ಪಾಳುಬಿದ್ದ ಮುಳ್ಳು ಕಂಟಿಗಳ ಊರಲ್ಲಿ ಮಹಾಯೋಧನ ನೆನೆಯುತ್ತಾ ...
ವಿಶ್ವೇಶ್ವರ
ಭಟ್ [email protected] |
ಮೊನ್ನೆ ಬಾಗಲಕೋಟೆಗೆ ಹೋದಾಗ ಸ್ನೇಹಿತ ಡಾ. ಬಂಡು ಕುಲಕರ್ಣಿಯವರು ಕನ್ನಡಿಗರು ಮರೆತ ವೀರ ಸೇನಾನಿಯ ಮನೆಯ ಮುಂದೆ ನಿಂತು ಈ ಮಾತನ್ನು ಹೇಳಿದಾಗ ಅಚ್ಚರಿಯಾಯಿತು.
ಅಂದು ನಾವು ಬಾಗಲಕೋಟೆಯಿಂದ ಕೇವಲ 23 ಕಿ.ಮೀ. ದೂರದಲ್ಲಿರುವ ಈ ವೀರ ಸೇನಾನಿಯ ಊರಿನ ಅಂಗಳದಲ್ಲಿ ನಿಂತಿದ್ದೆವು. ಅದು ಸುಮಾರು ಐದಾರು ಸಾವಿರ ಜನರಿರುವ ಊರು. ನೀರಿಲ್ಲದ ನೆಲದಲ್ಲಿ ಕೃಷಿಯೇ ಜೀವನಕ್ಕೆ ಆಧಾರ. ಊರ ತುಂಬಾ ರಾಕ್ಷಸನ ಕೋರೆ ಹಲ್ಲುಗಳಂತಿರುವ ಹರಡಿದ ಮುಳ್ಳುಕಂಟಿಗಳು. ಹೆಚ್ಚು ಸದ್ದು ಗದ್ದಲವಿಲ್ಲ. ಅಲ್ಲಲ್ಲಿ ಕಾಣುವ ಬಡಕಲು ಜಾನುವಾರಗಳು. ಊರಲ್ಲೆಲ್ಲ ವ್ಯಾಪಿಸಿದ ಬರಡು ನೆಲ, ಬಿರು ಬಿಸಿಲು.
ಈ ಊರಿಗೆ ಬೇವೂರು ಅಂತಾರೆ.
ಭಾರತದ ಸೇನಾ ಮಹಾದಂಡನಾಯಕರೊಬ್ಬರ ಮೂಲ ನೆಲೆ ಇದೇ ಊರು. ಜನರಲ್ ಕೆ.ಎಂ. ಕಾರಿಯಪ್ಪ ಹಾಗೂ ಕೆ.ಎಸ್. ತಿಮ್ಮಯ್ಯ ನಂತರ ಈ ಸ್ಥಾನಕ್ಕೇರಿದ ಮೂರನೇ ಕನ್ನಡಿಗ ಜನರಲ್ ಗೋಪಾಲ್ ಗುರುನಾಥ (ಕುಲಕರ್ಣಿ) ಬೇವೂರ ಅವರ ಜನ್ಮತಾಣ. ಈಗಲೂ ಈ ಊರಿನ ಹೆಸರು ಹೊರ ಜಗತ್ತಿಗೆ ಪರಿಚಿತವಾಗಿರುವುದು ಅವರ ಅಡ್ಡ ಹೆಸರಿನ ಮೂಲಕ. ಅವರು ನಿಧನರಾಗಿದ್ದರೂ ಈ ಊರು ಜನರ ಮನಸ್ಸಿನಲ್ಲಿ ಜೀವಂತವಾಗಿರುವುದು ಕೂಡ ಅವರ ಹೆಸರಿನಿಂದಾಗಿಯೇ.
ಕಾರಿಯಪ್ಪ, ತಿಮ್ಮಯ್ಯ ಅವರ ಹೆಸರಿನಲ್ಲಿ ರಸ್ತೆ, ಮೋರಿ, ಶಾಲೆ, ಕಾಲೇಜು, ಟ್ಯಾಂಕು, ಕೊಳಾಯಿಗಳೆಲ್ಲ ಇವೆ. ಇವರ ಹೆಸರುಗಳನ್ನು ಇಡದ ಜಾಗಗಳಿಲ್ಲ. ತಪ್ಪಿಲ್ಲ ಬಿಡಿ. ಆದರೆ ಇವರಂತೆ ಸಾಧನೆ ಮಾಡಿದ, ಅದೇ ಸ್ಥಾನಕ್ಕೇರಿದ ಮತ್ತೊಬ್ಬರ ವೀರ ಸೇನಾನಿಯನ್ನು ನಾವು ಉದಾಸೀನ ಮಾಡಿದ್ದೇವೆ. ಅಷ್ಟೇ ಅಲ್ಲ ಅವರ ನೆನಪಿನ ತಾಯಿ ಬೇರಿನ ಕೊನೆಯ ತಂತುವನ್ನು ಸಹ ಕಿತ್ತು ಬಿಸಾಕಿದ್ದೇವೆ. ಬೇಕಾದರೆ ಯಾರನ್ನಾದರೂ ಕೇಳಿ, ಭಾರತದ ಸೇನಾ ವರಿಷ್ಟರಾದವರ ಹೆಸರುಗಳನ್ನು ಹೇಳಿ ಎಂದು. ಅವರು ತಟ್ಟನೆ ಕಾರಿಯಪ್ಪ ಹಾಗೂ ತಿಮ್ಮಯ್ಯನವರ ಹೆಸರುಗಳನ್ನು ಹೇಳಿ ಅಲ್ಲಿಯೇ ನಿಲ್ಲುತ್ತಾರೆ. ಇದೇ ಸ್ಥಾನದಲ್ಲಿ ಮೂರನೆಯವರೊಬ್ಬರಿದ್ದರು ಎಂದು ಹೇಳಿದರೆ ನಿಮ್ಮ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಇಡುತ್ತಾರೆ. ಅದಿರಲಿ, ಜನರಲ್ ಜಿ.ಜಿ. ಬೇವೂರ ಅಂತ ಇದ್ದರು ಗೊತ್ತಾ ಅಂತ ಕೇಳಿ ನೋಡಿ. ಆಗಲೂ ಆ ಚಿಹ್ನೆಯಿಂದ ಹೊರ ಬಂದಿರುವುದಿಲ್ಲ.
ಬೇವೂರರನ್ನು ನಾವು ಮರೆವಿನ ಡಬರು ಡಬ್ಬದಲ್ಲಿ ಹಾಕಿ ಬೀಗ ಜಡಿದುಬಿಟ್ಟಿದ್ದೇವೆ. ಕಾಟಾಚಾರಕ್ಕಾದರೂ ವರ್ಷಕ್ಕೊಮ್ಮೆ ನಾಡಿನ ಜನತೆ ಅವರನ್ನು ನೆನಪಿಸಿಕೊಳ್ಳುವುದಿಲ್ಲ. ಬೇವೂರು ಇರಲಿ, ಬೇರೆ ಊರುಗಳಲ್ಲಿ ಸಹ ನಾವು ಅವರ ಸ್ಮರಣೆಗೆಂದು ಪುಟ್ಟ ಸೈಜುಗಲ್ಲಿನ ಸಣ್ಣ ಸ್ಮಾರಕ ಕೂಡ ಕಟ್ಟಿಲ್ಲ. ಹಾಗಂತ ಹರ್ಯಾಣ ಹಾಗೂ ಡೆಹ್ರಾಡೂನ್ನಲ್ಲಿ ಇವರ ಸ್ಮಾರಕಗಳಿವೆ.
ನಾವು ಸಣ್ಣ ಸಂಗತಿ, ಸಣ್ಣ ವ್ಯಕ್ತಿಗಳಷ್ಟನ್ನೇ ಅಲ್ಲ, ದೊಡ್ಡ ವ್ಯಕ್ತಿಗಳನ್ನು ಸಹ ನಿರ್ದಾಕ್ಷಿಣ್ಯವಾಗಿ ಹೀಗೇ ಯಕಃಶ್ಚಿತವಾಗಿ ಮರೆತು ನಮ್ಮ ಪಾಡಿಗೆ ನಾವಿದ್ದುಬಿಡುತ್ತೇವೆ.
ಅಂದು ಆ ಬಿರುಬಿಸಿಲಿನ ಹಾಸಿನಲ್ಲಿ ಬೇವೂರೆಂಬ ಮಣ್ಣಿನ ನೆಲದಲ್ಲಿ, ಆ ಬೇವೂರ ಎಂಬ ಮಹಾನ್ ಸೇನಾನಿಯ ಮನೆಯ ಮುಂದೆ ನಿಂತಾಗ ಕಣ್ಣಿಗೆ ಕಟ್ಟುವುದು ಕುಳುಂಪೆ, ಹಾಳು ಕೊಂಪೆ, ಒಂದು ಕಾಲದಲ್ಲಿ ಬೇವೂರರ ತಂದೆ, ತಾಯಿ, ತಾತ, ಮುತ್ತಾತ ಬದುಕಿ ಬಾಳಿದ ಮನೆ, ತನ್ನೆಲ್ಲ ಅಂಗಾಂಗಗಳನ್ನು ಕಳೆದುಕೊಂಡು ನಗ್ನವಾಗಿ ನಿಂತಿದೆ. ನಾವೆಷ್ಟು ನಿಷ್ಕರುಣಿಗಳೆಂದರೆ ಆ ವೀರಯೋಧನ ನೆನಪನ್ನು ಮೂಡಿಸದಂತೆ ನಮ್ಮ ಸ್ಮೃತಿಪಟಲದಿಂದ ಗುಡಿಸಿಹಾಕಿದ್ದೇವೆ.
ಈ ಬೇವೂರಿವ ಮಣ್ಣಿನಲ್ಲಿ ಅದೆಂಥ ಮಹಾತ್ಮೆಯಿದೆಯೋ ಗೊತ್ತಿಲ್ಲ. ಜನರಲ್ ಜಿ.ಜಿ. ಬೇವೂರ ಅವರ ತಂದೆ ಗುರುನಾಥ ಬೇವೂರ ಹೆಸರನ್ನು ಅದೆಷ್ಟು ಜನ ಬಲ್ಲರೋ ಗೊತ್ತಿಲ್ಲ. ಇವರು ಭಾರತದ ಪ್ರಪ್ರಥಮ ಪೋಸ್ಟ್ ಮಾಸ್ಟರ್ ಜನರಲ್ ಹಾಗೂ ಡೈರೆಕ್ಟರ್ ಜನರಲ್ ಆಗಿದ್ದರು. ಏಳು ವರ್ಷಗಳ (1934-1941) ಕಾಲ ಈ ಹುದ್ದೆಯಲ್ಲಿದ್ದರು. ಇವರು ಬೇವೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಬಂಗಾರ ಪದಕದೊಂದಿಗೆ ಪದವಿ ಪಡೆದು, ಕೇಂಬ್ರಿಜ್ ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣ ಹೊಂದಿದವರು. 1912ರಲ್ಲಿಯೇ ಇಂಡಿಯನ್ ಸಿವಿಲ್ ಸರ್ವೀಸ್ ಸೇರಿದವರು. ಅಂಚೆ ಹಾಗೂ ತಂತಿ ಇಲಾಖೆಯಲ್ಲಿ ಬ್ರಿಟಿಷ್ ಸರಕಾರದಲ್ಲಿ ಉನ್ನತ ಕಾರ್ಯದರ್ಶಿಯಾದವರು. ಬ್ರಿಟಿಷ್ ವೈಸರಾಯ್ ಅವರ ನೀತಿ ನಿರೂಪಕ ಮಂಡಲಿಯ ಸದಸ್ಯರೂ ಆಗಿದ್ದ ಬೇವೂರರನ್ನು ಇಂಗ್ಲೆಡಿನ ರಾಣಿ ತನ್ನ ಅರಮನೆಗೆ ಕರೆಯಿಸಿಕೊಂಡು ಸನ್ಮಾನ ಮಾಡಿದ್ದಳು. ಅಂಚೆ ಕಚೇರಿಗಳ ಕಾರ್ಯವೈಖರಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಕಂಡುಹಿಡಿದ ಸೂತ್ರ- ಬೇವೂರ ಟೈಂ ಟೆಸ್ಟ್- ಇಂದಿಗೂ ಕೂಡ ಒಂದು ಅಮೂಲ್ಯ ಕೊಡುಗೆಯಾಗಿ, ಮಾದರಿಯಾಗಿ ಉಳಿದಿದೆ.
ಈ ಗುರುನಾಥ ಬೇವೂರರಿಗೆ ಇಬ್ಬರು ಗಂಡುಮಕ್ಕಳು- ಗೋಪಾಲ ಹಾಗೂ ಮಾಧವ. ಗೋಪಾಲ ಸೇನಾ ಮಹಾದಂಡನಾಯಕರಾದರೆ, ಮಾಧವ ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದರು. ಎರಡನೆಯ ಮಹಾಯುದ್ಧದಲ್ಲಿ ಸೆಣಸುವಾಗಲೇ ಗುಂಡಿಗೆ ಬಲಿಯಾದರು.
ಗುರುನಾಥ ಬೇವೂರರು ಪುಣೆಯಲ್ಲಿ ವಾಸವಾದ ಬಳಿಕ ಹುಟ್ಟಿದ ತಮ್ಮಿಬ್ಬರು ಮಕ್ಕಳನ್ನು ವರ್ಷಕ್ಕೊಮ್ಮೆಯಾದರೂ ಕರೆದುಕೊಂಡು ಬೇವೂರಿಗೆ ಬರುತ್ತಿದ್ದರು. ಒಂದೆರಡು ದಿನ ಉಳಿದು, ಊರಿನ ಜನರೊಂದಿಗೆ ಕೆಲಕಾಲ ಕಳೆದು ಹೋಗುತ್ತಿದ್ದರು. ಅವರಿಗೆ ಬೇವೂರಿನ ಬಗ್ಗೆ ಅದೆಂಥ ಮಮತೆಯಿತ್ತೆಂದರೆ ತಮ್ಮ ಅಡ್ಡ ಹೆಸರಾದ ‘ಕುಲಕರ್ಣಿ’ ಯನ್ನು ಬಿಟ್ಟು ಬೇವೂರ ಎಂದು ಬದಲಿಸಿಕೊಂಡಿದ್ದರು. ತಮ್ಮ ಮಕ್ಕಳಿಗೂ ಯಾವುದೇ ಕಾರಣಕ್ಕೆ ಬೇವೂರ ಎಂಬ ಹೆಸರನ್ನು ಬದಲಿಸದಂತೆ ತಾಕೀತು ಮಾಡಿದ್ದರು. ಗೋಪಾಲ ಬೇವೂರ ಅವರು ಸೇನೆಗೆ ಸೇರುವ ಹೊತ್ತಿಗೆ ಅವರಿಗಿದ್ದ ಕರ್ನಾಟಕದ ಸಂಬಂಧವೆಂದರೆ ವರ್ಷಕ್ಕೊಮ್ಮೆ ತಂದೆ-ತಾಯಿ ಜತೆ ಬೇವೂರಿಗೆ ಬರುವುದು. ಅವರು ಹುಟ್ಟೂರಿನ ಸಂಬಂಧವನ್ನು ಕೊನೆಯ ತನಕವೂ ಉಳಿಸಿಕೊಂಡು ಬಂದರು.
ಜನರಲ್ ಜಿ.ಜಿ. ಬೇವೂರ ಅವರ ಹೆಸರನ್ನು ಹೇಳಿದರೆ ಸೇನಾಶಿಬಿರದಲ್ಲಿನ ಸೈನಿಕನ ಮೈಮನಗಳಲ್ಲಿ ಒಂದು ಗೌರವದ ಕಂಪನ ಮೂಡುತ್ತಿತ್ತು. ಮನಸ್ಸು ತಟ್ಟನೆ ಒಂದು ಸಲಾಮು ಹೊಡೆಯುತ್ತಿತ್ತು. ಆರಡಿ ಎತ್ತರದ ಅಜಾನುಬಾಹು, ಗಂಭೀರ ಮುಖಮುದ್ರೆಯ ಜನರಲ್ ಸಾಹೇಬರು ಠಾಕುಠೀಕಾಗಿ ನಡೆದು ಬರುತ್ತಿದ್ದರೆ ಸೈನಿಕರ ಎದೆಯಾಂತರಾಳದಲ್ಲಿ ಒಂದಷ್ಟು ಹೆಮ್ಮೆ, ಗರ್ವ, ದೇಶಭಕ್ತಿ, ಪೊಗರು, ನಿಷ್ಠೆ, ಶ್ರದ್ಧೆ ಪುಟಿದೇಳುತ್ತಿತ್ತು. ಮೆಲ್ಲಮೆದು ದನಿಯಲ್ಲಿ ಗುಡುಗನ್ನಾದರೂ ಎದುರಿಸುವ ಸಂಯಮ, ವಿವೇಕ ಹೊಂದಿದ್ದ ಬೇವೂರರು ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಮೆರೆಯುತ್ತಿದ್ದ ತಾಳ್ಮೆ ಇಂದಿಗೂ ಹಳೆ ಫೌಜಿಗಳ ಪಾಳೆಯದಲ್ಲಿ ದಂತೆಕತೆಯೇ. ಸಾಮಾನ್ಯ ಸೈನಿಕನ ಅಂತಃಕರಣವನ್ನು ಸಹ ಮೀಟುವ ಸೂಕ್ಷ್ಮ ಮನಸ್ಸು ಅವರದಾಗಿತ್ತು. ಆಗ ತಾನೆ ಪಾಕಿಸ್ತಾನದೊಂದಿಗಿನ ಯುದ್ಧ ನಿಂತಿತ್ತು. ಸೇನಾವರಿಷ್ಠರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭೇಟಿ ಮಾಡಿದ ಪತ್ರಕರ್ತರು‘ನಿಮ್ಮ ತುರ್ತು ಕ್ರಮವೇನು?’ ಎಂದು ಕೇಳಿದಾಗ, ‘ಗಡಿಯಿಂದ ಆದಷ್ಟು ಬೇಗ ಸೇನೆಯನ್ನು ವಾಪಸ್ ಕರೆಯಿಸಿ, ಅವರಿಗೆ ತಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳೊಂದಿಗೆ ಕೆಲಕಾಲ ಕಳೆಯಲು ಅವಕಾಶ ಕಲ್ಪಿಸುವುದು ’ ಎಂದು ಹೇಳಿದ್ದರು.
ಮಾನವೀಯ ಮನಸ್ಸಿನ ಬೇವೂರ್ ಯುದ್ಧ ಭೂಮಿಯಲ್ಲಿ ಅಡಿಯಿಟ್ಟರೆ ಕೆರಳಿದ ಸಿಂಹ.
ಬಲೂಚಿ ರೆಜಿಮೆಂಟ್ನ ಕಮೀಷನ್ಡ್ ಹುದ್ದೆಯ ಮೂಲಕ ಸೇನೆಯನ್ನು ಸೇರಿದ ಬೇವೂರ ಬಹಳ ಬೇಗ ತಮ್ಮ ಕಾರ್ಯಕ್ಷಮತೆಯಿಂದ ಮೇಲುಮೇಲಕ್ಕೆ ಬಂದರು. ದ್ವಿತೀಯ ಮಹಾ ಯುದ್ಧದ ಸಂದರ್ಭದಲ್ಲಿ ಬರ್ಮಾದಲ್ಲಿ ನಡೆದ ಸಮರದಲ್ಲಿ ಬೇವೂರ ಬಲೂಚಿ ರೆಜಿಮೆಂಟ್ನ ನಾಯಕರಾಗಿ ಸೇನೆಯನ್ನು ಮುನ್ನಡೆಸಿದ ವೈಖರಿಯನ್ನು ಈಗಲೂ ಸೈನಿಕರು ನೆನೆಯುತ್ತಾರೆ. ಸಾಹಸಕ್ಕೆ ಹೆಸರಾದ ಡೋಗ್ರಾ ರೆಜಿಮೆಂಟಿನ ಲೆಫ್ಟಿನೆಂಟ್ ಕರ್ನಲ್ ಆಗಿ ಕಾಶ್ಮೀರ ಕಾರ್ಯಾಚರಣೆಯಲ್ಲಿನ ಇವರ ಪಾತ್ರ ಅಮೋಘವಾದುದು.
ಬೇವೂರರಲ್ಲಿನ ನಿಜವಾದ ಯೋಧ ಬೆಳಕಿಗೆ ಬಂದಿದ್ದು 1971 ರ ಬಾಂಗ್ಲಾ ಯುದ್ಧದ ಸಂದರ್ಭದಲ್ಲಿ. ಪಾಕ್ಸೈನಿಕರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಮುಕ್ತಿ ವಾಹಿನಿ ಪರವಾಗಿ ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಅನಿವಾರ್ಯವಾಗಿ ಭಾರತೀಯ ಸೇನೆ ಪ್ರವೇಶಿಸುವಂತಾದಾಗ ಬೇವೂರರು ಪಶ್ಚಿಮ ಪಾಕಿಸ್ತಾನದೆಡೆ ನುಗ್ಗಿದ ಸೇನಾ ತುಕಡಿಯ ಮುಖ್ಯಸ್ಥರಾಗಿ ಮೆರೆದ ಶೌರ್ಯ, ಅವರಿಗೆ ರಾಷ್ಟ್ರಮಟ್ಟದ ಮನ್ನಣೆಯನ್ನು ತಂದುಕೊಟ್ಟಿತು. ಸುಮಾರು 90 ಸಾವಿರ ಪಾಕ್ ಸೈನಿಕರು ಶರಣಾಗತರಾಗುವಂತೆ ಮಾಡಿದ ಹೆಗ್ಗಳಿಕೆ ಅವರದು. ಈ ಸಂದರ್ಭದಲ್ಲಿ ಸೇನಾ ಮಹಾದಂಡನಾಯಕರಾಗಿದ್ದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಜನರಲ್ ಬೇವೂರರನ್ನು ಬಿಗಿದಪ್ಪಿ ಪ್ರಶಂಸಿಸಿದ ಚಿತ್ರ ಡೆಹ್ರಾಡೂನ್ನಲ್ಲಿರುವ ಸೈನಿಕ ತರಬೇತಿ ಕಾಲೇಜಿನಿಂದ ಬರುವ ಸೈನಿಕರ ಚಿತ್ತ ಭಿತ್ತಿಯಲ್ಲಿ ಇಂದಿಗೂ ರೋಮಾಂಚನ ಹುಟ್ಟಿಸುತ್ತದೆ.
ಬೇವೂರರ ಸೇವಾನಿಷ್ಠೆ ಇಂದಿಗೂ ಜನಜನಿತ. ಎನ್ಸಿಸಿಯ ಮೊದಲ ಮಹಾನಿರ್ದೇಶಕರೂ ಆಗಿದ್ದ ಜನರಲ್ ಬೇವೂರರ ಅಂಚೆ ಚಿತ್ರವನ್ನು ಹೊರತರಲು ಅಂಚೆ ಇಲಾಖೆ ನಿರ್ಧರಿಸಿತ್ತಂತೆ. ಅವರ ತಂದೆ ಕೂಡ ಅದೇ ಇಲಾಖೆಯಲ್ಲಿ ಉನ್ನತಸ್ಥಾನ ಅಲಂಕರಿಸಿದ್ದನ್ನು ಪ್ರಮುಖ ಕಾರಣವಾಗಿ ಪರಿಗಣಿಸಲಾಯಿತಂತೆ. ಈ ವಿಷಯ ಜನರಲ್ ಸಾಹೇಬರಿಗೆ ಗೊತ್ತಾಯಿತು. ಈ ಕಾರಣಕ್ಕಾದರೆ ದಯವಿಟ್ಟು ನನ್ನ ಅಂಚೆ ಚೀಟಿ ಬೇಡವೇ ಬೇಡ ಎಂದು ಕಟ್ಟುನಿಟ್ಟಾಗಿ ಹೇಳಿ ಅನುಮತಿಯನ್ನೇ ಕೊಡಲಿಲ್ಲವಂತೆ.
ಪದ್ಮವಿಭೂಷಣ ಹಾಗೂ ಪರಮ ವಿಶಿಷ್ಟ ಸೇವಾ ಪದಕಗಳಿಂದ ಪುರಸ್ಕೃತರಾಗಿದ್ದ ಬೇವೂರರ ಮನಸ್ಸು ಅಪ್ಪಟ ಕನ್ನಡ ಕನ್ನಡ! ಕನ್ನಡಿಗರು ಸಿಕ್ಕಾಗ ತಮ್ಮ ಮೂಲ ಊರಾದ ಬೇವೂರಿನ ಬಗ್ಗೆ ವಿಚಾರಿಸುತ್ತಿದ್ದರು. ಸೇನಾ ಮಹಾದಂಡನಾಯಕರಾಗಿ ಮೊದಲ ಬಾರಿಗೆ ಪುಣೆಗೆ ಆಗಮಿಸಿದಾಗ ಅವರಿಗೆ ‘ನಾಗರಿಕ ಸನ್ಮಾನ’ ನೀಡಲಾಯಿತು. ಕಾರ್ಯಕ್ರಮದ ನಿರೂಪಕರು ಜನರಲ್ ಅವರನ್ನು ‘ಮಹಾರಾಷ್ಟ್ರದ ಸುಪುತ್ರ ಭಾರತೀಯ ಸೇನಾ ಜ್ಯೇಷ್ಠ ’ ಎಂದು ಸಂಬೋಧಿಸಿದರು. ತಮ್ಮ ಮಾತು ಬಂದಾಗ ಬೇವೂರರು, ‘ನಾನು ಕರ್ನಾಟಕದ ಸುಪುತ್ರ, ಮಹಾರಾಷ್ಟ್ರದ ಅಳಿಯ’ ಎಂದು ಹೇಳಿದರು!
ಜೀವನದಲ್ಲಿ ಮೇಲಮೇಲಕ್ಕೇರುತ್ತಾ ಹೋದಂತೆ ಕೆಲವರು ತಮ್ಮವರನ್ನು, ತಮ್ಮ ಊರನ್ನು ಮರೆಯುತ್ತಾ ಹೋಗುತ್ತಾರೆ. ತಮ್ಮ ಮೂಲಸೆಲೆಯನ್ನು ಮರೆತು, ತಾವಿರುವ ಸ್ಥಳವನ್ನೇ ಅನುಕೂಲ ನೋಡಿಕೊಂಡು ತಮ್ಮ ಊರೆಂದು ಭಾವಿಸಿಕೊಳ್ಳುತ್ತಾರೆ. ಆಗ ಅವರ ಪಾಲಿಗೆ ಮೂಲ ಊರು ಬೇಡವಾಗಿ, ಸಂಬಂಧದ ಕರುಳಬಳ್ಳಿಗೆ ಕತ್ತರಿ ಬಿದ್ದಿರುತ್ತದೆ.
ಆದರೆ ಜನರಲ್ ಬೇವೂರ ಎಲ್ಲಿಯೇ ಹೋದರೂ ತಾನು ಕರ್ನಾಟಕದವ, ಕನ್ನಡಿಗ ಎಂದು ಮುನ್ನುಡಿ ಹಾಕಿಕೊಳ್ಳುತ್ತಿದ್ದರು. ಇಂಥ ಮನುಷ್ಯನೊಬ್ಬ ಮಹಾದಂಡನಾಯಕನ ಪೋಷಾಕು ಧರಿಸಿ, ಹಲವಾರು ಯುದ್ಧಭೂಮಿಯಲ್ಲಿ ದಾಂಗುಡಿಯಿಟ್ಟು ಕರ್ನಾಟಕದ ಹಿರಿಮೆ, ಗರಿಮೆ ಮೆರೆದಿದ್ದು ಅವರ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸುತ್ತದೆ.
ಆದರೆ ಅವರ ಮನೆಯ ಮುಂದೆ ನಿಂತಾಗ ಅನಿಸಿದ್ದೇ ಬೇರೆ! ಇಂಥ ವ್ಯಕ್ತಿಯನ್ನು ನಾವು ನಡೆಸಿಕೊಂಡಿದ್ದಾದರೂ ಹೇಗೆ? ಬೇವೂರಿನ ಪಾಳುಬಿದ್ದ ಮನೆಯ ಮುಳ್ಳು ಕಂಟಿಗಳ ಮಧ್ಯದಲ್ಲಿ ನಿಂತಾಗ ಜನರಲ್ ಬೇವೂರರ ನೆನಪಿನ ಸರಣಿ ಚಿತ್ರ ಮೂಡಿಬಂತು.
ಕನ್ನಡಿಗರಿಗೆ ಬೆಲ್ಲವಾಗಿದ್ದ ಅವರನ್ನು ನಾವು ಬೇವು ಅಂತ ಭಾವಿಸಿಬಿಟ್ಟೆವಾ?
(ಸ್ನೇಹ ಸೇತು: ವಿಜಯ ಕರ್ನಾಟಕ)