ಯಾವ ರಾಶಿಗೆ ಸಾಡೇಸಾತಿಯಾಗಿ ಕಾಡಲಿದ್ದಾನೆ ಶನಿದೇವ?
ಹೌದು, ಇಷ್ಟು ದಿನ ಅಂದರೆ 2011ರ ನವೆಂಬರ್ನಿಂದ ಮೂರು ವರ್ಷ ಕಾಲ ತುಲಾ ರಾಶಿಯಲ್ಲಿದ್ದ ಶನಿದೇವನು, ಮುಂದಿನ ತಿಂಗಳು ನವೆಂಬರ್ 2ಕ್ಕೆ ತನ್ನ ಶತ್ರು ರಾಶಿ ವೃಶ್ಚಿಕವನ್ನು ಪ್ರವೇಶಿಸಲಿದ್ದಾನೆ. ಸರಿಯಾಗಿ ಒಂದು ತಿಂಗಳ ನಂತರ ಧನಸ್ಸು ರಾಶಿಯವರಿಗೆ ಸಾಡೇಸಾತಿಯಾಗಿ ಶನಿದೇವನು ಹೆಗಲೇರಲಿದ್ದಾನೆ. ಧನಸ್ಸು ರಾಶಿಗೆ ವೃಶ್ಚಿಕವು ಹನ್ನೆರಡನೇ ಮನೆಯಾಗುವುದರಿಂದ ಶನಿದೇವನು ವೃಶ್ಚಿಕಕ್ಕೆ ಬರುತ್ತಿದ್ದಂತೆಯೇ ಧನಸ್ಸು ರಾಶಿಯವರಿಗೆ ಮೊದಲ ಹಂತದ ಏಳರಾಟ ಶುರುವಾಗುತ್ತದೆ.
ಧನಸ್ಸು ರಾಶಿಯವರು, ಏಳರಾಟ ಅನುಭವಿಸಿ ಅದರಿಂದ ಬಿಡುಗಡೆ ಹೊಂದುತ್ತಿರುವ ಕನ್ಯಾ ರಾಶಿಯವರಲ್ಲಿ ಅದರ ಮಹಿಮೆ ಬಗ್ಗೆ ಕೇಳಿ ತಿಳಿದುಕೊಂಡು ಬುದ್ಧಿವಂತರಾಗಬಹುದು. ಶನಿಕಾಟದಿಂದ ಬಚಾವಾಗಬೇಕಿದ್ದರೆ ಹೀಗೆ ಮಾಡಬಹುದು. "ಲೆಟ್ಸ್ ಎಂಜಾಯ್ ಸಾಡೇಸಾತಿ" ಎಂದರೆ ಅನುಭವಿಸಿ.
ಮುಂದಿನ ತಿಂಗಳಿನಿಂದ ಶುರುವಾದ ಶನಿಕಾಟ ಸತತ 9 ವರ್ಷಗಳ ಕಾಲ ಮುಂದುವರೆಯಲಿದೆ. ಅಂದರೆ 2014ರಿಂದ 2023ರ ಜನೆವರಿವರೆಗೆ ಶನಿದೇವನು ಧನಸ್ಸು ರಾಶಿಯವರಿಗೆ ಸಾಡೇಸಾತಿಯಾಗಿ ಕಾಡಲಿದ್ದಾನೆ. ಧನಸ್ಸು ರಾಶಿಯವರು ಹೊಸ ಜೀವನಶೈಲಿಗೆ ಮಾನಸಿಕವಾಗಿ ಸಿದ್ಧಗೊಳ್ಳಬೇಕು. ಈಗಾಗಲೇ ತನ್ನ ಪ್ರಭಾವವನ್ನು ಶನಿಮಹಾತ್ಮನು ಧನಸ್ಸು ರಾಶಿಯವರಿಗೆ ತೋರಿಸಲಾರಂಭಿಸಿದ್ದಾನೆ. ಇನ್ನಷ್ಟು ಮುಂದಿನ ದಿನಗಳಲ್ಲಿ ಅನುಭವ ನೀಡಲಿದ್ದಾನೆ. ಈ ಬಗ್ಗೆ ಸೂಕ್ತವಾದ ಪರಿಹಾರೋಕ್ತಿಗಳನ್ನು ಮಾಡಿಕೊಂಡರೆ ಒಳ್ಳೆಯದು.
ಇನ್ನು ಮಿಥುನ, ಕನ್ಯಾ, ಮಕರ ರಾಶಿಯವರಿಗೆ ಅದೃಷ್ಟದ ದಿನಗಳು ಶುರುವಾದವೆಂದೇ ಅರ್ಥ. ಏಕೆಂದರೆ ಮಿಥುನದವರಿಗೆ ಪಂಚಮಶನಿಯಾಗಿ ಕಾಡಿದ್ದ ಮಹಾತ್ಮನು ಷಷ್ಟಮಕ್ಕೆ ಬಂದು ಉತ್ತಮ ಫಲ ನೀಡಲಿದ್ದಾನೆ. ಇದೇ ರೀತಿ ಸಾಡೇಸಾತಿಯಿಂದ ಬಸವಳಿದ ಕನ್ಯಾ ರಾಶಿಯವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗುತ್ತದೆ. [ಸಾಡೇಸಾತಿಯಲ್ಲಿ ಕಡ್ಡಾಯವಾಗಿ ಹೀಗೆಲ್ಲಾ ಮಾಡಬೇಡಿ]
ಚಕ್ರವ್ಯೂಹದಲ್ಲಿ ಸಿಲುಕಿದ ಅನುಭವ ಪಡೆದ ಕನ್ಯಾ ರಾಶಿಯವರಿಗೆ ಶನಿದೇವನು ಮುಕ್ತಿ ನೀಡಲಿದ್ದು, ಮುಂದಿನ ಮೂವತ್ತು ವರ್ಷಗಳ ನಂತರವೇ ಸಾಡೇಸಾತಿಯಾಗಿ ಮತ್ತೆ ಬರಲಿದ್ದಾನೆ. ಮುಂದಿನ ಮೂರು ವರ್ಷ ಶನಿಮಹಾತ್ಮನು ತುಂಬಾ ಒಳ್ಳೆಯದನ್ನು ದಯಪಾಲಿಸುತ್ತಾನೆ ಕನ್ಯಾ ರಾಶಿಯವರಿಗೆ. ಇದೇ ಈ ರಾಶಿಯವರಿಗೆ ಸಂತಸದ ಸುದ್ದಿ ಎನ್ನಬಹುದು. ಯಾವುದಕ್ಕೂ ಶನಿದೇವನು ಕೊಡುವುದನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆ ಅವಶ್ಯ.
ವೃಶ್ಚಿಕ ರಾಶಿಯವರಿಗೆ ಸಾಡೇಸಾತಿಯ ಎರಡನೇ ಹಂತ ಶುರುವಾಗಿ ಇನ್ನೂ 6 ವರ್ಷಗಳ ಕಾಲ ಇದ್ದರೆ, ತುಲಾ ರಾಶಿಯವರಿಗೆ ಕೊನೆಯ ಹಂತ ಪ್ರಾರಂಭವಾಗಿ ಮೂರು ವರ್ಷ ಮುಂದುವರೆಯಲಿದೆ. ಮೇಷ ರಾಶಿಯವರಿಗೆ ಅಷ್ಟಮಕ್ಕೆ ಬರುವ ಶನಿಮಹಾತ್ಮನು ಆರೋಗ್ಯಕ್ಕೆ ಪೆಟ್ಟು ನೀಡಿದರೆ, ವೃಷಭದವರಿಗೆ ಸಪ್ತಮನಾಗಿ ಒಳ್ಳೆಯದನ್ನು ಮಾಡುವನು. ಮಿಥುನ ರಾಶಿಯವರಿಗೆ ಪಂಚಮಶನಿ ಕಾಟದಿಂದ ಮೋಕ್ಷ ಸಿಗಲಿದ್ದು, ಷಷ್ಟಮದಲ್ಲಿ ಬರುವ ಮಹಾತ್ಮನು ಅತ್ಯುತ್ತಮ ಫಲ ಕೊಡುವನು.
ಆದರೆ ಕರ್ಕ ರಾಶಿಯವರಿಗೆ ಮಾತ್ರ ಅರ್ಧಾಷ್ಟಮದಿಂದ ಪಂಚಮಶನಿಯಾಗಿ ಕಾಡಲು ಮುನ್ನುಗ್ಗುತ್ತಾನೆ. ಇವರ ಪಾಡು ಮಾತ್ರ ಆ ಶನಿದೇವನಿಗೆ ಗೊತ್ತೆನ್ನಬಹುದು. ಸೂಕ್ತ ಪರಿಹಾರ ಮಾಡಿಸಿಕೊಂಡರೆ ಒಳ್ಳೆಯದು. ಸಿಂಹ ರಾಶಿಯವರಿಗೆ ಅರ್ಧಾಷ್ಟಮನಾಗಲಿರುವ ಮಹಾತ್ಮನು ಆರೋಗ್ಯದಲ್ಲಿ ಸ್ವಲ್ಪ ತೊಂದರೆ ಕೊಡಬಹುದು.
ಕನ್ಯಾ ರಾಶಿಯವರಂತೂ ಹಿರಿಹಿರಿ ಹಿಗ್ಗಬಹುದು. ಶನಿಹಿಡಿತದಿಂದ ಪಾರಾಗುವ ಸುಂದರ ಸಂದರ್ಭ ಈ ವರ್ಷದ ದೀಪಾವಳಿ ಇವರಿಗೆ ಹೆಚ್ಚಿನ ಖುಷಿ ನೀಡಲಿದೆ. [ಶನಿಕಾಟಕ್ಕೆ ಸುಲಭ ಪರಿಹಾರಗಳು]
ಮಕರ ರಾಶಿಯವರಿಗಂತೂ ಮಣ್ಣು ಮುಟ್ಟಿದರೂ ಚಿನ್ನವಾಗುವ ಸುಸಂದರ್ಭ. ಏಕೆಂದರೆ ಮಹಾತ್ಮನು ಗೋಚಾರದಲ್ಲಿ ಇವರಿಗೆ ಹನ್ನೊಂದನೇಯವನಾಗಿ ತುಂಬಾ ಶುಭಕರನಿದ್ದಾನೆ. ಆದರೆ ಎಲ್ಲಾ ಇದೆ ಎಂದು ಸೊಕ್ಕು ಮಾಡಿದರೆ ಮುಂದಿನ ದಿನಗಳಲ್ಲಿ ಸಾಡೇಸಾತಿಯಾಗಿ ಬರುವುದರಿಂದ ತಕ್ಕ ಪಾಠ ಕಲಿಸಲಿದ್ದಾನೆ ಎಚ್ಚರಿಕೆ ಇರಲಿ ಶನಿಮಹಾತ್ಮನ ಬಗ್ಗೆ.
ಕುಂಭ ರಾಶಿಯವರಿಗೆ ದಶಮದಲ್ಲಿರುವ ಮಹಾತ್ಮನು ಅಂಥಾ ಏನೂ ಕೊಡುಗೆ ನೀಡುವುದಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಬಳಲಿ ಬೆಂಡಾದ ಮೀನ ರಾಶಿಯವರಿಗೆ ನವಮಕ್ಕೆ ಬರುವ ಮಹಾತ್ಮನು ಉತ್ತಮ ಫಲ ಕೊಡುತ್ತಾನೆ.
ಶನಿಮಹಾತ್ಮನ ಬಗ್ಗೆ ಈಗಾಗಲೇ ಎಲ್ಲರೂ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದೀರಿ. ಇನ್ನೂ ತಿಳಿದುಕೊಳ್ಳುವುದಿದೆ ಅದನ್ನು ಮುಂದಿನ ಲೇಖನದಲ್ಲಿ ತಿಳಿಸುತ್ತೇನೆ. [ಸಾಡೇಸಾತಿ ಎಂದರೇನು, ಏನಿದರ ಮರ್ಮ?]
ಸಂಪಾದಕರ ಮಾತು : ಮೇಲಿನವು ಲೇಖಕ ಎಸ್ಎಸ್ ನಾಗನೂರಮಠ ಅವರ ನುಡಿಗಳು. ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ಇನ್ನೂ ಹೆಚ್ಚಿನ ವಿವರ ಬೇಕಿದ್ದರೆ ಅಥವಾ ಪರಿಹಾರ ತಿಳಿದುಕೊಳ್ಳಬೇಕಿದ್ದರೆ ಅವರನ್ನು ಸಂಪರ್ಕಿಸಬಹುದು. (ಲೇಖಕರ ಮೊಬೈಲ್ : 94815 22011)