್ಲವೂ ತಿಳಿಯುತ್ತಿತ್ತು ಹಾಗೂ ಎಲ್ಲವನ್ನೂ ತಿಳಿದುಕೊಳ್ಳುತ್ತಿತ್ತು. ಅವರ ಮನೆಗೆ ಹೋದರೆ ‘ಸಿರಿ’ಯ ಮುನ್ನುಡಿಯಿಲ್ಲದೇ, ಮುಂದಡಿಯಿಲ್ಲದೇ ಏನೂ ಆರಂಭವಾಗುತ್ತಿರಲಿಲ್ಲ. ಸಿರಿಗಾಗಿ ಒಂದು ರೂಮು, ಅಲ್ಲೊಂದು ಪಲ್ಲಂಗ, ಹಾಸಿಗೆ, ಅದಕ್ಕಾಗಿ ಡ್ರೆಸ್ಸು, ಡ್ರೆಸ್ಸಿಗಾಗಿ ವಾರ್ಟ್ರೋಬ್, ಅದರೊಳಗೆ ಬಗೆಬಗೆಯ ತಿಂಡಿ ತಿನಿಸು..
ಆಫೀಸಿನಿಂದ ಮನೆಗೆ ಫೋನ್ ಮಾಡಿ ತಾಯಿ ಹಾಗೂ ನಾಯಿ ಯೋಗಕ್ಷೇಮಗಳನ್ನು ಕನಿಷ್ಠ ಎರಡು ಸಲ ವಿಚಾರಿಸಿಕೊಳ್ಳದಿದ್ದರೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ.
ಇಷ್ಟು ಪೀಠಿಕೆ ಹಾಕಿ ಕಥೆಯನ್ನು ಸ್ವಲ್ಪ ಫಾಸ್ಟ್-ಪಾರ್ವರ್ಡ್ ಮಾಡುತ್ತೇನೆ.
ಈ ಮಧ್ಯೆ ತಾಯಿ ವರಾತ ಜಾಸ್ತಿಯಾಗತೊಡಗಿತು. ಕೊನೆಗೆ ತಮ್ಮ ನಲವತ್ತೆರಡನೆ ವಯಸ್ಸಿನಲ್ಲಿ ಮದುವೆಯಾದರು. ಅದಾದ ನಂತರ ಲಂಡನ್ಗೆ ಹೋಗಲೇಬೇಕಾಗಿ ಬಂದಿತು. ಆ ಅವಕಾಶವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಕೆಲ ಮಾರ್ಗ ಹುಡುಕಿದರು. ಕೊನೆಗೆ ಬಾಸ್ನ ಒತ್ತಾಯದ ಮೇರೆಗೆ ಲಂಡನ್ಗೆ ಹೋಗುವುದು ಅನಿವಾರ್ಯವಾಯಿತು. ಪ್ರೀತಿಯ ತಾಯಿ ಮತ್ತು ಮುದ್ದಿನ ನಾಯಿ ಬಿಟ್ಟು ಹೋಗುವ ಸಂಕಟ. ಬೇರೆ ದಾರಿಯಿಲ್ಲದೇ ಹೆಂಡತಿ ಜತೆ ಲಂಡನ್ಗೆ ಹೊರಟು ನಿಂತಾಗ ನಾವೆಲ್ಲ ಸ್ನೇಹಿತರು ಏರ್ಫೋರ್ಟ್ ತನಕ ಹೋಗಿ ಬೀಳ್ಕೊಟ್ಟು ಬಂದಿದ್ದೆವು. ಹೋಗುವ ಮುನ್ನ ತಾಯಿ ಹಾಗೂ ಸಿರಿಯನ್ನು ಎದೆಗೆ ಹಚ್ಚಿಕೊಂಡು ಚಿಕ್ಕ ಮಗುವಿನಂತೆ ಅಳುತ್ತಿದ್ದರು.